AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ: ಸತೀಶ್ ಜಾರಕಿಹೊಳಿಗೆ ನೋಟಿಸ್, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸುರ್ಜೇವಾಲ ಸ್ಪಷ್ಟನೆ

ಕರ್ನಾಟಕ ಕಾಂಗ್ರೆಸ್​ನಲ್ಲಿನ ಆಂತರಿಕ ಸಂಘರ್ಷಗಳು ಮತ್ತು ವದಂತಿಗಳ ಬಗ್ಗೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬೆಳಗಾವಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸತೀಶ್ ಜಾರಕಿಹೊಳಿಗೆ ನೋಟಿಸ್, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವದಂತಿಗಳ ಬಗ್ಗೆಯೂ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಅವರು ನೀಡಿರುವ ಹೇಳಿಕೆಯ ವಿವರಗಳು ಇಲ್ಲಿವೆ.

ಬೆಳಗಾವಿ: ಸತೀಶ್ ಜಾರಕಿಹೊಳಿಗೆ ನೋಟಿಸ್, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸುರ್ಜೇವಾಲ ಸ್ಪಷ್ಟನೆ
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (ಸಂಗ್ರಹ ಚಿತ್ರ)
Sahadev Mane
| Updated By: Ganapathi Sharma|

Updated on:Jan 17, 2025 | 10:31 AM

Share

ಬೆಳಗಾವಿ, ಜನವರಿ 17: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಂಬಂಧ ನೀಡಿರುವ ಹೇಳಿಕೆಗಳಿಗೆ ಸಂಬಂಧಿಸಿ ಸಚಿವ ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ಹೈಕಮಾಂಡ್ ನೋಟಿಸ್ ನೀಡಿದೆ ಎಂಬ ವದಂತಿಗಳನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅಲ್ಲಗಳೆದಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಮಾತನಾಡಿದ ಅವರು, ನೋಟಿಸ್ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾರು ಈ ರೀತಿ ವದಂತಿಗಳನ್ನೆಲ್ಲ ಹಬ್ಬಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಯಾವ ಸಚಿವರಿಗೂ ಯಾವ ನಾಯಕರಿಗೂ ನೋಟಿಸ್ ನೀಡಲು ಯಾವುದೇ ಕಾರಣವಿಲ್ಲ ಎಂದರು.

ಅಲ್ಲದೆ, ಕಾಂಗ್ರೆಸ್ ಆಂತರಿಕ ಸಂಘರ್ಷ ಸಂಬಂಧಿತ ವದಂತಿಗಳನ್ನು ಬಿಜೆಪಿ ನಾಯಕರು ಹರಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಬಿಜೆಪಿ ಪ್ರಾಯೋಜಿತ ಆಧಾರರಹಿತ ಮಾತುಗಳ ಮೇಲೆ ವಿಶ್ವಾಸವಿಡಬೇಡಿ ಎಂದೂ ಮನವಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರ ಬದಲಾವಣೆ ಮಾಡುತ್ತಿದ್ದರೆ ಇಲ್ಲೇಕೆ ಬರುತ್ತಿದ್ದರು ಎಂದು ಮರು ಪ್ರಶ್ನಿಸಿದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಂಬಂಧ ಬಹಿರಂಗ ಹೇಳಿಕೆ ನೀಡಿದ್ದಕ್ಕೆ ಸತೀಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನೋಟಿಸ್ ನೀಡಿದೆ ಎಂಬ ವದಂತಿ ಗುರುವಾರ ಹರಡಿತ್ತು. ಇದೀಗ ಈ ವಿಚಾರವಾಗಿ ಖುದ್ದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯೇ ಸ್ಪಷ್ಟನೆ ನೀಡಿದ್ದಾರೆ.

ಇಂದು ಸತೀಶ್ ಜಾರಕಿಹೊಳಿ, ಸುರ್ಜೇವಾಲ ಪ್ರತ್ಯೇಕ ಭೇಟಿ

ಈ ಮಧ್ಯೆ, ಸತೀಶ್ ಜಾರಕಿಹೊಳಿ ಇಂದು ಸುರ್ಜೇವಾಲರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಗಾಂಧಿ ಭಾರತ ಸಮಾವೇಶದಲ್ಲಿ ಜಿಲ್ಲಾ ನಾಯಕರ ಕಡೆಗಣನೆ ವಿಚಾರವಾಗಿ ಮತ್ತು ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಅವರು ಸಮಾಲೋಚನೆ ನಡೆಸುವ ನಿರೀಕ್ಷೆ ಇದೆ.

