Crime News: ವಿಚಾರಣಾಧೀನ ಖೈದಿ ಜೈಲಿನ ಮುಖ್ಯ ದ್ವಾರದಿಂದಲೇ ಎಸ್ಕೇಪ್! ಬೆಳಗಾವಿಯಲ್ಲಿ ಘಟನೆ

ಗಲಾಟೆ, ಜಾತಿನಿಂದನೆ ಸೇರಿದಂತೆ ಒಟ್ಟು 6 ಪ್ರಕರಣದಲ್ಲಿ ಆತ ಭಾಗಿಯಾಗಿದ್ದ. ಇದೀಗ ಜೈಲು ಸೇರಿ 15 ದಿನಗಳಲ್ಲೇ ಆರೋಪಿ ಪರಾರಿ ಆಗಿದ್ದಾನೆ. ಪೊಲೀಸರ ಗಮನ ಬೇರೆಡೆ ಸೆಳೆದು ತಪ್ಪಿಸಿಕೊಂಡಿದ್ದಾನೆ.

Crime News: ವಿಚಾರಣಾಧೀನ ಖೈದಿ ಜೈಲಿನ ಮುಖ್ಯ ದ್ವಾರದಿಂದಲೇ ಎಸ್ಕೇಪ್! ಬೆಳಗಾವಿಯಲ್ಲಿ ಘಟನೆ
ಖೈದಿ ಖಾದಿರಸಾಬ್ ರಾಜೇಖಾನ್
Follow us
| Updated By: ganapathi bhat

Updated on: Mar 18, 2022 | 9:51 AM

ಬೆಳಗಾವಿ: ವಿಚಾರಣಾಧೀನ ಖೈದಿ ಒಬ್ಬ ಕಾರಾಗೃಹದಿಂದಲೇ ಪರಾರಿ ಆದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕಾರಾಗೃಹದಲ್ಲಿ ನಡೆದಿದೆ. ಖೈದಿ ಖಾದಿರಸಾಬ್ ರಾಜೇಖಾನ್ (34) ಎಂಬಾತ ಜೈಲಿನಿಂದಲೇ ಪರಾರಿ ಆಗಿದ್ದಾನೆ. ಜೈಲು ಸಿಬ್ಬಂದಿ ಗಮನ ಬೇರೆಡೆ ಸೆಳೆದು ಸಬ್ ಜೈಲಿನ ಮುಖ್ಯ ದ್ವಾರದಿಂದಲೇ ಆರೋಪಿ ಎಸ್ಕೇಪ್ ಆಗಿದ್ದಾನೆ. ಕೀ ಓಪನ್ ಮಾಡಿಕೊಂಡು ವಿಚಾರಣಾಧೀನ ಕೈದಿ ಪರಾರಿ ಆಗಿದ್ದು ಹೆಚ್ಚುವರಿ ಎಸ್​ಪಿ ಮಾನಿಂಗ ನಂದಗಾವಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಆರೋಪಿ ಖಾದಿರಸಾಬ್ ರಾಜೇಖಾನ್​ನನ್ನು 15 ದಿನದ ಹಿಂದೆ ಬಂಧಿಸಲಾಗಿತ್ತು. ಕೊಲೆ ಯತ್ನ, ಗಲಾಟೆ, ಜಾತಿನಿಂದನೆ ಸೇರಿದಂತೆ ಒಟ್ಟು 6 ಪ್ರಕರಣದಲ್ಲಿ ಆತ ಭಾಗಿಯಾಗಿದ್ದ. ಇದೀಗ ಜೈಲು ಸೇರಿ 15 ದಿನಗಳಲ್ಲೇ ಆರೋಪಿ ಪರಾರಿ ಆಗಿದ್ದಾನೆ. ಪೊಲೀಸರ ಗಮನ ಬೇರೆಡೆ ಸೆಳೆದು ತಪ್ಪಿಸಿಕೊಂಡಿದ್ದಾನೆ.

