
ಇದೇ ಸೆಪ್ಟೆಂಬರ್ 21ನೇ ತಾರೀಕಿನ ಭಾನುವಾರ ಮಹಾಲಯ ಅಮಾವಾಸ್ಯೆ (Mahalaya Amavasye) ಇದೆ. ಇನ್ನು ಅದೇ ದಿನ ಕೇತುಗ್ರಸ್ತ ಸೂರ್ಯ ಗ್ರಹಣ (Solar Eclipse) ಸಂಭವಿಸುತ್ತಿದೆ. ಸಿಂಹ ರಾಶಿಯಲ್ಲಿ ನಡೆಯುವಂಥ ಈ ಗ್ರಹಣದ ಗೋಚರವು ಭಾರತದಲ್ಲಿ ಆಗುವುದಿಲ್ಲ. ಆದ್ದರಿಂದ ಗ್ರಹಣದ ಯಾವುದೇ ಆಚರಣೆಗಳನ್ನು ಮಾಡುವ ಅಗತ್ಯವಿಲ್ಲ. ಆದರೆ ಗ್ರಹಣದ ಫಲಾಫಲವು ಮೇಷಾದಿ ಮೀನ ರಾಶಿಯವರಿಗೆ ಆಗಿಯೇ ಆಗುತ್ತದೆ. ಯಾವ ರಾಶಿಯವರ ಮೇಲೆ ಎಂಥ ಪ್ರಭಾವ ಆಗಬಹುದು ಅಂತ ನೋಡಿದರೆ, ಮಿಥುನ, ಮೀನ, ತುಲಾ, ವೃಶ್ಚಿಕ ರಾಶಿಗೆ ಶುಭ ಫಲವನ್ನು, ಸಿಂಹ, ಕನ್ಯಾ, ಮಕರ ಹಾಗೂ ವೃಷಭ ರಾಶಿಯವರಿಗೆ ಅಶುಭ ಫಲವನ್ನು ಮತ್ತು ಕರ್ಕಾಟಕ, ಮೇಷ, ಕುಂಭ ಹಾಗೂ ಧನುಸ್ಸು ರಾಶಿಯವರಿಗೆ ಮಿಶ್ರ ಫಲವನ್ನು ನೀಡುತ್ತದೆ. ಅಶುಭ ಫಲವೋ ಅಥವಾ ಎಚ್ಚರಿಕೆಯನ್ನು ಹೇಳಿರುವಂಥ ರಾಶಿಯವರು ಮುಂಜಾಗ್ರತೆಯನ್ನು ವಹಿಸುವುದು ಅವಶ್ಯ. ಇನ್ನುಳಿದಂತೆ ದ್ವಾದಶ ರಾಶಿಗಳ ಮೇಲೆ ಈ ಕೇತುಗ್ರಸ್ತ ಸೂರ್ಯ ಗ್ರಹಣದ ಪರಿಣಾಮ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಮಕ್ಕಳ ಆರೋಗ್ಯದ ಮೇಲೆ ಜಾಗ್ರತೆಯನ್ನು ವಹಿಸಬೇಕಾಗುತ್ತದೆ. ಅವರ ಆಟೋಟ ಹಾಗೂ ಯಾವ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಗಮನ ಇರಲಿ. ಗರ್ಭಿಣಿಯರು ಇದ್ದಲ್ಲಿ ಅಂಥವರು ಸಹ ವೈದ್ಯಕೀಯ ಪರೀಕ್ಷೆಗಳನ್ನು ಸರಿಯಾಗಿ ಫಾಲೋ ಅಪ್ ಮಾಡಿಕೊಳ್ಳುವುದು ಕ್ಷೇಮ. ಇನ್ನು ನಿಮ್ಮಲ್ಲಿ ಯಾರು ಈಗಾಗಲೇ ಕೆಲಸ ಮಾಡಿಯಾಗಿದೆ, ಅದರಿಂದ ಬರಬೇಕಾದ ಹಣ ಬಾಕಿ ಇದೆ ಎಂಬಂತೆ ಇದ್ದೀರಿ, ಅಂಥವರಿಗೆ ಹಣ ಬರುವ ಸಾಧ್ಯತೆಗಳು ಹೆಚ್ಚಿವೆ. ಈ ಹಿಂದೆ ನೀವು ಪಟ್ಟಂಥ ಪರಿಶ್ರಮಕ್ಕೆ ಪ್ರತಿಫಲ ದೊರೆಯಲಿದೆ. ಅದೇ ವೇಳೆ ನಿಮ್ಮ ವಿರುದ್ಧ ದೂರುಗಳೇನಾದರೂ ಈಗಾಗಲೇ ದಾಖಲಾಗಿದ್ದಲ್ಲಿ ಅದಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಉಲ್ಬಣ ಆಗಬಹುದು.
