ಬಳ್ಳಾರಿ ಹಾಲು ಒಕ್ಕೂಟಕ್ಕೆ ಸಂಕಟ: ಪ್ರತಿ ತಿಂಗಳು 40 ಲಕ್ಷ ರೂ. ನಷ್ಟ

ರಾಜ್ಯದ ಬಳ್ಳಾರಿ ಹಾಲು ಒಕ್ಕೂಟ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಿಗೆ ಹಾಲು ಸರಬರಾಜು ಮಾಡುತ್ತದೆ. ಆದರೆ ಈ ಹಾಲು ಒಕ್ಕೂಟ ಇದೀಗ ನಷ್ಟದಲ್ಲಿದೆ. ಹೌದು ವಿದ್ಯುತ್ ದರ ದುಪ್ಪಟ್ಟು ಏರಿಕೆ ಹಾಗೂ ಉತ್ಪಾದನೆ ಕುಸಿತದಿಂದ ಪ್ರತಿ ತಿಂಗಳು 40 ಲಕ್ಷ ರೂ. ನಷ್ಟ ಅನುಭವಿಸುತ್ತಿದೆ.

ಬಳ್ಳಾರಿ ಹಾಲು ಒಕ್ಕೂಟಕ್ಕೆ ಸಂಕಟ: ಪ್ರತಿ ತಿಂಗಳು 40 ಲಕ್ಷ ರೂ. ನಷ್ಟ
ಬಳ್ಳಾರಿ ಹಾಲಿನ ಡೈರಿ
Edited By:

Updated on: Jul 08, 2023 | 2:32 PM

ಬಳ್ಳಾರಿ: ರಾಜ್ಯದ ಬಳ್ಳಾರಿ ಹಾಲು ಒಕ್ಕೂಟ (RABAKOVI) ರಾಯಚೂರು (Raichuru), ಬಳ್ಳಾರಿ (Bellary), ಕೊಪ್ಪಳ (Koppal) ಮತ್ತು ವಿಜಯನಗರ (Vijayanagar) ಜಿಲ್ಲೆಗಳಿಗೆ ಹಾಲು ಸರಬರಾಜು ಮಾಡುತ್ತಿದೆ. ಆದರೆ ಈ ಹಾಲು ಒಕ್ಕೂಟ ಇದೀಗ ನಷ್ಟದಲ್ಲಿದೆ. ಹೌದು ವಿದ್ಯುತ್ ದರ ದುಪ್ಪಟ್ಟು ಏರಿಕೆ ಹಾಗೂ ಉತ್ಪಾದನೆ ಕುಸಿತದಿಂದ ಪ್ರತಿ ತಿಂಗಳು 40 ಲಕ್ಷ ರೂ. ನಷ್ಟ ಅನುಭವಿಸುತ್ತಿದೆ. ಗಗನಕ್ಕೇರುತ್ತಿರುವ ವಿದ್ಯುತ್ ದರವೇ ನಮ್ಮ ನಷ್ಟಕ್ಕೆ ಪ್ರಮುಖ ಕಾರಣ. ಕಚ್ಚಾವಸ್ತುಗಳು ದುಬಾರಿಯಾಗಿ ಉತ್ಪಾದನೆ ಕಡಿಮೆಯಾಗಿದೆ ಎಂದು ಬಳ್ಳಾರಿ ಹಾಲು ಒಕ್ಕೂಟದ ಉಪಾಧ್ಯಕ್ಷ ಶಿವಪ್ಪ ವಾಡಿ ಅಳಲು ತೋಡಿಕೊಂಡಿದ್ದಾರೆ.

ಈ ಹಿಂದೆ ಬಳ್ಳಾರಿ ಹಾಲು ಒಕ್ಕೂಟ, ಬಳ್ಳಾರಿ ಜಿಲ್ಲೆಯ ಹಾಲಿನ ಡೈರಿಗಳು ಸೇರಿದಂತೆ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಡೈರಿಗಳಿಂದ ತಿಂಗಳಿಗೆ 25 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ ಇದೀಗ ಏಪ್ರಿಲ್‌ನಿಂದ 37 ಲಕ್ಷ ರೂ.ಗೆ ಏರಿಕೆಯಾಗಿದೆ. ವಿದ್ಯುತ್ ದರ ಏರಿಕೆ ಹಾಗೂ ಉತ್ಪಾದನೆ ಕುಸಿತದಿಂದ ಪ್ರತಿ ಲೀಟರ್ ಹಾಲಿಗೆ ಸರಾಸರಿ 1.50 ರೂ.ನಷ್ಟವಾಗಿದ್ದು, ಈ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ಕೆಎಂಎಫ್ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದೇವೆ ಎಂದು ವ್ಯವಸ್ಥಾಪಕ ನಿರ್ದೇಶಕ ಟಿ ತಿರುಪತಪ್ಪ ತಿಳಿಸಿದರು.

