ಆಂಧ್ರ ಬಸ್ ದುರಂತದ ಬೆನ್ನಲ್ಲೇ ಎಚ್ಚೆತ್ತ ಕರ್ನಾಟಕ: ಸಾರಿಗೆ ನಿಗಮಗಳಿಗೆ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಕರ್ನೂಲ್ ಬಸ್ ದುರಂತದ ಹಿನ್ನೆಲೆಯಲ್ಲಿ, ಕರ್ನಾಟಕ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದೆ. ಸಚಿವ ರಾಮಲಿಂಗಾ ರೆಡ್ಡಿ ಅವರು 4 ಸಾರಿಗೆ ನಿಗಮಗಳಿಗೆ ಪತ್ರ ಬರೆದು, ಬಸ್ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದ್ದಾರೆ. ಹಳೆಯ ಬಸ್‌ಗಳ ಪರಿಶೀಲನೆಗೆ ಆದೇಶಿಸಿದ್ದಾರೆ. ಅಲ್ಲದೆ, ನಿರ್ಬಂಧಿತ ವಸ್ತುಗಳ ಸಾಗಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.

ಆಂಧ್ರ ಬಸ್ ದುರಂತದ ಬೆನ್ನಲ್ಲೇ ಎಚ್ಚೆತ್ತ ಕರ್ನಾಟಕ: ಸಾರಿಗೆ ನಿಗಮಗಳಿಗೆ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Oct 27, 2025 | 8:00 AM

ಬೆಂಗಳೂರು, ಅಕ್ಟೋಬರ್ 27: ಆಂಧ್ರ ಪ್ರದೇಶದ ಕರ್ನೂಲ್​ನಲ್ಲಿ ಖಾಸಗಿ ಬಸ್ ದುರಂತದಲ್ಲಿ 20 ಜನರು ಸಜೀವ ದಹನಗೊಂಡಿದ್ದು, ಹಲವರು ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ಘೋರ ದುರಂತದ ಬೆನ್ನಲ್ಲೇ ಕರ್ನಾಟಕ (Karnataka) ಸಾರಿಗೆ ಇಲಾಖೆ ಕೂಡ ಎಚ್ಚೆತ್ತುಕೊಂಡಿದೆ. ರಾಜ್ಯದ 4 ಸಾರಿಗೆ ನಿಗಮಗಳ ಎಂಡಿಗಳಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Redy) ಪತ್ರ ಬರೆದಿದ್ದು, ಖಡಕ್ ಸೂಚನೆ ಕೊಟ್ಟಿದ್ದಾರೆ. ಬಸ್​​ಗಳ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲನೆಗೆ ಸೂಚನೆ ನೀಡಿದ್ದಾರೆ.

ರಾಮಲಿಂಗಾ ರೆಡ್ಡಿ ಸಾರಿಗೆ ನಿಗಮಗಳ ಎಂಡಿಗಳಿಗೆ ಕೊಟ್ಟ ಸೂಚನೆ ಏನೇನು?

  • ಬಸ್​ಗಳಲ್ಲಿನ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲಿಸಬೇಕು.
  • ಬಸ್​ಗಳಲ್ಲಿ ಬೇಗನೆ ಉರಿಯುವ ಸಾಧ್ಯತೆಯುಳ್ಳ ಅಥವಾ ಇತರೆ ಸ್ಫೋಟಕ ವಸ್ತು ಸಾಗಿಸಬಾರದು.
  • ಎಸಿ ಬಸ್‌ಗಳಲ್ಲಿ ತುರ್ತು ಸಂದರ್ಭದಲ್ಲಿ ಕಿಟಕಿ ಒಡೆಯಲು ಸುತ್ತಿಗೆಗಳು ಕಡ್ಡಾಯವಾಗಿರಬೇಕು.
  • ಲಗೇಜ್ ಸಾಗಿಸುವ ಜಾಗದಲ್ಲಿ ಯಾರೇ ಆಗಲಿ ಮಲಗಲು ಅವಕಾಶ ನೀಡಬಾರದು.
  • ಬಸ್​ಗಳ ನವೀಕರಣ‌ ಬಗ್ಗೆ ಪರಿಶೀಲನೆ ನಡೆಸಬೇಕು.

ಕೆಎಸ್ಆರ್​​​ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಎಂಡಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದು, ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನ್ಯೂನತೆ ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲೂ ಹಲವು ಡಕೋಟಾ ಬಸ್​​ಗಳಿವೆ. ಸಾರಿಗೆ ಸಚಿವರ ಖಡಕ್ ಎಚ್ಚರಿಕೆ ಬಳಿಕವಾದರೂ, ರಾಜ್ಯದಲ್ಲಿ ಸಾರಿಗೆ ಬಸ್ ಅವಘಡಗಳು, ದುರಂತಗಳು ಕಡಿಮೆಯಾಗಲಿವೆಯೇ ಎಂಬುದನ್ನು ಕಾದುನೋಡಬೇಕಿದೆ.

ಅಕ್ಟೋಬರ್ 24 ರ ಶುಕ್ರವಾರ ಮುಂಜಾನೆ ಆಂಧ್ರ ಪ್ರದೇಶದ ಕರ್ನೂಲ್ ಬಳಿ ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ವಿ. ಕಾವೇರಿ ಟ್ರಾವೆಲ್ಸ್​​ಗೆ ಸೇರಿದ್​ದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಬೈಕ್​ಗೆ ಗುದ್ದಿ ಅಪಘಾತಕ್ಕೀಡಾಗಿ ಅದರಲ್ಲಿದ್ದ ಕನಿಷ್ಠ 20 ಜನರು ಸಾವನ್ನಪ್ಪಿದ್ದರು. ಇಬ್ಬರು ಚಾಲಕರು ಸೇರಿದಂತೆ 27 ಜನರು ದುರಂತದಿಂದ ಬಚಾವಾಗಿದ್ದರು.

ಇದನ್ನೂ ಓದಿ: ಕರ್ನೂಲ್​​ನಲ್ಲಿ ಬೆಂಕಿಗಾಹುತಿಯಾದ ಬಸ್​ಗೆ ಅತಿವೇಗ, ಅಪಾಯಕಾರಿ ಚಾಲನೆಗಾಗಿ ಬಿದ್ದಿತ್ತು 23 ಸಾವಿರ ರೂ. ದಂಡ

ಆಂಧ್ರ ಪ್ರದೇಶದಲ್ಲಿ ಸಂಭವಿಸಿದ ಬಸ್ ದುರಂತದ ನಂತರ ಕರ್ನಾಟಕದಲ್ಲಿಯೂ ಸಾರಿಗೆ ಬಸ್​ಗಳ ಬಗ್ಗೆ ಕಳವಳ ವ್ಯಕ್ತವಾಗಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿಯೂ ಹಲವು ಡಕೋಟಾ ಬಸ್​ಗಳಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ತಕ್ಷಣವೇ ಸುರಕ್ಷತಾ ಕ್ರಮಗಳ ಪರಿಶೀಲನೆಗೆ ಸಾರಿಗೆ ಸಚಿವರು ಸೂಚಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