ಬೆಳಗಾವಿ ನಗರದಲ್ಲಿ ಹೃದಯವಿದ್ರಾವಕ ಘಟನೆ: ರಾತ್ರಿ ಮಲಗಿದ್ದ ವೇಳೆ ವಿಷಜಂತು ಕಚ್ಚಿ ಪತಿ ಸಾವು, ಪತ್ನಿ ಚಿಂತಾಜನಕ.. 3 ಪುಟ್ಟ ಮಕ್ಕಳು ಅನಾಥ

Poisonous insect bite: ಬದುಕು ಕಟ್ಟಿಕೊಳ್ಳಲು ಬೆಳಗಾವಿಗೆ ಆಗಮಿಸಿ ವಾಚ್​ಮನ್​ ಆಗಿ ಜೀವನ ಸಾಗಿಸುತ್ತಿದ್ದ ಸಿದ್ದಪ್ಪ ವಿಷಜಂತು ಕಚ್ಚಿ ಸಾವನ್ನಪ್ಪಿದ್ರೆ, ಪತ್ನಿ ನಾಗವ್ವ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ದಂಪತಿಗೆ 3 ಪುಟ್ಟ ಪುಟ್ಟ ಮಕ್ಕಳಿದ್ದು ಸರ್ಕಾರ ಅವರ ನೆರವಿಗೆ ಧಾವಿಸಲಿ ಎಂಬುದು ಸಾರ್ವಜನಿಕರ ಆಶಯ.

ಬೆಳಗಾವಿ ನಗರದಲ್ಲಿ ಹೃದಯವಿದ್ರಾವಕ ಘಟನೆ: ರಾತ್ರಿ ಮಲಗಿದ್ದ ವೇಳೆ ವಿಷಜಂತು ಕಚ್ಚಿ ಪತಿ ಸಾವು, ಪತ್ನಿ ಚಿಂತಾಜನಕ.. 3 ಪುಟ್ಟ ಮಕ್ಕಳು ಅನಾಥ
ಬೆಳಗಾವಿ ನಗರದಲ್ಲಿ ಹೃದಯವಿದ್ರಾವಕ ಘಟನೆ
Follow us
| Updated By: ಸಾಧು ಶ್ರೀನಾಥ್​

Updated on: Jun 12, 2023 | 8:30 AM

ಆ ದಂಪತಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಇದ್ದ ಊರನ್ನು ಬಿಟ್ಟು ನಗರಕ್ಕೆ ಬಂದು ನೆಲೆಸಿದ್ದರು. ನಿರ್ಮಾಣ ಹಂತದ ಕಟ್ಟಡದ ವಾಚ್​ಮನ್ (Watchman)​ ಆಗಿ ಪತಿ ಕೆಲಸ ಮಾಡುತ್ತಿದ್ರೆ ಪತ್ನಿ ಪತಿಗೆ ಸಹಾಯ ಮಾಡುತ್ತಿದ್ದಳು. ತಾಯಿ, ಪತ್ನಿ ಮೂವರು ಮಕ್ಕಳ ಜೊತೆ ಪುಟ್ಟ ಶೆಡ್​ವೊಂದರಲ್ಲಿ ವಾಸವಿದ್ದ ಆತ ಚಿರನಿದ್ರೆಗೆ ಜಾರಿದ್ರೆ (Death), ಪತ್ನಿ (Wife) ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾಳೆ. ಮೂವರು ಮಕ್ಕಳಿಗೆ ತಮ್ಮ ತಂದೆ ತಾಯಿಗೆ ಏನಾಗಿದೆ ಎಂಬುದೇ ಗೊತ್ತಿಲ್ಲ. ಮಗನ ಕಳೆದುಕೊಂಡ ಅಜ್ಜಿ ಕಣ್ಣೀರುಡುತ್ತಿದ್ದಾರೆ. ಅಷ್ಟಕ್ಕೂ ಆ ದಂಪತಿಗೆ ಆಗಿದ್ದೇನು ಅಂತೀರಾ.. ಈ ಸ್ಟೋರಿ ನೋಡಿ… ನಿರ್ಮಾಣ ಹಂತದ ಕಟ್ಟಡದ ಬಳಿ ಇರುವ ಪುಟ್ಟದಾದ ಶೆಡ್.. ಬೆಳಗಾವಿಯ (Belagavi) ಬಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ತಂದೆಯ ಮೃತದೇಹ… ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ತಾಯಿ.. ಏನೂ ಅರಿಯದೇ ಆಟವಾಡುತ್ತ ಕುಳಿತಿರುವ ಮೂವರು ಮಕ್ಕಳು… ಮಕ್ಕಳನ್ನು ವಾಹನದಲ್ಲಿ ಕರೆದುಕೊಂಡು ಹೋಗುತ್ತಿರುವ ಸಂಬಂಧಿಕರು… ಮಗನ ಕಳೆದುಕೊಂಡು ಕಣ್ಣೀರಿಡುತ್ತಿರುವ ತಾಯಿ.. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕುಂದಾನಗರಿ ಬೆಳಗಾವಿಯಲ್ಲಿ..

