ಬೆಳಗಾವಿಯಲ್ಲಿ ಮಸೀದಿ ಪಾಲಿಟಿಕ್ಸ್: ಮನೆಯನ್ನೇ ಮಸೀದಿಯಾಗಿ ನಿರ್ಮಿಸಿಕೊಂಡ ಆರೋಪ, ಎಲ್ಲೆಡೆ ಆಕ್ರೋಶ

ಬೆಳಗಾವಿಯ ಸಾರಥಿ ನಗರದಲ್ಲಿದ್ದ ಮನೆಯನ್ನೇ ಫಾತೀಮಾ ಮಸೀದಿಯಾಗಿ ನಿರ್ಮಾಣ ಮಾಡಿ ವಕ್ಫ್​ ಬೋರ್ಡ್​ಗೆ ಹಸ್ತಾಂತರ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಬೆಳಗಾವಿಯಲ್ಲಿ ಮಸೀದಿ ಪಾಲಿಟಿಕ್ಸ್: ಮನೆಯನ್ನೇ ಮಸೀದಿಯಾಗಿ ನಿರ್ಮಿಸಿಕೊಂಡ ಆರೋಪ, ಎಲ್ಲೆಡೆ ಆಕ್ರೋಶ
ಫಾತೀಮಾ ಮಸೀದಿ
Edited By: ಆಯೇಷಾ ಬಾನು

Updated on: Jan 10, 2023 | 9:28 AM

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗಿಫ್ಟ್ ಆಯ್ತು, ಆಣೆ ಪ್ರಮಾಣ ಆಯ್ತು‌ ಈಗ ಮಸೀದಿ ಪಾಲಿಟಿಕ್ಸ್ ಸದ್ದು ಹೇಳಿ ಬರುತ್ತಿದೆ. ಮನೆಯನ್ನೇ ಅಕ್ರಮವಾಗಿ ಮಸೀದಿ ನಿರ್ಮಾಣ ಆರೋಪ ಕೇಳಿ ಬಂದಿದ್ದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಸೀದಿ ವಿವಾದ ಭುಗಿಲೆದ್ದಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ ಮತ ಕ್ಷೇತ್ರದಲ್ಲಿ ಮಸೀದಿ ತೆರವಿಗೆ ಹೋರಾಟ ಆರಂಭವಾಗಿದೆ.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಕಂಟಕವಾಗುತ್ತಾ ಮಸೀದಿ ನಿರ್ಮಾಣ

ಬೆಳಗಾವಿಯ ಸಾರಥಿ ನಗರದಲ್ಲಿದ್ದ ಮನೆಯನ್ನೇ ಫಾತೀಮಾ ಮಸೀದಿಯಾಗಿ ನಿರ್ಮಾಣ ಮಾಡಿ ವಕ್ಫ್​ ಬೋರ್ಡ್​ಗೆ ಹಸ್ತಾಂತರ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಮಸೀದಿ ತೆರವಿಗೆ ಬಿಜೆಪಿ ನಾಯಕರು, ಹಿಂದು ಸಂಘಟನೆಗಳ ನಾಯಕರು ಸ್ಥಳೀಯ ನಿವಾಸಿಗಳ ಜೊತೆಗೆ ಮಹತ್ವದ ಸಭೆ ನಡೆಸಿ ಮಸೀದಿ ತೆರವಿಗೆ ಹೋರಾಟ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: Gift Politics: ಬೆಳಗಾವಿಯಲ್ಲಿ ಅತ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಕುಕ್ಕರ್ ಪಾಲಿಟಿಕ್ಸ್, ಹುಬ್ಬಳ್ಳಿಯಲ್ಲಿ ಅಳಿಯನಿಂದ ದೋಸೆ ಹಂಚು, ಅಡುಗೆ ಪಾತ್ರೆ, ಶರ್ಟ್ ಗಿಫ್ಟ್

ನಿನ್ನೆ ರಾತ್ರಿ ಮಾಜಿ ಶಾಸಕ ಸಂಜಯ ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಡಳಿತ, ಪಾಲಿಕೆ ಅಧಿಕಾರಿಗಳಿಗೆ ಮಸೀದಿ ತೆರವಿಗೆ ಆಗ್ರಹಿಸಲಾಗಿದೆ. ಚಾಲಕರ ರಹವಾಸಿಗಳ ಸಂಘದಿಂದ ವಸತಿಗಾಗಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಆದ್ರೆ ವಸತಿ ಯೋಜನೆಗೆ ಮೀಸಲಿದ್ದ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಅಕ್ರಮವಾಗಿ ನಿರ್ಮಿಸಿರುವ ಮಸೀದಿ ತೆರವಿಗೆ ಪಟ್ಟು ಹಿಡಿದಿದ್ದಾರೆ. ಬೆಳಗಾವಿ ಜಿಲ್ಲಾಡಳಿತ, ಪಾಲಿಕೆ ಕಮೀಷನರ್ ಮೇಲೆ ಸ್ಥಳೀಯ ಶಾಸಕಿ ಹೆಬ್ಬಾಳ್ಕರ್ ಒತ್ತಡ ಹಾಕಿರುವ ಆರೋಪವಿದ್ದು, ಕಳೆದ ಒಂದು ವರ್ಷದಿಂದ ಮನವಿ ಸಲ್ಲಿಸಿದ್ರು ಈ ಬಗ್ಗೆ ಮಹಾನಗರ ಪಾಲಿಕೆ ಕ್ರಮ ಜರುಗಿಸಿಲ್ಲ ಎನ್ನಲಾಗುತ್ತಿದೆ.