ಗಂಟಲು, ನಾಲಗೆ, ತುಟಿಗೆ ಸಂಬಂಧಿಸಿದಂತೆ ಅನಾರೋಗ್ಯ ಸಮಸ್ಯೆಗಳು ಎದುರಾಗಬಹುದು. ಅದೇ ರೀತಿ ಮಾನಸಿಕ ಖಿನ್ನತೆಯಿಂದ ಈಗಾಗಲೇ ಬಳಲುತ್ತಿರುವವರಿಗೆ ಪರಿಸ್ಥಿತಿ ಉಲ್ಬಣ ಆಗುವ ಸಾಧ್ಯತೆಗಳು ಇರುತ್ತವೆ. ತಾಯಿ ಅಥವಾ ತಾಯಿ ಸಮಾನರಾದವರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡಿ. ವಿದ್ಯಾರ್ಥಿಗಳಿಗೆ ಓದಿನ ಮೇಲೆ ಆಸಕ್ತಿ ಕ್ಷೀಣಿಸುತ್ತದೆ. ಇದೇ ಸಮಯದಲ್ಲಿ ಪರೀಕ್ಷೆಗಳು ಇದ್ದಲ್ಲಿ ಮರೆವಿನ ಸಮಸ್ಯೆಗಳು ಕಾಡಬಹುದು. ಸ್ವಚ್ಛತೆ ಕಾಪಾಡಿಕೊಳ್ಳುವ ಕಡೆಗೆ ಹೆಚ್ಚಿನ ಲಕ್ಷ್ಯವನ್ನು ನೀಡಬೇಕಾಗುತ್ತದೆ. ನೈರ್ಮಲ್ಯದ ಕೊರತೆಯಿಂದ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳು ಎದುರಾಗಲಿದ್ದು, ವೈದ್ಯಕೀಯ ಚಿಕಿತ್ಸೆಗಳಿಗೆ ಖರ್ಚಾಗಲಿದೆ. ಇತರರ ವೈಯಕ್ತಿಕ ವಿಚಾರಗಳಲ್ಲಿ ತಲೆ ಹಾಕಬೇಡಿ.
ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ವ್ಯಾಜ್ಯಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಬೇಕಾದಂಥ ವೇದಿಕೆ ದೊರೆಯಲಿದೆ. ಸೋದರ- ಸೋದರಿಯರ ಜೊತೆಗೆ ಭಿನ್ನಾಭಿಪ್ರಾಯ- ಮನಸ್ತಾಪಗಳು ಇದ್ದಲ್ಲಿ ಅದನ್ನು ಮಾತುಕತೆ ಮೂಲಕ ಸರಿ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ನಿಮ್ಮ ಮೇಲೆ ವಿನಾಕಾರಣ ಅಥವಾ ಸುಖ ಸುಮ್ಮನೆ ದೂರುಗಳು ಏನಾದರೂ ಕೇಳಿಬಂದಿದ್ದು, ಅದರ ಬಗ್ಗೆ ವಿಚಾರಣೆ ನಡೆಯುತ್ತಿದ್ದಲ್ಲಿ ಅಥವಾ ಆಕ್ಷೇಪಗಳ ಬಗ್ಗೆ ಸಮಜಾಯಿಷಿ ನೀಡಬೇಕು ಎಂದು ಕೇಳಿದ್ದಲ್ಲಿ ನಿಮ್ಮ ವಿರುದ್ಧದ ವಾದಗಳು ನಿಲ್ಲದಂತೆ ಆಗಲಿವೆ. ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಜನಪ್ರಿಯತೆ ಹೆಚ್ಚಾಗಲಿದ್ದು, ಸನ್ಮಾನ- ಗೌರವಗಳು ದೊರೆಯುವ ಸಾಧ್ಯತೆಗಳಿವೆ.