ಫೋಟೋದಲ್ಲಿ ಇರುವ ವ್ಯಕ್ತಿಯ ಹೆಸರು ಸಿದ್ದಪ್ಪ ಚಿವಟಗುಂಡಿ ಅಂತಾ.. ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಸಾಣಿಕೊಪ್ಪ ಗ್ರಾಮದ ನಿವಾಸಿಯಾಗಿದ್ದ ಈತ ತಾಯಿ, ಪತ್ನಿ, ಮೂವರು ಮಕ್ಕಳ ಜೊತೆ ಕೆಲಸ ಅರಿಸಿ ಬೆಳಗಾವಿ ನಗರಕ್ಕೆ ಬಂದು ನೆಲೆಸಿದ್ದ. ಅನ್ನಪೂರ್ಣೇಶ್ವರಿ ನಗರದ ನಿರ್ಮಾಣ ಹಂತದ ಕಟ್ಟಡದ ಬಳಿ ಶೆಡ್​ವೊಂದನ್ನು ಮಾಡಿಕೊಂಡು ಅಲ್ಲಿಯೇ ವಾಚ್​ಮನ್​ ಆಗಿ ಕೆಲಸ ಮಾಡುತ್ತಿದ್ದ.

ಎಂದಿನಂತೆ ಕೆಲಸ ಮುಗಿಸಿ ರಾತ್ರಿ ವೇಳೆ ತಾಯಿ, ಪತ್ನಿ, ಮೂವರು ಮಕ್ಕಳ ಜೊತೆ ಊಟ ಮಾಡಿ ಶೆಡ್​ನಲ್ಲಿ ಪ್ರತ್ಯೇಕವಾಗಿ ಪತ್ನಿ ಜೊತೆ ಮಲಗಿದ್ದಾನೆ. ಈ ವೇಳೆ ಏನೋ ಹುಳ ಕಚ್ಚಿದ ಹಾಗೆ ಅನುಭವ ಆಗಿದೆ. ಇದನ್ನ ತಾಯಿ ತಿಪ್ಪವ್ವ ಬಳಿ ಹೇಳಿ ಮಲಗಲು ಹೋಗಿದ್ದಾನೆ. ಕೆಲ ಸಮಯದ ಬಳಿಕ ಮಗ ಒದ್ದಾಡೋದನ್ನು ಕಂಡು ತಾಯಿ ತಿಪ್ಪವ್ವ ಮನೆಯಿಂದ ಹೊರಬಂದು ಮತ್ತೋರ್ವ ವಾಚ್​ಮನ್​ಗೆ ವಿಷಯ ಮುಟ್ಟಿಸಿ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಬಳಿಕ ಸ್ಥಳೀಯರು ಸೇರಿ ಆ್ಯಂಬುಲೆನ್ಸ್ ಗೆ ಕರೆ ಮಾಡಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಇಬ್ಬರನ್ನೂ ರವಾನಿಸಿದ್ದಾರೆ. ಬಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸಿದ್ದಪ್ಪ ಚಿವಟಗುಂಡಿ ಪ್ರಾಣಪಕ್ಷಿ ಹಾರಿಹೋಗಿತ್ತು. ಪತ್ನಿ ನಾಗವ್ವ ಚಿವಟಗುಂಡಿ ಸ್ಥಿತಿ ಚಿಂತಾಜನಕವಾಗಿದ್ದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.

