ಕವಿಪವಿ ವತಿಯಿಂದ ಹಿರಿಯ ಪತ್ರಕರ್ತ ದಿ ವಸಂತ ನಾಡಿಗೇರ್ ಅವರಿಗೆ ಶ್ರದ್ಧಾಂಜಲಿ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 14, 2024 | 7:54 PM

ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಆವರಣದಲ್ಲಿ ನಡೆದ ಸಭೆಯಲ್ಲಿ ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತ ವಸಂತ ನಾಡಿಗೇರ್ ಅವರಿಗೆ ಕವಿಪವಿವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಸಹಯೋಗದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ವಸಂತ ನಾಡಿಗೇರ ಅವರ ಪತ್ನಿ ಸೇರಿದಂತೆ ಹಿರಿಯ ಪತ್ರಕರ್ತರು ಭಾಗವಹಿಸಿದ್ದರು.

ಕವಿಪವಿ ವತಿಯಿಂದ ಹಿರಿಯ ಪತ್ರಕರ್ತ ದಿ ವಸಂತ ನಾಡಿಗೇರ್ ಅವರಿಗೆ ಶ್ರದ್ಧಾಂಜಲಿ
ಕವಿಪವಿ ವತಿಯಿಂದ ಹಿರಿಯ ಪತ್ರಕರ್ತ ದಿ ವಸಂತ ನಾಡಿಗೇರ್ ಅವರಿಗೆ ಶ್ರದ್ಧಾಂಜಲಿ
Follow us on

ಬೆಂಗಳೂರು, ಸೆಪ್ಟೆಂಬರ್​ 14: ಇತ್ತೀಚೆಗೆ ಅಗಲಿದ ಹಿರಿಯ ಪತ್ರಕರ್ತ ವಸಂತ ನಾಡಿಗೇರ್ (Vasantha Nadigere) ಅವರಿಗೆ ಕವಿಪವಿವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಸಹಯೋಗದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಆವರಣದಲ್ಲಿ ನಡೆದ ಸಭೆಯಲ್ಲಿ ಮಾಧ್ಯಮದ ಕ್ಷೇತ್ರದವರು, ವಸಂತ ನಾಡಿಗೇರ ಅವರ ಕುಟುಂಬಸ್ಥರು ಭಾಗವಹಿಸಿದ್ದರು. ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡ ಆತ್ಮೀಯರು ವಸಂತ ನಾಡಿಗೇರ ಅವರ ವ್ಯಕ್ತಿತ್ವದ ಗುಣಗಾನ ಮಾಡಿದರು.

ಸಂಯುಕ್ತ ಕರ್ನಾಟಕದ ಸಮೂಹ ಸಂಪಾದಕ ಹುಣಸವಾಡಿ ರಾಜನ್ ಅವರು ಮಾತನಾಡಿ, ವಸಂತ ನಾಡಿಗೇರ ಅವರು ಒಬ್ಬ ಒಳ್ಳೆಯ ಸಜ್ಜನ ವ್ಯಕ್ತಿಯಾಗಿದ್ದರು. ಅವರೊಬ್ಬ ಮಾದರಿ ಸಂಪಾದಕರಾಗಿದ್ದು, ಯಾವುದೇ ವಿಚಾರವನ್ನು ನಿರ್ದಾಕ್ಷಿಣ್ಯವಾಗಿ, ನಿರ್ದಿಷ್ಟವಾಗಿ ಹೇಳುವ ವ್ಯಕ್ತಿಯಾಗಿದ್ದರು. ಸಂಪಾದಕ ಅಂದ್ರೆ ಸರ್ವಾಧಿಕಾರಿ ಅಲ್ಲ, ಎಲ್ಲರ ಭಾವನೆಗಳನ್ನು ಕೇಳುವಂತಹ ಕಿವಿ ಇರಬೇಕು. ಆದರೆ ತಮ್ಮದೇ ನಿರ್ಧಾರವನ್ನು ತೆಗೆದುಕೊಳ್ಳುವಂತಹ ವ್ಯಕ್ತಿತ್ವವನ್ನು ಸಂಪಾದಕರು ಹೊಂದಿರಬೇಕು. ವಸಂತ ನಾಡಿಗೇರ ಅಂತಹ ಸಂಪಾದಕರಾಗಿದ್ದರು. ಆದರೆ ಅವರನ್ನು ಕೇವಲ ಹೆಡ್ ಲೈನ್​ಗೆ ಸೀಮಿತ ಗೊಳಿಸುತ್ತಿವುದು ಬೇಜಾರಿನ ಸಂಗತಿ ಎಂದಿದ್ದಾರೆ.