ಕಣ್ಣಿಗೆ ಸಂಬಂಧಿಸಿದ ತೊಂದರೆಗಳು ಎದುರಾಗಬಹುದು, ವಯಸ್ಸಿನ ಆಧಾರದಲ್ಲಿಯೂ ಇದನ್ನು ಆಲೋಚಿಸಿಕೊಳ್ಳಿ. ಕಣ್ಣಿನ ಪೊರೆ ಸಮಸ್ಯೆ ಹೀಗೆ ಏನಾದರೂ ಕಾಣಿಸಿಕೊಳ್ಳಬಹುದು. ಇನ್ನು ನಿಮ್ಮಲ್ಲಿ ಕೆಲವರಿಗೆ ನಿರೀಕ್ಷೆ ಮಾಡಿದಂಥ ಹಣವು ಬಾರದೆ ಹೋಗುವ ಸಾಧ್ಯತೆಗಳಿವೆ. ಈಗಾಗಲೇ ಕೆಲಸ ಮಾಡಿಯಾಗಿದೆ, ಇಂಥ ದಿನ ಹಣ ನೀಡುವುದಾಗಿ ಮಾತು ನೀಡಿದ್ದಾರೆ ಎಂದಾದರೂ ಇನ್ನೂ ಕೈ ಸೇರದ ಹಣವನ್ನು ನೆಚ್ಚಿಕೊಂಡು ಯಾರಿಗೂ ಮಾತು ಕೊಡುವುದಕ್ಕೆ ಹೋಗಬೇಡಿ. ಪತಿ-ಪತ್ನಿ ಮಧ್ಯೆ ವಿರಸ ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ. ಇನ್ನು ನಿಮ್ಮಲ್ಲಿ ಕೆಲವರಿಗೆ ತಂದೆ ಮನೆಯಿಂದ ಅಥವಾ ತಂದೆ ಕಡೆಯಿಂದ ಹಣ ಬರಬಹುದು.
ನಿಮ್ಮ ತಂದೆ ಅಥವಾ ತಂದೆ ಸಮಾನರಾದವರ ಆರೋಗ್ಯದ ಬಗ್ಗೆ ಜಾಗ್ರತೆಯನ್ನು ವಹಿಸಿ. ನೀವು ವಾಹನ ಚಾಲನೆ ಮಾಡುವಾಗ ಸಾಮಾನ್ಯವಾಗಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚು ಎಚ್ಚರಿಕೆಯನ್ನು ವಹಿಸಬೇಕು. ಹೃದಯ, ಕಣ್ಣು, ಕಿಡ್ನಿ, ನರಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಅಥವಾ ಈಗಾಗಲೇ ಸಮಸ್ಯೆಗಳು ಇದೆ ಎಂದಾದಲ್ಲಿ ಅದು ಉಲ್ಬಣ ಆಗುವಂಥ ಅವಕಾಶಗಳು ಸಹ ಇವೆ. ಸರ್ಕಾರದ ಕೆಲಸದಲ್ಲಿ ಇರುವವರು ನಿಮ್ಮ ವ್ಯಾಪ್ತಿಗೆ ಮೀರಿದ ವಿಷಯಗಳಲ್ಲಿ ತಲೆ ಹಾಕದಿರುವುದು ಕ್ಷೇಮ. ಅಮಾನತು, ಇಲಾಖೆ ವಿಚಾರಣೆ ಇಂಥದ್ದೇನಾದರೂ ಆಗಿಬಿಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇನ್ನು ನಿಮಗೆ ಸಂಬಂಧ ಪಡದ ಜಗಳದ ಮಧ್ಯೆ ಹೋಗಬೇಡಿ, ಅದರಲ್ಲೂ ವಿವಾದಗಳಿಂದ ದೂರ ಇರುವುದು ಬಹಳ ಮುಖ್ಯ. ಗೋಧಿ- ಕೆಂಪುವಸ್ತ್ರ ಮತ್ತು ಹುರುಳಿ- ನಾನಾವರ್ಣದ ವಸ್ತ್ರವನ್ನು ದಾನ ಮಾಡಿ.
