
ಬಳ್ಳಾರಿ, ಏಪ್ರಿಲ್ 29: ಕರ್ನಾಟಕದಾದ್ಯಂತ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೆಂಡದಂತಹ ಬಿಸಿಲು, ಉಷ್ಣ ಅಲೆಗೆ (Heat Wave) ಮನುಷ್ಯರೇ ತತ್ತರಿಸಿ ಹೋಗುತ್ತಿದ್ದಾರೆ. ಆದರೆ, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನದಲ್ಲಿ (Atal Bihari Vajpayee Zoological Park) ಮಾತ್ರ ಪ್ರಾಣಿಗಳು ರಣರ ಬಿಸಿಲಿನಲ್ಲೂ ತಂಪಾಗಿವೆ. ಬಿಸಿಲಿನ ತಾಪ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದರೂ, ಪ್ರಾಣಿಗಳಿಗೆ ಬಿಸಿಲಿನ ಧಗೆ ತಟ್ಟದಂತೆ ಮೃಗಾಲಯದ ಸಿಬ್ಬಂದಿ ವಿಶೇಷ ವ್ಯವಸ್ಥೆ ಮಾಡಿದ್ದಾರೆ.
ಮೃಗಾಲಯದ ವ್ಯಾಪ್ತಿಯಲ್ಲಿ ವಾತಾವರಣವನ್ನು ತಂಪಾಗಿರಿಸಲು ಅಲ್ಲಲ್ಲಿ ಸ್ಪ್ರಿಂಕ್ಲರ್ಗಳನ್ನು (Sprinklers) ಅಳವಡಿಸಲಾಗಿದೆ. ಹುಲಿ, ಸಿಂಹ, ಚಿರತೆ ಮತ್ತು ಜಿರಾಫೆಗಳಂತಹ ಪ್ರಾಣಿಗಳು ಇರುವ ಕಡೆಗಳಲ್ಲಿ ಸದಾ ನೀರು ಚಿಮ್ಮುವಂತೆ ಮಾಡಲಾಗುತ್ತಿದ್ದು, ಪ್ರಾಣಿಗಳು ಇವುಗಳ ಕೆಳಗೆ ನಿಂತು ಮೈ ನೆನೆಸಿಕೊಳ್ಳುತ್ತಿವೆ. ಅಷ್ಟೇ ಅಲ್ಲದೆ, ಪ್ರಾಣಿಗಳ ಆವರಣದಲ್ಲಿರುವ ಗುಂಡಿಗಳಲ್ಲಿ ನೀರು ತುಂಬಿಸಲಾಗಿದ್ದು, ಬಿಸಿಲಿನ ತಾಪ ತಾಳಲಾರದೆ ಪ್ರಾಣಿಗಳು ಈ ನೀರಿನಲ್ಲಿ ಈಜುತ್ತಾ, ಮುಳುಗುತ್ತಾ ದಣಿವಾರಿಸಿಕೊಳ್ಳುತ್ತಿವೆ.
ಪ್ರಾಣಿಗಳ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಡಿಹೈಡ್ರೇಶನ್ (Dehydration) ಸಮಸ್ಯೆ ಉಂಟಾಗಬಾರದು ಎಂಬ ದೃಷ್ಟಿಯಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ನಾಯ್ಕ ತಿಳಿಸಿದ್ದಾರೆ. ಪ್ರಾಣಿಗಳು ಮರದ ನೆರಳಿನಲ್ಲಿ ವಿಶ್ರಮಿಸಲು ಪೂರಕವಾದ ವಾತಾವರಣವನ್ನೂ ನಿರ್ಮಿಸಲಾಗಿದೆ. ಈ ಬಾರಿ ಮೃಗಾಲಯಕ್ಕೆ ಹೊಸ ಅತಿಥಿಗಳಾಗಿ ಹಲವು ಪ್ರಾಣಿಗಳು ಆಗಮಿಸಿದ್ದು, ಅವುಗಳನ್ನು ನೋಡಲು ಬರುವ ಪ್ರವಾಸಿಗರು ಕೂಡ ಪ್ರಾಣಿಗಳಿಗಾಗಿ ಮಾಡಿರುವ ಈ ‘ಕೂಲ್’ ವ್ಯವಸ್ಥೆ ಕಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಕರಾವಳಿಯಲ್ಲಿ ಉಷ್ಣ ಅಲೆಯ ಜೊತೆಗೆ ಗುಡುಗು ಸಹಿತ ಮಳೆಯ ಅಬ್ಬರ!
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