ಬಾಗಲಕೋಟೆ: ಶ್ವಾನ ಹಾಗೂ ಜಾನುವಾರುಗಳ ಬಾಯಾರಿಕೆ ಮತ್ತು ಹಸಿವು ತಣಿಸುವ ವಿಕಲಚೇತನ

ಬಾಗಲಕೋಟೆ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ 40-42 ಡಿಗ್ರಿ ಸೆಲ್ಸಿಯಸ್​ ಇದೆ. ಇಂತಹ ಬಿರು ಬಿಸಿಲಿನಲ್ಲಿ ಜನರು ಮನೆ ಬಿಟ್ಟು ಹೊರಗೆ ಬರಲು ಹೆದರುತ್ತಿದ್ದಾರೆ. ಇನ್ನು ಈ ಸಮಯದಲ್ಲಿ ಬೀದಿ ಶ್ವಾನಗಳು, ಜಾನುವಾರುಗಳ ಬಾಯಾರಿಕೆ ಮತ್ತು ಹಸಿವನ್ನು ಓರ್ವ ವಿಕಲಚೇತನ ತಣಿಸುತ್ತಿದ್ದಾರೆ.

ಬಾಗಲಕೋಟೆ: ಶ್ವಾನ ಹಾಗೂ ಜಾನುವಾರುಗಳ ಬಾಯಾರಿಕೆ ಮತ್ತು ಹಸಿವು ತಣಿಸುವ ವಿಕಲಚೇತನ
ಘನಶ್ಯಾಮ‌ ಬಾಂಡಗೆ ಪ್ರಾಣಿ ಪ್ರೇಮ
Follow us
| Updated By: ವಿವೇಕ ಬಿರಾದಾರ

Updated on: Apr 09, 2024 | 7:52 AM

ಬಾಗಲಕೋಟೆ, ಏಪ್ರಿಲ್​ 09: ಮಳೆಯಿಲ್ಲ-ಬೆಳೆಯಿಲ್ಲ ಭೀಕರ ಬರಗಾಲ (Drought) ಆವರಿಸಿದೆ. ನೆತ್ತಿಯ ಮೇಲೆ ಸುಡು‌ ಬಿಸಿಲು, ನೀರಿಗಾಗಿ ಹಾಹಾಕಾರ. ಬೀದಿ ಶ್ವಾನಗಳು, ಜಾನುವಾರುಗಳ ಹಸಿವು ಬಾಯಾರಿಕೆ‌ ಕೇಳುವವರಿಲ್ಲ. ಇಂತಹ ವೇಳೆ ಬಾಗಲಕೋಟೆಯ (Bagalkot) ವಿಕಲಚೇತನ (Disability) ನಿತ್ಯ ಬೀದಿ‌ಶ್ವಾನಗಳು ಜಾನುವಾರುಗಳ ದಾಹ ಮತ್ತು ಹಸಿವು ನೀಗಿಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ 40-42 ಡಿಗ್ರಿ ಸೆಲ್ಸಿಯಸ್​ ಇದೆ. ಇಂತಹ ಬಿರು ಬಿಸಿಲಿನಲ್ಲಿ ಜನರು ಮನೆ ಬಿಟ್ಟು ಹೊರಗೆ ಬರಲು ಹೆದರುತ್ತಿದ್ದಾರೆ. ಇನ್ನು ಈ ಸಮಯದಲ್ಲಿ ಬೀದಿ ಶ್ವಾನಗಳು, ಜಾನುವಾರುಗಳ ಆರ್ತನಾದ ಕೇಳುವರಿಲ್ಲ. ಆದರೆ ಬಾಗಲಕೋಟೆಯ ವಿಕಲಚೇತನ ಘನಶ್ಯಾಮ‌ ಬಾಂಡಗೆ ಶ್ವಾನ ಮತ್ತು ಜಾನುವಾರಗಳಿಗೆ ತಾಯಿ ಪ್ರೀತಿ ತೋರುತ್ತಿದ್ದಾರೆ. ಪ್ರತಿದಿನ ಐವತ್ತಕ್ಕೂ ಅಧಿಕ ಬೀದಿ ಶ್ವಾನಗಳಿಗೆ ಬಿಸ್ಕಿಟ್, ಹಾಲು, ಬ್ರೆಡ್ ನೀಡಿ ಹಸಿವು ‌ನೀಗಿಸುತ್ತಿದ್ದಾರೆ. ಶ್ವಾನಗಳಿಗೆ ನೀರು ಕುಡಿಸಿ ದಾಹ ನೀಗಿಸುತ್ತಿದ್ದಾರೆ. ಜೊತೆಗೆ ದನಕರುಗಳಿಗೂ ನಿತ್ಯ ಮೇವು ತಿನ್ನಿಸಿ ಬರಗಾಲದ ಈ ದಿನದಲ್ಲಿ ಜಾನುವಾರುಗಳ ಹಸಿವು ನೀಗಿಸುತ್ತಿದ್ದಾರೆ. ನಿತ್ಯ ಸಾವಿರಾರು ರೂಪಾಯಿ ಇದಕ್ಕೆ‌ ಖರ್ಚು ಮಾಡಿ ಮೂಕ ಪ್ರಾಣಿಗಳಿಗೆ ತಾಯಿ ಪ್ರೀತಿ ತೋರಿಸುತ್ತಿದ್ದಾರೆ.

