Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ ಮಾಸಭವಿಷ್ಯ 

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ಮಾಸ ಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ತಿಂಗಳು ನಿಮ್ಮ ಭವಿಷ್ಯ ಹೇಗಿರಲಿದೆ ಇಲ್ಲಿ ತಿಳಿದುಕೊಳ್ಳಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ ಮಾಸಭವಿಷ್ಯ 
ರಾಶಿ ಭವಿಷ್ಯ
Follow us
| Updated By: ಆಯೇಷಾ ಬಾನು

Updated on: Jul 01, 2024 | 1:06 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ಜುಲೈ ಮಾಸದ ಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮಲ್ಲಿ ಒಂದು ಬಗೆಯ ಆತ್ಮವಿಶ್ವಾಸ ಇರಲಿದೆ. ಹೊಸದಾಗಿ ಉದ್ಯೋಗ ಬದುಕು ಆರಂಭಿಸುತ್ತಿರುವವರು ಹಾಗೂ ಉದ್ಯೋಗ ಬದಲಾವಣೆ ಮಾಡುತ್ತಿರುವವರು ಉತ್ತಮವಾದ ಬೆಳವಣಿಗೆಗಳನ್ನು ನಿರೀಕ್ಷೆ ಮಾಡಬಹುದು. ಅದೇ ರೀತಿ ಈ ತಿಂಗಳಲ್ಲಿ ವಿವಾಹ ವಯಸ್ಕರಾದ ಯುವಕ ಅಥವಾ ಯುವತಿಯರಿಗೆ ಮನಸ್ಸಿಗೆ ಒಪ್ಪುವಂಥ ಹುಡುಗ ಅಥವಾ ಹುಡುಗಿ ಸಿಗುವ ಸಾಧ್ಯತೆಗಳಿವೆ. ನಿಮ್ಮಲ್ಲಿ ಕೆಲವರು ಪ್ರೇಮ ನಿವೇದನೆ ಮಾಡುವ ಸಾಧ್ಯತೆಗಳು ಸಹ ಇವೆ. ಮಹಿಳೆಯರಿಗೆ ಚರ್ಮಕ್ಕೆ ಸಂಬಂಧಪಟ್ಟಂತಹ ಅಲರ್ಜಿಗಳು ಇದ್ದಲ್ಲಿ, ಅದು ನಿರ್ದಿಷ್ಟವಾಗಿ ಮಧುಮೇಹದ ಕಾರಣಕ್ಕೆ ಆಗುತ್ತಿದ್ದಲ್ಲಿ ಸೂಕ್ತ ವೈದ್ಯೋಪಚಾರಗಳು ದೊರೆಯಲಿದೆ. ಇದರಿಂದ ಮಾನಸಿಕವಾಗಿ ನೆಮ್ಮದಿ ದೊರೆಯಲಿದೆ. ನವ ವಿವಾಹಿತ ಹೆಣ್ಣುಮಕ್ಕಳಿಗೆ ತವರು ಮನೆಯಿಂದ ದೇವತಾ ಕಾರ್ಯಗಳಿಗೆ ಅಥವಾ ಶುಭ ಕಾರ್ಯಗಳಿಗೆ ಆಹ್ವಾನ ಬರಲಿದೆ.

ಇನ್ನು ನಿಮ್ಮಲ್ಲಿ ಯಾರು ವಕೀಲಿಕೆ ವೃತ್ತಿಯಲ್ಲಿ ಇರುತ್ತೀರೋ ಅಥವಾ ಚಾರ್ಟೆಡ್ ಅಕೌಂಟೆಂಟ್ ಗಳಾಗಿ ಕಾರ್ಯ ನಿರ್ವಹಿಸುತ್ತೀರಾ ಅಂತಹವರಿಗೆ ಹೊಸ ಕಚೇರಿಗೆ ತೆರಳುವಂಥ ಯೋಗ ಕಂಡುಬರುತ್ತಿದೆ. ಇದಕ್ಕಾಗಿ ನಿಮ್ಮ ತಂದೆ- ತಾಯಿ ಮೂಲಕ ಹಣಕಾಸಿನ ನೆರವು ಸಹ ದೊರೆಯಬಹುದು. ಈ ತಿಂಗಳಿಗೆ ನಿಮಗಿರುವ ಪ್ರಮುಖ ಎಚ್ಚರಿಕೆ ಏನೆಂದರೆ, ಮನೆಯಲ್ಲಿರುವ ಸಾಕುಪ್ರಾಣಿಗಳ ಬಗ್ಗೆ ಬಹಳ ಜಾಗ್ರತೆಯನ್ನು ವಹಿಸಿ. ಏಕೆಂದರೆ ಅವುಗಳನ್ನ ಯಾರಾದರೂ ಕಳುವು ಮಾಡುವ ಅಥವಾ ಅವುಗಳು ಕಳೆದು ಹೋಗುವ ಸಾಧ್ಯತೆಗಳಿವೆ. ಇದರಿಂದ ನಿಮಗೆ ಮಾನಸಿಕ ಖಿನ್ನತೆ ಕಾಡುತ್ತದೆ. ರಾಜಕಾರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಹೊಸ ಜವಾಬ್ದಾರಿಗಳು ಹೆಗಲೇರುವ ಅಥವಾ ಪದೋನ್ನತಿ ಆಗುವಂತಹ ಸಾಧ್ಯತೆಗಳಿವೆ. ಇದನ್ನು ವಹಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ನಿಮಗೆ ಉತ್ತಮವಾದ ಸ್ಥಾನಮಾನ, ಗೌರವ ದೊರೆಯಲಿದೆ. ನಾನಾ ಕಾರಣಗಳಿಗಾಗಿ ಅಥವಾ ಉದ್ಯೋಗ ಅಥವಾ ಬೇರೆ ಪ್ರದೇಶಕ್ಕೆ ತೆರಳಬೇಕು ಎಂಬ ಕಾರಣದಿಂದಾಗಿ ಯಾರು ಅರ್ಧಕ್ಕೆ ಶಿಕ್ಷಣವನ್ನು ನಿಲ್ಲಿಸಿರುತ್ತೀರಾ ಅಂತಹವರು ಶಿಕ್ಷಣವನ್ನು ಮುಂದುವರಿಸುವುದಕ್ಕೆ ಬೇಕಾದ ಪ್ರೋತ್ಸಾಹ ಹಾಗೂ ಉತ್ತೇಜನವನ್ನು ಪಡೆಯುತ್ತೀರಿ.

