
ಯಾಕಾದರೂ ಈ ಕೆಲಸ ಒಪ್ಪಿಕೊಂಡೆನೋ ಎಂಬಷ್ಟು ರೇಜಿಗೆ ಈ ದಿನ ನಿಮಗೆ ಆಗಲಿದೆ. ಒಬ್ಬೊಬ್ಬರು ಒಂದು ರೀತಿ ಹೇಳುತ್ತಾ, ಒಂದು ಕೆಲಸವನ್ನು ನಾಲ್ಕೈದು ಬಾರಿ, ನಾಲ್ಕೈದು ರೀತಿಯಲ್ಲಿ ಮಾಡುವಂತೆ ಆಗಲಿದೆ. ಎಲ್ಲರಿಗೂ ಒಳ್ಳೆಯವರಾಗಿರಬೇಕು ಎಂಬ ಆಲೋಚನೆಯನ್ನು ಬಿಟ್ಟು, ಹೊರಗೆ ಬನ್ನಿ. ನೀವು ಹೇಳಬೇಕು ಅಂದುಕೊಂಡ ವಿಚಾರವನ್ನು ನೇರವಾಗಿ ಹೇಳುವುದಕ್ಕೆ ಪ್ರಯತ್ನಿಸಿ. ಹಣಕಾಸು ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಇತರರ ಆಕ್ಷೇಪಕ್ಕೆ ಹಾಗೂ ನಿಂದನೆಗೆ ಗುರಿ ಆಗಲಿದೆ.
ಸಂಘ- ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವವರು, ದೊಡ್ಡ ಗುಂಪನ್ನು ಮುನ್ನಡೆಸುವ ನಾಯಕತ್ವ ಸ್ಥಾನದಲ್ಲಿ ಇರುವವರು ನಿಮ್ಮ ಗಮನಕ್ಕೆ ಬಂದ ಸಂಗತಿಯನ್ನು ನಿರ್ಲಕ್ಷ್ಯ ಮಾಡಬೇಡಿ. ತಲೆಕೂದಲು- ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಇವೆ ಎಂದಾದರೆ ಅವು ಉಲ್ಬಣ ಆಗುವಂಥ ಸಾಧ್ಯತೆ ಇದೆ. ಇನ್ನು ರಾಜಕಾರಣದಲ್ಲಿ ಇರುವಂಥವರು ಯಾರ ಜೊತೆಗೆ ಗುರುತಿಸಿಕೊಂಡಿದ್ದೀರಿ ಒಮ್ಮೆ ಪರಾಮರ್ಶೆ ಮಾಡಿಕೊಳ್ಳಿ. ಮಾಹಿತಿ ಇಲ್ಲದ ವಿಷಯಗಳ ಬಗ್ಗೆ ಹೇಳಿಕೆ ನೀಡಬೇಡಿ.
ಕುಟುಂಬ ಸದಸ್ಯರ ಮಧ್ಯೆ ಇರುವ ವಿರಸ- ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ. ಬಹಳ ಕಾಲದಿಂದ ಬಾಕಿ ಉಳಿದುಹೋಗಿದ್ದ ಮನೆ, ಸೈಟು ಅಥವಾ ಜಮೀನಿನ ಕಾಗದ- ಪತ್ರ, ದಾಖಲೆಗಳ ಸಮಸ್ಯೆ ಬಗೆಹರಿಸುವುದಕ್ಕೆ ನಿಮ್ಮ ಸ್ನೇಹಿತರು ನೆರವು ನೀಡಲಿದ್ದಾರೆ. ಸೋದರ ಸಂಬಂಧಿಗಳ ಕಷ್ಟಕ್ಕೆ ನೀವು ಸಹಾಯ ಮಾಡಲಿದ್ದೀರಿ. ನಿಮ್ಮ ಮನೆಯಲ್ಲಿ ಇರುವಂಥ ಮಂಚ, ಸೋಫಾ, ದೀವಾನ ಇಂಥ ಹಳೆ ಪೀಠೋಪಕರಣಗಳ ಮಾರಾಟ ಮಾಡುವ ನಿರ್ಧಾರ ಕೈಗೊಳ್ಳಲಿದ್ದೀರಿ. ಲೇವಾದೇವಿ ವ್ಯವಹಾರ ಮಾಡುವವರು ಎಚ್ಚರಿಕೆಯಿಂದಿರಿ.
ಲೇಖನ- ಸ್ವಾತಿ ಎನ್.ಕೆ.