ಇದನ್ನೂ ಓದಿ: ಹಾವೇರಿ: ಸ್ವಂತ ಹಣದಲ್ಲಿ ಬೋರ್​ವೆಲ್​ ಕೊರಸಿ ನದಿಗೆ ನೀರು ಬಿಟ್ಟ ರೈತ: ಬರಗಾಲದ ಭಗೀರಥ ಎಂದ ಗ್ರಾಮಸ್ಥರು

ಘನಶ್ಯಾಮ‌ ಬಾಂಡಗೆ ಅವರು ಒಬ್ಬ ಚಲನಚಿತ್ರ ನಿರ್ಮಾಕ. ಕೆಂಗುಲಾಬಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇವರಿಗೆ ಮೂಕಪ್ರಾಣಿಗಳೆಂದರೆ ಬಲು ಪ್ರೀತಿ. ಬೀದಿ ಜಾನುವಾರುಗಳನ್ನು ಮಕ್ಕಳಂತೆ ಪ್ರೀತಿಸುತ್ತಾರೆ. ಈ ಕಾರ್ಯವನ್ನು ಎರಡು ದಶಕದಿಂದ ಮಾಡುತ್ತಾ ಬಂದಿದ್ದಾರೆ. ಆದರೆ ಈಗ ಬರಗಾಲ ನೀರಿಗೆ ಪರದಾಟವಿದೆ. ಇಂತಹ ವೇಳೆಯಲ್ಲಿ ಈ ಕಾರ್ಯ ಇನ್ನೂ ಪರಿಣಾಮಕಾರಿಯಾಗಿದೆ. ಶ್ವಾನಗಳಿಗೆ ಅಲ್ಲಲ್ಲಿ ಸಿಮೆಂಟ್ ಗುಂಡಿಗಳನ್ನು ಮಾಡಿದ್ದಾರೆ. ಅವುಗಳ‌ ಮೈ ತೊಳೆದು ನೀರು ಕುಡಿಸ್ತಾರೆ. ಶ್ವಾನಗಳು ಬಿಸಿಲಿನಿಂದ ರಕ್ಷಿಸಿಕೊಳ್ಳಲು ನೀರಲ್ಲಿ ಉರುಳಾಡಿ ಹೊರಳಾಡುತ್ತವೆ. ನಿತ್ಯ ಮೇವನ್ನು ಖರೀದಿಸಿ ಬೀದಿ ದನಕರುಗಳ ಹಸಿವನ್ನು ನೀಗಿಸ್ತಾರೆ. ಇವರ ಪ್ರಾಣಿಗಳ ಮೇಲಿನ ಪ್ರೀತಿ, ಎಲ್ಲರಿಗೂ ಮಾದರಿಯಾಗಿದ್ದು, ಘನಶ್ಯಾಮ ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಈ ಬಾರಿಯ ಬೇಸಿಗೆಯಿಂದ ಜನರಷ್ಟೇ ಅಲ್ಲದೆ ಜಾನುವಾರುಗಳಿಗೂ ಸಂಕಷ್ಟ ಎದುರಾಗಿದೆ. ಈ ವೇಳೆ ವಿಕಲಚೇತನ ಘನಶ್ಯಾಮ ಅವರ ಪ್ರಾಣಿ ‌ಪ್ರೇಮ, ಹಸಿವು, ಬಾಯಾರಿಕೆ ನೀಗಿಸುವ ಕಾರ್ಯ ಶ್ಲಾಘನೀಯ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