ಹೊಸದಾಗಿ ಮನೆ ನಿರ್ಮಾಣ ಮಾಡಿರುವಂಥವರು ಎಲೆಕ್ಟ್ರಾನಿಕ್ ಅಥವಾ ಎಲೆಕ್ಟ್ರಿಕಲ್ ಗ್ಯಾಜೆಟ್ ಖರೀದಿಸಿ ತರಲಿದ್ದೀರಿ. ಇಷ್ಟು ಸಮಯ ಉದ್ಯೋಗ ಸ್ಥಳದಲ್ಲಿ ಯಾರು ನಿಮ್ಮ ಬಗ್ಗೆ ಬರೀ ಆಕ್ಷೇಪವನ್ನೇ ಮಾಡುತ್ತಿರುತ್ತಾರೋ ಅಂಥವರು ನಿಮ್ಮ ಬಳಿ ಸಹಾಯವನ್ನು ಕೇಳಿಕೊಂಡು ಬರಬೇಕಾದ ಪರಿಸ್ಥಿತಿ ಸೃಷ್ಟಿಯಾಗಲಿದೆ. ಈ ತಿಂಗಳಲ್ಲಿ ಪ್ರತಿ ಬುಧವಾರ ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣವನ್ನು ಮಾಡಿ. ನಿಮ್ಮ ಬಳಿ ಭೂ ವರಾಹ ಸ್ವಾಮಿಯ ಚಿತ್ರವೊಂದನ್ನು ಇರಿಸಿಕೊಳ್ಳಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಈ ತಿಂಗಳಲ್ಲಿ ಸಾಂಸಾರಿಕ ವಿಚಾರಗಳಲ್ಲಿ ಇರುವಂಥ ಕೆಲವು ಅಭಿಪ್ರಾಯ ಭೇದಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಹೆಚ್ಚಿನ ಸಮಯ ಹೋಗುತ್ತದೆ. ಆ ಮೇಲೆ ಮಾಡಿದರಾಯಿತು ಅಂದುಕೊಂಡಿದ್ದ ಕೆಲವು ಕೆಲಸಗಳನ್ನು ಕೂಡಲೇ ಮಾಡಬೇಕು ಎಂಬ ಸನ್ನಿವೇಶ ಸೃಷ್ಟಿ ಆಗಲಿದೆ. ಇನ್ನು ನಿಮ್ಮಲ್ಲಿ ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಹೊಸ ಹೂಡಿಕೆ ಮಾಡಬೇಕಾದ ಅಗತ್ಯ ಕಂಡುಬರಲಿದೆ. ಉದ್ಯೋಗ ಮಾಡುತ್ತಿರುವವರು ನಿಮಗೆ ಇರುವಂಥ ಟಾರ್ಗೆಟ್ ತಲುಪುವುದಕ್ಕೆ ಸಂಬಂಧಿಸಿದಂತೆ ಹೆಚ್ಚು ಸಮಯ ಮೀಸಲಿಡಬೇಕಾದ ಅಗತ್ಯ ಕಂಡುಬರಲಿದೆ. ಇದಕ್ಕಾಗಿ ರಜಾ ದಿನಗಳಲ್ಲೂ ಕೆಲಸ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮಲ್ಲಿ ಕೆಲವರಿಗೆ ಔತಣ ಕೂಟಗಳಿಗೆ ಸಂಬಂಧಿಕರಿಂದ ಆಹ್ವಾನ ಬರಲಿದೆ. ಯಾರು ಚಾಲಕ ವೃತ್ತಿಯಲ್ಲಿ ಇದ್ದೀರಿ, ಅಂಥವರು ಹೊಸ ವಾಹನ ಖರೀದಿ ಮಾಡುವುದಕ್ಕೆ ಹಣ ಹೊಂದಿಸುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದಲ್ಲಿ, ಇನ್ನೇನು ಎಲ್ಲವೂ ಮುಗಿಯಿತು ಎಂದುಕೊಂಡ ಕೆಲಸ ಇನ್ನೂ ಸ್ವಲ್ಪ ಬಾಕಿ ಉಳಿದು, ಇನ್ನಷ್ಟು ದಿನಗಳಿಗೆ ಎಳೆದುಕೊಂಡು ಹೋಗುವಂಥ ಸೂಚನೆ ನಿಮಗೆ ದೊರೆಯುತ್ತದೆ.

ತಮಾಷೆಗಾದರೂ ಸರಿ, ಇತರರ ವೈಯಕ್ತಿಕ ವಿಚಾರಗಳ ಬಗ್ಗೆ ಗುಂಪುಗೂಡಿರುವ ಕಡೆ ಮಾತನಾಡುವುದಕ್ಕೆ ಹೋಗದಿರಿ. ಗಾರ್ಮೆಂಟ್ ಉದ್ಯೋಗಿಗಳಾಗಿದ್ದಲ್ಲಿ ಓಟಿ, ಶಿಫ್ಟ್ ಸಮಯದ ವಿಚಾರಕ್ಕೆ ಸಹೋದ್ಯೋಗಿಗಳ ಜತೆಗೆ ಸಣ್ಣ- ಪುಟ್ಟ ಮನಸ್ತಾಪಗಳು ಆಗಬಹುದು. ನನ್ನದೇ ಸರಿ ಎಂದು ವಾದಿಸುತ್ತಾ ಮುಂದುವರಿಸುವುದು ಒಳ್ಳೆಯದಲ್ಲ. ವಿದ್ಯಾರ್ಥಿಗಳು ಬಹಳ ಸಮಯದಿಂದ ನೀವು ಹುಡುಕಾಡುತ್ತಿದ್ದ ವ್ಯಕ್ತಿಯೋ ಅಥವಾ ವಸ್ತುವೋ ಈ ತಿಂಗಳಲ್ಲಿ ದೊರೆಯುವ ಸಾಧ್ಯತೆಗಳಿವೆ. ವಿವಾಹಿತರಿಗೆ ಅತ್ತೆ- ಮಾವ ಅಥವಾ ತಂದೆ- ತಾಯಿಯ ಕನ್ನಡಕದ ಫ್ರೇಮ್, ಶ್ರವಣ ಸಾಧನ, ಪಾದರಕ್ಷೆಗಳಿಗೆ ಹೆಚ್ಚು ವೆಚ್ಚವಾಗುವಂಥ ಸಾಧ್ಯತೆ ಇದೆ. ಇನ್ನು ರಿಯಾಯಿತಿ ದೊರೆಯುತ್ತಿದೆ ಅಂತಲೋ ಅಥವಾ ಆಫರ್ ಗಳು ಇವೆ ಎಂಬ ಕಾರಣಕ್ಕೋ ಯಾವುದಾದರೂ ಬ್ರ್ಯಾಂಡೆಡ್ ವಸ್ತುಗಳನ್ನು ಖರೀದಿಸುತ್ತಿದ್ದೀರಿ ಎಂದಾದಲ್ಲಿ ವಾರಂಟಿ ಅವಧಿಯ ಬಗ್ಗೆ ಸರಿಯಾಗಿ ವಿಚಾರಿಸಿಕೊಳ್ಳುವುದು ಮುಖ್ಯ. ದ್ವಿಚಕ್ರ ವಾಹನ ಓಡಿಸುವಂಥವರು ಸಾಧ್ಯವಾದಷ್ಟೂ ನಿಧಾನವಾಗಿ ಚಲಾಯಿಸುವುದು ಕ್ಷೇಮ. ಪ್ರೊಟೀನ್ ಸಪ್ಲಿಮೆಂಟ್ ಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ ಪ್ರಮಾಣವನ್ನು ಸರಿಯಾಗಿ ಅನುಸರಿಸಿ. ಸೌಂದರ್ಯ ಕಾಳಜಿ ಹೆಚ್ಚಾಗಲಿದ್ದು, ಇದರ ಸಲುವಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ನೀರಿಗೆ ಸಂಬಂಧಿಸಿದ ವ್ಯವಹಾರ ಮಾಡುತ್ತಿರುವವರಿಗೆ ಲಾಭದ ಪ್ರಮಾಣವನ್ನು ಜಾಸ್ತಿ ಮಾಡಿಕೊಳ್ಳುವಂಥ ದಾರಿಗಳು ಗೋಚರ ಆಗಲಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಆಸ್ತಿ ಖರೀದಿಯೋ ವಾಹನ ಖರೀದಿಯೋ ಅಥವಾ ಹೂಡಿಕೆ ವಿಚಾರವೋ ಅದರಲ್ಲಿ ಲಾಭ ಇದೆ ಎಂಬುದು ನಿಮಗೆ ಖಾತ್ರಿ ಆದ ನಂತರದಲ್ಲಿ ನಿಧಾನ ಮಾಡುತ್ತಾ ಕೂರಬೇಡಿ. ಏಕೆಂದರೆ ನಿಮ್ಮದೇ ಆಲಸ್ಯದ ಕಾರಣಕ್ಕೆ ಕೆಲವು ಅವಕಾಶಗಳನ್ನು ಕಳೆದುಕೊಳ್ಳಲಿದ್ದೀರಿ. ಆದ್ದರಿಂದ ಯಾವುದೇ ಕೆಲಸಕ್ಕೆ ಕೊನೆ ಕ್ಷಣದ ತನಕ ಕಾಯುತ್ತಾ ಕೂರಬೇಡಿ. ಚಿನ್ನ- ಬೆಳ್ಳಿಯನ್ನು ಖರೀದಿಸುವಂಥವರು ವಂಚಕರಿಂದ ಭಾರೀ ಎಚ್ಚರಿಕೆಯಿಂದ ಇರಬೇಕು. ಹಾಲ್ ಮಾರ್ಕ್ ಅಥವಾ ಅದರ ಶುದ್ಧತೆಯ ವಿಚಾರವಾಗಿ, ಪರವಾಗಿಲ್ಲ ಬಿಡು ಎಂಬ ಧೋರಣೆ ಬೇಡ.

