ಮಗಳ ಮನೆ ಹಾಳು ಕೃತ್ಯ: ಮರ್ಯಾದೆಗೆ ಹೆದರಿ ದುರಂತ ಅಂತ್ಯ ಕಂಡ ತಾಯಿ!

ಎರಡು ಕೋಟಿ ರೂ ವಿಮೆ ಹಣಕ್ಕಾಗಿ ಪತ್ನಿಯಿಂದ ಮಾಜಿ ಸೈನಿಕರ ಹತ್ಯೆ ಇಡೀ ಬೆಳಗಾವಿಯನ್ನು ಬೆಚ್ಚಿ ಬೀಳಿಸಿದ ಪ್ರಕರಣ. ಈ ಮರ್ಡರ್ ಮಿಸ್ಟ್ರಿ ಸೂತ್ರಧಾರಿ ಸುಮಾ ತಾಯಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಪುತ್ರಿ ದುಷ್ಕೃತ್ಯದಿಂದ ಊರಿನಲ್ಲಿ ತಲೆ ಎತ್ತಿ ಓಡಾಡದ ಸ್ಥಿತಿ ಹಿನ್ನೆಲೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಮಗಳ ಮನೆ ಹಾಳು ಕೃತ್ಯ: ಮರ್ಯಾದೆಗೆ ಹೆದರಿ ದುರಂತ ಅಂತ್ಯ ಕಂಡ ತಾಯಿ!
ತಾಯಿ ಮಹದೇವಿ ಬದಾಮಿ, ಮಗಳು ಸುಮಾ
Image Credit source: tv9 kannada
Edited By:

Updated on: Jun 20, 2026 | 10:45 PM

ಬೆಳಗಾವಿ, ಜೂನ್​ 20: ಎರಡು ಕೋಟಿ ರೂ ವಿಮೆ ಹಣಕ್ಕಾಗಿ ಪ್ರಿಯಕರೊಂದಿಗೆ ಸೇರಿ ಪತ್ನಿ ಸುಮಾ ಗಂಡನ ಕೊಲೆ ಪ್ರಕರಣ ಇಡೀ ಬೆಳಗಾವಿಯನ್ನು (belagavi) ಬೆಚ್ಚಿಬೀಳಿಸಿದೆ. ಕೊಲೆಯಾದ ಮೂರು ತಿಂಗಳ ಬಳಿಕ ಮರ್ಡರ್ ಮಿಸ್ಟ್ರಿ ಹೊರ ಬಂದಿತ್ತು. ಒಬ್ಬರಲ್ಲಾ ಇಬ್ಬರಲ್ಲಾ ಬರೋಬ್ಬರಿ 9 ಜನ ಕೊಲೆ ಕೇಸ್​ನಲ್ಲಿ ಹಿಂಡಲಗಾ ಜೈಲು ಸೇರಿದ್ದಾರೆ. ಆದರೆ ಇತ್ತ ಮಗಳು ಮಾಡಿದ ಕೃತ್ಯಕ್ಕೆ 57 ವರ್ಷದ ತಾಯಿ ಸಾವಿಗೆ (death) ಶರಣಾಗಿದ್ದಾರೆ.

ಮುಖ್ಯಾಂಶಗಳು

  • 2 ಕೋಟಿ ವಿಮೆ ಹಣಕ್ಕಾಗಿ ಪತ್ನಿಯಿಂದ ಮಾಜಿ ಸೈನಿಕರ ಹತ್ಯೆ ಕೇಸ್​​
  • ಮಗಳ ಕೃತ್ಯಕ್ಕೆ ತಾಯಿ ನೇಣಿಗೆ ಶರಣು
  • ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ನಿವಾಸಿ ಸುಮಾ ತಾಯಿ ಮಹಾದೇವಿ ಬದಾಮಿ ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಸೀರೆಯಿಂದ ಪ್ಯಾನ್​ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಪಕ್ಕದ ಮನೆಯವರು ಬಂದು ನೋಡಿದಾಗ ಸಾವಿನ ವಿಚಾರ ಬೆಳಕಿಗೆ ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಯಮಕನಮರಡಿ ಠಾಣೆ ಪೊಲೀಸರು ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಮಾಜಿ ಸೈನಿಕನ ಮರ್ಡರ್ ಮಿಸ್ಟ್ರಿ: FSL​​ ವರದಿಯನ್ನೇ ತಿರುಚಿದ್ರು, ಸುಪನಾತಿ ಸುಮಾಳ ಅಸಲಿಯತ್ತು ಬಯಲು