ಖರ್ಚಿನ ಪ್ರಮಾಣ ವಿಪರೀತ ಹೆಚ್ಚಾಗಲಿದೆ. ಇದು ಒಂದು ಕಡೆಯಾದರೆ, ಅನವಶ್ಯಕ ವೆಚ್ಚದ ಪ್ರಮಾಣವು ಗಾಬರಿ ಆಗುವ ಮಟ್ಟಕ್ಕೆ ಆಗಬಹುದು. ಸರ್ಕಾರದಿಂದ ತೆಗೆದುಕೊಳ್ಳಬೇಕಾದ ಪರವಾನಗಿ. ಲೈಸೆನ್ಸ್ ಇಂಥದ್ದರ ಕಡೆಗೆ ಲಕ್ಷ್ಯವನ್ನು ನೀಡಿ. ನಿಮಗೆ ದಂಡ ರೂಪದಲ್ಲಿ ಕೂಡ ಬೀಳಬಹುದು. ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿ ನೋಡಿಕೊಳ್ಳಿ. ನಿಮ್ಮದೇ ವಸ್ತುಗಳೋ ಅಥವಾ ಇತರರದೋ ಅದನ್ನು ಇಡುವಾಗ ಇಟ್ಟಿರುವ ಜಾಗ ಯಾವುದು ಎಂಬ ಬಗ್ಗೆ ಗೊತ್ತಿರಲಿ. ಸಾಧ್ಯವಾದರೆ ಅಂಥ ಜವಾಬ್ದಾರಿಗಳನ್ನು ಈ ಸಮಯದಲ್ಲಿ ತೆಗೆದುಕೊಳ್ಳದಿರುವುದು ಕ್ಷೇಮ. ನಿಮಗಿಂತ ವಯಸ್ಸಿನಲ್ಲಿ ಹಿರಿಯರಾದವರ ಜೊತೆಗೆ ವಾದ ಮಾಡುವುದಕ್ಕೆ ಹೋಗಬೇಡಿ. ಇತರರಿಗೆ ಸಾಲಕ್ಕೆ ಜಾಮೀನು ನಿಲ್ಲಬೇಡಿ. ಗೋಧಿ- ಕೆಂಪುವಸ್ತ್ರ ಮತ್ತು ಹುರುಳಿ- ನಾನಾವರ್ಣದ ವಸ್ತ್ರವನ್ನು ದಾನ ಮಾಡಿ.
