ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ: ದಾಳಿ ವೇಳೆ ಕಂಪನಿಯ ಸರ್ವರ್​​ ಡೌನ್​​ ಮಾಡಿ ಕಳ್ಳಾಟ?

ಬೆಳಗಾವಿಯ ಆದಿತ್ಯರಾಜ ಕ್ಯಾಪಿಟಲ್ ಕಂಪನಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಕಂಪನಿಯ ಸರ್ವರ್ ಡೌನ್ ಆಗಿದೆ. ನೂರಾರು ಕೋಟಿ ರೂ. ವಂಚನೆ ಶಂಕೆ ವ್ಯಕ್ತವಾಗಿದ್ದು, ತನಿಖೆ ಚುರುಕುಗೊಂಡಿದೆ. ಶಿವಂ ಅಸೋಸಿಯೇಟ್ಸ್ ಸಂಸ್ಥೆಯಿಂದ ಸುಮಾರು 4,500 ಕೋಟಿ ರೂ. ವಂಚನೆ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿರುವ ನಡುವೆಯೇ ಅದೇ ಮಾದರಿಯ ಮತ್ತೊಂದು ಕೇಸ್​ ವರದಿಯಾಗಿರೋದು ಪೊಲೀಸರಿಗೂ ತಲೆನೋವಾಗಿ ಮಾರ್ಪಟ್ಟಿದೆ.

ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ: ದಾಳಿ ವೇಳೆ ಕಂಪನಿಯ ಸರ್ವರ್​​ ಡೌನ್​​ ಮಾಡಿ ಕಳ್ಳಾಟ?
ಸಾಂದರ್ಭಿಕ ಚಿತ್ರ
Image Credit source: Getty Images
Edited By:

Updated on: Jun 04, 2026 | 2:21 PM

ಬೆಳಗಾವಿ, ಜೂನ್​ 04: ಶಿವಂ ಅಸೋಸಿಯೇಟ್ಸ್ ಸಂಸ್ಥೆಯಿಂದ ಸಾವಿರಾರು ಕೋಟಿ ಅಕ್ರಮ ಸಂಬಂಧ ತನಿಖೆ ನಡೆಯುತ್ತಿರುವ ನಡುವೆಯೇ ಬೆಳಗಾವಿಯಲ್ಲಿ ಮತ್ತೊಂದು ನೂರಾರು ಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಭಾಗ್ಯ ನಗರದಲ್ಲಿರುವ ಆದಿತ್ಯರಾಜ ಕ್ಯಾಪಿಟಲ್ ಪ್ರೈವೇಟ್​​ ಲಿಮಿಟೆಡ್​​ ಕಂಪನಿ ಮೇಲೆ ಎಸಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ರೇಡ್​​ ಕುರಿತು ಮಾಹಿತಿ ಸಿಗುತ್ತಿದ್ದಂತೆ ಆನ್ ಲೈನ್ ಮೂಲಕ ವ್ಯವಹಾರ ನಡೆಸುತ್ತಿದ್ದ ಕಂಪನಿಯ ವೆಬ್​​ಸೈಟ್​​ ಸ್ಥಗಿತವಾಗಿದೆ. ಹೀಗಾಗಿ ಕಂಪನಿ ಮಾಲಿಕ ಅಧಿಕಾರಿಗಳಿಗೇ ಚಳ್ಳೆಹಣ್ಣು ತಿನ್ನಿಸಲು ಮುಂದಾದರಾ ಎಂಬ ಅನುಮಾನವೂ ವ್ಯಕ್ತವಾಗಿದೆ.

ಮುಖ್ಯಾಂಶಗಳು

  • ಬೆಳಗಾವಿಯಲ್ಲಿ ಮತ್ತೊಂದು ನೂರಾರು ಕೋಟಿ ವಂಚನೆ ಪ್ರಕರಣ
  • ಆದಿತ್ಯರಾಜ ಕ್ಯಾಪಿಟಲ್ ಪ್ರೈ.​​ ಲಿಮಿಟೆಡ್​​ ಕಂಪನಿ ಮೇಲೆ ದಾಳಿ
  • ರೇಡಿ ಮಾಹಿತಿ ಸಿಗುತ್ತಿದ್ದಂತೆಯೇ ಕಂಪನಿಯ ಸರ್ವರ್​​ ಡೌನ್​!

