ಮುಸ್ಲಿಮರಿಗೂ ಸತ್ಯ ಗೊತ್ತಾಗಿ ಕಾಂಗ್ರೆಸ್​ನಿಂದ ದೂರವಾಗಿದ್ದಾರೆ: ಇಬ್ರಾಹಿಂ ಹೆಸರು ಪ್ರಸ್ತಾಪಿಸಿ ಟೀಕಿಸಿದ ಈಶ್ವರಪ್ಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 04, 2022 | 10:03 PM

ಸೋನಿಯಾಗಾಂಧಿ ಅವರು ಗೋವಾದಲ್ಲಿ ಬಹಿರಂಗ ಭಾಷಣ ಮಾಡಿ, ಕರ್ನಾಟಕಕ್ಕೆ ಒಂದು ಹನಿ‌ ಮಹದಾಯಿ ನೀರು ಕೊಡುವುದಿಲ್ಲ ಎಂದು ಘೋಷಿಸಿದ್ದರು ಎಂದು ಈಶ್ವರಪ್ಪ ಆರೋಪ ಮಾಡಿದರು.

ಮುಸ್ಲಿಮರಿಗೂ ಸತ್ಯ ಗೊತ್ತಾಗಿ ಕಾಂಗ್ರೆಸ್​ನಿಂದ ದೂರವಾಗಿದ್ದಾರೆ: ಇಬ್ರಾಹಿಂ ಹೆಸರು ಪ್ರಸ್ತಾಪಿಸಿ ಟೀಕಿಸಿದ ಈಶ್ವರಪ್ಪ
ಸಚಿವ ಕೆ.ಎಸ್.ಈಶ್ವರಪ್ಪ
Follow us on

ಬಾಗಲಕೋಟೆ: ಮಹದಾಯಿ ವಿಚಾರವಾಗಿ ಕಾಂಗ್ರೆಸ್​ ನಾಯಕರು ಪಾದಯಾತ್ರೆ ನಡೆಸಬೇಕು ಎಂದುಕೊಂಡಿರುವ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಲೇವಡಿ ಮಾಡಿದ್ದಾರೆ. ‘ಸತೀಶ ಜಾರಕಿಹೊಳಿಯವರಿಗೆ ಶಕ್ತಿ ಇದ್ದರೆ ಸೋನಿಯಾಗಾಂಧಿ ಅವರಿಗೆ ಒಂದ್ ಫೋನ್ ಮಾಡ್ಲಿ. ನೀವು ಈ ಹಿಂದೆ ಕರ್ನಾಟಕಕ್ಕೆ ಮಹದಾಯಿ ನೀರು ಕೊಡ್ತಿನಿ ಅಂದಿದ್ರಿ, ನೀರು ಕೊಟ್ಟಿಲ್ಲ, ಅನ್ಯಾಯವಾಗಿದೆ ಎಂದು ಹೇಳಲಿ’ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು. ಅವರಿಗೆ ಶಕ್ತಿ ಇದ್ರೆ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳಲಿ ಎಂದು ಸವಾಲು ಹಾಕಿದರು.

ಈ ಹಿಂದೆ ಸಿದ್ಧರಾಮಯ್ಯ, ಧರಂಸಿಂಗ್, ಎಚ್.ಕೆ.ಪಾಟೀಲ್, ಮಲ್ಲಿಕಾರ್ಜುನ‌ ಖರ್ಗೆ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಸೋನಿಯಾ ಭೇಟಿಯ ನಂತರ ಕರ್ನಾಟಕಕ್ಕೆ ಬಂದು ಮಹದಾಯಿ ನೀರನ್ನು ಕರ್ನಾಟಕಕ್ಕೆ ‌ಕೊಡಿ ಅಂದಿದ್ದಾರೆ ಎಂದಿದ್ದರು. ಆದರೆ ಮುಂದೆ ಗೋವಾದಲ್ಲಿ ಚುನಾವಣೆ ಬಂದಾಗ ಸೋನಿಯಾಗಾಂಧಿ ಅವರು ಗೋವಾದಲ್ಲಿ ಬಹಿರಂಗ ಭಾಷಣ ಮಾಡಿ, ಕರ್ನಾಟಕಕ್ಕೆ ಒಂದು ಹನಿ‌ ಮಹದಾಯಿ ನೀರು ಕೊಡುವುದಿಲ್ಲ ಎಂದು ಘೋಷಿಸಿದ್ದರು. ಸೋನಿಯಾಗಾಂಧಿ ಅವರ ಹೇಳಿಕೆಯನ್ನು ನಾನು ತೋರಿಸಬಲ್ಲೆ ಎಂದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಿದ್ದಾಗ ನಾನು ವಿಧಾನ ಪರಿಷತ್​ನಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದೆ. ಆಗ ಅವರಿಗೂ ಸೋನಿಯಾಗಾಂಧಿ ಹೇಳಿಕೆ ತೋರಿಸಿದ್ದೆ. ಅದಕ್ಕೆ ಈವರೆಗೂ ಅವರು ಉತ್ತರ ಕೊಟ್ಟಿಲ್ಲ ಎಂದರು.

