AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Leopard: 24ನೇ ದಿನಕ್ಕೆ ಕಾಲಿಟ್ಟ ಚಿರತೆ ಸೆರೆ ಕಾರ್ಯಾಚರಣೆ: ದೂರವಾಗದ ಬೆಳಗಾವಿ ಜನರ ಆತಂಕ

ಅರಣ್ಯ ಇಲಾಖೆ ಸಿಬ್ಬಂದಿಗಳು ಏಕಕಾಲದಲ್ಲಿ ಕೋಬಿಂಗ್ ಕಾರ್ಯಾಚರಣೆ ಆರಂಭಿಸಲಿದ್ದಾರೆ. ಕೋಬಿಂಗ್ ಕಾರ್ಯಾಚರಣೆ ಎಂದರೆ ಬಲೆ ಹಾಕಿ ಕಾರ್ಯಾಚರಣೆ ನಡೆಸುವುದಾಗಿದೆ.

Leopard: 24ನೇ ದಿನಕ್ಕೆ ಕಾಲಿಟ್ಟ ಚಿರತೆ ಸೆರೆ ಕಾರ್ಯಾಚರಣೆ: ದೂರವಾಗದ ಬೆಳಗಾವಿ ಜನರ ಆತಂಕ
ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಪ್ರತ್ಯಕ್ಷಗೊಂಡ ಚಿರತೆ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 28, 2022 | 10:34 AM

Share

ಬೆಳಗಾವಿ: ಜಿಲ್ಲೆಯ ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷ ಹಿನ್ನೆಲೆ 24ನೇ ದಿನಕ್ಕೆ ಚಿರತೆ ಸೆರೆ ಕಾರ್ಯಾಚರಣೆ‌ ಕಾಲಿಟ್ಟಿದೆ. ಐದನೇ ದಿನಕ್ಕೆ ಆನೆ, ಜೆಸಿಬಿಗಳ ಕಾರ್ಯಾಚರಣೆ ಮುಂದುವರೆದಿದೆ. ಇಂದು ಕೂಡ ನೂರು ಜನ ಸಿಬ್ಬಂದಿ, ಜೆಸಿಬಿ ಆನೆಗಳಿಂದ ಚಿರತೆ ಸೆರೆಗೆ ಪ್ಲ್ಯಾನ್ ಮಾಡಿದ್ದು, ಪ್ರತಿ ದಿನ 250 ಎಕರೆ ಪ್ರದೇಶ, ಏಳು ಕಿಮೀ ಸುತ್ತಿದ್ರೂ ಚಿರತೆ ಸಿಗುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸಿ ಚಾಲಾಕಿ ಚಿರತೆ ಓಡಾಡುತ್ತಿದೆ. ಚಿರತೆ ಸೆರೆಯಾಗದಕ್ಕೆ ಬೆಳಗಾವಿ ನಗರ ಜನರ ಭಯ ಭೀತಿ ದೂರವಾಗಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಸೆರೆಹಿಡಿಯುವ ನಿರತಂತರ ಪ್ರಯತ್ನದಲ್ಲಿ ತೊಡಗಿದ್ದಾರೆ. ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷಗೊಂಡು ಇಂದಿಗೆ 24 ದಿನಗಳಾಗಿವೆ. ಮೈದಾನದಲ್ಲಿ ಓಡಾಡಿ ಕಾಣೆಯಾದ ಚಿರತೆ ಇದುವರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳ ಕಣ್ಣಿಗೆ ಬಿದ್ದಿಲ್ಲ. ನಿರಂತರ ಕಾರ್ಯಾಚರಣೆ ಕೈಗೊಳ್ಳುತ್ತಿರುವ ಸಿಬ್ಬಂದಿಗಳು ಇದೀಗ ಮಾಸ್ಟರ್ ಪ್ಲಾನ್​ನೊಂದಿಗೆ ಸೆರೆ ಹಿಡಿಯುವ ಪ್ರಯತ್ನವನ್ನು ನಡೆಸಲಿದ್ದಾರೆ.