ಇನ್ನು ನಿಮ್ಮಲ್ಲಿ ಕೆಲವರಿಗೆ ಒಂದು ನಿಮ್ಮ ವಸ್ತುವನ್ನು ಖರೀದಿಸಿ, ಹಣ ನೀಡದೆ ವಂಚನೆ ಮಾಡುವುದು ಒಂದು ಬಗೆಯಲ್ಲಾದರೆ, ಕಳಪೆ ಅಥವಾ ನಕಲಿ ವಸ್ತುಗಳನ್ನು ನಿಮಗೆ ಮಾರಾಟ ಮಾಡುವಂಥ ಸಾಧ್ಯತೆಯೂ ಇದೆ. ನಿಮ್ಮಲ್ಲಿ ಕೆಲವರು ಮನೆಯನ್ನು ಬದಲಿಸಿ, ಬೇರೆಡೆ ತೆರಳುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಸೆಕೆಂಡ್ ಹ್ಯಾಂಡ್ ವಾಹನಗಳ ಡೀಲರ್ ಗಳು, ಮನೆ- ಸೈಟುಗಳ ದಲ್ಲಾಳಿಗಳಿಗೆ ಆದಾಯ ಹೆಚ್ಚಾಗಲಿದೆ. ಈಗಾಗಲೇ ಕೆಲಸ ಆರಂಭಿಸಿ, ಒಂದು ಹಂತ ತಲುಪಿದ ನಂತರ ಯಾಕೋ ಮುಂದುವರಿಯುತ್ತಿಲ್ಲ ಎಂದಾಗಿದ್ದಲ್ಲಿ ಅಂಥ ಕೆಲಸಗಳು ತಿಂಗಳ ಕೊನೆ ಹತ್ತು ದಿನಗಳಲ್ಲಿ ವೇಗ ಪಡೆದುಕೊಳ್ಳಲಿದೆ. ಖಾಸಗಿ ಕಂಪನಿಗಳಲ್ಲಿ ಆಯಕಟ್ಟಿನ ಸ್ಥಾನದಲ್ಲಿ ಇರುವವರು ಹಾಗೂ ತಂಡಗಳನ್ನು ಮುನ್ನಡೆಸುತ್ತಿರುವಂಥವರು ಯಾವುದೇ ಭರವಸೆ ನೀಡುವ ಮುನ್ನ ಈಡೇರಿಸುವುದಕ್ಕೆ ಸಾಧ್ಯವಾ ಅಳೆದು ನೋಡಿ.

ಏಕೆಂದರೆ, ಯಾರನ್ನಾದರೂ ಕೆಲಸಕ್ಕೆ ತೆಗೆದುಕೊಳ್ಳಬೇಕು ಅಥವಾ ಕೆಲಸ ಬಿಡುತ್ತಿದ್ದೇನೆ ಎಂದವರನ್ನು ನಿಮ್ಮಲ್ಲಿಯೇ ಉಳಿಸಿಕೊಳ್ಳಬೇಕು ಎಂಬ ಪ್ರಯತ್ನದಲ್ಲಿ ನೀಡುವ ಮಾತಿನಿಂದ ವರ್ಚಸ್ಸಿಗೆ ಹಾನಿ ಮಾಡಿಕೊಳ್ಳಬಹುದು. ಆದ್ದರಿಂದ ಜಾಗ್ರತೆ ವಹಿಸಬೇಕು. ದೀರ್ಘ ಕಾಲದಿಂದ ಬಾರದೆ ಬಾಕಿ ಉಳಿದಿದ್ದ ಹಣ ನಿಮ್ಮ ಕೈ ಸೇರುವಂಥ ಅವಕಾಶಗಳಿವೆ. ಇದಕ್ಕೆ ಸಂಬಂಧಿಸಿದಂಥ ಹಳೇ ಕಡತ, ಕಾಗದ- ಪತ್ರಗಳನ್ನು ಸರಿಯಾಗಿ ಹುಡುಕಿ ಇಟ್ಟುಕೊಳ್ಳಿ, ಹಾಗೆ ಮಾಡುವುದರಿಂದ ಅನುಕೂಲ ಆಗಲಿದೆ. ಕೃಷಿಕರು ಜಮೀನು ಖರೀದಿ ಮಾಡುವುದಕ್ಕೆ ನಿರ್ಧಾರ ಮಾಡುತ್ತೀರಿ. ನಿಮ್ಮಲ್ಲಿ ಕೆಲವರು ಭೂಮಿಗೆ ಸಂಬಂಧಿಸಿದ ಪತ್ರವನ್ನು ಪರಿಶೀಲನೆಗಾಗಿ ವಕೀಲರಿಗೆ ನೀಡಬಹುದು. ಅನಿರೀಕ್ಷಿತವಾಗಿ ದೂರ ಪ್ರಯಾಣಗಳನ್ನು ಕೈಗೊಳ್ಳಬೇಕಾಗಬಹುದು. ಆದ್ದರಿಂದ ಅಗತ್ಯ ಇರುವ ಎಲ್ಲ ವಸ್ತುಗಳನ್ನು ಸಿದ್ಧ ಮಾಡಿಟ್ಟುಕೊಂಡಿದ್ದೀರಾ ಎಂಬುದನ್ನು ಪರೀಕ್ಷೆ ಮಾಡಿಟ್ಟುಕೊಂಡಲ್ಲಿ ಉತ್ತಮ. ಇತರರ ಹಣಕಾಸು ಹೂಡಿಕೆ ವಿಚಾರಗಳಿಗೆ ನಿಮ್ಮಿಂದ ಸಲಹೆ ಕೇಳಿಕೊಂಡು ಬಂದಲ್ಲಿ ಏನಾದರೂ ಕಾರಣ ನೀಡಿ, ಏನೂ ಅಭಿಪ್ರಾಯ ನೀಡದಂತೆ ಇದ್ದುಬಿಡುವುದು ಒಳ್ಳೆಯದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ನಿಮ್ಮ ಕೆಲಸಗಳು ವೇಗವನ್ನು ಪಡೆದುಕೊಳ್ಳಲಿವೆ. ನೀವು ಸರಿಯಾದ ನಿರ್ಧಾರ ಮಾಡಿಕೊಂಡು, ಎಲ್ಲ ವಿಚಾರಗಳಲ್ಲೂ ಬಿಗಿ ಪಟ್ಟನ್ನು ಹಾಕಲಿದ್ದೀರಿ. ನಿಮ್ಮ ತಂತ್ರಗಾರಿಕೆ, ಆಲೋಚನೆಗಳು ಫಲ ನೀಡಲಿವೆ. ಆದಾಯದಲ್ಲಿ ಹೆಚ್ಚಳ ಆಗಲಿದ್ದು, ಹೊಸದಾಗಿ ನಿಮಗೆ ಕೆಲಸಗಳು ಹುಡುಕಿಕೊಂಡು ಬರಲಿದೆ. ಇನ್ನು ನಿಮ್ಮಲ್ಲಿ ಆನ್ ಲೈನ್ ವ್ಯವಹಾರಗಳಲ್ಲಿ ತೊಡಗಿರುವವರು, ಯೂ ಟ್ಯೂಬರ್ ಗಳು, ಟ್ಯಾಟೂ ಹಾಕುವಂಥವರು, ಮನೆಗಳಿಗೆ ತೆರಳಿ ಸೌಂದರ್ಯ ವರ್ಧಕಕ್ಕೆ ಬೇಕಾದ ಸೇವೆಗಳನ್ನು ನೀಡುವಂಥವರು ಇವರಿಗೆಲ್ಲ ಆದಾಯದಲ್ಲಿ ಏರಿಕೆ ಆಗಲಿದೆ. ಕೆಲಸದ ಉದ್ದೇಶಕ್ಕಾಗಿಯೇ ನಿಮ್ಮಲ್ಲಿ ಕೆಲವರು ದ್ವಿಚಕ್ರ ವಾಹನಗಳನ್ನು ಖರೀದಿ ಮಾಡಬೇಕು ಎಂದುಕೊಳ್ಳಲಿದ್ದೀರಿ, ಇದಕ್ಕೆ ಬೇಕಾದ ಹಣವೂ ಹೊಂದಾಣಿಕೆ ಆಗುತ್ತದೆ. ನೀವು ವೃತ್ತಿನಿರತರಾಗಿದ್ದಲ್ಲಿ ಸ್ವಂತ ಕಚೇರಿ ಮಾಡುವ ಬಗ್ಗೆ ಗಂಭೀರವಾದ ಆಲೋಚನೆ ಮಾಡಲಿದ್ದೀರಿ. ಮಕ್ಕಳ ಸಲುವಾಗಿ ಎಲೆಕ್ಟ್ರಿಕಲ್ ವಾಹನವನ್ನೋ ಅಥವಾ ಗ್ಯಾಜೆಟ್- ಲ್ಯಾಪ್ ಟಾಪ್ ಇಂಥದ್ದನ್ನೋ ಖರೀದಿಸುವುದಕ್ಕೆ ಹಣಕಾಸನ್ನು ಹೊಂದಾಣಿಕೆ ಮಾಡಿಕೊಳ್ಳಲಿದ್ದೀರಿ.

