ಕರ್ನಾಟಕ ಬಂದ್‌ಗೆ ವೈಯಕ್ತಿಕ ಬೆಂಬಲ ಇದೆ ಎಂದ ಕೆಎಸ್ ಈಶ್ವರಪ್ಪ; ಪ್ರತಿಕ್ರಿಯೆ ನೀಡದ ಬಸವರಾಜ ಬೊಮ್ಮಾಯಿ

ಕೇಂದ್ರ ಯಾವ ಕ್ರಮ ತೆಗೆದುಕೊಳ್ಳುತ್ತೋ ನೋಡೋಣ ಎಂದು ಬೆಳಗಾವಿಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ, ಕರ್ನಾಟಕ ಬಂದ್​ಗೆ ಕರೆ ವಿಚಾರವಾಗಿ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕರ್ನಾಟಕ ಬಂದ್‌ಗೆ ವೈಯಕ್ತಿಕ ಬೆಂಬಲ ಇದೆ ಎಂದ ಕೆಎಸ್ ಈಶ್ವರಪ್ಪ; ಪ್ರತಿಕ್ರಿಯೆ ನೀಡದ ಬಸವರಾಜ ಬೊಮ್ಮಾಯಿ
ಪ್ರಾತಿನಿಧಿಕ ಚಿತ್ರ
Edited By:

Updated on: Dec 22, 2021 | 4:46 PM

ಬೆಳಗಾವಿ: ಕರ್ನಾಟಕ ಬಂದ್‌ಗೆ ನನ್ನ ವೈಯಕ್ತಿಕ ಬೆಂಬಲ ಇದೆ. ಎಂಇಎಸ್ ಪುಂಡಾಟಿಕೆ ವಿರುದ್ಧ ಖಂಡನಾ ನಿರ್ಣಯವಾಗಿದೆ. ಖಂಡನಾ ನಿರ್ಣಯವನ್ನು ಕೇಂದ್ರಕ್ಕೂ ಕಳಿಸಲಾಗಿದೆ. ಕೇಂದ್ರ ಯಾವ ಕ್ರಮ ತೆಗೆದುಕೊಳ್ಳುತ್ತೋ ನೋಡೋಣ ಎಂದು ಬೆಳಗಾವಿಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ, ಕರ್ನಾಟಕ ಬಂದ್​ಗೆ ಕರೆ ವಿಚಾರವಾಗಿ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಟ್ಯಾಕ್ಸಿ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘದಿಂದ ಬಂದ್​ಗೆ ಬೆಂಬಲ
ಡಿಸೆಂಬರ್ 31ರಂದು ಕರ್ನಾಟಕ ಬಂದ್​ಗೆ ನಮ್ಮ ಸಂಘಟನೆಯ ಸಂಪೂರ್ಣ ಬೆಂಬಲವಿದೆ ಎಂದು ಟಿವಿ9ಗೆ ಚಾಲಕರ ಸಂಘದ ಅಧ್ಯಕ್ಷ ರಮೇಶ್‌ಗೌಡ ಹೇಳಿಕೆ ನೀಡಿದ್ದಾರೆ. ಕೆಐಎಬಿ ಚಾಲಕರ ಹಿತರಕ್ಷಣಾ ಕ್ಷೇಮಾಭಿವೃದ್ಧಿ ಸಂಘ, ಸಂಘಟನೆಯ 1500 ಟ್ಯಾಕ್ಸಿಗಳು ಅಂದು ರಸ್ತೆಗಿಳಿಯಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಬಂದ್‌ಗೆ ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘಟನೆ ಸಾಥ್‌ ನೀಡಲಿದೆ. ಬಂದ್ ದಿನ ರಾಜ್ಯಾದ್ಯಂತ ಬೀದಿಬದಿ ವ್ಯಾಪಾರ ಬಂದ್ ಮಾಡಲಿರುವ ಬಗ್ಗೆ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ.