ಇನ್ನು ತಂದೆ ಮೃತಪಟ್ಟಿದ್ದು ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಬಗ್ಗೆ ಈ ಮೂವರು ಮುಗ್ಧ ಮಕ್ಕಳಿಗೆ ಗೊತ್ತೇ ಇಲ್ಲ. ವಿಷಯ ತಿಳಿಯುತ್ತಿದ್ದಂತೆ ರಾತ್ರಿಯೇ ಸಿದ್ದಪ್ಪ ಚಿವಟಗುಂಡಿ ಸಹೋದರ, ಅತ್ತಿಗೆ ಸಂಬಂಧಿಕರು ಬೆಳಗಾವಿಗೆ ದೌಡಾಯಿಸಿದ್ದಾರೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಸಿದ್ದಪ್ಪ ಮರಣೋತ್ತರ ಪರೀಕ್ಷೆ ಬಳಿಕ ಹುಟ್ಟೂರು ಸಾಣಿಕೊಪ್ಪಕ್ಕೆ ಮೃತದೇಹ ತಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ತೀವ್ರ ಅಸ್ವಸ್ಥಗೊಂಡಿರುವ ನಾಗವ್ವ ಚಿವಟಗುಂಡಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಎಂಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನು ಈ ದಂಪತಿಗೆ ರಾತ್ರಿ ವೇಳೆ ಹಾವು ಕಚ್ಚಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಅಸ್ವಸ್ಥ ನಾಗವ್ವ ಚಿವಟಗುಂಡಿ ಮೈ ಮೇಲೆ ಯಾವುದೇ ರೀತಿಯ ಹಾವು ಕಚ್ಚಿದ ಗುರುತು ಇಲ್ಲ ಎಂದು ವೈದ್ಯರ ತಪಾಸಣೆ ವೇಳೆ ತಿಳಿದು ಬಂದಿದೆ.

ಆದರೆ ಯಾವುದೋ ವಿಷಜಂತು ಕಚ್ಚಿದ ರೀತಿಯ ಲಕ್ಷಣಗಳಿದ್ದು ನಾಗವ್ವಗೆ ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ವೆಂಟಿಲೇಟರ್​ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಅಸ್ವಸ್ಥಗೊಂಡಿರುವ ನಾಗವ್ವ ಬದುಕುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು, ಓರ್ವ ಗಂಡು ಮಗು ಇದ್ದು ಅವರ ವಿದ್ಯಾಭ್ಯಾಸ, ಜೀವನೋಪಾಯಕ್ಕೆ ಸರ್ಕಾರ ಸೂಕ್ತ ನೆರವು ನೀಡಿ ಸಹಾಯಕ್ಕೆ ಬರಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅದೇನೇ ಇರಲಿ ಬದುಕು ಕಟ್ಟಿಕೊಳ್ಳಲು ಬೆಳಗಾವಿಗೆ ಆಗಮಿಸಿ ವಾಚ್​ಮನ್​ ಆಗಿ ಜೀವನ ಸಾಗಿಸುತ್ತಿದ್ದ ಸಿದ್ದಪ್ಪ ವಿಷಜಂತು ಕಚ್ಚಿ ಸಾವನ್ನಪ್ಪಿದ್ರೆ, ಪತ್ನಿ ನಾಗವ್ವ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ದಂಪತಿಗೆ ಮೂವರು ಪುಟ್ಟ ಪುಟ್ಟ ಮಕ್ಕಳಿದ್ದು ಇವರ ವಿದ್ಯಾಭ್ಯಾಸ, ಜೀವನೋಪಾಯಕ್ಕಾಗಿ ಮುಗ್ಧ ಮಕ್ಕಳ ನೆರವಿಗೆ ಸರ್ಕಾರ ಧಾವಿಸಲಿ ಎಂಬುದು ಸಾರ್ವಜನಿಕರ ಆಶಯ.

ವರದಿ: ಮಹಾಂತೇಶ ಕುರಬೇಟ್, ಟಿವಿ9, ಬೆಳಗಾವಿ