ನಾಗೇಂದ್ರ ರಾಜೀನಾಮೆ: ಬಳ್ಳಾರಿ ಉಸ್ತುವಾರಿ ಸ್ಥಾನಕ್ಕಾಗಿ ಸಂತೋಷ್ ಲಾಡ್, ಕಂಪ್ಲಿ ಗಣೇಶ್, ಭರತ್ ರೆಡ್ಡಿ ಲಾಬಿ

| Updated By: ಗಣಪತಿ ಶರ್ಮ

Updated on: Jun 11, 2024 | 9:01 AM

ಬಳ್ಳಾರಿ ರಾಜಕಾರಣ ಹಿಡಿತ ಸಾಧಿಸಲು ಪೈಪೋಟಿ ಶುರುವಾಗಿದೆ. ಸಂತೋಷ್ ಲಾಡ್ ಬಳ್ಳಾರಿ ಉಸ್ತುವಾರಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಕಂಪ್ಲಿ ಶಾಸಕ ಗಣೇಶ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಕೂಡ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ.

ನಾಗೇಂದ್ರ ರಾಜೀನಾಮೆ: ಬಳ್ಳಾರಿ ಉಸ್ತುವಾರಿ ಸ್ಥಾನಕ್ಕಾಗಿ ಸಂತೋಷ್ ಲಾಡ್, ಕಂಪ್ಲಿ ಗಣೇಶ್, ಭರತ್ ರೆಡ್ಡಿ ಲಾಬಿ
ಬಳ್ಳಾರಿ ಉಸ್ತುವಾರಿ ಸ್ಥಾನಕ್ಕಾಗಿ ಸಂತೋಷ್ ಲಾಡ್, ಕಂಪ್ಲಿ ಗಣೇಶ್, ಭರತ್ ರೆಡ್ಡಿ ಲಾಬಿ
Follow us on

ಬಳ್ಳಾರಿ, ಜೂನ್ 11: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಕೊನೆಗೂ ಸಚಿವ ನಾಗೇಂದ್ರ (Nagendra) ರಾಜೀನಾಮೆ ನೀಡಿದ್ದಾರೆ. ನಾಗೇಂದ್ರ ರಾಜೀನಾಮೆ ಬಳಿಕ ಬಳ್ಳಾರಿ ಉಸ್ತುವಾರಿ ಸಚಿವರು (Ballari in charge Minister) ಯಾರು ಎಂಬ ಪ್ರಶ್ನೆ ಮೂಡಿದೆ. ನಾಗೇಂದ್ರ ರಾಜೀನಾಮೆ ನೀಡಿ ವಾರ ಕಳೆಯುತ್ತಾ ಬಂತು, ಹೀಗಾಗಿ ಮುಂದಿನ ಉಸ್ತುವಾರಿ ಸಚಿವ ಯಾರಾಗಲಿದ್ದಾರೆ ಎಂದು ಕುತೂಹಲ ಮೂಡಿದೆ. ಜೊತೆಗೆ ಜಿಲ್ಲೆಯ ಅಭಿವೃದ್ಧಿ ಕೆಡಿಪಿ ಮಿಟಿಂಗ್ ಆಗಬೇಕಾದರೆ ಉಸ್ತುವಾರಿ ಸಚಿವರ ಅಗತ್ಯವಿದೆ. ಸದ್ಯಕ್ಕೆ ಭ್ರಷ್ಟಾಚಾರ ಪ್ರಕರಣದ ತನಿಖೆ ಶೀಘ್ರದಲ್ಲೇ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಉಸ್ತುವಾರಿ ಸಚಿವರ ನೇಮಕಾತಿ ಸರ್ಕಾರಕ್ಕೂ ಅನಿವಾರ್ಯವಾಗಿದೆ. ಇದನ್ನೇ ಲಾಭವಾಗಿಸಿಕೊಳ್ಳಲು ಕೆಲ ಕಾಂಗ್ರೆಸ್ (Congress) ನಾಯಕರು ಲಾಬಿ ನಡೆಸುತ್ತಿದ್ದಾರೆ.

ಈ ಮಧ್ಯೆ, ಬೆಂಗಳೂರಿನಲ್ಲಿ ಸೋಮವಾರ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಕ್ಯಾಬಿನೆಟ್ ವಿಸ್ತರಣೆ ಮತ್ತು ಕೆಲ ಖಾತೆಯ ಸಚಿವರ ಬದಲಾವಣೆ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಈಗಾಗಲೇ ಬಳ್ಳಾರಿ ಉಸ್ತುವಾರಿ ಸಚಿವ ಸ್ಥಾನ ಮತ್ತು ಕ್ರೀಡಾ ಸಚಿವ ಸ್ಥಾನ ಖಾಲಿ ಇದ್ದು ಶೀಘ್ರದಲ್ಲೇ ಸರ್ಕಾರ ನೇಮಕ ಮಾಡುವ ನಿರೀಕ್ಷೆ ಇದೆ. ಹೀಗಾಗಿ ಮತ್ತೆ ಬಳ್ಳಾರಿ ರಾಜಕಾರಣ ಹಿಡಿತ ಸಾಧಿಸಲು ಪೈಪೋಟಿ ಶುರುವಾಗಿದೆ. ಸಂತೋಷ್ ಲಾಡ್ ಬಳ್ಳಾರಿ ಉಸ್ತುವಾರಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಕಂಪ್ಲಿ ಶಾಸಕ ಗಣೇಶ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಕೂಡ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ. ಇದರ ಮದ್ಯೆ ಅಕ್ಕ ಪಕ್ಕದ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರು ಕೂಡ ಸಚಿವ ಸ್ಥಾನ‌ ಗಿಟ್ಟಿಸಿಕೊಳ್ಳಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಿ ನಾಗೇಂದ್ರ ಹಿಸ್ಟರಿ: ಒಂದೇ ವರ್ಷದಲ್ಲಿ ಸಚಿವ ಸ್ಥಾನ ಕಳೆದಕೊಂಡ ನಾಗೇಂದ್ರ ಬಗ್ಗೆ ಒಂದಿಷ್ಟು ತಿಳಿಯಿರಿ

ಒಟ್ಟಿನಲ್ಲಿ ಗಣಿನಾಡು ಬಳ್ಳಾರಿ ಉಸ್ತುವಾರಿ ಸಚಿವ ಸ್ಥಾನ ಖಾಲಿಯಾಗುತ್ತಿದ್ದಂತೆಯೇ ಕಾಂಗ್ರೆಸ್​ನಲ್ಲಿ ಪೈಪೋಟಿ ಶುರುವಾಗಿದೆ. ಸರ್ಕಾರ ಯಾರನ್ನು ಉಸ್ತುವಾರಿ ಮಂತ್ರಿಯನ್ನಾಗಿ ನೇಮಕ ಮಾಡಲಿದೆ ಎಂದು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