ಮುಸ್ಲಿಮರ ಸಂತೃಪ್ತಿಗೆ ದುಡಿದು ದಣಿದ ಸಿದ್ದರಾಮಯ್ಯ

ಕರಾವಳಿಯು ಆರ್​ಎಸ್​ಎಸ್​ ಪ್ರಯೋಗಶಾಲೆ ಎನ್ನುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮುಸ್ಲಿಮರನ್ನು ಸಂತೃಪ್ತಿಗೊಳಿಸಿ ಮುಖ್ಯಮಂತ್ರಿ ಸ್ಥಾನದಿಂದ ನೆಗೆದುಬಿದ್ದರು ಎಂದು ವಾಗ್ದಾಳಿ ನಡೆಸಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಸೋತು ಹೋದರು. ಮುಸ್ಲಿಮರಿಗೆ ಒಳಿತು ಮಾಡುವುದರಲ್ಲಿ ಹಿಂದೆ ಮುಂದೆ ನೋಡಲ್ಲ. ರಾಷ್ಟ್ರಭಕ್ತ ಮುಸಲ್ಮಾನರಿಗೆ ನಾನು ನಮಸ್ಕಾರ ಮಾಡುತ್ತೇನೆ ಎಂದರು. ಆದರೆ ಕೆಲವರು ಮುಸ್ಲಿಮರಿಗೆ ಮಾತ್ರ ಬೆಂಬಲಕೊಟ್ಟು, ಹಿಂದೂಗಳಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇಂಥದನ್ನು ಮಾಡಿ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕಬೇಕಾಗುತ್ತದೆ ಎಂದರು.

ಕಾಂಗ್ರೆಸ್ ಪಕ್ಷವು ಮುಸಲ್ಮಾನರನ್ನು ಬಳಸಿಕೊಂಡಿತು ಎಂದು ಆರೋಪಿಸಿ ಇಬ್ರಾಹಿಂ ದೂರ ಹೋಗಿದ್ದಾರೆ. ಹಿಂದುಳಿದವರು, ದಲಿತರು ಕಾಂಗ್ರೆಸ್​ ಪಕ್ಷವನ್ನು ತೊರೆದಿದ್ದಾರೆ. ಮುಸಲ್ಮಾನರು ಜಾಗೃತರಾಗುತ್ತಿದ್ದು ಕಾಂಗ್ರೆಸ್​ ತೊರೆಯಲಿದ್ದಾರೆ. ಕಾಂಗ್ರೆಸ್​ನಲ್ಲಿದ್ದ ಮುಸ್ಲಿಂ ನಾಯಕರಿಗೆ ಈಗ ಅರ್ಥವಾಗುತ್ತಿದೆ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಲ್ಲ, ಪ್ರಾದೇಶಿಕ ಪಕ್ಷವಾಗಿ ಬಿಟ್ಟಿದೆ ಎಂದು ಹೇಳಿದರು.

ಸಚಿವರ ಕುರಿತು ಶಾಸಕ ರೇಣುಕಾಚಾರ್ಯ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು, ಐದೂ ಬೆರಳು ಒಂದೇ ತರಹ ಇರುವುದಿಲ್ಲ. ಕೇಂದ್ರದ ನಾಯಕರು ಎಲ್ಲವನ್ನೂ ವೀಕ್ಷಣೆ ಮಾಡುತ್ತಿದ್ದಾರೆ. ಎಲ್ಲಾ ಸಚಿವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಶಾಸಕರ ಸಹಕಾರದಿಂದ ಸಚಿವರು ಒಳ್ಳೇ ಕೆಲಸ‌ ಮಾಡುತ್ತಿದ್ದಾರೆ. ಸಚಿವರು ಫೋನ್​ ಮಾಡಿದರೆ ತೆಗೆಯುವುದಿಲ್ಲ ಸುಧಾಕರ ಅಂತಾರೆ. ಬಳಿಕ ಅವರೇ ಕರೆ ಮಾಡಿ ಆರೋಗ್ಯ ವಿಚಾರಿಸಿದರು ಎನ್ನುತ್ತಾರೆ. ಇವುಗಳನ್ನೆಲ್ಲ ಪಕ್ಷದ ಹೈಕಮಾಂಡ್​ಗೆ ಹೇಳೋದಾ ನಾವೆಲ್ಲಾ ಇಲ್ಲೇ ಇದ್ದೀವಿ, ಮಾತಾಡಿ ಬಗೆಹರಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ: ಮುಸ್ಲಿಮರು ಕೈಬಿಟ್ಟರೆ ಕಾಂಗ್ರೆಸ್ ಉಸಿರುಗಟ್ಟಿ ಸಾಯುತ್ತದೆ: ಸಚಿವ ಕೆ.ಎಸ್.ಈಶ್ವರಪ್ಪ

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್‌ ತಿಂಗಳಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದಾರೆ: ಸಚಿವ ಕೆಎಸ್‌ ಈಶ್ವರಪ್ಪ

Published On - 10:01 pm, Fri, 4 February 22