ಪತ್ರಿಕೋದ್ಯಮದಲ್ಲಿ ಕಂಟೆಂಟ್ಗೆ ಮನ್ನಣೆ ಇದೆ. ಪತ್ರಿಕೋದ್ಯಮದಲ್ಲಿ ಸುದ್ದಿಗೂ ಮಹತ್ವವಿದೆ. ಸುದ್ದಿ ಬರವಣಿಗೆಯಲ್ಲಿ ಸುಧಾರಣೆ ಆಗಬೇಕು ಎಂಬುದು ಅವರ ಗಮನವಾಗಿತ್ತು. ಶಿರೋನಾಮೆಗಿಂತ ಹೆಚ್ಚಿನ ಜ್ಞಾನ ಅವರಲ್ಲಿತ್ತು ಎಂದು ರಾಜನ್ ಅವರು ನೆನಪಿಸಿಕೊಂಡರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ನಿಸ್ವಾರ್ಥ ಭಾವನೆಯ ವ್ಯಕ್ತಿತ್ವ ಅವರದ್ದಾಗಿತ್ತು. ಅತ್ಯಂತ ಸೂಕ್ಷ್ಮ ಮನಸ್ಸಿನ ವ್ಯಕ್ತಯಾಗಿದ್ದು, ಸಣ್ಣ ಸಣ್ಣ ವಿಷಯಗಳಿಗೂ ಕೂಡ ಹೆಚ್ಚು ಗಮನ ಕೊಡುತ್ತಿದ್ದರು. ಎರಡು ವರಷಗಳ ಹಿಂದೆ ಮೈಸೂರಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ದತ್ತಿನಿಧಿ ಪ್ರಶಸ್ತಿ ಕೊಡುತ್ತೇವೆ ಎಂದಾಗ ಬೇಡ ಎಂದಿದ್ದರು. ಕೊನೆಗೆ ಅವರನ್ನು ಒಪ್ಪಿಸಿ ಸನ್ಮಾನಿಸಿದ್ದೇವು. ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಿಗದಿರುವುದು ಅತ್ಯಂತ ನೋವಿನ ಸಂಗತಿ ಎಂದರು.

ಪ್ರಜಾವಾಣಿ ಸಂಪಾಕ ರವೀಂದ್ರ ಭಟ್ ಐನಕೈ ಮಾತನಾಡಿ, ವಸಂತ ಅವರ ವ್ಯಕ್ತಿತ್ವದ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಬಂದಿದ್ದನ್ನು ನೋಡಿದ ಮೇಲೆ, ನಾವು ಯಾವದೇ ಪತ್ರಕರ್ತ ಬದುಕಿದ್ದಾಗಲೇ ಅವರ ಬಗ್ಗೆ ಬರೆಯುವಂತಹ ವಾತಾರವಣವನ್ನು ಪತ್ರಿಕಾ ಸಂಘಟನೆಗಳ ಮೂಲಕ ಮಾಡಬೇಕು. ಯಾವುದೇ ಪತ್ರಕರ್ತ ತೀರಿದ ಮೇಲೆ ಅವರನ್ನು ಗುರುತಿಸುವುದು ಸರಿಯಲ್ಲ. ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಿಕ್ಕಿಲ್ಲ ಎಂಬು ಬೇಸರ ಪಟ್ಟುಕೊಳ್ಳುವುದಕ್ಕಿಂತ, ಈಗ ಅವರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಅವರ ಕುರಿತು ಬಂದಿರುವುದನ್ನು ನೋಡಿದರೆ ಅದಕ್ಕಿಂತ ದೊಡ್ಡ ಗೌರವ ಬೇರಿಲ್ಲ ಎಂದು ತಿಳಿಸಿದ್ದಾರೆ.

ವಸಂತ ನಾಡಿಗೇರ ಅವರ ಹಿರಿಯ ಸಹೋದರ ವಿನಾಯಕ ನಾಡಿಗೇರ ಅವರು ಮಾತನಾಡಿ, ನಾವು ಅಣ್ಣತಮ್ಮಂದಿರಾಗಿದ್ದರೂ ಸ್ನೇಹಿತರಂತೆ ಇದ್ದೆವು. ನಾನು ಧಾರವಾಡ ಕವಿವಿಗೆ ಹೋದೆ, ಆಗತಾನೇ ಪತ್ರಕೋದ್ಯಮ ಹೊಸ ಕೋರ್ಸ್ ಶುರುವಾಗಿದೆ ಅದಕ್ಕೆ ಸೇರಿಕೊಳ್ಳು ಅಂತಾ ಹೇಳಿದ್ದೆ. ಅದರಂತೆ ಅವನು ಸೇರಿಕೊಂಡ. ಅದಾದ ಮೇಲೆ ಅವನಾಗಿಯೇ ಬೆಳೆದ. ನಾನೇನೂ ಹೆಚ್ಚಿನದನ್ನು ಅವನಿಗೆ ಮಾಡಿಲ್ಲ. ವಸಂತ ಹಾಗೂ ನಾಡಿಗೇರ ಕುಟುಂಬದಿಂದ ಚರಋಣಿ ಎಂದು ಹೇಳಿದ್ದಾರೆ.

ವಸಂತ ನಾಡಿಗೇರ ಅವರ ಪತ್ನಿ ನಂದಾ ನಾಡಿಗೇರ ಭಾವುಕರಾಗಿ ಮಾತನಾಡಿ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್, ಕವಿಪವಿ ಅಧ್ಯಕ್ಷ ಪ್ರವೀಣ್ ಶಿರಿಯಣ್ಣವರ್, ಪ್ರಧಾನ ಕಾರ್ಯದರ್ಶಿ ಅನಿಲ್ ಬಾಸೂರ ಸೇರಿದಂತೆ ಹಲವರು ಭಾಗವಹಿಸಿದ್ದರು. ಹಿರಿಯ ಪತ್ರಕರ್ತ ಶಂಕರ್ ಪಾಗೋಜಿ ನಿರೂಪಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.