
ಬೆಂಗಳೂರು, (ಫೆಬ್ರವರಿ 26): ಇಂದು ಮಹಾಶಿವರಾತ್ರಿ. ಎಲ್ಲರ ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದ್ರೆ, ಬೆಂಗಳೂರಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ತಿಗಳರ ಪಾಳ್ಯ ಕಾಳಿಕಾ ನಗರದ ಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಈ ಫೋಟೊದಲ್ಲಿರುವ ದಂಪತಿ ಮಧ್ಯೆ ಮಾತ್ರ ಹಬ್ಬದ ದಿನ ಬೆಳಗ್ಗೆಯೇ ಜಗಳ ಶುರು ಆಗಿತ್ತು .ಆದ್ರೆ ಜಗಳ ಕೊನೆಯಾಗಿದ್ದು ಮಾತ್ರ ದಂಪತಿಯ ಸಾವಿನಲ್ಲಿ. ತನ್ನ ಪತ್ನಿಯನ್ನ ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ತಾನೂ ಸಹ ಆಕೆಯ ಸೀರೆಯಿಂದ ನೇಣಿಗೆ ಶರಣಾಗಿದ್ದಾನೆ. ಹೌದು.. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿಎಸ್ ಪುರ ಮೂಲದ ಸುರೇಶ್, ತನ್ನ ಸೋದರ ಸಂಬಂಧಿ ಮಮತಾಳನ್ನ ಮದುವೆಯಾಗಿದ್ದ. ಹದಿಮೂರ ವರ್ಷಗಳ ಹಿಂದಷ್ಟೇ ಮದ್ವೆಯಾಗಿದ್ದ. ಆದ್ರೆ, ಸುರೇಶನ ಕಾಮ ಮಿತಿ ಮೀರಿದ್ದು, ರಾತ್ರಿ ಬೆಳಗ್ಗೆ ಎನ್ನದೇ ಸಹಕರಿಸುವಂತೆ ಪೀಡಿಸುತ್ತಿದ್ದ. ಇದಕ್ಕೆ ವಿಚಾರಕ್ಕೆ ನಡೆದ ಜಗಳ ದಂಪತಿ ಸಾವಿನಲ್ಲಿ ಅಂತ್ಯವಾಗಿದೆ.
ಹದಿಮೂರು ವರ್ಷಗಳ ಹಿಂದೆ ಮದ್ವೆಯಾಗಿದ್ದ ಸುರೇಶ್ ಹಾಗೂ ಮಮತಾಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮುತ್ತಿನಂತ ಎರಡು ಗಂಡು ಮಕ್ಕಳು ಕೂಡ ಆಗಿದ್ವು.. ಒಬ್ಬನಿಗೆ ಎಂಟು ವರ್ಷ ಮತ್ತೋರ್ವನಿಗೆ ಆರು ವರ್ಷ. ಬೆಂಗಳೂರಿನ ಪೀಣ್ಯಾ ಎರಡನೇ ಹಂತದ ಸಮೀಪದ ತಿಗಳರ ಪಾಳ್ಯದ ಕಾಳಿಕಾ ನಗರದ ಮನೆಯೊಂದರಲ್ಲಿ ಬಾಡಿಗೆ ವಾಸವಾಗಿದ್ದರು. ಸುರೇಶ್ ಆಟೋ ಓಡಿಸುತ್ತಿದ್ದರೆ, ಪತ್ನಿ ಮಮತಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು.
ಆದ್ರೆ ಗಂಡ ಮಧ್ಯವೆಸನಿಯಾಗಿ ಕಳೆದ ಕೆಲ ವರ್ಷಗಳಿಂದ ಪತ್ನಿಗೆ ಕಾಮದ ವಿಷಯಕ್ಕೆ ಕಿರುಕುಳ ನೀಡುತ್ತಿದ್ದನಂತೆ. ಸಾಲದಕ್ಕೆ ಮೊಬೈಲ್ ನಲ್ಲಿ ನಗ್ನ ವಿಡಿಯೋಗಳನ್ನ ತೋರಿಸಿ ಅದರಂತೆ ಸಹಕರಿಸು ಎಂದು ಒತ್ತಾಯ ಮಾಡುತ್ತಿದ್ದನಂತೆ. ಅಲ್ಲದೇ ಆಟೋ ಸರಿಯಾಗಿ ದುಡಿಯದೆ ಮನೆಗೆ ಆರ್ಥಿಕ ಸಹಾಯ ಮಾಡದೇ ಕುಡಿಯುತ್ತಿದ್ದ, ಈ ಸಂಬಂಧ ದಂಪತಿಗಳ ನಡುವೆ ಜಗಳವಾಗಿದ್ದು, ಹಲವು ಬಾರಿ ಇಬ್ಬರ ಕುಟುಂಬಸ್ಥರು ರಾಜಿ ಸಂಧಾನ ಮಾಡಿದ್ದರು. ಆದರೂ ಇಬ್ಬರ ಮಧ್ಯೆ ಜಗಳ ನಿಂತಿಲ್ಲ,
ಇತ್ತೀಚೆಗೆ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದ ಮಮತಾ ಡಿವೋರ್ಸ್ ಕೊಡಲು ಮುಂದಾಗಿದ್ದಳು. ಆದ್ರೆ ಇವತ್ತು ಬೆಳಗ್ಗೆ ಪತಿ ಪತ್ನಿ ಮಧ್ಯೆ ಜಗಳ ಶುರುವಾಗಿದ್ದು, ಆರು ವರ್ಷದ ಮಗನ ಮುಂದೆಯೇ ಜಗಳ ತೆಗೆದಿದ್ದ ಸುರೇಶ್ ಪತ್ನಿ ಮಮತಾ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ತಾನೂ ಸಹ ನೇಣಿಗೆ ಶರಣಾಗಿದ್ದಾನೆ.
ಇನ್ನು ಎಲ್ಲವನ್ನೂ ಕಣ್ಣಮುಂದೆಯೇ ನೋಡಿದ್ದ ಆರು ವರ್ಷದ ಮಗು ಕೂಡಲೇ ಅಕ್ಕಪಕ್ಕದ ಮನೆಯವ್ರಿಗೆ ಹೇಳಿದೆ.. ಸ್ಥಳೀಯರು ಬ್ಯಾಡರಹಳ್ಳಿ ಪೊಲೀಸ್ರಿಗೆ ಮಾಹಿತಿ ನೀಡಿದ್ರು.. ಮಾಹಿತಿ ಬಂದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸ್ರು ಮರಣೋತ್ತರ ಪರೀಕ್ಷೆಗೆ ದಂಪತಿ ಮೃತದೇಹ ವಿಕ್ಟೋರಿಯಾಗೆ ರವಾನಿಸಿ ತನಿಖೆ ನಡೆಸ್ತಿದ್ದಾರೆ. ಕೊಲೆ, ಆತ್ಮಹತ್ಯೆಯ ಪರಿವೇ ಇಲ್ಲ ಆರು ವರ್ಷದ ಮಗು ಅಪ್ಪಾಮ್ಮನಿಲ್ಲದಂತಾಗಿದೆ.