AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ ಕಾರು ಸ್ಫೋಟ ಕೇಸ್​​ಗೆ ಟ್ವಿಸ್ಟ್​​! ವೈನ್ ಶಾಪ್ ಮ್ಯಾನೇಜರ್​​​ ಕೊಲೆ ಯತ್ನದ ರಹಸ್ಯ ಬಯಲು

Bagalkot Car Blast Case: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಬಳಿ ಮಹೀಂದ್ರಾ ಕಾರು ಸ್ಫೋಟ ಪ್ರಕರಣದ ರಹಸ್ಯ ಬಯಲಾಗಿದೆ. ಸತತ 20 ದಿನಗಳ ತನಿಖೆ ಬಳಿಕ ಪೊಲೀಸರು ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಅಷ್ಟೇ ಅಲ್ಲದೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಾಗಲಕೋಟೆ ಕಾರು ಸ್ಫೋಟ ಕೇಸ್​​ಗೆ ಟ್ವಿಸ್ಟ್​​! ವೈನ್ ಶಾಪ್ ಮ್ಯಾನೇಜರ್​​​ ಕೊಲೆ ಯತ್ನದ ರಹಸ್ಯ ಬಯಲು
ಕಾರು ಸ್ಫೋಟ ಕೇಸ್​Image Credit source: tv9 kannada
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Aug 14, 2026 | 8:00 PM

Share

ಬಾಗಲಕೋಟೆ, ಆಗಸ್ಟ್​​ 14: ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜುಲೈ 25ರಂದು ನಡೆದಿದ್ದ ವೈನ್ ಶಾಪ್ ಮ್ಯಾನೇಜರ್​​ ಕಾರು ಸ್ಫೋಟ ಪ್ರಕರಣದ (Car Blast) ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ನಾಲ್ಕು ಎಕರೆ ಜಮೀನಿನ ವಿವಾದ ಹಾಗೂ ಹಣಕಾಸಿನ ವಿಚಾರಕ್ಕಾಗಿ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಕಾರನ್ನು ಸ್ಫೋಟಿಸಿ ಕೊಲೆಗೆ ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಲ್ವರ ಬಂಧನ: ಓರ್ವನ ಪತ್ತೆಗೆ ಬಲೆ ಬೀಸಿದ ಪೊಲೀಸ್​​

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದ ಪ್ರಮುಖ ಸಂಚುಕೋರ ಶಿವಾನಂದ ಪರಸಪ್ಪ ಜಲ್ಲಿ (29), ಸ್ಫೋಟಕ ಇಡಲು ಸಹಕರಿಸಿದ ರೇವಣಪ್ಪ ನಿಂಗಪ್ಪ ಜಲ್ಲಿ (24), ಮೊಬೈಲ್ ಹಾಗೂ ಬೆದರಿಕೆ ಸಂದೇಶ ರವಾನೆಗೆ ನೆರವಾದ ಹೆಬ್ಬಾಳಟ್ಟಿ ಗ್ರಾಮದ ಮಹಾದೇವ ಬೀರಪ್ಪ ಸಂಗಾಪುರ (21) ಮತ್ತು ಕೃತ್ಯಕ್ಕೆ ಸಾಥ್ ನೀಡಿದ ಬಬಲೇಶ್ವರದ ಮಲ್ಲಿಕಾರ್ಜುನ ಮುರಗೆಪ್ಪ ಭದ್ರಾಪನವರ (23) ಬಂಧಿತ ಆರೋಪಿಗಳು. ಸ್ಫೋಟಕಗಳನ್ನು ಪೂರೈಸಿದ್ದ ಮತ್ತೊಬ್ಬ ಪ್ರಮುಖ ಸೂತ್ರಧಾರ ಗಜಾನನ ಸಂಗಾಪುರ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಹಿಪ್ಪರಗಿಯಲ್ಲಿ ಬಾರ್​​ ಮುಂದೆ ನಿಲ್ಲಿಸಿದ್ದ ಕಾರು ಸ್ಫೋಟ: ತಪ್ಪಿದ ಭಾರಿ ದುರಂತ

ಜುಲೈ 25ರ ರಾತ್ರಿ 10.45ರ ಸುಮಾರಿಗೆ ಹಿಪ್ಪರಗಿ ಗ್ರಾಮದ ಯುವರಾಜ ವೈನ್ ಶಾಪ್ ಮ್ಯಾನೇಜರ್ ಹನುಮಂತ ಅಥಣಿ ಅವರ ಮಹೀಂದ್ರಾ ಎಕ್ಸ್‌ಯುವಿ 300 ಕಾರು ಭೀಕರವಾಗಿ ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆಗೆ ಕಾರಿನ ಬಿಡಿಭಾಗಗಳು ನೂರಾರು ಮೀಟರ್ ದೂರ ಹಾಗೂ ಮರಗಳ ಮೇಲೂ ಹಾರಿ ಬಿದ್ದಿದ್ದವು. ಆ ಸಮಯದಲ್ಲಿ ಮ್ಯಾನೇಜರ್ ಹನುಮಂತ, ಕಾರು ಹತ್ತಲು ಹೋಗುವ ಮುನ್ನ ಕ್ಯಾಶ್ ಕೌಂಟರ್ ಬಳಿ ಕೆಲ ಕ್ಷಣ ನಿಂತಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಸ್ಥಳಕ್ಕೆ ಬೆಳಗಾವಿ ಐಜಿಪಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ), ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಶ್ವಾನದಳ ಹಾಗೂ ಬಾಂಬ್ ಪತ್ತೆ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಜಮೀನು ವಿವಾದವೇ ಕೃತ್ಯಕ್ಕೆ ಕಾರಣ