ಇತ್ತ ಶವವನ್ನ ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಮಹಾದೇವಿ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಸಂಬಂಧಿಕರು, ಗ್ರಾಮಸ್ಥರು ಮನೆಯತ್ತ ದೌಡಾಯಿಸಿ ಅದೊಬ್ಬಳಿಗೆ ಹಿಡಿಶಾಪ ಹಾಕಿ ಹೋಗುತ್ತಿದ್ದರು. ಇಳಿ ವಯಸ್ಸಿನಲ್ಲಿ ನೆಮ್ಮದಿಯಿಂದ ಇರಬೇಕಿದ್ದ ತಾಯಿಯ ನೆಮ್ಮದಿಯನ್ನ ಮಗಳು ಕಸಿದುಕೊಂಡು ಹೋದಳು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಯಿ ಸಾವಿಗೆ ಮಗಳೇ ಕಾರಣ

ತಾಯಿ ಮಹಾದೇವಿ ಸಾವಿಗೆ ಮಗಳು ಸುಮಾ ಕಾರಣ. ಮಾಡಬಾರದ ಕೆಲಸ ಮಾಡಿದ್ದ ಮಗಳಿಂದ ಊರಲ್ಲಿ ತಲೆ ಎತ್ತಿ ಓಡಾಡಲು ಆಗದೆ, ಈ ರೀತಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಮೂರು ತಿಂಗಳ ಹಿಂದೆ ಎರಡು ಕೋಟಿ ರೂ ವಿಮೆ ಹಣಕ್ಕಾಗಿ ಗಂಡನಿಗೆ ಖಾಸಗಿ ಆಸ್ಪತ್ರೆಯಲ್ಲಿ ಸಲಾಯಿನ್ ಬಾಟಲ್​ನಲ್ಲಿ ವಿಷ ಹಾಕಿ ಪ್ರಿಯಕರ ಪುಂಡಲೀಕ ಜೊತೆಗೆ ಸೇರಿಕೊಂಡು ಕೊಲೆ‌ ಮಾಡಿದ್ದಳು. ಇದಾದ ಬಳಿಕ ಎಫ್‌ಎಸ್‌ಎಲ್ ಅಧಿಕಾರಿಗಳನ್ನ ಹಿಡಿದುಕೊಂಡು ಅವರ ಮೂಲಕ ಹಾರ್ಟ್ ಅಟ್ಯಾಕ್​ನಿಂದ ಸಾವಾಗಿದೆ ಎಂದು ವರದಿಯನ್ನ ತಿರುಚಿಸಿ ಕೊಲೆ ಕೇಸ್ ಮುಚ್ಚಿ ಹಾಕಿಸಿದ್ದಳು.

ಎಲ್ಲವೂ ಮುಗಿದು ಹೋಯ್ತು ಅಂದಾಗ ಹಣಕ್ಕಾಗಿ ಪ್ರಿಯಕರ ಪುಂಡಲೀಕ ಮತ್ತು ಸುಮಾ ನಡುವೆ ಗಲಾಟೆಯಾಗಿ ಕೊಲೆ ವಿಚಾರ ಹೊರಗೆ ಬಂದಿತ್ತು. ಬಳಿಕ ಯಮಕನಮರಡಿ ಪೊಲೀಸರು ಕೇಸ್ ದಾಖಲಿಸಿಕೊಂಡು ಒಂಬತ್ತು ಜನ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದರು.

ಇದನ್ನೂ ಓದಿ: ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್​: 2 ಕೋಟಿ ಹಣಕ್ಕಾಗಿ ಚಟ್ಟ, FSL ವರದಿಯನ್ನೇ ಬದಲಿಸಿದ್ದ ಖತರ್ನಾಕ್ ಗ್ಯಾಂಗ್

ಈ ಮರ್ಡರ್ ಮಿಸ್ಟ್ರಿ ಬೆಳಗಾವಿ ಜಿಲ್ಲೆಯ ಜನ ಬೆಚ್ಚಿ ಬೀಳುವಂತೆ ಮಾಡಿತ್ತು. ಇತ್ತ ಮಗಳು ಮಾಡಿದ ಕೃತ್ಯಕ್ಕೆ ತಲೆ ಎತ್ತಿ ಓಡಾಡಲು ಆಗದ ತಾಯಿ ಕೂಡ ಇದೀಗ ಸಾವಿನ ಮನೆ ಸೇರಿದ್ದಾರೆ. ಘಟನೆಯಲ್ಲಿ ಇನ್ನು ಹಲವಾರು ಭಾಗಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಇತ್ತ ಹಣಕ್ಕಾಗಿ ಪತ್ನಿ ಗಂಡನ ಬಲಿ ಪಡೆದರೆ, ಅತ್ತ ಮಾನಕ್ಕೆ ಹೆದರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದು ದುರಂತವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us