ಕರ್ನಾಟಕದ ವಿವಿಧೆಡೆ ಎಸಿಬಿ ಕಾರ್ಯಾಚರಣೆ: ಭ್ರಷ್ಟಾಚಾರ ಆರೋಪದಡಿ ನಾಲ್ವರ ಬಂಧನ
ರಾಜ್ಯದ ವಿವಿಧೆಡೆ ಭ್ರಷ್ಟಾಚಾರ ನಡೆಸುತ್ತಿದ್ದ ಸರ್ಕಾರಿ ನೌಕರರನ್ನು ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ.

ಬೆಂಗಳೂರು: ನಗರ ಸೇರದಂತೆ ರಾಜ್ಯದ ವಿವಿಧೆಡೆ ಭ್ರಷ್ಟಾಚಾರ ನಡೆಸುತ್ತಿದ್ದ ಸರ್ಕಾರಿ ನೌಕರರನ್ನು ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ. ಬೆಂಗಳೂರು ನಗರ, ಗೌರಿಬಿದನೂರು ಮತ್ತು ಶಿವಮೊಗ್ಗ ನಗರಗಳಲ್ಲಿ ಕಾರ್ಯಾಚರಣೆ ನಡೆದಿದೆ.
ನಿವೇಶನಕ್ಕೆ ಇ-ಖಾತೆ ಮಾಡಿಕೊಡಲು ₹13 ಸಾವಿರ ಲಂಚ ಕೇಳಿದ್ದ ಮುತ್ಸಂದ್ರ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ರಾಮಮೂರ್ತಿಯನ್ನು ಎಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ, ಹಣ ಜಪ್ತಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಪಟ್ಟಣದಲ್ಲಿ ಆರೋಪಿಗಳನ್ನು ಬೆದರಿಸಿ ಹಣ ಪಡೆಯುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ಎಸಿಬಿ ಬಂಧಿಸಿದೆ. ಗ್ರಾಮಾಂತರ ಠಾಣೆ ಕಾನ್ಸ್ಟೆಬಲ್ಗಳಾದ ಆನಂದ್, ಶ್ರೀನಾಥ್ ಎಸಿಬಿ ಬಲೆಗೆ ಬಿದ್ದವರು. ಪ್ರಕರಣವೊಂದರ ಆರೋಪಿಯನ್ನು ಬೆದರಿಸಿ ಮಧ್ಯವರ್ತಿಯ ಮೂಲಕ ₹ 2 ಲಕ್ಷಕ್ಕಾಗಿ ಬೇಡಿಕೆಯಿಟ್ಟಿದ್ದರು. ₹65,000 ಲಂಚ ಪಡೆಯುವಾಗ ಅವರು ಎಸಿಬಿ ಬಲೆಗೆ ಬಿದ್ದರು.
ಅರಣ್ಯ ಇಲಾಖೆ ಶಿವಮೊಗ್ಗ ಕಚೇರಿಯಲ್ಲಿ ಡಿಆರ್ಎಫ್ಒ ಆಗಿ ಕೆಲಸ ಮಾಡುತ್ತಿದ್ದ ವೀರೇಶ್ ಚಾರ್ಜ್ಶೀಟ್ ಒಂದರಿಂದ ಹೆಸರು ಕೈಬಿಡಲು ₹ 7 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದರು.
ಚಾರ್ಜ್ಶೀಟ್ನಲ್ಲಿ ಹೆಸರು ಕೈಬಿಡಲು ₹ 10 ಸಾವಿರ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಪೈಕಿ ₹ 7 ಸಾವಿರ ಪಡೆಯುವಾಗ ಬಂಧಿಸಲಾಯಿತು. ಹಣ ಜಪ್ತಿ ಮಾಡಿ ಡಿಆರ್ಎಫ್ಒ ವೀರೇಶ್ ಅವರನ್ನು ಬಂಧಿಸಲಾಯಿತು.
ಇಡಿ ಕಚೇರಿ ಸ್ಥಾಪನೆಗೆ ಅನುಮತಿ ಕರ್ನಾಟಕದಲ್ಲಿ ಜಾರಿ ನಿರ್ದೇಶನಾಲಯದ (Enforcement Directorate – ED) ಉಪ ವಲಯ ಕಚೇರಿಯನ್ನು ರಾಜ್ಯದಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರವು ಅನುಮತಿ ನೀಡಿದೆ. ಮಂಗಳೂರಿನ ಕಂಕನಾಡಿಯಲ್ಲಿ ಕಚೇರಿ ಸ್ಥಾಪನೆಯಾಗಲಿದೆ. ಬೆಂಗಳೂರಿನ ಇಡಿ ಕಚೇರಿಯ ಉಸ್ತುವಾರಿಯಲ್ಲಿ ಕೆಲಸ ನಡೆಯಲಿದೆ. ಉಪ ನಿರ್ದೇಶಕರನ್ನು ಒಳಗೊಂಡ ಅಧಿಕಾರಿಗಳ ತಂಡ ಕಾಮಗಾರಿಯನ್ನು ಪರಿಶೀಲಿಸಲಿದೆ. 15 ಜಿಲ್ಲೆಗಳು ಉಪ ವಲಯ ಕಚೇರಿಯ ವ್ಯಾಪ್ತಿಗೆ ಬರಲಿವೆ.
(Anti Corruption Bureau Raids Across Karnataka Four Arrested)
ಇದನ್ನೂ ಓದಿ: ಜಮೀನಿನ ಬೌಂಡರಿ ಲೈನ್ ಫಿಕ್ಸ್ ಮಾಡಲು 70 ಲಕ್ಷ ಲಂಚಕ್ಕೆ ಬೇಡಿಕೆ: ಎಸಿಬಿ ದಾಳಿ, ಹಿರಿಯ ರೆವೆನ್ಯೂ ಅಧಿಕಾರಿ ಅರೆಸ್ಟ್
Published On - 11:27 pm, Fri, 3 September 21