ಗಾಂಧಿ ಭಾರತ ಪೂರ್ವಭಾವಿ ಸಭೆ

ಜನವರಿ 21 ರಿಂದ 2 ದಿನಗಳ ಕಾಲ ಬೆಳಗಾವಿಯವಲ್ಲಿ ನಡೆಯುವ ‘ಗಾಂಧಿ ಭಾರತ’ ಸಮಾವೇಶ ಪೂರ್ವಭಾವಿ ಸಭೆಗಾಗಿ ಸುರ್ಜೇವಾಲ ದೆಹಲಿಯಿಂದ ಬೆಳಗಾವಿಗೆ ಆಗಮಿಸಿದ್ದಾರೆ. ಎಐಸಿಸಿ ಸಮಾವೇಶದ ಪೂರ್ವ ಸಿದ್ಧತೆಯನ್ನು ಅವರು ಪರಿಶೀಲನೆ ನಡೆಸಲಿದ್ದಾರೆ.

ಮಹಾತ್ಮ ಗಾಂಧಿ ಅವರು ಬೆಳಗಾವಿ ಅಧಿವೇಶನದ ಅಧ್ಯಕ್ಷತೆ ವಹಿಸಿದ ನೂರನೇ ವರ್ಷಾಚರಣೆ ಅಂಗವಾಗಿ ಕಾಂಗ್ರೆಸ್ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಳೆದ ತಿಂಗಳು ನಡೆಯಬೇಕಿದ್ದ ಈ ಕಾರ್ಯಕ್ರಮ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನದ ಕಾರಣ ಮುಂದೂಡಿಕೆಯಾಗಿತ್ತು.

ಬಿಜೆಪಿಯಿಂದ ಸಂವಿಧಾನದ ಅಧಿಕಾರ ಬುಲ್ಡೋಜರ್ ಕೆಳಗೆ ತುಳಿಯುವ ಕೆಲಸ: ಸುರ್ಜೇವಾಲ

ಜನವರಿ 21ಕ್ಕೆ ಬೆಳಗಾವಿಯಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ ಮಾಡಿದ್ದೇವೆ. ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಕಾರ್ಯಕ್ರಮ ಮತ್ತೊಮ್ಮೆ ಆಯೋಜನೆಯಾಗಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಬರಲಿದ್ದಾರೆ. ದೇಶದ ಕಾಂಗ್ರೆಸ್ ನಾಯಕರು ಕಾರ್ಯಕ್ರಮಕ್ಕೆ ಬರಲಿದ್ದಾರೆ. ಸಂಸತ್​ನಲ್ಲಿ ಅಮಿತ್ ಶಾ ಅವರು ಬರೀ ಅಂಬೇಡ್ಕರ್ ಅವರ ಅಪಮಾನ ಮಾಡಿಲ್ಲ. ಬದಲಿಗೆ ಅಂಬೇಡ್ಕರ್ ವಿಚಾರಧಾರೆ ಪಾಲಿಸುವವರ ಗೇಲಿ ಮಾಡಿದ್ದಾರೆ. ಪದೇ ಪದೇ ಸಂವಿಧಾನ ಅವಮಾನಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಸಂವಿಧಾನದ ಅಧಿಕಾರವನ್ನು ಬುಲ್ಡೋಜರ್ ಕೆಳಗೆ ತುಳಿವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಸುರ್ಜೇವಾಲ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಬಜೆಟ್ ಅಧಿವೇಶನಕ್ಕೂ ಮುನ್ನ ಸಂಪುಟ ಪುನರ್​ರಚನೆ, ನಾಗೇಂದ್ರ ಮರು ಸೇರ್ಪಡೆಗೆ ಸಿದ್ದರಾಮಯ್ಯ ಒಲವು

ಬಾಪು, ಅಂಬೇಡ್ಕರ್ ವಿಚಾರಧಾರೆಗಳನ್ನು ಅನುಷ್ಠಾನ ಮಾಡಬೇಕು. ಈ ಕಾರಣಕ್ಕೆ ಬೆಳಗಾವಿಯಲ್ಲಿ ಗಾಂಧಿ ಸಮಾವೇಶ ಮಾಡುತ್ತಿದ್ದೇವೆ. ಅಂಬೇಡ್ಕರ್ ಜನ್ಮ ಭೂಮಿ ಮಧ್ಯಪ್ರದೇಶಲ್ಲಿ ಜನವರಿ 27ರಂದು ಕಾರ್ಯಕ್ರಮ ಮಾಡುತ್ತೇವೆ. ಬಡವರು, ಮಹಿಳೆಯರ ಹಕ್ಕು ಕಸಿದುಕೊಳ್ಳುವ ಕೃತ್ಯ ನಡೆಯುತ್ತಿದೆ. ಈ ಕಾರಣಕ್ಕೆ ಬೆಳಗಾವಿಯಿಂದ ಧ್ವನಿ ಎತ್ತುವ ಕೆಲಸ ಮಾಡುತ್ತೇವೆ. ಬೆಳಗಾವಿಯಿಂದಲೇ ರಾಜಕೀಯ ಹೊಸ ನೀತಿ, ದಿಕ್ಕು ಶುರುವಾಗಲಿದೆ ಎಂದು ಸುರ್ಜೇವಾಲ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:37 am, Fri, 17 January 25