ಒಂದು ವೇಳೆ ಖರೀದಿಯ ಉದ್ದೇಶವೇ ಇಲ್ಲದಿದ್ದರೂ ಆಫರ್ ಗಳು ಇದೆ ಎಂಬ ಕಾರಣಕ್ಕೆ ಕೊಂಡುಕೊಳ್ಳುವ ಸಾಧ್ಯತೆಗಳಿವೆ. ಷೇರು ಬ್ರೋಕರ್ ಗಳಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗುವುದಕ್ಕೆ ಮಾರ್ಗ ಗೋಚರ ಆಗಲಿದೆ. ಬಹಳ ಸಮಯದಿಂದ ಕಾಡುತ್ತಿದ್ದ ದೈಹಿಕ ಬಾಧೆಗಳು ನಿವಾರಣೆ ಆಗುವುದಕ್ಕೆ ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಸಂಬಂಧಗಳು ದೊರೆಯಲಿವೆ. ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಿರುವವರಿಗೆ ಸ್ನೇಹಿತರ ಮೂಲಕವಾಗಿ ಅವಕಾಶಗಳ ಬಗ್ಗೆ ಮಾಹಿತಿ ದೊರೆಯಲಿದೆ. ನೀವು ಬರಲಾರದು ಎಂದುಕೊಂಡಿದ್ದ ಹಣವೊಂದು ಕೈ ಸೇರುವ ಸಾಧ್ಯತೆಗಳಿವೆ.

ಸಂಪೂರ್ಣವಾಗಿ ಬರುತ್ತದೆ ಅಂತಲ್ಲದಿದ್ದರೂ ಸ್ವಲ್ಪವಾದರೂ ದೊರೆಯಬಹುದು. ಸರ್ಕಾರದ ಮಟ್ಟದಲ್ಲಿ ಯಾವುದಾದರೂ ಪ್ರಮು ಕೆಲಸ ಆಗಬೇಕು ಎಂದು ಪ್ರಯತ್ನಿಸುತ್ತಿರುವವರಿಗೆ ಪ್ರಭಾವಿಗಳ ಶಿಫಾರಸು ನಿಮ್ಮ ಪಾಲಿಗೆ ದೊರೆಯಲಿದೆ. ಕ್ರೀಡಾ ಕ್ಷೇತ್ರದಲ್ಲಿ ಇದ್ದು, ಪ್ರಾಯೋಜಕರಿಗಾಗಿ ಹುಡುಕಾಟ ನಡೆಸುತ್ತಿದ್ದಲ್ಲಿ ಅದು ದೊರೆಯುವ ಅವಕಾಶಗಳು ಹೆಚ್ಚಿದೆ. ಸಾಲ ಹೆಚ್ಚಾಗಿದ್ದು ಅಥವಾ ತುರ್ತಾಗಿ ಸಾಲದ ಹಣ ಹಿಂತಿರುಗಿಸಬೇಕಾದವರಿಗೆ ಅದು ನಿವಾರಣೆ ಮಾಡಿಕೊಳ್ಳಲು ಸೂಕ್ತ ಮಾರ್ಗೋಪಾಯಗಳು ದೊರೆಯಲಿವೆ. ಮಕ್ಕಳ ಭವಿಷ್ಯಕ್ಕಾಗಿ ಹೆಚ್ಚು ಹಣವನ್ನು ಮೀಸಲಿಡಬೇಕಾಗುತ್ತದೆ ಎಂಬ ಸುಳಿವು ದೊರೆಯಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈಗಾಗಲೇ ಸೈಟು ಅಥವಾ ಜಮೀನು ಇರುವಂಥವರು, ಅಲ್ಲಿ ಮನೆ ನಿರ್ಮಾಣ ಮಾಡಬೇಕು ಎಂದು ನಿರ್ಧಾರ ಮಾಡುವ ಸಾಧ್ಯತೆಗಳಿವೆ. ಅದಕ್ಕೆ ಹಣಕಾಸಿನ ಅಗತ್ಯವಿದೆ ಎಂದು ಬ್ಯಾಂಕ್ ಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ದಾಖಲೆ ಪತ್ರಗಳನ್ನು ಹೊಂದಿಸಿಕೊಳ್ಳುವ ಪ್ರಕ್ರಿಯೆ ವೇಗವನ್ನು ಪಡೆದುಕೊಳ್ಳಲಿದೆ. ಒಂದು ವೇಳೆ ನಿಮ್ಮ ಆದಾಯವು ಸಾಲದ ಮೊತ್ತಕ್ಕೆ ಸರಿಹೊಂದುತ್ತಿಲ್ಲ ಎಂದಾದಲ್ಲಿ ನಿಮ್ಮ ಪರವಾಗಿ ಕೆಲವರು ಶಿಫಾರಸು ಸಹ ಮಾಡುವ ಸಾಧ್ಯತೆಗಳಿವೆ. ನೀವು ಖಾಸಗಿ ಸಂಸ್ಥೆಗಳ ಉದ್ಯೋಗಿಗಳಾಗಿದ್ದು, ಅಲ್ಲಿ ಯಾವುದೇ ಬೆಳವಣಿಗೆ ಇಲ್ಲದೆ ನಿಂತ ನೀರಿನಂತಾಗಿದೆ ಜೀವನ ಅಂದುಕೊಳ್ಳುತ್ತಿದ್ದಲ್ಲಿ ದೊಡ್ಡ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದಾಗಿದೆ. ಈ ಹಿಂದೆ ನೀವು ಬಹಳ ಆಸಕ್ತಿ ವಹಿಸಿ ಮಾಡಿದ್ದ ಕೆಲಸದ ಕಾರಣಕ್ಕೆ ಈಗ ಗೌರವ, ಮನ್ನಣೆ ಅಥವಾ ಹೊಸ ಜವಾಬ್ದಾರಿಯೊಂದು ಹುದ್ದೆಯ ಸಹಿತವಾಗಿ ದೊರೆಯುವಂತಹ ಅವಕಾಶಗಳಿವೆ.

ಒಂದು ವೇಳೆ ಕುಟುಂಬದೊಳಗೆ ಆಸ್ತಿ ಪಾಲು ಮಾಡುವ ಬಗ್ಗೆ ಚರ್ಚೆ ನಡೆಯುತ್ತಾ ಇದ್ದಲ್ಲಿ ಹಾಗೂ ಆ ಬಗ್ಗೆ ನಿಮ್ಮನ್ನು ಅಭಿಪ್ರಾಯ ಹೇಳುವಂತೆ ಕೇಳಿಕೊಂಡ ಪಕ್ಷದಲ್ಲಿ ಮನಸ್ಸಿನಲ್ಲಿರುವ ಸಂಗತಿಯನ್ನೆಲ್ಲ ಹೇಳಿಕೊಳ್ಳದೆ ಸಾಧ್ಯವಾದಷ್ಟೂ ಮೌನವಾಗಿರುವುದಕ್ಕೆ ಪ್ರಯತ್ನಿಸಿ. ಏಕೆಂದರೆ, ಆ ಅಭಿಪ್ರಾಯದ ಆಧಾರದಲ್ಲೇ ಕೆಲವು ತೊಂದರೆಗಳು ನಿಮಗೆ ಆಗಬಹುದು. ಇನ್ನು ನಿಮ್ಮ ವಿರುದ್ಧ ಹಗೆ ಅಥವಾ ಶತ್ರುತ್ವ ಸಾಧಿಸುವುದಕ್ಕೆ ಪ್ರಯತ್ನಿಸಿದವರು ನಾನಾ ರೀತಿಯಲ್ಲಿ ಸಮಸ್ಯೆಗಳಿಗೆ ಸಿಲುಕಿಕೊಳ್ಳಲಿದ್ದಾರೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಪ್ರೇಮ ಸಂಬಂಧವೇ ಮುರಿದುಬೀಳುವ ಮಟ್ಟದ ತನಕ ಹೋಗಬಹುದು.