ಪೊಲೀಸರ ತನಿಖೆ ವೇಳೆ ಜಮೀನು ವಿವಾದವೇ ಈ ಕೃತ್ಯಕ್ಕೆ ಕಾರಣ ಎಂಬುದು ಬೆಳಕಿಗೆ ಬಂದಿದೆ. ಹನುಮಂತ ಹೆಬ್ಬಾಳಟ್ಟಿ ಗ್ರಾಮದ ಲಿಂಗಪ್ಪ ಎಂಬುವರಿಗೆ 40 ಲಕ್ಷ ರೂ ಸಾಲ ನೀಡಿದ್ದು, ಹಣ ಮರಳಿಸದ ಕಾರಣ ಅವರ 4 ಎಕರೆ ಜಮೀನನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು. ಬಳಿಕ ಲಿಂಗಪ್ಪನ ಸಹೋದರನ ಮಗ ಶಿವಾನಂದ ಜಲ್ಲಿ, ತಾನು 67 ಲಕ್ಷ ರೂ ನೀಡುವುದಾಗಿ ಹೇಳಿ ಹೊಲವನ್ನು ಬಿಡಿಸಿಕೊಂಡಿದ್ದ. ಆದರೆ ಮೊದಲ ಕಂತು ಮತ್ತು ಬಡ್ಡಿ ಹಣವನ್ನು ನೀಡದೆ ಸತಾಯಿಸುತ್ತಿದ್ದ. ಹನುಮಂತ ಹಣ ನೀಡುವಂತೆ ಅಥವಾ ಜಮೀನು ಬಿಡುವಂತೆ ನಿರಂತರ ಒತ್ತಡ ಹೇರುತ್ತಿದ್ದರು. ಇದರಿಂದ ಆಕ್ರೋಶಗೊಂಡ ಶಿವಾನಂದ, ಹನುಮಂತನನ್ನು ಮುಗಿಸಿದರೆ ಹಣವನ್ನೂ ನೀಡಬೇಕಿಲ್ಲ ಮತ್ತು ಆಸ್ತಿಯೂ ಉಳಿಯುತ್ತದೆ ಎಂದು ಸಂಚು ರೂಪಿಸಿದ್ದ.

ವಿಫಲವಾದ ಕೊಲೆ ಯತ್ನ ಪ್ಲ್ಯಾನ್​​

ಬೆಳಗಾವಿಯ ಅಥಣಿ ಹಾಗೂ ವಿಜಯಪುರದ ಕಲ್ಲೂರಿನಲ್ಲಿ ಜಿಲೆಟಿನ್ ಮತ್ತು ಡೆಟೋನೇಟರ್ ಖರೀದಿಸಿ, ಘಟನೆಯ ರಾತ್ರಿ ಕಾರಿನ ಮುಂಭಾಗದ ಎಡಗಡೆಯ ಟೈರ್ ಹಿಂಭಾಗ 30 ಜಿಲೆಟಿನ್ ಕಡ್ಡಿಗಳ ಸ್ಫೋಟಕವನ್ನು ಇರಿಸಲಾಗಿತ್ತು. ಬಳಿಕ ವೈನ್ ಶಾಪ್ ಪಕ್ಕದ ಕಬ್ಬಿನ ಗದ್ದೆಯಲ್ಲಿ 100 ಮೀಟರ್ ದೂರ ಕುಳಿತು ಡೆಟೋನೇಟರ್ ವೈರ್ ಮೂಲಕ ಕಾರನ್ನು ಸ್ಫೋಟಿಸಲಾಗಿತ್ತು. ಆದರೆ ಕೊಲೆ ಯತ್ನ ವಿಫಲವಾಗಿತ್ತು.

ಇದನ್ನೂ ಓದಿ: Car Blast Case: ಬಾಗಲಕೋಟೆಯ ಹಿಪ್ಪರಗಿ ಬಳಿ ಕಾರು ಸ್ಫೋಟದ ಬಗ್ಗೆ ಎಸ್​ಪಿ ಹೇಳಿದ್ದೇನು?

ಆಗಸ್ಟ್ 6ರಂದು ಕದ್ದ ಸಿಮ್ ಕಾರ್ಡ್ ಬಳಸಿ ಹನುಮಂತ ಮತ್ತು ಅವರ ಸಹೋದರ ಬಸವರಾಜ್‌ಗೆ ವಾಟ್ಸ್‌ಆ್ಯಪ್ ಹಾಗೂ ಎಸ್‌ಎಂಎಸ್ ಮೂಲಕ ಹಣ ಮತ್ತು ಜಮೀನಿನ ಬೇಡಿಕೆ ಕೈಬಿಡುವಂತೆ ಬೆದರಿಕೆ ಸಂದೇಶ ರವಾನಿಸಲಾಗಿತ್ತು. ಇದೇ ಕದ್ದ ಸಿಮ್ ಕಾರ್ಡ್ ಜಾಡು ಹಿಡಿದು ತನಿಖೆ ಚುರುಕುಗೊಳಿಸಿದ ಪೊಲೀಸರು, ಸತತ 20 ದಿನಗಳ ಕಾರ್ಯಚರಣೆಯ ನಂತರ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us