Saturn transit in Pisces: ಮೀನ ರಾಶಿಗೆ ಶನಿ ಗ್ರಹದ ಪ್ರವೇಶ ಕುಂಭ ರಾಶಿ ಮೇಲೆ ಏನು ಪ್ರಭಾವ?

ನಿಮ್ಮ ರಾಶ್ಯಾಧಿಪತಿ, ಅಂದರೆ ತನು ಭಾವದ ಅಧಿಪತಿ ಹಾಗೂ ವ್ಯಯ ಸ್ಥಾನದ ಅಧಿಪತಿಯಾದ ಶನಿಯು ಎರಡನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಸಂಸಾರದಲ್ಲಿ ಜಗಳ- ಕದನ, ಮನಸ್ತಾಪಗಳು ಕಾಣಿಸಿಕೊಳ್ಳುತ್ತವೆ. ಖರ್ಚು ಹೇಗೆ ಹಾಗೂ ಯಾಕೆ ಆಗುತ್ತಿದೆ ಎಂಬುದು ನಿಮಗೆ ಗೊತ್ತಾದರೂ ಅದನ್ನು ತಡೆಯುವ ಅಥವಾ ಕಡಿಮೆ ಮಾಡುವ ಸ್ಥಿತಿಯಲ್ಲಿ ನೀವಿರುವುದಿಲ್ಲ. ಮೀನ ರಾಶಿಗೆ ಶನಿ ಗ್ರಹದ ಪ್ರವೇಶದಿಂದ ಕುಂಭ ರಾಶಿಯಲ್ಲಿ ಈ ಬದಲಾವಣೆ ನಡೆಯಲಿದೆ.

Saturn transit in Pisces: ಮೀನ ರಾಶಿಗೆ ಶನಿ ಗ್ರಹದ ಪ್ರವೇಶ ಕುಂಭ ರಾಶಿ ಮೇಲೆ ಏನು ಪ್ರಭಾವ?
ಸಾಂದರ್ಭಿಕ ಚಿತ್ರ
Edited By:

Updated on: Mar 01, 2025 | 9:48 AM

2025ನೇ ಮಾರ್ಚ್ ತಿಂಗಳ 29ನೇ ತಾರೀಕು ಶನಿ ಗ್ರಹವು ಕುಂಭ ರಾಶಿಯಿಂದ ಮೀನಕ್ಕೆ ಪ್ರವೇಶಿಸುತ್ತದೆ. ಅದೇ ರಾಶಿಯಲ್ಲಿ ಜೂನ್ 3, 2027ರ ತನಕ ಇರುತ್ತದೆ. ಈ ಸಂಚಾರದೊಂದಿಗೆ ಕುಂಭ ರಾಶಿಯವರು ಸಾಡೇ ಸಾತ್ ಶನಿಯ ಕೊನೆಯ ಘಟಕ್ಕೆ ಪ್ರವೇಶ ಮಾಡಲಿದ್ದಾರೆ. ಏಳರಾಟ ಶನಿಯ ಒಟ್ಟು ಏಳೂವರೆ ವರ್ಷದ ಅವಧಿಯಲ್ಲಿ ಐದು ವರ್ಷಗಳನ್ನು ಪೂರೈಸಿದಂತಾಗುತ್ತದೆ. ಈ ಅವಧಿ ವಿವಾಹಿತರು ಹಾಗೂ ವಿವಾಹ ವಯಸ್ಕರಾಗಿ ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರು ಈ ಇಬ್ಬರಿಗೂ ಮಾನಸಿಕವಾಗಿ ಬಹಳ ಕಿರಿಕಿರಿ ಆಗುತ್ತದೆ. ಅಂದ ಹಾಗೆ ಈ ವರ್ಷದ ವಿಶೇಷ ಏನೆಂದರೆ ನಾಲ್ಕು ಪ್ರಮುಖ, ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳು ಸಂಚಾರ ಬದಲಿಸಿ, ತಮ್ಮ ಪರಿಕ್ರಮಣಕ್ಕೆ ತಕ್ಕಂತೆ ಮುಂದಿನ ರಾಶಿಗೆ ಪ್ರವೇಶಿಸುತ್ತವೆ. ಮಾರ್ಚ್ ನಲ್ಲಿ ಶನಿ ಗ್ರಹವಾದರೆ, ಮೇ ತಿಂಗಳಲ್ಲಿ ಗುರು, ರಾಹು- ಕೇತುಗಳು ಸಂಚಾರದಲ್ಲಿ ಬದಲಾವಣೆಯಿದೆ.