ಹೋಟೆಲ್, ಬಾರ್ ಸಂಘಟನೆಯಿಂದ ನೈತಿಕ ಬೆಂಬಲ
ಬಂದ್‌ಗೆ ಹೋಟೆಲ್ ಮಾಲೀಕರ ಸಂಘ ನೈತಿಕ ಬೆಂಬಲ ಇರಲಿದೆ. ಬಂದ್ ದಿನ ಹೋಟೆಲ್ ಸೇವೆ ಎಂದಿನಂತೆ ಇರುತ್ತದೆ. ಕನ್ನಡ ಪರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇರುತ್ತೆ. ಆದ್ರೆ ಬಂದ್‌ಗೆ ಸಂಘಟನೆಯಿಂದ ನೈತಿಕ ಬೆಂಬಲ ಮಾತ್ರ ಇರಲಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ. ರಾಜ್ಯ ಟ್ರಾವೆಲ್ ಮಾಲೀಕರ ಸಂಘದಿಂದ ಕೂಡ ನೈತಿಕ ಬೆಂಬಲ ಇರಲಿದೆ. ಬಂದ್ ದಿನ ರಾಜ್ಯಾದ್ಯಂತ ಟ್ಯಾಕ್ಸಿಗಳು ಸಂಚರಿಸುತ್ತವೆ ಎಂದು ಟಿವಿ9ಗೆ ಸಂಘದ ಅಧ್ಯಕ್ಷ ರಾಧಕೃಷ್ಣ ಹೊಳ್ಳ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಬಂದ್​ಗೆ ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳಿಂದ ನೈತಿಕ ಬೆಂಬಲ ಇರಲಿದೆ. ಹೀಗಾಗಿ ಬಂದ್ ದಿನ ಶಾಲೆ ಕ್ಲೋಸ್ ಇಲ್ಲ. ಕನ್ನಡ ಜಲ, ನೆಲ, ಸಂಸ್ಕಾರ ಹೋರಾಟದಲ್ಲಿ ಜೊತೆಗೆ ಇರುತ್ತೇವೆ. ಮಕ್ಕಳಿಗೆ ಶಿಕ್ಷಣ ವಂಚನೆ ಆಗದ ರೀತಿ ಬೆಂಬಲ ನೀಡುತ್ತೇವೆ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ. ಕರ್ನಾಟಕ ಬಂದ್​​ಗೆ ಬಾರ್ ಆಂಡ್ ರೆಸ್ಟೋರೆಂಟ್ ಮತ್ತು ವೈನ್ ಸ್ಟೋರ್ಸ್​ನಿಂದ ನೈತಿಕ ಬೆಂಬಲ ಇದೆ. ಕೊರೊನಾ ಸಂದರ್ಭದಲ್ಲಿ ವಹಿವಾಟು ನಷ್ಟವಾಗಿದೆ. ಹೀಗಾಗಿ ಬಂದ್​ಗೆ ನಾವು ಕೇವಲ ನೈತಿಕ ಬೆಂಬಲ ಕೊಡುತ್ತೇವೆ. ಬಾರ್ ಆಂಡ್ ರೆಸ್ಟೋರೆಂಟ್ ಹಾಗೂ ವೈನ್ ಸ್ಟೋರ್ಸ್ ಬಂದ್ ಮಾಡೋದಿಲ್ಲ ಎಂದು ಬಾರ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ನ ಪದಾಧಿಕಾರಿ ಕರುಣಾಕರ್ ಹೆಗ್ಡೆ ಮಾಹಿತಿ ನೀಡಿದ್ದಾರೆ.

