ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ನೂಕುನುಗ್ಗಲು: 11ಕ್ಕೂ ಹೆಚ್ಚು ಜನರು ಅಸ್ವಸ್ಥ

ಆರ್​​ ಸಿಬಿ ವಿಜಯೋತ್ಸವ ವೇಳೆ ಬೆಂಗಳೂರಿನಲ್ಲಿ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದು, ಈ ಪ್ರಕರಣದ ಬಳಿಕ ಜಾತ್ರೆ, ಸಭೆ ಸಮಾರಂಭಗಳಲ್ಲಿ ಸಹಸ್ರಾರು ಜನ ಸೇರಲು ಸರ್ಕಾರ ಗೈಡ್​ ಲೈನ್ಸ್ ಹೊರಡಿಸಿದೆ. ಇದರ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯಕ್ರಮದಲ್ಲೇ ನೂಕುನುಗ್ಗಲು ಉಂಟಾಗಿದ್ದು, 11ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ನೂಕುನುಗ್ಗಲು: 11ಕ್ಕೂ ಹೆಚ್ಚು ಜನರು ಅಸ್ವಸ್ಥ
Mangaluru Stampede
Updated By: ರಮೇಶ್ ಬಿ. ಜವಳಗೇರಾ

Updated on: Oct 20, 2025 | 5:33 PM

ಬೆಂಗಳೂರು, (ಅಕ್ಟೋಬರ್ 20): ಮುಖ್ಯಮಂತ್ರಿ ಸಿದ್ದರಾಮಯ್ಯ  (Siddaramaiah) ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ದಕ್ಷಿಣಕನ್ನಡ (Dakshina Kannada) ಜಿಲ್ಲೆಯ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆದಿದೆ. ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ‘ಅಶೋಕ ಜನಮನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದು, ಈ ವೇಳೆ ನೂಕುನುಗ್ಗಲು ಸಂಭವಿಸಿದೆ. ಪರಿಣಾಮ ಘಟನೆಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅಸ್ವಸ್ಥರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅಶೋಕ್ ರೈ ನೇತೃತ್ವದಲ್ಲಿ ಇಂದು (ಅಕ್ಟೋಬರ್ 20) ಪುತ್ತೂರಿನ ತಾಲೂಕು ಕ್ರೀಡಾಂಗಣದಲ್ಲಿ ಅಶೋಕ ಜನಮನ-2025 ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ಸಿಎಂ ಸಿದ್ದರಾಮಯ್ಯನವರು ಸಹ ಭಾಗಿಯಾಗಿದ್ದಾರೆ. ಆದ್ರೆ, ಕ್ರೀಡಾಂಗಣದ ಸಾಮರ್ಥ್ಯಕ್ಕಿಂತ ಹೆಚ್ಚು ಜನರು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಗಿದ್ದು, ಉಸಿರಾಡಲಾಗದೇ ಜನ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅಸ್ವಸ್ಥರನ್ನು ಪುತ್ತೂರು ತಾಲೂಕಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಸ್ವಸ್ಥಗೊಂಡವರು

ಯೋಗಿತ(20), ಸಭಾ ಮಾಡಾವು(20), ಆಮೀನಾ ಪಾಟ್ರಕೋಡಿ(56), ನೇತ್ರಾವತಿ ಇರ್ದೆ(37), ಲೀಲಾವತಿ ಕಡಬ(50), ವಸಂತಿ ಬಲ್ನಾಡ್ (53), ಕುಸುಮ( 62), ರತ್ನವತಿ ಪೆರಿಗೇರಿ (67), ಅಫೀಲಾ ಪಾಟ್ರಕೋಡಿ (20), ಸ್ನೇಹಪ್ರಭಾ (41) ಹಾಗೂ ಜಸೀಲಾ(30)

ಶಾಸಕ ಅಶೋಕ್ ರೈ ಮಾಲೀಕತ್ವದ ಟ್ರಸ್ಟ್​ ನಿಂದ ಯೋಜನೆಗೊಂಡಿದ್ದು, ದೀಪಾವಳಿ ಹಬ್ಬವೆಂದು ಜನರಿಗೆ ತಟ್ಟೆ, ವಸ್ತ್ರ ಹಂಚುವ ಕಾರ್ಯಕ್ರಮವು ಸಹ ಇತ್ತು. ಇನ್ನು ಈ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಿದ್ದರು.

ಈ ಮೊದಲೇ ಸೂಕ್ತ ವ್ಯವಸ್ಥೆಗೆ ಸೂಚಿಸಿದ ಪೊಲೀಸ್ ಇಲಾಖೆ

ಸಣ್ಣ ಸಣ್ಣ ಮಕ್ಕಳನ್ನು ಸಹ ಕರೆದುಕೊಂಡು ಬಂದಿದ್ದು, ಕುಡಿಯಲು ನೀರು ಸಿಗದೆ ಜನರ ಪರದಾಡಿದ್ದಾರೆ. ಮೊದಲೇ ಮಳೆಯಿಂದಾಗಿ ಕೆಸರುಮಯವಾಗಿದ್ದ ಮೈದಾನದಲ್ಲಿ ಸರಿಯಾದ ವ್ಯವಸ್ಥೆ ಮಾಡಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ಇನ್ನು ನಿನ್ನೆ(ಅಕ್ಟೋಬರ್ 19) ಪೊಲೀಸ್ ಇಲಾಖೆ ಕಾರ್ಯಕ್ರಮ ಆಯೋಜಕರಿಗೆ ಪತ್ರ ಬರೆದು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚನೆ ನೀಡಿದ್ದರು.

ಅಲ್ಪ ಸ್ವಲ್ಪ ಖುರ್ಚಿ ಹಾಕಿದ್ದರಿಂದ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಕರ ಮೇಲೆ ಗರಂ ಆಗಿದ್ದು, ಹೆಚ್ಚಿನ ಆಸನ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿತ್ತು. ಬಳಿಕ ಆಯೋಜಕರು ಸಹ ಹೆಚ್ಚಿನ ಖುರ್ಚಿಗಳನ್ನು ಹಾಕಿದ್ದರು. ಆದರೂ ಸಹ ಈ ದುರ್ಘಟನೆ ನಡೆದಿದೆ.

Published On - 5:18 pm, Mon, 20 October 25