
ಬೆಂಗಳೂರು, (ಜೂನ್ 07): ಡಿಕೆ ಶಿವಕುಮಾರ್ ಸಂಪುಟದ (DK Shivakumar Cabinet) ಮೊದಲ ಹಂತದ ನೂತನ 13 ಸಚಿವರಿಗೆ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಸಚಿವರಿಗೆ ಕೊಠಡಿ ಹಂಚಿಕೆ ಮಾಡಿ ಇಂದು (ಜೂನ್ 08) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದ್ದು, ಇದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿಲ್ಲವೆಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾರೆಡ್ಡಿ ಅವರಿಗೆ ಬರೋಬ್ಬರಿಗೆ ನಾಲ್ಕು ಕೊಠಡಿಗಳನ್ನು ನೀಡಲಾಗಿದೆ. ಹೌದು…ರಾಮಲಿಂಗಾರೆಡ್ಡಿಗೆ 335, 336, 337, 337A ಕೊಠಡಿಗಳ ಹಂಚಿಕೆ ಮಾಡಲಾಗಿದೆ. ಈ ಮೂಲಕ ಅವರನ್ನು ಸಮಾಧಾನಪಡಿಸುವ ಪ್ರಯತ್ನ ಇದಾಗಿದೆ ಎನ್ನಲಾಗಿದೆ.
ಜಲಸಂಪನ್ಮೂಲ ಸಚಿವ ರಾಮಲಿಂಗರೆಡ್ಡಿಗೆ 335, 336, 337, 337A ಒಟ್ಟು 4 ಕೊಠಡಿಗಳ ಹಂಚಿಕೆ ಮಾಡಲಾಗಿದೆ. ಈ ಹಿಂದೆ ಡಿಸಿಎಂ ಆಗಿದ್ದಾಗ ಡಿ.ಕೆ.ಶಿವಕುಮಾರ್ ಬಳಸುತ್ತಿದ್ದ ಕಚೇರಿ ಸಿಎಂ ಕಚೇರಿಯಂತೆ ನವೀಕರಣ ಮಾಡಿಸಿದ್ದರು. ಈಗ ಅದೇ ಕೊಠಡಿಗಳನ್ನು ಸಚಿವ ರಾಮಲಿಂಗಾರೆಡ್ಡಿಗೆ ಬಿಟ್ಟುಕೊಟ್ಟಿದ್ದಾರೆ.
ಕುಮಾರಕೃಪಾ ಅತಿಥಿ ಗೃಹ ಇನ್ಮುಂದೆ ಮುಖ್ಯಮಂತ್ರಿಗಳ ಗೃಹ ಕಚೇರಿಯಾಗಲಿದೆ. ಸದ್ಯ ಮುಖ್ಯ ದ್ವಾರ ಪೂರ್ವ ಭಾಗದಲ್ಲಿದ್ದು, ಪೂರ್ವ ಭಾಗದ ದ್ವಾರದಲ್ಲೇ ಎಲ್ಲರ ಓಡಾಟ ಇತ್ತು. ಆದ್ರೆ, ಪೂರ್ವ ಭಾಗದಲ್ಲಿರುವ ಕಚೇರಿಯ ಮುಖ್ಯ ದ್ವಾರವನ್ನು ಬದಲಾವಣೆ ಮಾಡಲಾಗಿದ್ದು, ಸಿಎಂ ಡಿಕೆ ಶಿವಕುಮಾರ್ ತಮ್ಮ ಗೃಹ ಕಚೇರಿಗೂ ಉತ್ತರ ಬಾಗಿಲಿನಿಂದಲೇ ಪ್ರವೇಶ ದ್ವಾರ ಮಾಡಿಕೊಂಡಿದ್ದಾರೆ.
ಈಗ ಉತ್ತರ ಬಾಗಿಲಿನ ಮೂಲಕವೇ ಓಡಾಟ ಮಾಡಲು ನಿರ್ಧಾರ ಮಾಡಲಾಗಿದ್ದು,ಈಗಾಗಲೇ ಮುಖ್ಯಮಂತ್ರಿಗಳ ಗೃಹ ಕಚೇರಿಗಾಗಿ ನವೀಕರಣ ಕಾರ್ಯ ಭರದಿಂದ ಸಾಗಿದೆ. ಹೊಸ ಎಸಿ, ಹೊಸ ಬೃಹತ್ ಟಿವಿ ಸೇರಿದಂತೆ ಗೃಹ ಕಚೇರಿಯಲ್ಲಿ ಹೊಸ ಪೀಠೋಪಕರಣ ಅಳವಡಿಕೆ ಮಾಡಲಾಗುತ್ತಿದೆ.