ಕಾರ್ಪೆಂಟರ್, ಪ್ಲಂಬರ್ ಇಂಥ ವೃತ್ತಿಯಲ್ಲಿದ್ದು, ಇನ್ನೇನು ಎಲ್ಲ ಕೆಲಸ ಮುಗಿದೇ ಹೋಯಿತು, ಕೈಗೆ ಹಣ ಬಂದೇ ಬಿಟ್ಟಿತು ಎಂದುಕೊಂಡು ಬೇರೆಯವರಿಗೆ ಮಾತು ಕೊಟ್ಟಿದ್ದಲ್ಲಿ ಆ ಹಣ ಬಾರದೇ ಹೋಗಿ ಅವಮಾನದ ಪಾಲಾಗುವಂತಹ ಸಾಧ್ಯತೆ ಇದೆ. ಸಿನಿಮಾ ರಂಗದಲ್ಲಿ ಇರುವವರು, ಷೇರು ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸುವವರು, ಹಣಕಾಸು ಸಲಹೆಗಾರರಾಗಿ ಕೆಲಸ ಮಾಡುತ್ತಿರುವವರು, ಬ್ಯೂಟಿ ಪಾರ್ಲರ್ ನಡೆಸುತ್ತಿರುವವರು ವೃತ್ತಿಗೆ ಸಂಬಂಧಿಸಿದಂತೆ ವಿಸ್ತರಣೆಗೆ ಆಲೋಚನೆ ಮಾಡಲಿದ್ದೀರಿ. ಕುಟುಂಬ ವ್ಯವಹಾರ ನಡೆಸುತ್ತಾ ಇರುವವರು ಹೂಡಿಕೆಗಾಗಿ ಸಾಲ ಮಾಡುವಂಥ ಯೋಗ ಇದೆ. ವಿವಾಹದ ಆಚೆಗಿನ ಸಂಬಂಧಗಳ ಕಡೆಗಿನ ಸೆಳೆತ ಬಂದಲ್ಲಿ ನಿಯಂತ್ರಣ ಮಾಡಿಕೊಳ್ಳುವುದು ಬಹಳ ಮುಖ್ಯ. ರಾಜಕಾರಣದಲ್ಲಿ ಇರುವವರಿಗೆ ಗುಂಪುಗಾರಿಕೆ ಮಾಡುತ್ತಿದ್ದೀರಿ ಎಂದು ಆರೋಪಗಳು ಬರಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಕೆಲವು ವಿಚಾರಗಳು ನಿಮ್ಮ ಕೈ ಅಳತೆಯನ್ನು ಮೀರಿದವು ಎಂಬುದು ಅರ್ಥವಾಗುತ್ತದೆ. ಆದ್ದರಿಂದ ಈ ಹಿಂದೆ ನೀವು ಹೊತ್ತುಕೊಂಡಿದ್ದ ಹರಕೆ ಅಥವಾ ಈಗ ನಿಮಗೆ ಕೆಲವರು ನೀಡುವ ಸಲಹೆಯ ಆಧಾರದಲ್ಲಿ ತೀರ್ಥಕ್ಷೇತ್ರ ಪ್ರಯಾಣ, ದೇವತಾ ಆರಾಧನೆ ಇಂಥ ಕಾರ್ಯಗಳಲ್ಲಿ ಈ ತಿಂಗಳು ಹೆಚ್ಚೆಚ್ಚು ತೊಡಗಿಸಿಕೊಳ್ಳಲಿದ್ದೀರಿ. ಅಂದ ಹಾಗೆ ಹೀಗೆ ಮಾಡಿದ ನಂತರ ಕೆಲವು ಅನುಕೂಲಗಳು ಸಹ ಒದಗಿಬರಲಿವೆ. ಇನ್ನು ಉದ್ಯೋಗ ಸ್ಥಳದಲ್ಲಿ ನೀವು ನಿರ್ವಹಿಸುವ ಕಾರ್ಯವಿಧಾನ ಹಾಗೂ ಅನುಸರಿಸುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಲಿದೆ. ನಿಮಗೆ ಹೆಚ್ಚುವರಿಯಾಗಿ ಜವಾಬ್ದಾರಿಗಳನ್ನು ವಹಿಸುವಂಥ ಯೋಗ ಇದೆ. ನಿಯೋಜನೆ ಮೇಲೆ ಬೇರೆ ಕಡೆಗೆ ಕಳುಹಿಸುವ ಸಾಧ್ಯತೆ ಇದೆ.

ಮಕ್ಕಳ ಉನ್ನತಭ್ಯಾಸಕ್ಕಾಗಿ, ಅದರಲ್ಲೂ ವಿದೇಶಗಳಲ್ಲಿ ಮಕ್ಕಳನ್ನು ಓದಿಸಬೇಕು ಎಂದು ಪ್ರಯತ್ನ ಪಡುತ್ತಿದ್ದಲ್ಲಿ ಅನುಕೂಲಗಳು ಒದಗಿ ಬರಲಿವೆ. ಹಣಕಾಸು ವಿಷಯಕ್ಕೆ ಅಡೆತಡೆಗಳು ಆಗುತ್ತಿದ್ದಲ್ಲಿ ಅದು ನಿವಾರಣೆ ಆಗಲಿದೆ. ಅವಿವಾಹಿತರಾಗಿದ್ದು, ಒಂದು ವೇಳೆ ನೀವು ಕಾರು ಖರೀದಿ ಮಾಡುವುದಕ್ಕೆ ಬ್ಯಾಂಕ್ ಲೋನ್ ಗಾಗಿ ಈಗಾಗಲೇ ಪ್ರಯತ್ನಪಟ್ಟು ಅಡೆತಡೆಗಳು ಎದುರಾಗಿದ್ದಲ್ಲಿ ಅವುಗಳು ಈ ತಿಂಗಳು ನಿವಾರಣೆಯಾಗಲಿವೆ ಹಾಗೂ ನಿಮ್ಮ ಮನೆಗೆ ಹೊಸ ಕಾರು ಬರುವಂತಹ ಯೋಗ ಕಂಡುಬರುತ್ತಿದೆ. ಯಾರು ವೈದ್ಯಕೀಯ ಪದ್ಧತಿಗಳ ಮೂಲಕ ಸಂತಾನಕ್ಕಾಗಿ ಪ್ರಯತ್ನ ಪಡುತ್ತಿದ್ದೀರೋ ಅಂಥವರಿಗೆ ಶುಭ ಸುದ್ದಿ ಕೇಳುವಂತಹ ಯೋಗ ಇದೆ. ಕಾಂಡಿಮೆಂಟ್ಸ್, ಹೋಟೆಲ್ ಅಥವಾ ಸಿಹಿ ಪದಾರ್ಥಗಳ ಮಾರಾಟ ಮಾಡುತ್ತಿರುವಂತಹವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂತಹ ಸಾಧ್ಯತೆಗಳಿವೆ. ಷೇರುಪೇಟೆ ಅಥವಾ ಮ್ಯೂಚುವಲ್ ಫಂಡ್ ಗಳಲ್ಲಿ ಹಣ ಹೂಡಿಕೆ ಮಾಡಿರುವಂತಹವರು ಅದರಲ್ಲಿ ದೊಡ್ಡ ಮೊತ್ತವನ್ನು ವಾಪಸ್ ತೆಗೆದುಕೊಳ್ಳುವುದರ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಹಾಗೆ ವಾಪಸ್ ತೆಗೆದುಕೊಂಡ ಹಣವನ್ನು ತಿಂಗಳಾ ತಿಂಗಳು ನಿಶ್ಚಿತ ಆದಾಯ ಬರುವಂಥ ಕಡೆಗೆ ಹಾಕುವುದಕ್ಕೆ ತೀರ್ಮಾನಿಸುತ್ತೀರಿ.