ಟ್ಯಾಕ್ಸ್ ರೀಫಂಡ್ ಆಗಬೇಕು ಅಥವಾ ಜಿಎಸ್ ಟಿಗೆ ಸಂಬಂಧಿಸಿದಂತೆ ಬರಬೇಕಾದ ಹಣ ಹಾಗೇ ಬಾಕಿ ಉಳಿದುಹೋಗಿದೆ ಹೀಗೇನಾದರೂ ಇದ್ದಲ್ಲಿ ಅವು ಬರುವ ಸಾಧ್ಯತೆಗಳು ಹೆಚ್ಚಿವೆ. ತಂದೆಯೊಂದಿಗೆ ಮನಸ್ತಾಪ- ಅಭಿಪ್ರಾಯ ಭೇದಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಅವಕಾಶಗಳಿವೆ. ವ್ಯಾಪಾರ- ವ್ಯವಹಾರದಲ್ಲಿ ಇರುವವರಿಗೆ ಬರಬೇಕಾದ ಲಾಭದ ಪ್ರಮಾಣ ಹಾಗೇ ಉಳಿದು ಹೋಗಿದೆ, ಇನ್ನೂ ಕೈ ಸೇರಿಲ್ಲ ಅಂತಾದಲ್ಲಿ ಅದು ಬರಲಿದೆ. ದೇವತಾ ಕಾರ್ಯಗಳು ಬಾಕಿ ಉಳಿದುಹೋಗಿದ್ದು, ಬಹಳ ಸಮಯದಿಂದ ಅದನ್ನು ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಬೇಕಾದ ಅನುಕೂಲಗಳು ಒದಗಿಬಂದು, ಆ ಕೆಲಸಗಳು ಮಾಡುವುದಕ್ಕೆ ಸಾಧ್ಯವಾಗಲಿದೆ. ಧಾರ್ಮಿಕ ಮನೋಭಾವ ಇರುವವರಿಗೆ ಹೆಚ್ಚೆಚ್ಚು ಒಳ್ಳೆಯ ಫಲಗಳು ದೊರೆಯುತ್ತವೆ.
ಉದ್ಯೋಗ ಸ್ಥಳದಲ್ಲಿ ಅಥವಾ ನೀವು ವೃತ್ತಿ ಮಾಡುವ ಕಡೆಯಲ್ಲಿ ಉತ್ತಮವಾದ ಬೆಳವಣಿಗೆ ನಿರೀಕ್ಷೆ ಮಾಡಬಹುದು. ಪ್ರಭಾವಿಗಳ ಸಹಾಯ ನಿಮಗೆ ಒದಗಿ ಬರಲಿದೆ. ಸಂಘ- ಸಂಸ್ಥೆಗಳ ಪದಾಧಿಕಾರಿ ಆಗಿ ನೇಮಕ ಆಗುವಂಥ ಯೋಗ ಇದೆ. ನೀವಾಗಿಯೇ ಆಸಕ್ತಿ ವಹಿಸಿ, ಹೆಚ್ಚುವರಿ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರ ಶುಭ ಫಲವು ದೊರೆಯುವ ಸಮಯ ಇದಾಗಿರುತ್ತದೆ. ಮನೆಯಲ್ಲಿ ಶುಭ ಸಮಾರಂಭಗಳ ಆಯೋಜನೆ ಮಾಡುವುದಕ್ಕೆ ಮುಂದಾಳತ್ವ ವಹಿಸುವಂತೆ ಕೇಳಿಕೊಳ್ಳಬಹುದು ಅಥವಾ ನೀವಾಗಿಯೇ ಮನೆಯ ಹಿರಿಯರ ಒಳಿತಿಗಾಗಿ ಪೂಜೆ- ಪುನಸ್ಕಾರ ಮೊದಲಾದವು ಮಾಡಿಸುವಂಥ ಯೋಗ ಸಹ ಇದೆ.