ಡಿಸೆಂಬರ್ 31ರ ಕರ್ನಾಟಕ ಬಂದ್​ಗೆ ಕರವೇ ಬೆಂಬಲವಿಲ್ಲ?
ಡಿಸೆಂಬರ್ 31ರ ಕರ್ನಾಟಕ ಬಂದ್​ಗೆ ಕರವೇ ಬೆಂಬಲವಿಲ್ಲ ಎಂದು ಟಿವಿ9ಗೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸ್ಪಷ್ಟನೆ ನೀಡಿದ್ದಾರೆ. ಇಂತಹ ಬಂದ್​ಗೆ ಬೆಂಬಲಿಸಿದ್ರೆ ಜನರಿಗೆ ತೊಂದರೆ ಆಗುತ್ತೆ. ಜನ ಸಾಮಾನ್ಯನಿಗೆ ನಮ್ಮ ಹೋರಾಟವೆಂಬ ಭಾವನೆ ಬರಬೇಕು. ಜನಜಾಗೃತಿ ಸಭೆ ಮೂಲಕ ಜನರನ್ನು ವಿಶ್ವಾಸಕ್ಕೆ ಪಡೆಯಬೇಕು. ನಾಳೆ ಕರವೇ ಸಭೆಯ ನಂತರ ತೀರ್ಮಾನ ಮಾಡುತ್ತೇವೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಕಾನೂನಾತ್ಮಕವಾಗಿ ಎಂಇಎಸ್ ಸಂಘಟನೆ ನಿಷೇಧಿಸಬೇಕು. ಹೀಗಾಗಿ ಕಾನೂನಾತ್ಮಕವಾಗಿ ನಾವೂ ಸಹ ಒತ್ತಡ ಹಾಕಬೇಕಿದೆ. ರಾಜಭವನದ ಮೇಲೆ ಒತ್ತಡ ಹಾಕಲು ಕರವೇ ಹೋರಾಟ ಮಾಡಲಿದೆ ಎಂದು ಟಿ.ಎ.ನಾರಾಯಣಗೌಡ ಹೇಳಿದ್ದಾರೆ.

ಬಂದ್​ಗೆ ಗಾರ್ಮೆಂಟ್ಸ್ ಲೇಬರ್ಸ್ ಯೂನಿಯನ್ ಬೆಂಬಲವಿಲ್ಲ ಎಂದು ಟಿವಿ9ಗೆ ಯೂನಿಯನ್ ರಾಜ್ಯಾಧ್ಯಕ್ಷೆ ರುಕ್ಮಿಣಿ ಮಾಹಿತಿ ನೀಡಿದ್ದಾರೆ. ಬಂದ್​​ಗೆ ನನ್ನ ವೈಯಕ್ತಿಕ ಬೆಂಬಲ ಇದೆ ಆದರೆ, ಸಂಘಟನೆಯ ಬೆಂಬಲವಿಲ್ಲ. ಈಗಾಗಲೇ ಲಾಕ್​ಡೌನ್​​ನಿಂದ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ನಾವು ಬಂದ್ ಮಾಡುವುದು ಸರಿಯಲ್ಲ. ಕಾರ್ಮಿಕರು ಬಂದ್​​ನಲ್ಲಿ ಭಾಗಿಯಾಗುವುದಾದರೆ ಅವರ ಸ್ವಇಚ್ಛೆ. ಗಾರ್ಮೆಂಟ್ಸ್ ಕಂಪನಿಗಳು ರಜೆ ನೀಡಿದ್ರೆ ಅದಕ್ಕೆ ನಮ್ಮ ಬೆಂಬಲ ಇದೆ ಎಂದು ಅವರು ಹೇಳಿದ್ದಾರೆ.