ನಿಮ್ಮಲ್ಲಿ ಕೆಲವರಿಗೆ ನಿದ್ರೆ ಸಮಸ್ಯೆ ಕಾಡಬಹುದು. ಏನಾದರೂ ಈ ಸಮಸ್ಯೆ ಕಾಡಿದಲ್ಲಿ ದುರ್ಗಾ ಸೂಕ್ತವನ್ನು ಇಡೀ ತಿಂಗಳು ಪ್ರತಿ ಶುಕ್ರವಾರ ಕೇಳಿಸಿಕೊಳ್ಳುವುದು ಉತ್ತಮ. ಇದೇ ಮೊದಲ ಬಾರಿಗೆ ಎಂಬಂತೆ ಮಾಡುತ್ತಿರುವ ಕೆಲಸಗಳಲ್ಲಿ ಹೆಚ್ಚಿನ ಸಮಯ ಹಾಗೂ ಗಮನವನ್ನು ತೊಡಗಿಸಬೇಕಾಗುತ್ತದೆ. ಯಾಕಾದರೂ ಈ ಕೆಲಸವನ್ನು ಒಪ್ಪಿಕೊಂಡೆನೋ ಎಂದೆನಿಸುವ ಸಾಧ್ಯತೆಗಳಿವೆ. ಕುಟುಂಬದವರ ಜೊತೆಗೂಡಿ ಕಿರು ಪ್ರವಾಸಗಳಿಗೆ ತೆರಳುವಂತಹ ಯೋಗಗಳು ಕಂಡುಬರುತ್ತಿವೆ. ಆದರೆ ಇದು ಈ ತಿಂಗಳ ಮೂರನೇ ವಾರದ ನಂತರದಲ್ಲಿ ಆಗಬಹುದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಸರಿ-ತಪ್ಪುಗಳು ಹಾಗೂ ಬೇಕು- ಬೇಡಗಳ ಬಗ್ಗೆ ಸ್ಪಷ್ಟತೆ ಇರಲಿ. ಒಂದು ಸಲ ಹೂಂ ಅಂದ ಮೇಲೆ ಅಥವಾ ಇಲ್ಲ ಅಂತ ಹೇಳಿದ ನಂತರ ಪದೇಪದೇ ತೀರ್ಮಾನಗಳನ್ನು ಬದಲಾಯಿಸಿಕೊಳ್ಳುವುದಕ್ಕೆ ಹೋಗಬೇಡಿ. ವಿವಾಹ ವಯಸ್ಕರಾಗಿದ್ದು, ಇನ್ನು ಇದೇ ತಿಂಗಳು ನಿಮ್ಮಲ್ಲಿ ಯಾರು ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂತಹವರಿಗೆ ಶುಭ ಸುದ್ದಿ ಕೇಳುವಂತಹ ಯೋಗ ಇದೆ. ಈ ಹಿಂದೆ ನೀವು ಮಾಡಿದ ಪ್ರಯತ್ನಗಳು ಈ ತಿಂಗಳಲ್ಲಿ ಫಲ ನೀಡಲಿವೆ. ನಿಮ್ಮ ಬಗ್ಗೆ ಸಣ್ಣಪುಟ್ಟ ಆಕ್ಷೇಪಗಳು ಇರುವವರು ಸಹ ಈ ತಿಂಗಳಲ್ಲಿ ನಿಮ್ಮ ಬಗ್ಗೆ ಸದಭಿಪ್ರಾಯ ಹೊಂದಲಿದ್ದಾರೆ. ಆದ್ದರಿಂದ ಯಾವುದೋ ಹಳೇ ಮನಸ್ತಾಪವನ್ನು ಮುಂದೆ ಮಾಡಿಕೊಂಡು, ಜಗಳ- ಕದನಗಳನ್ನು ಮಾಡಬೇಡಿ. ನಿಮಗೆ ಹಣ ನೀಡುವುದಾಗಿ ಯಾರಾದರೂ ಮಾತು ನೀಡಿದ್ದಾರೆ ಅಂತಾದರೆ ಅದನ್ನು ನೆಚ್ಚಿಕೊಂಡು ಇನ್ನೊಬ್ಬರಿಗೆ ನೀವು ಮಾತು ನೀಡಲು ಹೋಗಬೇಡಿ.

ನಿಮ್ಮ ಕೈಗೆ ಹಣ ಬರುವ ತನಕ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಈ ತಿಂಗಳಲ್ಲಿ ಒಳ್ಳೆ ಫಲ ಹೇಳಬಹುದೇನು ಅಂದರೆ, ನೀವು ಅಚಾನಕ್ ಆಗಿ ಒಪ್ಪಿಕೊಂಡ ಜವಾಬ್ದಾರಿಯನ್ನು ಅದ್ಭುತವಾಗಿ ಮಾಡಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನಿಮಗೆ ಸಿಗಬೇಕಾದ ಪ್ರಾಧಾನ್ಯ ಇನ್ನೂ ಹೆಚ್ಚು ಸಿಗಲಿದೆ. ಆದರೆ ಗಮನದಲ್ಲಿ ಇರಿಸಿಕೊಳ್ಳಬೇಕಾದ ಸಂಗತಿ ಏನೆಂದರೆ, ನಿಮಗೆ ಬಹಳ ಆಪ್ತರಾದವರು ರಹಸ್ಯ ಎಂದು ಹೇಳಿದ ವಿಚಾರವನ್ನು ಅಪ್ಪಿತಪ್ಪಿ ಕೂಡ ಯಾರ ಜೊತೆಗೂ ಚರ್ಚಿಸಬೇಡಿ. ಈಗಾಗಲೇ ಶುಭ ಕಾರ್ಯಗಳು ನಡೆಯುವುದಕ್ಕೆ ಸಿದ್ಧತೆ ನಡೆದಿದೆ ಅಥವಾ ಮದುವೆ ಮನೆಯಲ್ಲಿ ಸುಣ್ಣಬಣ್ಣ ಮಾಡಿಸಲು, ದುರಸ್ತಿ ಕಾರ್ಯಗಳನ್ನು ಮಾಡಿಸಲು ಹಣ ಖರ್ಚು ಮಾಡಲಿದ್ದೀರಿ. ಆದರೆ ಇದು ನೀವು ಅಂದುಕೊಂಡಿದ್ದಕ್ಕಿಂತ ವಿಪರೀತ ದೊಡ್ಡ ಮಟ್ಟದಲ್ಲಿ ಖರ್ಚು ತರಲಿದೆ. ಒಂದು ವೇಳೆ ನೀವು ಯಾವುದೋ ಉದ್ದೇಶಕ್ಕಾಗಿ ಉಳಿತಾಯದ ಅಥವಾ ಹೂಡಿಕೆ ಹಣವನ್ನು ಮುರಿಸಿದ್ದರೆ ಅದನ್ನು ಇನ್ಯಾವುದೋ ಕಾರಣಕ್ಕೋಸ್ಕರ ಬಳಸಬೇಕಾಗುತ್ತದೆ.

