ಅತಿ ಕ್ಲಿಷ್ಟಕರವಾದ ಯೋಗ ಹ್ರದ – ಹುತಾಶನ ಯೋಗ.. ಏನೆಲ್ಲ ಪಡೆದುಕೊಳ್ಳಬಹುದು? ಏನನ್ನು ಕಳೆದುಕೊಳ್ಳಬಹುದು?
ಹುತಾಶನ ಮತ್ತು ಹ್ರದ ಯೋಗಗಳು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಕಷ್ಟಕರವಾದ ಯೋಗಗಳಾಗಿವೆ. ಇವು ಗ್ರಹಗಳ ಅಶುಭ ಸ್ಥಾನಗಳಿಂದ ಉಂಟಾಗುತ್ತವೆ ಮತ್ತು ಜಾತಕದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಹುತಾಶನ ಯೋಗದಲ್ಲಿ ಕೆಲಸಗಳು ನಾಶವಾಗಬಹುದು, ಆದರೆ ಹ್ರದ ಯೋಗದಲ್ಲಿ ಜೀವನವೇ ಕಷ್ಟಕರವಾಗಬಹುದು. ಪ್ರತಿದಿನ ದೇವರ ಆರಾಧನೆಯಿಂದ ಈ ಯೋಗಗಳ ಪರಿಣಾಮವನ್ನು ಕಡಿಮೆ ಮಾಡಬಹುದು.

ಮನುಷ್ಯನಿಗೆ ಮಾತ್ರವಲ್ಲ, ಜಗತ್ತಿನಲ್ಲಿ ಜನಿಸಿದ ಪ್ರತಿಯೊಂದು ಜೀವಿಗೂ ಆಗುವ ಪ್ರತಿಯೊಂದು ಶುಭಾಶುಭವೂ ಒಂದು ಕಡೆಯಲ್ಲಿ ಸೇರಿಕೊಂಡಿರುತ್ತದೆ. ಅದು ಕಾಲಕಾಲಕ್ಕೆ ಗ್ರಹಗಳ ಮೂಲಕ ಅವುಗಳಿಗೆ ಪ್ರಾಪ್ತವಾಗುವುದು. ಶುಭಕ್ಕೂ ಅಶುಭಕ್ಕೂ ಮನುಷ್ಯನ ಅಥವಾ ಆಯಾ ಜೀವಿಗಳ ಕರ್ಮವೇ ಕಾರಣವಾದುದರಿಂದ ಅವುಗಳು ಗ್ರಹಗಳ ರೂಪದಿಂದ ಫಲ ನೀಡುತ್ತವೆ. ಶುಭಾಶುಭ ಫಲಗಳನ್ನು ನೋಡಲೂ ಅಶುಭವನ್ನು ಪರಿಹರಿಸಿಕೊಳ್ಳಲೂ ಬರುವುದು. ಅದಕ್ಕೆ ಜ್ಯೋತಿಷ್ಯ ಶಾಸ್ತ್ರ ಬಹಳ ಉಪಕಾರಿ. ಇಲ್ಲಿ ಹೇಳಿರುವ ಯೋಗಗಳು ಪೂರ್ವಜನ್ಮದ ಆಧಾರದ ಮೇಲೆ ಇರುವ ಕಾರಣ ಅವುಗಳು ನೋಡಿಕೊಳ್ಳಲು ಬರುತ್ತದೆ. ಜ್ಯೋತಿಷ್ಯ ಶಾಸ್ತ್ರ ವಿವರಿಸುವ ಅನೇಕ ವಿಶೇಷ ಯೋಗಗಳಲ್ಲಿ ಇದೂ ಒಂದು ಯೋಗ. ಹುತಾಶನ ಎಂದರೆ ಅಗ್ನಿ ಎಂದರ್ಥ. ಆದರೆ ಈ ಯೋಗವಿದ್ದವರಿಗೆ ಅಗ್ನಿಯಿಂದ ಲಾಭ ನಷ್ಟ ಎಂದಲ್ಲ. ಕೆಲವು ಗ್ರಹಗಳ ಸಂಯೋಗದಿಂದ ಇದು ಸಂಭವಿಸುತ್ತದೆ.
ಶನಿ, ಕುಜ, ಬುಧ, ಚಂದ್ರರು ನೀಚಸ್ಥಾನದಲ್ಲಿದ್ದಾಗ ಹಾಗೂ ಮಕರ ರಾಶಿಯಲ್ಲಿ ಶುಕ್ರ ಇದ್ದಾಗ ಈ ಯೋಗ. ಶನಿಯ ನೀಚ ಸ್ಥಾನ ಮೇಷ, ಕುಜನ ನೀಚ ಸ್ಥಾನ ಕರ್ಕಾಟಕ, ಬುಧನ ನೀಚ ರಾಶಿ ಮೀನ ಹಾಗೂ ಚಂದ್ರನ ನೀಚ ರಾಶಿ ವೃಶ್ಚಿಕ. ಇಲ್ಲಿದ್ದಾಗ ಹುತಾಶನ ಯೋಗ.