ಆದಿತ್ಯರಾಜ ಕ್ಯಾಪಿಟಲ್ ಪ್ರೈವೇಟ್​​ ಲಿಮಿಟೆಡ್​​ ಕಂಪನಿಯನ್ನು ಮಹಾರಾಷ್ಟ್ರ ಮೂಲದ ಬಲರಾಮ್ ಮಾನೆ ಎಂಬಾತ ನಡೆಸುತ್ತಿದ್ದು, ಒಟ್ಟು 7 ಶಾಖೆಗಳನ್ನು ಇದು ಹೊಂದಿದೆ ಎನ್ನಲಾಗಿದೆ. ಕಳೆದ 8 ವರ್ಷಗಳಿಂದ ಬೆಳಗಾವಿಯಲ್ಲಿ ಕಂಪನಿ ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರಿಗಳ ದಾಳಿಗೂ ಮುನ್ನ ಮೆಂಟೆನನ್ಸ್ ನೆಪ ಹೇಳಿ ಸರ್ವರ್ ಡೌನ್ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿದೆ. ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್ ನೇತೃತ್ವದಲ್ಲಿ ದಾಳಿ ವೇಳೆ ನೂರಾರು ಕೋಟಿ ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದ್ದು, ಆನ್ ಲೈನ್ ಮೂಲಕ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ. ಒಂದು ಲಕ್ಷಕ್ಕೆ ತಿಂಗಳಿಗೆ 3ಸಾವಿರ ಹಣ ಬಡ್ಡಿ ಕೊಡುವುದಾಗಿ ಆಮಿಷವೊಡ್ಡಿ ಸಾವಿರಾರು ಜನರಿಂದ ಹಣ ಠೇವಣಿ ಇರಿಸಿಕೊಂಡು ವಂಚನೆ ಆರೋಪ ಕೇಳಿಬಂದಿದೆ. ಹೀಗಾಗಿ ದಾಖಲೆ ಸೇರಿದಂತೆ ಹಣದ ಮೂಲದ ಪರಿಶೀಲನೆಗೆ ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ 4,500 ಕೋಟಿ ರೂ. ವಂಚನೆ ಪ್ರಕರಣ, ಹೂಡಿಕೆಗಿಂತ ಹೆಚ್ಚಿನ ಲಾಭ ಪಡೆದವರಿಗೂ ಶುರುವಾಯ್ತು ನಡುಕ

ಈ ಹಿಂದೆ ಸದ್ದು ಮಾಡಿದ್ದ ಶಿವಂ ಅಸೋಸಿಯೇಟ್ಸ್ ಪ್ರಕರಣ

ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ್​​ ಎಂಬಾತ ಯಾವುದೇ ನಿಯಮಗಳನ್ನು ಪಾಲಿಸದೆ, ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಬರೋಬ್ಬರಿ 40 ರಿಂದ 45 ಸಾವಿರ ಜನರಿಂದ ಅಂದಾಜು 4,500 ಕೋಟಿ ರೂ ಹೂಡಿಕೆ ಮಾಡಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿತ್ತು. ಸದ್ಯ ಶಿವಾನಂದ ನೀಲಣ್ಣವರ್​​ ಮನೆ ಸೇರಿದಂತೆ ಕಚೇರಿ ಕೂಡ ಸೀಜ್​ ಮಾಡಲಾಗಿದ್ದು, ಆ ಸಂಬಂಧ ವಿಚಾರಣೆ ಮುಂದುವರಿದೆ. ಈ ನಡುವೆಯೇ ಈಗ ಮತ್ತೊಂದು ಅಂತಹುದ್ದೇ ಪ್ರಕರಣ ವರದಿಯಾಗಿರೋದು ಪೊಲೀಸರಿಗೂ ತಲೆನೋವಾಗಿ ಮಾರ್ಪಟ್ಟಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Sahadev Mane
Follow Us