ಬಂದ್ ಬಗ್ಗೆ ಮಾಲ್ ಅಸೋಸಿಯೇಷನ್ ಯಾವುದೇ ನಿರ್ಧಾರ ಕೈಗೊಂಡಿಲ್ಲ
ಬಂದ್ ಬಗ್ಗೆ ಮಾಲ್ ಅಸೋಸಿಯೇಷನ್ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನಾಳೆ ಎಲ್ಲಾ ಮಾಲ್ ಮಾಲೀಕರ ಜೊತೆಗೆ ಮಾತಾನಾಡಿ ನಿರ್ಧಾರ ಎಂದು ಮಾಡ್ತಿವಿ ರಾಜ್ಯ ಮಾಲ್ ಅಸೋಸಿಯೇಷನ್ ನಿಂದ ಮಾಹಿತಿ ಲಭ್ಯವಾಗಿದೆ. ನಮಗೆ ಬಂದ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಾಳೆ ಎಲ್ಲಾ ಪದಾಧಿಕಾರಿಗಳ ಜೊತೆಗೆ ಮಾತಾನಾಡಿ ನಿರ್ಧಾರ ಮಾಡ್ತೀವಿ ಎಂದು ಬೆಂಗಳೂರು ಬಟ್ಟೆ ಅಂಗಡಿಗಳ ಮಾಲೀಕ ಪ್ರಕಾಶ್ ಪಿರಗಲ್ ಟಿವಿ9 ಮಾಹಿತಿ ನೀಡಿದ್ದಾರೆ.

ಡಿಸೆಂಬರ್ 31ರಂದು ಕರ್ನಾಟಕ ಬಂದ್​ಗೆ ಬೆಂಬಲ ಸೂಚಿಸುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್​ ಹೇಳಿದ್ದಾರೆ. ನಾಳೆ ಕೋರ್ ಕಮಿಟಿ ಸಭೆ ನಡೆಸಿ ಬೆಂಬಲದ ಬಗ್ಗೆ ನಿರ್ಧಾರ ಮಾಡುತ್ತೇವೆ. ನಾಡು, ನುಡಿ, ಜಲದ ವಿಚಾರದಲ್ಲಿ ನಮ್ಮ ಬೆಂಬಲ ಇರುತ್ತದೆ. ಆದರೆ ಬಸ್ ನಿಲ್ಲಿಸಿ ಹೋರಾಟದಲ್ಲಿ ಭಾಗಿಯಾಬೇಕಾ, ಬೇಡ್ವಾ ಎಂದು ನಾಳೆ ಸಭೆ ನಡೆಸಿ ಮುಂದಿನ ನಿರ್ಧಾರವನ್ನು ಪ್ರಕಟಿಸುತ್ತೇವೆ ಎಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಹೇಳಿದ್ದಾರೆ.

ಎಂಇಎಸ್ ಪುಂಡಾಟ ಖಂಡಿಸಿ ಪ್ರತಿಭಟನೆ
ಎಂಇಎಸ್ ಪುಂಡಾಟ ಖಂಡಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕ ವತಿಯಿಂದ ಬೀದರ್​ನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಶಿವಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮಾಡಲಾಗಿದೆ. ಬಸವಣ್ಣನ ಭಾವಚಿತ್ರಕ್ಕೆ ಮಸಿ ಬಳಿದು ವಿಕೃತಿ ಮೆರೆದ ವಿಚಾರಕ್ಕೆ ಸಂಬಂಧಿಸಿ ಚಿತ್ರದುರ್ಗದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಧರಣಿ ನಡೆಸಿದೆ. ಗಾಂಧಿ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲಾಗಿದೆ. ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ಒತ್ತಾಯ ಮಾಡಿ ಜಿಲ್ಲಾಧಿಕಾರಿಯ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ: Karnataka Bandh: ಡಿ 31 ಕರ್ನಾಟಕ ಬಂದ್ -ಯಾರದೆಲ್ಲ ಬೆಂಬಲ ಇದೆ? ಕರವೇ, ಚಿತ್ರೋದ್ಯಮದ ನಿರ್ಧಾರವೇನು?

ಇದನ್ನೂ ಓದಿ: ಎಂಇಎಸ್​ ರಾಜಕೀಯ ಪಕ್ಷ, ಕಾನೂನಾತ್ಮಕವಾಗಿ ಅದನ್ನು ನಿಷೇಧಿಸುವ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Web contact

TV9 Kannada

Read More
Follow Us