ಅದೃಷ್ಟ ಪರೀಕ್ಷೆಗೆ ಇಳಿಯಬೇಡಿ. ಇಷ್ಟು ಸಮಯದೊಳಗೆ ಕೆಲಸ ಮಾಡಿಕೊಟ್ಟೇ ಕೊಡ್ತೀನಿ ಎಂದು ಮಾತು ಕೊಟ್ಟಲ್ಲಿ ಅದನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ತಂದೆಯೊಂದಿಗೆ ಮನಸ್ತಾಪ, ಅಭಿಪ್ರಾಯ ಭೇದದಿಂದ ಮನಶ್ಶಾಂತಿ ಕಳೆದುಕೊಳ್ಳುವಂತೆ ಆಗಲಿದೆ. ಇನ್ನು ನಿಮ್ಮಲ್ಲಿ ಕೆಲವರಿಗೆ ತಂದೆಯವರ ದಿಢೀರ್ ಅನಾರೋಗ್ಯ ಸಮಸ್ಯೆ ಅಥವಾ ಅನಾರೋಗ್ಯ ಉಲ್ಬಣ ಆಗುವದರಿಂದ ಚಿಂತೆಗೆ ಸಹ ಕಾರಣ ಆಗಲಿದೆ. ನೀವೇನಾದರೂ ದೇವರಿಗೆ ಸಂಬಂಧಿಸಿದ ಯಾವುದಾದರೂ ಹರಕೆಗಳನ್ನು ಹೊತ್ತಿದ್ದು, ಅದನ್ನು ಇನ್ನೂ ತೀರಿಸಿಲ್ಲ ಅಂತಾದಲ್ಲಿ ಪೂರ್ಣಗೊಳಿಸುವ ಕಡೆಗೆ ಗಮನವನ್ನು ನೀಡಿ. ಕೋರ್ಟ್- ಕಚೇರಿ ಕೇಸ್ ಗಳು ಇದ್ದಲ್ಲಿ ಅವುಗಳನ್ನು ಬಗೆಹರಿಸಿಕೊಳ್ಳಲು ವೇದಿಕೆ ದೊರೆಯಲಿದೆ. ಹಿರಿಯರ ಮಾರ್ಗದರ್ಶನದಿಂದ ನಾನಾ ಅನುಕೂಲಗಳು ಆಗಲಿವೆ.
ಅನವಶ್ಯಕವಾದ ಗಾಬರಿ ಆಗಲಿದೆ. ದೇಹದಲ್ಲಿ ವಿಟಮಿನ್ ಕೊರತೆ, ತ್ರಾಣವಿಲ್ಲದಂತಾಗಿ ಸುಸ್ತಾಗುವುದು, ಏಕಾಗ್ರತೆ ಸಾಧ್ಯವಾಗದೆ ಅನ್ಯಮನಸ್ಕತೆ ಇತ್ಯಾದಿ ತೊಂದರೆಗಳು ಅನುಭವಕ್ಕೆ ಬರಲಿವೆ. ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ನೋಟಿಸ್ ಬರಬಹುದು, ಮನೆಯಲ್ಲಿನ ಹಿರಿಯರ ವರ್ತನೆಯಿಂದ ಆತಂಕ- ಬೇಸರ ಉಂಟಾಗಲಿದೆ. ಚರ್ಮ, ಕೂದಲಿಗೆ ಸಂಬಂಧಿಸಿದ ವ್ಯಾಧಿ ಏನಾದರೂ ಈಗಾಗಲೇ ಇದೆ ಎಂದಾದಲ್ಲಿ ಅದು ಉಲ್ಬಣ ಆಗದಂತೆ ನೋಡಿಕೊಳ್ಳಿ. ಅಥವಾ ಈ ಅವಧಿಯಲ್ಲಿ ಕಾಣಿಸಿಕೊಂಡರೆ ಕೂಡಲೇ ಸೂಕ್ತ ವೈದ್ಯೋಪಚಾರ ಮಾಡುವ ಕಡೆಗೆ ಲಕ್ಷ್ಯವನ್ನು ನೀಡಿ. ಗೋಧಿ- ಕೆಂಪುವಸ್ತ್ರ ಮತ್ತು ಹುರುಳಿ- ನಾನಾವರ್ಣದ ವಸ್ತ್ರವನ್ನು ದಾನ ಮಾಡಿ.
ಇದನ್ನೂ ಓದಿ: ಪಿತೃ ಪಕ್ಷದಲ್ಲಿ ಕನಸಿನಲ್ಲಿ ಕಾಗೆ ಕಂಡರೆ ಏನರ್ಥ? ಸ್ವಪ್ನಶಾಸ್ತ್ರ ಹೇಳುವುದೇನು?