ಬಲೆ ಹಾಕಿ ಕಾದು ಕುಳಿತ ಸಿಬ್ಬಂದಿ:

ಅರಣ್ಯ ಇಲಾಖೆ ಸಿಬ್ಬಂದಿಗಳು ಏಕಕಾಲದಲ್ಲಿ ಕೋಬಿಂಗ್ ಕಾರ್ಯಾಚರಣೆ ಆರಂಭಿಸಲಿದ್ದಾರೆ. ಕೋಬಿಂಗ್ ಕಾರ್ಯಾಚರಣೆ ಎಂದರೆ ಬಲೆ ಹಾಕಿ ಕಾರ್ಯಾಚರಣೆ ನಡೆಸುವುದಾಗಿದೆ. ಅಂದರೆ, ಒಂದು ಕಡೆಯಲ್ಲಿ ಬಲೆಯನ್ನು ಹಾಕಿ ಇನ್ನೊಂದು ಕಡೆಯಿಂದ ಸಿಬ್ಬಂದಿಗಳು ಕಾರ್ಯಾಚರಣೆ ಆರಂಭಿಸಿ ಚಿರತೆಯನ್ನು ಬಲೆಗೆ ಹಾಕುವ ಪ್ಲಾನ್​ನ್ನು ರೂಪಿಸಿಕೊಂಡಿದ್ದಾರೆ. ಈಗಾಗಲೇ ಗಾಲ್ಫ್ ಮೈದಾನದ ತಡೆಗೋಡೆ ಸುತ್ತ ಸುಮಾರು ಮೂರು ಕಿ.ಮೀ. ವರೆಗೆ ಬಲೆಯನ್ನು ಹಾಕಲಾಗಿದೆ. ಹನುಮಾನ್ ನಗರ, ಜಾಧವ್ ನಗರ ಭಾಗದ ಕಡೆಗಳಲ್ಲಿ ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯುವ ಬಲೆ ಹಾಕಿದ್ದಾರೆ.

ಇದನ್ನೂ ಓದಿ: ಯಾರಪ್ಪಂದೇನ್ ಐತಿ ಬೆಳಗಾವಿ ನಂದೈತಿ, ಸಾಮಾಜಿಕ ಜಾಲತಾಣದಲ್ಲಿ ಚಿರತೆ ಫೋಟೋ ಹಾಕಿ ವ್ಯಂಗ್ಯ

ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ:

ಚಿರತೆ ಕುರಿತು ವಿಭಿನ್ನ ರೀತಿಯಲ್ಲಿ ಪೋಸ್ಟ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಮಾಡಲಾಗುತ್ತಿದೆ. ಚಿರತೆ ಪೋಟೊ ಹಾಕಿ ಚಿರತೆ ಹೆಸರಲ್ಲಿ ಆಧಾರ ಕಾರ್ಡ್ ರೆಡಿ ಮಾಡಿ ತಮಾಷೆ ಮಾಡಲಾಗಿದೆ. ಬಿಬತ್ಯಾ ಬೇಲ್ಗಾಂವ್‌ಕರ್ ಅಂತಾ ಚಿರತೆಗೆ ಹೆಸರು ಹಾಕಿ ಆಧಾರ್ ಕಾರ್ಡ್ ವೈರಲ್ ಮಾಡಲಾಗಿದೆ. ಎಷ್ಟು ಬೇಕಾದಷ್ಟು ಪ್ರಯತ್ನ ಮಾಡಿ ನಾನು ಗಣಪತಿ ಹಬ್ಬ ಮುಗಿಸಿಕೊಂಡು ಹೋಗುತ್ತೇನೆ. ಯಾರಪ್ಪಂದೇನ್ ಐತಿ ಬೆಳಗಾವಿ ನಂದೈತಿ ಬೆಳಗಾವಿ ಬಿಟ್ಟು ಹೋಗಲ್ಲ. ನಾನೇ ಆತಂಕವಾದಿನಾ ನನ್ನ ಹಿಡಿಯಲು ಆನೆ, ನಾಯಿ, ಪೊಲೀಸರು ಬಂದಿದ್ದೀರಿ, ಹೀಗೆ ಹಲವು ರೀತಿಯಲ್ಲಿ ಚಿರತೆ ಪೋಟೊ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೈರಲ್ ಮಾಡಿ, ವ್ಯಂಗ್ಯ ಮಾಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:33 am, Sun, 28 August 22