ಮಹಿಳೆಯರು ಈ ತಿಂಗಳಲ್ಲಿ ಮಕ್ಕಳ ಸಲುವಾಗಿ ಬೆಳ್ಳಿ ಒಡವೆ ಅಥವಾ ವಸ್ತುಗಳನ್ನು ಖರೀದಿ ಮಾಡಲು ಮುಂದಾಗಲಿದ್ದೀರಿ. ನಲವತ್ತು ವರ್ಷದ ಮೇಲ್ಪಟ್ಟವರಿದ್ದು, ಅದರಲ್ಲಿ ಯಾರಿಗೆ ಸಿಗರೇಟ್ ಸೇದುವ ವ್ಯಸನ ಇರುತ್ತದೆ ಅಂತಹವರಿಗೆ ಅನಾರೋಗ್ಯ ಸಮಸ್ಯೆ ಕಾಡಲಿದ್ದು, ವೈದ್ಯೋಪಚಾರ, ಔಷಧೋಪಚಾರಗಳಿಗೆ ಹೆಚ್ಚಿನ ಖರ್ಚಾಗಲಿದೆ. ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳು ಇದ್ದು, ನಿಧಾನಕ್ಕೆ ಮಾಡಿದರಾಯಿತು, ಗಡುವು ಇನ್ನೂ ದೂರ ಇದೆ ಅಂದುಕೊಂಡು ಕೆಲಸವನ್ನು ಯಾವುದೇ ಕಾರಣಕ್ಕೂ ಮುಂದಕ್ಕೆ ಹಾಕಬೇಡಿ. ಹಾಗೊಂದು ವೇಳೆ ಮಾಡಿದಲ್ಲಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯಿತು ಎಂದುಕೊಳ್ಳುವಷ್ಟರಲ್ಲಿ ಅನಿರೀಕ್ಷಿತ ಬೆಳವಣಿಗೆಗಳಿಂದ ಆತಂಕ ಸೃಷ್ಟಿಯಾಗಲಿದೆ. ಇನ್ನು ಪಿತ್ರಾರ್ಜಿತ ಆಸ್ತಿ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಲ್ಲಿ, ಅದರಲ್ಲೂ ನಿಮ್ಮ ಸಂಗಾತಿಯ ಮನೆ, ಆಸ್ತಿ ವಿಚಾರಗಳು ನಾನಾ ಬಗೆಯಲ್ಲಿ ಕಿರಿಕಿರಿ ಮಾಡಲಿದೆ. ಮೇಲ್ನೋಟಕ್ಕೆ ನಿಮ್ಮ ಮಾತನ್ನು ಕೇಳಿಸಿಕೊಳ್ಳುವವರಂತೆ, ಕೇಳುವವರಂತೆ ನಡೆದುಕೊಂಡರೂ ನಿಮ್ಮ ಬೆನ್ನ ಹಿಂದೆ ಆರೋಪಗಳು, ನಿಂದೆಗಳನ್ನು ಮಾಡುತ್ತಾರೆ. ಆದರೆ ಇದರಿಂದ ನೀವು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಇನ್ನು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವಂತಹ ಉದ್ಯೋಗಿಗಳಿಗೆ ಒತ್ತಡ ಹೆಚ್ಚಾಗಿರುತ್ತದೆ. ನೀವು ಆಡುವ ಮಾತು ತಮಗೆ ತೋಚಿದಂತೆ ಅರ್ಥ ಮಾಡಿಕೊಂಡು, ಒಂದೇ ಕೆಲಸವನ್ನು ಎರಡೆರಡು ಸಲ ಮಾಡುವಂತಹ ಪರಿಸ್ಥಿತಿಯನ್ನು ತಂದಿಡಲಿದ್ದಾರೆ. ಆದ್ದರಿಂದ ನಿಮ್ಮ ಸಂವಹನ ಮೇಲ್ ಮೂಲಕವೋ ಅಥವಾ ಕಾಗದದ ಮೂಲಕವೋ ಮಾಡುವುದು ಉತ್ತಮ. ನಿಮಗೆ ಎಷ್ಟೇ ಹತ್ತಿರದ ಸ್ನೇಹಿತರು ಬಂಧುಗಳು ಸಂಬಂಧಿಕರೇ ಆದರೂ ಸಹ ಅವರ ಪರವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಹೋಗಬೇಡಿ. ಏಕೆಂದರೆ, ಅರ್ಧ ಕೆಲಸ ಆದ ಮೇಲೋ ಅಥವಾ ಪೂರ್ಣವಾದ ಮೇಲೋ ಮನಸ್ತಾಪಗಳು ಉದ್ಭವಿಸುತ್ತದೆ.

ಪುರುಷರಾದಲ್ಲಿ ಸ್ತ್ರೀಯರ ವೈಯಕ್ತಿಕ ವಿಚಾರಗಳಿಗೆ, ಸ್ತ್ರೀಯರಾದಲ್ಲಿ ಪುರುಷರ ವೈಯಕ್ತಿಕ ವಿಚಾರಗಳಿಗೆ ತಲೆ ಹಾಕದಿರುವುದು ಉತ್ತಮ. ಅದರಲ್ಲೂ ಮದುವೆ- ಉದ್ಯೋಗಕ್ಕೆ ಸಂಬಂಧಿಸಿದಂಥ ವಿಚಾರ ಇದ್ದಲ್ಲಿ ಹಿಂದೆ ಉಳಿದುಕೊಂಡು ಬಿಡಿ. ಈ ಹಿಂದೆ ಅನುಕೂಲ ಮಾಡಿಕೊಡುವುದಾಗಿ ನೀವು ಮಾತು ಕೊಟ್ಟು, ಈಗ ಆ ಸಹಾಯವನ್ನು ಕೇಳಿಕೊಂಡು ಬಂದಾಗ ನಿಮ್ಮಿಂದ ಸಾಧ್ಯವಿಲ್ಲ ಎಂಬ ಉತ್ತರವನ್ನು ಹೇಳಿದಿರೋ ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗುವಂತಹ ಸಾಧ್ಯತೆಗಳಿವೆ. ಅದರಲ್ಲೂ ತಾಯಿ ಕಡೆಯ ಸಂಬಂಧಿಕರಿಗೆ ಮಾತು ನೀಡಿದ್ದಿರಿ ಅಂತಾದಲ್ಲಿ ಅದನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸಿ. ನಿಮ್ಮಲ್ಲಿ ಕೆಲವರಿಗೆ ಈ ತಿಂಗಳು ತೀವ್ರತರವಾದ ಜ್ವರ, ಅನಾರೋಗ್ಯ ಸಮಸ್ಯೆಗಳು ಕಾಡುವಂತಹ ಸಾಧ್ಯತೆಗಳಿವೆ.

ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುವ ಮೊದಲು ಅಥವಾ ದಿನಾಂಕ ನಿಗದಿ ಮಾಡಿಕೊಳ್ಳುವ ಮೊದಲು ನಿಮ್ಮ ದೈಹಿಕ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಒಮ್ಮೆ ಲಕ್ಷ್ಯ ಕೊಡುವುದು ಮುಖ್ಯ. ಸೈಟು ಜಮೀನು ಖರೀದಿ ಮಾಡಬೇಕು ಎಂದಿರುವವರಿಗೆ ಮನಸ್ಸಿಗೆ ಒಪ್ಪುವಂತಹದ್ದು ದೊರೆಯುವ ಅವಕಾಶಗಳು ಈ ತಿಂಗಳು ಹೆಚ್ಚಾಗಿವೆ. ಆದರೆ ಯಾವುದೇ ಮುಖ್ಯ ಕೆಲಸಗಳನ್ನು ಏನಾದರೂ ಒಂದು ನೆಪವೊಡ್ಡಿ ಮುಂದಕ್ಕೆ ಹಾಕುವುದಕ್ಕೆ ಹೋಗಬೇಡಿ, ಆಲಸ್ಯ ಮಾಡುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮ ಸ್ನೇಹಿತರು ಇರಬಹುದು ಅಥವಾ ಕುಟುಂಬದ ಸದಸ್ಯರೇ ಇರಬಹುದು, ತಮ್ಮ ಮಾತಿನಂತೆಯೇ ನಡೆದುಕೊಳ್ಳಬೇಕು ಎಂದು ಕೆಲವರು ನಿಮ್ಮ ಮೇಲೆ ಒತ್ತಡ ಹಾಕಲಿದ್ದಾರೆ. ಇದರಿಂದ ಮಾನಸಿಕ ಕಿರಿಕಿರಿ ಅನುಭವಿಸುವಂತಾಗುತ್ತದೆ. ಇನ್ನು ಯಾರು ಸರ್ಕಾರಿ ನೌಕರರು ಇದ್ದೀರಿ, ಅಂಥವರಿಗೆ ಉದ್ಯೋಗ ಸ್ಥಳದಲ್ಲಿ ಸಮಸ್ಯೆ ವಿಪರೀತ ಹೆಚ್ಚಾಗಬಹುದು. ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ನಿಮ್ಮ ವಿರುದ್ಧ ಇಲಾಖಾ ವಿಚಾರಣೆ ನಡೆಸುವುದಾಗಿ ಹೇಳಬಹುದು. ಇನ್ನು ಯಾರು ರಂಗಭೂಮಿ, ಸಿನಿಮಾ ಇಂಥ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ, ಅಂಥವರಿಗೆ ಒಂದಲ್ಲ ಒಂದು ಬಗೆಯಲ್ಲಿ ವಿವಾದ ಮೈಮೇಲೆ ಬರುವಂತಹ ಸಾಧ್ಯತೆಗಳು ಕಂಡುಬರುತ್ತವೆ. ಆದ್ದರಿಂದ ಸೋಷಿಯಲ್ ಮೀಡಿಯಾದಲ್ಲಿ ಏನು ಪೋಸ್ಟ್ ಮಾಡುತ್ತಿದ್ದೀರಿ ಮತ್ತು ಯಾವುದೇ ಮಾಧ್ಯಮಗಳಿಗೆ ನೀವು ನೀಡುವ ಸಂದರ್ಶನದಲ್ಲಿ ಏನು ಮಾತನಾಡುತ್ತಿದ್ದೀರಿ ಎಂಬುದರ ಬಗ್ಗೆ ನಿಗಾ ಇರಿಸಿಕೊಳ್ಳಿ. ಇನ್ನು ನಿಮಗೆ ಸಂಪೂರ್ಣ ಮಾಹಿತಿ ಇಲ್ಲದ ವಿಚಾರದ ಬಗ್ಗೆ ಮಾತನಾಡುವುದಕ್ಕೆ ಹೋಗಬೇಡಿ.

