ಶ್ರೀಕಾಂತ್​ಗೆ ಜಾಮೀನು: ಕೋರ್ಟ್​​ ತೀರ್ಪನ್ನ ನಾವೆಲ್ಲ ಒಪ್ಪಿಕೊಂಡಿದ್ದೇವೆ: ಡಿಸಿಎಂ ಡಿಕೆ ಶಿವಕುಮಾರ್

| Updated By: ಗಂಗಾಧರ​ ಬ. ಸಾಬೋಜಿ

Updated on: Jan 05, 2024 | 5:28 PM

ರಾಮಜನ್ಮಭೂಮಿ ಹೋರಾಟದ ಕೇಸ್​ನಲ್ಲಿ ಆರೋಪಿಯಾಗಿರುವ ಕರಸೇವಕ ಶ್ರೀಕಾಂತ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಈ ವಿಚಾರವಾಗಿ ಬೆಂಗಳೂರಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​, ಕೋರ್ಟ್​​ ಕೊಟ್ಟ ತೀರ್ಪನ್ನು ನಾವೆಲ್ಲ ಒಪ್ಪಿಕೊಂಡಿದ್ದೇವೆ. ಕೋರ್ಟ್​ ತೀರ್ಪು ನಾವು ಪ್ರಶ್ನೆ ಮಾಡುವುದಕ್ಕಾಗುತ್ತಾ ಎಂದಿದ್ದಾರೆ.

ಬೆಂಗಳೂರು, ಜನವರಿ 05: ಹುಬ್ಬಳ್ಳಿ ಗಲಭೆ ಕೇಸ್​ ಆರೋಪಿ ಶ್ರೀಕಾಂತ್​ಗೆ ಜಾಮೀನು ನೀಡಲಾಗಿದೆ. ಕೋರ್ಟ್​​ ಕೊಟ್ಟ ತೀರ್ಪನ್ನು ನಾವೆಲ್ಲ ಒಪ್ಪಿಕೊಂಡಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​​ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋರ್ಟ್​ ತೀರ್ಪು ನಾವು ಪ್ರಶ್ನೆ ಮಾಡುವುದಕ್ಕಾಗುತ್ತಾ ಎಂದು ಕೇಳಿದ್ದಾರೆ.

ಸ್ವತಃ ಶ್ರೀರಾಮನಿಗೆ ಮಾಡಿರುವ ಅವಮಾನ ಇದು: ಸಚಿವ ಎಂ.ಬಿ.ಪಾಟೀಲ್

ಆರೋಪಿ ಶ್ರೀಕಾಂತ್​ಗೆ ಜಾಮೀನು ವಿಚಾರವಾಗಿ ಸಚಿವ ಎಂ.ಬಿ.ಪಾಟೀಲ್​ ಪ್ರತಿಕ್ರಿಯಿಸಿದ್ದು, ಸ್ವತಃ ಶ್ರೀರಾಮನಿಗೆ ಮಾಡಿರುವ ಅವಮಾನ ಇದು. ಜಾಮೀನು ಸಿಕ್ಕರೆ ಕ್ರಿಮಿನಲ್ ಕೇಸ್ ಮುಗಿದು ಹೋಯಿತಾ? ಶ್ರೀಕಾಂತ್​ ಪೂಜಾರಿ ಅವನೊಬ್ಬ ಮಟ್ಕಾ ಏಜೆಂಟ್.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಕೇಸ್: ಶ್ರೀಕಾಂತ್​ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು, ಬಿಡುಗಡೆ ಅನುಮಾನ

ಪೊಲೀಸರು ಏನು ಕ್ರಮಕೈಗೊಳ್ಳಬೇಕೋ ಕೈಗೊಳ್ಳುತ್ತಾರೆ. ಅವನ ಹಿನ್ನೆಲೆ ನೋಡಿಕೊಳ್ಳದೇ ಬಿಜೆಪಿ ಹೋರಾಟ ಮಾಡಿ BJP ಎಡವಟ್ಟು ಮಾಡಿಕೊಂಡಿದೆ. ಶ್ರೀಕಾಂತ್ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ಜನರಿಗೆ ಗೊತ್ತು ಎಂದು ವಾಗ್ದಾಳಿ ಮಾಡಿದ್ದಾರೆ.

ಅಸಲಿ ರಾಮಭಕ್ತನಿಗೆ ಜಯ ಸಿಕ್ಕಿದೆ: ಶಾಸಕ ಮಹೇಶ್ ಟೆಂಗಿನಕಾಯಿ

ಹುಬ್ಬಳ್ಳಿಯಲ್ಲಿ ಟಿವಿ9ಗೆ ಶಾಸಕ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯೆ ನೀಡಿದ್ದು, ರಾಮನ ಆಶೀರ್ವಾದದಿಂದ ಜಾಮೀನು ಸಿಕ್ಕಿದೆ. ನಾನು ವಕೀಲರ ಜೊತೆ ಮಾತಾಡಿದೆ. ಇವತ್ತು ಜಾಮೀನು ಸಿಕ್ಕಿದೆ. ನಾಳೆ ಸಂಜೆಯೊಳಗೆ ಬಿಡುಗಡೆ ಆಗಬಹುದು. ನಕಲಿ ರಾಮ ಭಕ್ತ ಕಾಂಗ್ರೆಸ್, ಅಸಲಿ ರಾಮಭಕ್ತ ಶ್ರೀಕಾಂತ್ ಪೂಜಾರಿ ಎನ್ನುವುದು ಸಾಬೀತಾಗಿದೆ. ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದ ದುರ್ಬಳಕೆ ಮಾಡುತ್ತಿದೆ: ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

ಆ ಕೇಸ್​ನಲ್ಲಿರುವ ಎಲ್ಲರ ಜೊತೆ ನಾವು ನಿಲ್ಲುತ್ತೇವೆ. ಖುಲಾಸೆ ಆಗುವವರಿಗೆ ನಾವು ಅವರ ಜೊತೆ ಇರುತ್ತೇವೆ. ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳು ಅವರ ಹೇಳಿಕೆ ಪುನರ್ ಮನನ ಮಾಡಿಕೊಳ್ಳಬೇಕು. ಆದರೆ ಶ್ರೀಕಾಂತ್ ಪೂಜಾರಿ ಹೋರಾಟಗಾರ ಅಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಇಡೀ ರಾಜ್ಯದ ಜನರಿಗೆ ಸುಳ್ಳು ಹೇಳಿದ್ದಾರೆ. ಪೂಜಾರಿ ಕ್ರಿಮಿನಲ್​ ಅಂದು ದಾಖಲೆ ಕೊಟ್ಟರು. ಆದರೆ ಆತನ ಮೇಲಿರುವ ಕೇಸ್ ಖುಲಾಸಿ ಆಗಿದ್ದವು. ಬಿಡುಗಡೆ ಆದರೂ ಅವರನ್ನು ಅಪರಾಧಿ ಎಂದು ಕಾಂಗ್ರೆಸ್ ಸುಳ್ಳು ಹೇಳಿತ್ತು ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.