ಇನ್ನು ಶನಿ ಗ್ರಹಕ್ಕೆ ಮಕರ ಹಾಗೂ ಕುಂಭ ರಾಶಿಗಳು ಸ್ವಕ್ಷೇತ್ರವಾಗುತ್ತವೆ. ತುಲಾ ರಾಶಿಯು ಉಚ್ಚ ಕ್ಷೇತ್ರ ಮತ್ತು ಮೇಷ ರಾಶಿಯು ನೀಚ ಕ್ಷೇತ್ರವಾಗುತ್ತದೆ. ಮೀನ ರಾಶಿಯ ಅಂತಿಮ ಡಿಗ್ರಿಗಳಿಗೆ ತಲುಪುತ್ತಿದ್ದಂತೆಯೇ ಮೇಷ ರಾಶಿಯ ನೀಚಸ್ಥ ಫಲವನ್ನು ಶನಿ ಗ್ರಹ ನೀಡಲು ಆರಂಭಿಸುತ್ತದೆ.

ಹನ್ನೆರಡು ರಾಶಿಗಳ ಮೇಲೂ ಈ ಶನಿ ಸಂಚಾರದ ಫಲ ಇರಲಿದ್ದು, ಕುಂಭ ರಾಶಿಯ ಮೇಲೆ ಏನು ಪ್ರಭಾವ ಆಗಲಿದೆ ಎಂಬ ವಿವರ ಇಲ್ಲಿದೆ.

ನಿಮ್ಮ ರಾಶ್ಯಾಧಿಪತಿ, ಅಂದರೆ ತನು ಭಾವದ ಅಧಿಪತಿ ಹಾಗೂ ವ್ಯಯ ಸ್ಥಾನದ ಅಧಿಪತಿಯಾದ ಶನಿಯು ಎರಡನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಸಂಸಾರದಲ್ಲಿ ಜಗಳ- ಕದನ, ಮನಸ್ತಾಪಗಳು ಕಾಣಿಸಿಕೊಳ್ಳುತ್ತವೆ. ಖರ್ಚು ಹೇಗೆ ಹಾಗೂ ಯಾಕೆ ಆಗುತ್ತಿದೆ ಎಂಬುದು ನಿಮಗೆ ಗೊತ್ತಾದರೂ ಅದನ್ನು ತಡೆಯುವ ಅಥವಾ ಕಡಿಮೆ ಮಾಡುವ ಸ್ಥಿತಿಯಲ್ಲಿ ನೀವಿರುವುದಿಲ್ಲ. ಪೂಜೆ- ಪುನಸ್ಕಾರಗಳು ನೀವು ಬಾಕಿ ಉಳಿಸಿಕೊಂಡು ಬಂದಿದ್ದಲ್ಲಿ ಈ ಅವಧಿಯಲ್ಲಿ ಆಗುತ್ತವೆ. ಆದರೆ ಇದಕ್ಕೆ ಹಣ ಹೊಂದಿಸಿಕೊಳ್ಳುವುದಕ್ಕೆ ಬಹಳ ಶ್ರಮವನ್ನು ಹಾಕಬೇಕಾಗುತ್ತದೆ.