ಬಳ್ಳಾರಿ ಹಾಲು ಒಕ್ಕೂಟವು ದಿನಕ್ಕೆ 1.70 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತದೆ, ಅದರಲ್ಲಿ 10,000 ಲೀಟರ್ ಮೊಸರು ಉತ್ಪಾದನೆಗೆ ಬಳಸಲಾಗುತ್ತದೆ. ಇದರ ವ್ಯಾಪ್ತಿಯಲ್ಲಿರುವ ಒಕ್ಕೂಟಗಳಿಂದ 1.60 ಲಕ್ಷ ಲೀಟರ್ ಹಾಗೂ ಚಿತ್ರದುರ್ಗ ಮತ್ತು ಶಿವಮೊಗ್ಗ ಹಾಲು ಒಕ್ಕೂಟಗಳಿಂದ 10 ಸಾವಿರ ಲೀಟರ್ ಖರೀದಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Ballari News: ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಇನ್ಮುಂದೆ ಬಿಮ್ಸ್ ಆಗಿ ಹೆಸರು ಬದಲಾವಣೆ ಮಾಡಲು ಮುಂದಾದ ಸರ್ಕಾರ

ಹಸುಗಳಲ್ಲಿ ಚರ್ಮದ ಗಂಟು ರೋಗ ಮತ್ತು ಹಸಿರು ಹುಲ್ಲಿನ ಕೊರತೆಯಿಂದ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ದಿನವೊಂದಕ್ಕೆ 1.80 ಲಕ್ಷ ಲೀಟರ್ ಇದ್ದ ಉತ್ಪಾದನೆ ಈಗ 20 ಸಾವಿರ ಲೀಟರ್​ಗೆ ಇಳಿಕೆಯಾಗಿದೆ. ಹಾಲಿನ ದರ ಲೀಟರ್ ಗೆ 5 ರೂ. ಹೆಚ್ಚಾದರೆ ನಷ್ಟ ಕಡಿಮೆಯಾಗಬಹುದು ಎಂದು ಉಪಾಧ್ಯಕ್ಷ ಶಿವಪ್ಪ ವಡಿ ಅವರು ಹೇಳಿದರು.

ಆದ್ದರಿಂದ ಹಾಲಿನ ದರವನ್ನು ಲೀಟರ್​ಗೆ 5 ರೂ.ಗಳಷ್ಟು ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ರೈತರಿಗೆ 3.50 ರೂ., ಒಕ್ಕೂಟಕ್ಕೆ 1.50 ರೂ., ನಷ್ಟ ಪರಿಹಾರಕ್ಕೆ ಸಹಕಾರಿಯಾಗಲಿದೆ. ಜತೆಗೆ ಬಳ್ಳಾರಿ, ರಾಯಚೂರು, ಬೂದಗುಂಪಾ ಡೇರಿಗಳಲ್ಲಿ ರಾತ್ರಿ ಪಾಳಿಯ ಕಾಮಗಾರಿ ನಿಲ್ಲಿಸುವ ಮೂಲಕ ಶೇ.20ರಷ್ಟು ವಿದ್ಯುತ್ ಮತ್ತು ನೀರಿನ ಬಳಕೆ ವೆಚ್ಚ ತಗ್ಗಿಸುವ ಯೋಜನೆ ಇದೆ.

ಹಾಲಿನ ದರ ಏರಿಕೆ ಮಾಡದಿದ್ದರೆ ಹಾಲು ಒಕ್ಕೂಟಗಳು ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗುತ್ತದೆ ಎಂಬ ಆತಂಕ ಎದುರಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:20 pm, Sat, 8 July 23

Web contact

TV9 Kannada

Read More
Follow Us