ಮೈಸೂರು: ಪತಿ ಕಿರುಕುಳಕ್ಕೆ ಬೇಸತ್ತು ಪತ್ನಿ ನೇಣಿಗೆ ಶರಣು

ಪತಿ ಕಿರುಕುಳ ಆರೋಪದಲ್ಲಿ ಪತ್ನಿ ಆತ್ಮಹತ್ಯೆ ಮಾಡಿದ ದುರ್ಘಟನೆ ನಂಜನಗೂಡಿನ ಮಹದೇವನಗರದಲ್ಲಿ ನಡೆದಿದೆ. ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ನೇಣಿಗೆ ಶರಣಾಗಿದ್ದಾರೆ. ಭಾಗ್ಯ (29) ಮೃತ ದುರ್ದೈವಿ. ಭಾಗ್ಯ ಪತಿ ಸೋಮಣ್ಣ ನಾಪತ್ತೆ ಆಗಿದ್ದಾರೆ. ಮೂಲತಃ ಗುಂಡ್ಲುಪೇಟೆಯ ಭಾಗ್ಯ, 10 ವರ್ಷಗಳ ಹಿಂದೆ ಮಹದೇವನಗರದ ಸೋಮಣ್ಣ ಜೊತೆ ವಿವಾಹವಾಗಿತ್ತು. ಮದುವೆ ಆಗಿ ಹತ್ತು ವರ್ಷವಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಈ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ಪತ್ನಿಗೆ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿತ್ತು. ಇದರಿಂದ ಬೇಸತ್ತ ಭಾಗ್ಯ ನೇಣಿಗೆ ಶರಣಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆಯೇ ಸೋಮಣ್ಣ ನಾಪತ್ತೆ ಆಗಿದ್ದು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ, ಇಬ್ಬರ ದುರ್ಮರಣ

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಆಗಿ, ಇಬ್ಬರು ದುರ್ಮರಣವನ್ನಪ್ಪಿದ ಘಟನೆ ಹುಬ್ಬಳ್ಳಿಯ ಹೊರವಲಯದ ಗಬ್ಬೂರ ಬೈಪಾಸ್‌ನಲ್ಲಿ ನಡೆದಿದೆ. ಚಿಕ್ಕಬಳ್ಳಾಪುರದಿಂದ ದಾಂಡೇಲಿಗೆ ಹೋಗುವಾಗ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ರಂಜಿತ್, ರಾಕೇಶ್ ಸ್ಥಳದಲ್ಲೇ ದುರ್ಮರಣವನ್ನಪ್ಪಿದ್ದಾರೆ. ಇನ್ನುಳಿದ ನಾಲ್ವರಿಗೆ ಗಂಭೀರ ಗಾಯವಾಗಿದ್ದು ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ, ಪರೀಶಿಲನೆ ನಡೆಸಿದ್ದಾರೆ.

ಕಲಬುರಗಿ: ವ್ಯಕ್ತಿಯನ್ನು ಕೊಂದು ಶವ ಸುಡಲಾಗಿದೆ

ವ್ಯಕ್ತಿ ಒಬ್ಬನನ್ನು ಕೊಲೆ ಮಾಡಿ ಶವ ಸುಟ್ಟಿರುವ ಘಟನೆ ಕಲಬುರಗಿ ತಾಲೂಕಿನ ತಾಜಸುಲ್ತಾನಪುರದಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಕೃಷಿ ಜಮೀನಿನಲ್ಲಿ ಶವ ಸುಟ್ಟು ಹಾಕಲಾಗಿದೆ. ಜೋಳದ ಕಣಿಕೆಯಲ್ಲಿ ಶವ ಸುಡಲಾಗಿದೆ. ತಾಲಸುಲ್ತಾನಪುರ ಗ್ರಾಮದ ನಿವಾಸಿ ಮನೋಹರ್ ರುದ್ರಕರ್ (36) ಕೊಲೆಯಾದ ವ್ಯಕ್ತಿ. ಕಳೆದ ಕೆಲ ವರ್ಷಗಳಿಂದ ಮಹಾರಾಷ್ಟ್ರದ ಪುಣೆಯಲ್ಲಿದ್ದ ಮನೋಹರ್, ಎರಡು ದಿನದ ಹಿಂದಷ್ಟೇ ತನ್ನೂರಿಗೆ ಬಂದಿದ್ದ ಎಂದು ತಿಳಿದುಬಂದಿದೆ. ಕಳೆದ ರಾತ್ರಿ ಮನೆಯಿಂದ ಹೊರಹೋಗಿದ್ದ ಮನೋಹರ್ ಕೊಲೆ ಮಾಡಲಾಗಿದೆ. ಮನೋಹರನನ್ನು ಕೊಲೆ ಮಾಡಿ, ನಂತರ ಶವ‌ ಸುಟ್ಟು ಹಾಕಲಾಗಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಹಾಸನ: ಸಕಲೇಶಪುರದಲ್ಲಿ ಹಾಡುಹಗಲೇ ಯುವಕನಿಗೆ ಚೂರಿ ಇರಿದು ಹತ್ಯೆ