ದಂಪತಿ ಮಧ್ಯೆ ಜಗಳ- ವಿರಸಗಳು ಕಾಣಿಸಿಕೊಂಡಲ್ಲಿ ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಮೂರನೇ ವ್ಯಕ್ತಿ ನಿಮ್ಮ ಸಂಸಾರದೊಳಗೆ ಪ್ರವೇಶಿಸದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ದೂರ ಪ್ರಯಾಣಕ್ಕೆ ಸಂಬಂಧಿಸಿದಂತೆ ಅಡೆತಡೆಗಳು ಇದ್ದಲ್ಲಿ ಅವುಗಳು ನಿವಾರಣೆ ಆಗಲಿವೆ. ಪಾರ್ಟನರ್ ಷಿಪ್ ವ್ಯವಹಾರಗಳು ಮಾಡುತ್ತಾ ಇರುವವರಿಗೆ ಲೆಕ್ಕಪತ್ರ- ಹಣಕಾಸು ವಿಚಾರದಲ್ಲಿ ಅಭಿಪ್ರಾಯ ಭೇದಗಳು ಉದ್ಭವಿಸಬಹುದು. ಇನ್ನು ಮದುವೆ ನಿಶ್ಚಯ ಆಗಿದೆ ಎಂದಾದಲ್ಲಿ ಇತರರ ಹೇಳಿಕೆ ಅಥವಾ ಚಾಡಿ ಮಾತುಗಳಿಂದ ಈ ಸಂಬಂಧ ಕಡಿದು ಹೋಗುವ ಮಟ್ಟಕ್ಕೆ ತೆರಳಬಹುದು. ಯಾವುದೇ ಅನುಮಾನಗಳು ಇದ್ದಲ್ಲಿ ಕೂತು ಮಾತನಾಡಿ, ಬಗೆಹರಿಸಿಕೊಳ್ಳಿ.
ಶತ್ರು ಬಾಧೆ ಇರುವವರಿಗೆ ಅದರಿಂದ ನಿವಾರಣೆ- ಮುಕ್ತಿ ದೊರೆಯಲಿದೆ. ಒಂದು ವೇಳೆ ನೀವೇನಾದರೂ ಬೇರೆಯವರಿಗೆ ಹಣವನ್ನು ನೀಡಿ, ಅದನ್ನು ವಸೂಲಿ ಮಾಡಲು ಸಾಧ್ಯವಾಗದೆ ಒದ್ದಾಡುತ್ತಿದ್ದಲ್ಲಿ ಅದಕ್ಕೆ ಮಾರ್ಗೋಪಾಯಗಳು ಸಿಗಲಿವೆ. ಹಿರಿಯರೊಬ್ಬರ ಮಾರ್ಗದರ್ಶನ, ಸಲಹೆ- ಸೂಚನೆಗಳಿಂದ ಅನುಕೂಲ ಆಗಲಿದೆ. ಸಾಲ ತೀರಿಸಬೇಕು ಎಂದು ಪ್ರಯತ್ನ ಮಾಡುತ್ತಿರುವವರಿಗೆ ಅದರಲ್ಲಿ ಯಶಸ್ಸು ದೊರೆಯಲಿದೆ. ಸರ್ಕಾರಿ ಉದ್ಯೋಗದಲ್ಲಿ ಇದ್ದು, ಬೇಕಾದ ಸ್ಥಳಕ್ಕೆ ಅಥವಾ ಇಲಾಖೆಗೆ ವರ್ಗಾವಣೆಗೆ ಏನಾದರೂ ಪ್ರಯತ್ನ ಮಾಡುತ್ತಿದ್ದೀರಿ ಅಂತಾದಲ್ಲಿ ಅದರಲ್ಲಿ ನಿಮಗೆ ಅನುಕೂಲ ಆಗುವ ರೀತಿಯಲ್ಲಿ ಬೆಳವಣಿಗೆಗಳು ಆಗಲಿವೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:41 am, Fri, 12 September 25