ಕಮಿಷನ್ ಆಧಾರದಲ್ಲಿ ಕೆಲಸ ಮಾಡುವವರಿಗೆ ಇನ್ನೇನು ಕೈಗೆ ದೊಡ್ಡ ಮೊತ್ತದ ಹಣ ಸೇರಿಯೇ ಬಿಟ್ಟಿತು ಎಂದುಕೊಳ್ಳುವ ಹೊತ್ತಿಗೆ ಕೊನೆ ಕ್ಷಣದಲ್ಲಿ ಆ ಕೆಲಸವೇ ನಿಂತು ಹೋಗಬಹುದು ಅಥವಾ ಇತರರೆಲ್ಲರೂ ಸೇರಿ ನಿಮ್ಮ ಪಾಲಿಗೆ ಬರಬೇಕಾದ ಹಣವು ಬಾರದಿರುವಂತೆ ನೋಡಿಕೊಳ್ಳಬಹುದು. ಸಂಬಂಧಿಗಳು ಅಥವಾ ಸ್ನೇಹಿತರ ಮನೆಯಲ್ಲಿ ಆಯೋಜಿಸುವಂಥ ದೇವತಾ ಕಾರ್ಯಗಳಲ್ಲಿ ಭಾಗವಹಿಸುವ ಯೋಗ ಇದೆ. ಅಲ್ಲಿ ನಿಮಗೆ ಪರಿಚಯ ಆಗುವಂಥ ಪ್ರಮುಖ ವ್ಯಕ್ತಿಯೊಬ್ಬರಿಂದ ದೀರ್ಘಾವಧಿಗೆ ಅನುಕೂಲಗಳು ಆಗಲಿವೆ. ಮಾನಸಿಕವಾಗಿಯೂ ನೆಮ್ಮದಿ ದೊರೆಯುತ್ತದೆ. ಯಾವುದಾದರೂ ಮುಖ್ಯ ಪರೀಕ್ಷೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ಈ ತಿಂಗಳು ಹಯಗ್ರೀವ ಸ್ತೋತ್ರವನ್ನು ಪಠಣ ಅಥವಾ ಶ್ರವಣ ಮಾಡುವುದರಿಂದ ಅನುಕೂಲ ಒದಗಿ ಬರಲಿದೆ. ನೀವೇನಾದರೂ ಕುಟುಂಬದಲ್ಲಿನ ಯಜಮಾನರಾಗಿದ್ದರೆ ನಾನು ಹೇಳಿದ್ದೇ ಆಗಬೇಕು ಎಂಬ ಹಟವನ್ನು ಯಾವುದೇ ಕಾರಣಕ್ಕೂ ಮಾಡುವುದಕ್ಕೆ ಹೋಗಬೇಡಿ.

ಈಗಾಗಲೇ ಹೊಟ್ಟೆಯ ಅನಾರೋಗ್ಯ ಸಮಸ್ಯೆ ಇದೆ ಅಥವಾ ಆಗಾಗ ಕಾಣಿಸಿಕೊಳ್ಳುತ್ತಿದೆ ಎಂದಾದಲ್ಲಿ ಮಸಾಲೆಯುಕ್ತ ಪದಾರ್ಥಗಳು ಕರಿದ ತಿನಿಸುಗಳು ಇಂಥದ್ದರ ಸೇವನೆಯಿಂದ ದೂರ ಇದ್ದಷ್ಟು ಉತ್ತಮ. ನಿಮಗೆ ಬಹಳ ಆಪ್ತರಾದ ಸ್ನೇಹಿತರು, ಸಂಬಂಧಿಗಳು ಇಂಥವರು ಆಡುವಂತಹ ಕೊಂಕಿನ ಮಾತುಗಳಿಂದ ಮನಸ್ಸಿಗೆ ಬಹಳ ಬೇಸರವಾಗಲಿದೆ. ಈ ಹಿಂದೆ ಹೂಡಿಕೆ ಮಾಡಿ ಬಹುತೇಕ ಆ ಹಣ ಬರುವುದಿಲ್ಲ ಎಂದುಕೊಂಡಿದ್ದು, ಸ್ನೇಹಿತರ ಸಹಾಯದಿಂದ ವಾಪಸ್ ಪಡೆದುಕೊಳ್ಳುವ ಮಾರ್ಗೋಪಾಯಗಳು ಗೋಚರ ಆಗಲಿವೆ.

ತಾಜಾ ಸುದ್ದಿ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ
‘ನನ್ನ ದೇವ್ರು’ ಮೂಲಕ ಕಿರತೆರೆಗೆ ಮರಳಿದ ಅಶ್ವಿನಿ ನಕ್ಷತ್ರದ ‘ಹೆಂಡ್ತಿ’
‘ನನ್ನ ದೇವ್ರು’ ಮೂಲಕ ಕಿರತೆರೆಗೆ ಮರಳಿದ ಅಶ್ವಿನಿ ನಕ್ಷತ್ರದ ‘ಹೆಂಡ್ತಿ’
ಯುವತಿಯರ ಮುಂದೆ ಬಾಡಿ ಪ್ರದರ್ಶಿಸುತ್ತಿದ್ದ ಯುವಕನಿಗೆ ಪಾಠ ಕಲಿಸಿದ  ಪೊಲೀಸರು
ಯುವತಿಯರ ಮುಂದೆ ಬಾಡಿ ಪ್ರದರ್ಶಿಸುತ್ತಿದ್ದ ಯುವಕನಿಗೆ ಪಾಠ ಕಲಿಸಿದ  ಪೊಲೀಸರು
‘ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ’; ವಿ ಮನೋಹರ್ ಹೇಳಿಕೆ
‘ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ’; ವಿ ಮನೋಹರ್ ಹೇಳಿಕೆ
ಕೇರಳದ ಕಲಾವಿದನ ಕೈಯಲ್ಲಿ ಅರಳಿದ ಪ್ರಧಾನಿ ಮೋದಿ ಭವ್ಯ ಪ್ರತಿಮೆ
ಕೇರಳದ ಕಲಾವಿದನ ಕೈಯಲ್ಲಿ ಅರಳಿದ ಪ್ರಧಾನಿ ಮೋದಿ ಭವ್ಯ ಪ್ರತಿಮೆ
ಕಿರುತೆರೆಗೆ ಎಂಟ್ರಿಕೊಟ್ಟ ನರಸಿಂಹರಾಜು ಮೊಮ್ಮಗ ಅವಿನಾಶ್ ದಿವಾಕರ್
ಕಿರುತೆರೆಗೆ ಎಂಟ್ರಿಕೊಟ್ಟ ನರಸಿಂಹರಾಜು ಮೊಮ್ಮಗ ಅವಿನಾಶ್ ದಿವಾಕರ್
ದೇವಸ್ಥಾನದಲ್ಲಿ ಶಟಗೋಪ ತಲೆ ಮೇಲೆ ಇಡುವುದರ ಮಹತ್ವ ಏನು? ಈ ವಿಡಿಯೋ ನೋಡಿ
ದೇವಸ್ಥಾನದಲ್ಲಿ ಶಟಗೋಪ ತಲೆ ಮೇಲೆ ಇಡುವುದರ ಮಹತ್ವ ಏನು? ಈ ವಿಡಿಯೋ ನೋಡಿ
ಈ ರಾಶಿಯವರು ಇಂದು ಪುಣ್ಯಸ್ಥಳದ ದರ್ಶ‌ನಕ್ಕೆಂದು ಪ್ರಯಾಣ ಮಾಡುವರು
ಈ ರಾಶಿಯವರು ಇಂದು ಪುಣ್ಯಸ್ಥಳದ ದರ್ಶ‌ನಕ್ಕೆಂದು ಪ್ರಯಾಣ ಮಾಡುವರು
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