ಹೊಸ ಮನೆ ಕಟ್ಟುವ ಆಸೆ ಮಣ್ಣುಪಾಲು; ಗೋಡೆ ಕುಸಿದು ಮಾಲೀಕ ಸ್ಥಳದಲ್ಲೇ ಸಾವು!

ವಿಜಯನಗರ ಜಿಲ್ಲೆಯ ಕಾನಹೊಸಹಳ್ಳಿಯಲ್ಲಿ ಹೃದಯ ಕಲಕುವ ಘಟನೆ ನಡೆದಿದೆ. ಹೊಸ ಮನೆಯ ಕನಸು ಹೊತ್ತಿದ್ದ 54 ವರ್ಷದ ಬಸವರಾಜಪ್ಪ ಅವರು ತಮ್ಮ ನಿರ್ಮಾಣ ಹಂತದಲ್ಲಿದ್ದ ಮನೆ ಬಳಿ ಗೋಡೆ ಕುಸಿದು ಮೃತಪಟ್ಟಿದ್ದಾರೆ. ಪೈಪ್‌ಲೈನ್ ಅಳವಡಿಸಲು ತೋಡಿದ್ದ ಪಾಯ ಸಮತಟ್ಟು ಮಾಡುವಾಗ ಹಳೆಯ ಗೋಡೆ ಕುಸಿದು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ಶೋಕದ ವಾತಾವರಣ ಮನೆ ಮಾಡಿದೆ.

ಹೊಸ ಮನೆ ಕಟ್ಟುವ ಆಸೆ ಮಣ್ಣುಪಾಲು; ಗೋಡೆ ಕುಸಿದು ಮಾಲೀಕ ಸ್ಥಳದಲ್ಲೇ ಸಾವು!
ವಿಜಯನಗರ ಗೋಡೆ ಕುಸಿತ
Image Credit source: Tv9 kannada
Edited By:

Updated on: May 03, 2026 | 7:15 AM

ವಿಜಯನಗರ, ಮೇ.3: ಒಂದು ಮನೆ ಕಟ್ಟಬೇಕಾದರೆ ತುಂಬಾ ಕಷ್ಟ ಇದೆ. ಅದರ ಜತೆಗೆ ಅದನ್ನು ಕಟ್ಟುವ ಮುನ್ನ ಹಲವು ಕನಸುಗಳನ್ನು ಇಟ್ಟುಕೊಂಡಿರುತ್ತೇವೆ. ಆದರೆ ಕನಸುಗಳನ್ನು ವಿಧಿ ಬಲಿ ತೆಗೆದುಕೊಂಡಾಗ ಆಗುವ ನೋವು ಯಾರಿಗೂ ಬೇಡ. ಇದೀಗ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿಯಲ್ಲೂ ಕೂಡ ಒಂದು ಮನಕಲಕುವ ಘಟನೆಯೊಂದು ನಡೆದಿದೆ. ನಿನ್ನೆ ಸಂಜೆ ಸಂಭವಿಸಿದ ದುರಂತವೊಂದರಲ್ಲಿ ಮನೆಯ ಗೋಡೆ ಕುಸಿದು ಮಾಲೀಕ ಬಸವರಾಜಪ್ಪ (54) ಅವರು ಮೃತಪಟ್ಟಿದ್ದಾರೆ. ಹೊಸ ಮನೆಯ ಕನಸು ಹೊತ್ತಿದ್ದ ಮಾಲೀಕನೇ ಕಟ್ಟಡದ ಅವಶೇಷಗಳಡಿ ಸಿಲುಕಿ ಪ್ರಾಣ ಕಳೆದುಕೊಂಡಿರುವುದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.

ಮೃತರಾದ ಬಸವರಾಜಪ್ಪ ಅವರು ತಮ್ಮ ಹೊಸ ಮನೆಯ ಕಾಮಗಾರಿಯನ್ನು ನಡೆಯುತ್ತಿತ್ತು. ಹೊಸಮನೆಯ ಬೇಸ್‌ಮೆಂಟ್ ಪಕ್ಕದಲ್ಲೇ ಇದ್ದ ಹಳೆಯ ಕಲ್ಲಿನ ಗೋಡೆಯ ನಡುವೆ ಪೈಪ್‌ಲೈನ್ ಅಳವಡಿಸಲು ಕಾರ್ಮಿಕರು ಪಾಯ ತೆಗೆದಿದ್ದರು. ಈ ಪಾಯವನ್ನು ಸಮತಟ್ಟು ಮಾಡಲು ಹೋದ ಬಸವರಾಜಪ್ಪ ಅವರ ಮೇಲೆ ಏಕಾಏಕಿ ಹಳೆಯ ಕಲ್ಲಿನ ಗೋಡೆ ಕುಸಿದು ಬಿದ್ದಿದೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕ ರಾಜೇಗೌಡರಿಗೆ ಬಿಗ್ ಶಾಕ್; ಅಂಚೆ ಮತಗಳ ಮರು ಎಣಿಕೆಯಲ್ಲಿ ತಿರುವು!

ಭಾರಿ ಗಾತ್ರದ ಕಲ್ಲು ಮತ್ತು ಮಣ್ಣಿನಡಿ ಸಿಲುಕಿದ ಬಸವರಾಜಪ್ಪ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸಿದ್ರಾಮಪ್ಪ ಬಿದಾರಾಣಿ ಮತ್ತು ತಂಡ ಸ್ಥಳಕ್ಕೆ ಧಾವಿಸಿ, ಸ್ಥಳೀಯರ ನೆರವಿನೊಂದಿಗೆ ಸುಮಾರು 45 ನಿಮಿಷಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಶವವನ್ನು ಹೊರತೆಗೆದಿದ್ದಾರೆ. ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us