ಸಕಲೇಶಪುರದಲ್ಲಿ ನಿನ್ನೆ (ಮಾರ್ಚ್ 17) ಹಾಡುಹಗಲೇ ಯುವಕನಿಗೆ ಚೂರಿ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಯುವಕನನ್ನ ಅಡ್ಡಗಟ್ಟಿ ಅಟ್ಟಾಡಿಸಿ ಇರಿದು ಕೊಲ್ಲುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಸಕಲೇಶಪುರ ಪಟ್ಟಣದ ಅಜಾದ್ ರಸ್ತೆಯಲ್ಲಿ ನಿನ್ನೆ ಮದ್ಯಾಹ್ನ ಘಟನೆ ನಡೆದಿತ್ತು. ಸಕಲೇಶಪುರ ಕುಶಾಲನಗರ ಬಡಾವಣೆಯ ಅಪ್ಸರ್ (27) ಎಂಬಾತನನ್ನು ಇರಿದು ಹತ್ಯೆ ಮಾಡಲಾಗಿತ್ತು. ಕ್ಷುಲ್ಲಕ ಕಾರಣಕ್ಕೆ ಅಕ್ಕ ಪಕ್ಕದವರ ಮನೆಯವರ ನಡುವೆ ಗಲಾಟೆ ಉಂಟಾಗಿತ್ತು. ಇದೇ ವಿಚಾರವಾಗಿ ಐಸಾನ್ ಖುರೇಷಿ ಕತ್ತು ಇತರೆ ಮೂವರಿಂದ ಯುವಕನ ಬರ್ಬರ ಕೊಲೆ ನಡೆದಿದೆ. ಕೊಲೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿ ಕ್ಯಾಮರಾ ದೃಶ್ಯ ಆದರಿಸಿ ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

ಬೆಂಗಳೂರು: ಮನೆ ಮುಂದೆ ಬೈಕ್ ವ್ಹೀಲಿಂಗ್ ಪ್ರಶ್ನಿಸಿದ್ದಕ್ಕೆ ಥಾಮಸ್ ಕೊಲೆ; 6 ಆರೋಪಿಗಳ ಬಂಧನ

ಮನೆ ಮುಂದೆ ಬೈಕ್ ವ್ಹೀಲಿಂಗ್ ಪ್ರಶ್ನಿಸಿದ್ದಕ್ಕೆ ಥಾಮಸ್ ಎಂಬವರನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ, ಕೊಲೆ ಆರೋಪಿಗಳಾದ ಸೂರ್ಯ, ಚಂದನ್, ಪ್ರಮೋದ್, ಯಶವಂತ್, ಚೇತನ್ ಸೇರಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಕೆ.ಪಿ. ಅಗ್ರಹಾರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Crime News: ಡೀಸೆಲ್ ಕಳ್ಳನ ಮೇಲೆ ಗುಂಡು ಹಾರಿಸಿದ ಪೊಲೀಸರು, ತೆಂಗಿನ ಮರಗಳ ಬುಡಕ್ಕೆ ವಿಷ ಇಟ್ಟ ದುಷ್ಕರ್ಮಿಗಳು

ಇದನ್ನೂ ಓದಿ: Crime News: ಅತ್ಯಾಚಾರಿಯನ್ನು ಮರಕ್ಕೆ ಕಟ್ಟಿ, ಹೊಡೆದು ಕೊಂದ ಮಹಿಳೆಯರು!