ಇದನ್ನೂ ಓದಿ: ಮನೆಯಲ್ಲಿ ನಟರಾಜನ ಪ್ರತಿಮೆ ಇಡಬಾರದು ಎಂದು ಹೇಳುವುದೇಕೆ?
ಈ ಯೋಗವನ್ನು ಇನ್ನೊಂದು ರೀತಿಯಲ್ಲಿ ನೋಡುತ್ತಾರೆ. ತಿಥಿಯಲ್ಲಿ ಷಷ್ಠೀ ತಿಥಿಯಿಂದ ಆರಂಭಿಸಿ ಸೋಮ, ಮಂಗಳ, ಬುಧ, ಗುರು, ಶುಕ್ರ, ಶನಿ, ಭಾನುವಾರಗಳು ಬಂದರೆ ಅದನ್ನು ಹುತಾಶನ ಯೋಗವೆನ್ನುವರು. ಇಂತಹ ಯೋಗವಿದ್ದಾಗ ಆರಂಭ ಮಾಡಿದ ಕೆಲಸಗಳು ನಾಶವಾಗುವುವು. ಹೊಸ ಕಾರ್ಯಗಳನ್ನು ತಿಳಿವಳಿಕೆಯುಳ್ಳವರು ಪ್ರಾರಂಭವನ್ನು ಮಾಡಲಾರರು. ಈ ಯೋಗದಲ್ಲಿ ಜನಿಸಿದವರು ಸದಾ ಉದ್ವೇಗ, ಒತ್ತಡದಲ್ಲಿ ಇರುವರು ಮತ್ತು ಸುಖವಾಗಿ ಇರಲಾರರು. ನಿತ್ಯ ದುಃಖದಿಂದ ಇರುವರು.
ಹ್ರದ ಎಂದರೆ ಕೆಸರು ಎಂದರ್ಥ. ಎಲ್ಲ ಗ್ರಹಗಳೂ ತಮ್ಮ ತಮ್ಮ ನೀಚ ರಾಶಿಯವರ ಇದ್ದರೆ ಹ್ರದ ಯೋಗ. ಈ ಯೋಗದಲ್ಲಿ ಜನಿಸುವವರು ಬಹಳ ಅಪರೂಪವಾದರೂ ಜನಿಸಿದ ಮನುಷ್ಯ ಅತ್ಯಂತ ಕಷ್ಟದಲ್ಲಿಯೇ ಜೀವನ ನಡೆಸುವನು. ಹೇಗೆಂದರೆ, ಕೆಸರಿನಲ್ಲಿ ಇರುವ ಮನುಷ್ಯ ಅಥವಾ ಪ್ರಾಣಿ ಹೇಗೆ ನೆಮ್ಮದಿಯಿಂದ ಜೀವನವನ್ನು ನಡೆಸಲು ಸಾಧಯವಾಗದೋ, ಅಲ್ಲಿಂದ ಮೇಲೆ ಬರಲು ಪ್ರಯತ್ನಿಸಿಯೂ ಮೇಲೆ ಬರಲು ಅಶಕ್ಯವಾಗದೋ ಹಾಗೆ. ತನ್ನ ಬಲವನ್ನೆಲ್ಲ ಕಳೆದುಕೊಳ್ಳಬೇಕಾಗುತ್ತದೆ. ಯಾವ ಪ್ರಯೋಜನವೂ ಆಗದು. ಅದೇ ಸ್ಥಿತಿ ಹ್ರದ ಯೋಗ ಜಾತಕದಲ್ಲಿ ಇರಲಿದೆ. ಗ್ರಹಗಳು ದುರ್ಬಲರಾದರೆ ಜಾತಕನೂ ದುರ್ಬಲನಾಗುವನು.
ಬಹಳ ಅಪರೂಪದ ಯೋಗವಾಗಿದದ್ದು ಅಂತಹ ದೌರ್ಭಾಗ್ಯವುಳ್ಳವನಿಗೆ ಪ್ರಾಪ್ತವಾಗುವುದು. ಇಂತಹ ಯೋಗವನ್ನು ಪ್ರಾಚೀನರು ಕಂಡಿದ್ದಾರೆ ಎಂದರೆ, ಯಾರಿಗೋ ಬಂದಿದೆ ಎನ್ನುವುದನ್ನು ಅರಿತುಕೊಳ್ಳಬಹುದು. ಪ್ರತಿದಿನ ಎಲ್ಲ ಗ್ರಹಗಳನ್ನೂ ಅವರ ಅಧಿದೇವತೆಯನ್ನೂ ಅನನ್ಯ ಮನಸ್ಸಿನಿಂದ ಆರಾಧಿಸುವಿದೊಂದೇ ದಾರಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