ಈ ಅವಧಿಯಲ್ಲಿ ದೈಹಿಕ ದಣಿವು, ಸುಸ್ತು, ಬೆನ್ನು ನೋವು, ಹೊಟ್ಟೆ ನೋವು ಜಾಸ್ತಿಯಾಗುವುದು ಚಿಂತೆಗೆ ಕಾರಣವಾಗುತ್ತದೆ. ಕುಟುಂಬ ಸದಸ್ಯರ ಅಗತ್ಯಕ್ಕಾಗಿ ಹಣಕಾಸು ಹೊಂದಿಸುವುದಾಗಿ ಮಾತನ್ನು ನೀಡಿದ ಮೇಲೆ ಅದನ್ನು ಹೊಂದಿಸುವುದಕ್ಕೆ ಸಾಧ್ಯವಾಗದೆ ಎಲ್ಲರ ಸಿಟ್ಟಿಗೆ ಕಾರಣರಾಗಲಿದ್ದೀರಿ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಇರುವವರಿಗೆ ಪರಿಸ್ಥಿತಿ ಬಿಗಡಾಯಿಸಲಿದೆ ಅಥವಾ ಕಣ್ಣಿನ ಪೊರೆ ಆಗುವ ಸಾಧ್ಯತೆ ಇದ್ದು ಆಪರೇಷನ್ ಮಾಡಿಸಲೇಬೇಕಾದ ಸನ್ನಿವೇಶ ಎದುರಾಗಲಿದೆ.

ವಿದ್ಯಾರ್ಥಿಗಳಿಗೆ ವಿನಾಕಾರಣದ ಸುತ್ತಾಟದ ಕಾರಣಕ್ಕೆ ಏಕಾಗ್ರತೆಯನ್ನು ಸಾಧಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಮನೆಯಿಂದ ಹೊರಗೆ ಇದ್ದು ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡು, ದೀರ್ಘಾವಧಿ ರಜಾ ತೆಗೆದುಕೊಳ್ಳಲೇ ಬೇಕಾದ ಸ್ಥಿತಿ ಬರುತ್ತದೆ. ಹಣವನ್ನು ಎಲ್ಲಿ ಇಡುತ್ತೀರಿ ಎಂಬ ಬಗ್ಗೆ ಗಮನ ನೀಡಿ. ಏಕೆಂದರೆ ಹಣ ಕಳುವಾಗಿ ಅಥವಾ ಕಳೆದು ಹೋಗಿ ಭಾರೀ ದುಃಖ ಅನುಭವಿಸುವಂತಾಗುತ್ತದೆ.

ಹೆಣ್ಣುಮಕ್ಕಳು ಥೈರಾಯ್ಡ್ ಸಮಸ್ಯೆಗಳನ್ನು ಅನುಭವಿಸುತ್ತಿದ್ದಲ್ಲಿ ಆ ಕಡೆಗೆ ಗಮನವನ್ನು ನೀಡಿ. ಫಾಲೋ ಅಪ್ ಚೆಕಪ್ ಗಳನ್ನು ಸರಿಯಾಗಿ ಮಾಡಿಸಿಕೊಳ್ಳುವುದು ಮುಖ್ಯವಾಗುತ್ತದೆ. ಇತರರ ವೈಯಕ್ತಿಕ ಜೀವನದ ಬಗ್ಗೆ ಗಾಸಿಪ್ ಗಳನ್ನು ಮಾತನಾಡುವುದು ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವುದು ಇಂಥದ್ದನ್ನು ಮಾಡಬೇಡಿ.

ಉದ್ಯೋಗಸ್ಥರು, ವ್ಯಾಪಾರ- ವ್ಯವಹಾರ ಮಾಡುವವರಿಗೆ ಹಣಕಾಸಿನ ಹರಿವು ಬಹಳ ದೊಡ್ಡ ಮಟ್ಟದಲ್ಲಿ ಇಳಿಕೆ ಕಾಣಲಿದೆ.

-ಸ್ವಾತಿ ಎನ್.ಕೆ.