ಮಸೀದಿ ತೆರವಿಗೆ 1 ವಾರ ಗಡುವು ನೀಡಿರುವ ಶ್ರೀರಾಮಸೇನೆ

ಕಾನೂನಿನ ಪ್ರಕಾರ ಮಸೀದಿ ನಿರ್ಮಿಸಿಕೊಳ್ಳಲಿ ಆದ್ರೆ ಮನೆಯನ್ನೇ ಮಸೀದಿ ಮಾಡಿರುವುದನ್ನ ಒಪ್ಪಲ್ಲ. ಹೀಗಾಗಿ ಮಸೀದಿ ತೆರವಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ. ಇಂದು ಮಸೀದಿ ತೆರವಿಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪಾಲಿಕೆ ಆಯುಕ್ತರಿಗೆ ಮನವಿ‌ ಸಲ್ಲಿಸಲಿದ್ದಾರೆ. ಸಾರಥಿ ನಗರದಲ್ಲಿ ಈಗ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಒಂದು ವಾರದ ಒಳಗೆ ಮಸೀದಿ ತೆರವಿಗೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗಡುವು ನೀಡಿದ್ದಾರೆ.

ಸರ್ಕಾರಿ ವಾಹನ ಚಾಲಕರ ಕೇಂದ್ರ ಸಂಘದ ವತಿಯಿಂದ ಖಾಸಗಿ ಲೇಔಟ್‌ನಲ್ಲಿ ಇದ್ದ ನಿವೇಶನ ಸಂಖ್ಯೆ 19ನ್ನು ಮೂಲ ಮಾಲೀಕರು ಮೌಲಾನಾ ಅಬ್ದುಲ್ ಕಲಂ ಆಜಾದ್ ಎಜ್ಯುಕೇಶನಲ್ & ಚಾರಿಟೇಬಲ್ ಸೊಸೈಟಿಗೆ ಗಿಫ್ಟ್ ನೀಡಿದ್ದರು. ಈ ನಿವೇಶನದಲ್ಲಿ ಅನಧಿಕೃತವಾಗಿ ಫಾತೀಮಾ ಮಸೀದಿ ನಿರ್ಮಾಣ ಆರೋಪ ಕೇಳಿ ಬಂದಿದೆ. ಮಸೀದಿ ತೆರವಿಗೆ 2022ರ ಜನವರಿ 17ರಂದು ಮಹಾನಗರ ಪಾಲಿಕೆಗೆ ನಿವಾಸಿಗಳು ಮನವಿ ಸಲ್ಲಿಸಿದ್ದರು. ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಈ ಸಂಬಂಧ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು. ಬಳಿಕ ಮಹಾನಗರ ಪಾಲಿಕೆಯಿಂದ ನೀಡಿರುವ ಕಟ್ಟಡ ಪರವಾನಿಗೆ ಉಲ್ಲಂಘನೆ ಆರೋಪ, ವಸತಿ ಉದ್ದೇಶಿತ ನಿವೇಶನದಲ್ಲಿ ಭೂಬಳಕೆ ಮಾರ್ಗಸೂಚಿ ಉಲ್ಲಂಘನೆ ಆರೋಪ, ವಸತಿ ಕಟ್ಟಡದಲ್ಲಿ ಧಾರ್ಮಿಕ ಚಟುವಟಿಕೆ ನಡೆಸುತ್ತಿರುವ ಹಿನ್ನೆಲೆ 7 ದಿನಗಳೊಳಗೆ ಮಸೀದಿ ತೆರವಿಗೆ ಮಹಾನಗರ ಪಾಲಿಕೆ ಆಯುಕ್ತ ತಾತ್ಕಾಲಿಕ ಆದೇಶ ಹೊರಡಿಸಿದ್ದರು. ಬಳಿಕ ಈ ನಿವೇಶನ ವಕ್ಫ್ ಬೋರ್ಡ್ ಆಸ್ತಿ ಎಂದು ಮುಸ್ಲಿಂ ಮುಖಂಡರು ವಾದ ಮಾಡಿದರು. ಆದರೆ ವಸತಿ ನಿವೇಶನ ನಿಯಮ ಬಾಹಿರವಾಗಿ ವಕ್ಫ್ ಬೋರ್ಡ್‌ಗೆ ವರ್ಗಾವಣೆ ಆರೋಪ ಕೇಳಿ ಬಂದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:17 am, Tue, 10 January 23

Web contact

TV9 Kannada

Read More
Follow Us