ಅಪೆಕ್ಸ್ ಬ್ಯಾಂಕ್ ಜಟಾಪಟಿ: ರಾಜಣ್ಣ ಭೇಟಿ ಮಾಡಿದ್ದ ಡಿಕೆ ಶಿವಕುಮಾರ್​ಗೆ ಚೆಕ್​ಮೇಟ್ ಕೊಟ್ಟ ಸಿದ್ದರಾಮಯ್ಯ!

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣಗಳ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ. ತಮ್ಮ ಹೆಚ್ಚುವರಿ ಕಾರ್ಯದರ್ಶಿ ಜಿಯಾವುಲ್ಲಾರನ್ನೇ ಅಪೆಕ್ಸ್ ಬ್ಯಾಂಕ್ ಆಡಳಿತಾಧಿಕಾರಿಯನ್ನಾಗಿ ಸಿದ್ದರಾಮಯ್ಯ ನೇಮಕ ಮಾಡಿದ್ದಾರೆ. ಮತ್ತೊಂದೆಡೆ, ಡಿಕೆ ಶಿವಕುಮಾರ್ ಸಂಬಂಧಿಯಾಗಿರುವ ಎಂಎಲ್​ಸಿ ರವಿ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇದರಿದ ಆಯ್ಕೆ ಪ್ರಕ್ರಿಯೆ ಮತ್ತಷ್ಟು ಜಟಿಲವಾಗುವ ಸಾಧ್ಯತೆ ಇದೆ.

ಅಪೆಕ್ಸ್ ಬ್ಯಾಂಕ್ ಜಟಾಪಟಿ: ರಾಜಣ್ಣ ಭೇಟಿ ಮಾಡಿದ್ದ ಡಿಕೆ ಶಿವಕುಮಾರ್​ಗೆ ಚೆಕ್​ಮೇಟ್ ಕೊಟ್ಟ ಸಿದ್ದರಾಮಯ್ಯ!
ಅಪೆಕ್ಷ್ ಬ್ಯಾಂಕ್ ಜಟಾಪಟಿ
Edited By:

Updated on: Dec 24, 2025 | 6:58 AM

ಬೆಂಗಳೂರು, ಡಿಸೆಂಬರ್ 24: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹುದ್ದೆ ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಕೆಎನ್ ರಾಜಣ್ಣ (KN Rajanna) ಹಲವು ಬಾರಿ ಚರ್ಚೆ ನಡೆಸಿದ್ದು, ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಇದೀಗ ಅಪೆಕ್ಸ್ ಬ್ಯಾಂಕ್​ಗೆ ಆಡಳಿತಾಧಿಕಾರಿ (ಎಒ) ನೇಮಕ ಮಾಡಿದ್ದಾರೆ. ಆ ಮೂಲಕ ಡಿಕೆ ಶಿವಕುಮಾರ್​ಗೆ ಕೌಂಟರ್ ಕೊಟ್ಟಿದ್ದಾರೆ. ಸಹಕಾರ ಇಲಾಖೆಯ ಜವಾಬ್ದಾರಿ ಸಿದ್ದರಾಮಯ್ಯ ಬಳಿಯೇ ಇದ್ದು, ಕಾರ್ಯಚಟುವಟಿಕೆಯನ್ನು ಸಿಎಂ ಹೆಚ್ಚುವರಿ ಕಾರ್ಯದರ್ಶಿ ಜಿಯಾವುಲ್ಲಾಗೆ ವಹಿಸಲಾಗಿದೆ.

ಮಂಗಳವಾರ ಸಂಜೆ ಅಪೆಕ್ಸ್ ಬ್ಯಾಂಕ್​ ಆಡಳಿತಾಧಿಕಾರಿಯಾಗಿ ಜಿಯಾವುಲ್ಲ ಅಧಿಕಾರ ಸ್ವೀಕರಿಸಿದ್ದಾರೆ. ಇದರೊಂದಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹುದ್ದೆಯ ಆಯ್ಕೆ ಮತ್ತಷ್ಟು ಜಟಿಲವಾದಂತಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್ ಸಂಬಂಧಿಯಾಗಿರುವ ಎಂಎಲ್​ಸಿ ರವಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಡಿಕೆ ಶಿವಕುಮಾರ್​ಗೆ ರಾಜಣ್ಣ ಟಾಂಗ್

ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದು ನಾನೇ ಎಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಸಿಎಂ ನಿವಾಸ ಕಾವೇರಿಯಲ್ಲಿ ಪ್ರತಿಕ್ರಿಯಿಸಿದ ರಾಜಣ್ಣ, ಎಸ್​ಎಂ ಕೃಷ್ಟ ಅವರ ಕಾಲದಲ್ಲಿ ನಾನು ಅಧ್ಯಕ್ಷ ಆಗಿದ್ದು. ಡಿಕೆ ಶಿವಕುಮಾರ್ ಅವರದ್ದು ಸಹಕಾರ ಇರಬಹುದು, ಇಲ್ಲ ಅಂತ ಏನಿಲ್ಲ. ಸಹಾಯ ಮಾಡಿದರೆ ನನಪಿಸಿಕೊಳ್ಳುವುದು ನನ್ನ ಗುಣ. ಅಂದು ಡಿಕೆಶಿ ಸಹಕಾರ ಸಚಿವರಾಗಿದ್ದರು, ಆಗ ಸಹಾಯ ಆಗಿದೆ. ಅಂದು ನಮಗೆ ಹೆಚ್ಚು ಸಹಾಯ ಮಾಡಿದ್ದು ಜಾಲಪ್ಪ, ಬಸವರಾಜು, ಪರಮ ಹಣದ. ಅವರು ಚುನಾವಣೆ ದಿನ ಎಸ್​ಎಂ ಕೃಷ್ಣ ಮನವೊಲಿಸಿ ನನ್ನ ಅಧ್ಯಕ್ಷನನ್ನಾಗಿ ಮಾಡಿದರು ಎಂದು ಹೇಳಿದ್ದಾರೆ.

ಹಿಂದೆ ಸಿದ್ದರಾಮಯ್ಯ ಕೂಡ ನನ್ನನ್ನು ಅಧ್ಯಕ್ಷನಾಗಿ ಮಾಡಿದ್ದಾರೆ. ಅಲ್ಲಿ ಇರುವ ನಿರ್ದೇಶಕರು ಸೇರಿ ಆಯ್ಕೆ ಮಾಡಬೇಕಾಗಿರುವ ಹುದ್ದೆ ಅದು, ಸರ್ಕಾರ ಅಲ್ಲ. 21 ಜನ ನಮ್ಮನ್ನು ಆಯ್ಕೆ ಮಾಡಬೇಕು, ಸಲಹೆ ಮೇರೆಗೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ರಾಜಣ್ಣ ಟಾಂಗ್ ಕೊಟ್ಟರು.

ಇದನ್ನೂ ಓದಿ: ಸಿದ್ದರಾಮಯ್ಯ ಅತ್ಯಾಪ್ತನಿಗೆ ಡಿಕೆ ಶಿವಕುಮಾರ್ ಗಾಳ: ಮೇಲಿಂದ ಮೇಲೆ ಭೇಟಿಯ ರಹಸ್ಯ ಬಯಲು

ನಾಯಕತ್ವ ಬಿಕ್ಕಟ್ಟಿನ ಮಧ್ಯೆ ಹಳೇ ವಿಚಾರವನ್ನು ಡಿಕೆ ಶಿವಕುಮಾರ್ ಪ್ರಸ್ತಾಪ ಮಾಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, ಹಳೇ ವಿಚಾರ ದೇಶಕ್ಕೇ ಗೊತ್ತಿದೆ, ಯಾರೆಲ್ಲಾ ನೆರವಾಗಿದ್ದಾರೆ ಎಂಬುದನ್ನು ನಾನು ಮರೆಯಲ್ಲ ಎಂದರು.

ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ದೆಹಲಿಗೆ ಹೋದಾಗ ಹೈಕಮಾಂಡ್ ನಾಯಕರ ಭೇಟಿ ಸಹಜ. ನಾನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಬೇಕೆಂದು ಆಸೆ ಪಟ್ಟಿಲ್ಲ. ಅದರ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಜೊತೆ ಮಾತನಾಡಿಲ್ಲ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:57 am, Wed, 24 December 25

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Follow Us