ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ: ಐವಿ ಗ್ಲುಕೋಸ್​ನಲ್ಲಿ ಆಘಾತಕಾರಿ ಅಂಶ ಪತ್ತೆ

ವಿಮ್ಸ್ ಆಸ್ಪತ್ರೆಯಲ್ಲಿ ಒಬ್ಬರು, ಬಳ್ಳಾರಿಯ ಬಿಮ್ಸ್​ನಲ್ಲಿ ನಾಲ್ವರು ಬಾಣಂತಿಯರ ಸಾವು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಐವರು ಬಾಣಂತಿಯರ ಸಾವಿಗೆ ಕೇಂದ್ರವೇ ಕಾರಣ ಅಂತ ಬೆರಳು ತೋರಿಸ್ತಿದ್ದಾರೆ. ಕೇಂದ್ರದ ವರದಿಯ ಕಳ್ಳಾಟದಿಂದಲೇ ಮಾರಣ ಹೋಮ ನಡೀತಾ ಎನ್ನುವ ಅನುಮಾನ ಸೃಷ್ಟಿಯಾಗಿದೆ. ಇದರ ಮಧ್ಯ ಇದೀಗ 92 ಐವಿ ಫ್ಲೂಯಿಡ್ ಸ್ಯಾಂಪಲ್ಸ್​​ ರಿಪೋರ್ಟ್ ಬಂದಿದ್ದು, ವರದಿಯಲ್ಲಿ ಶಾಕಿಂಗ್​ ಅಂಶ ಕಂಡುಬಂದಿದೆ.

ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ: ಐವಿ ಗ್ಲುಕೋಸ್​ನಲ್ಲಿ ಆಘಾತಕಾರಿ ಅಂಶ ಪತ್ತೆ
Edited By:

Updated on: Dec 03, 2024 | 7:21 PM

ಬೆಂಗಳೂರು.ಬಳ್ಳಾರಿ, (ಡಿಸೆಂಬರ್ 03): ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಐವಿ ಫ್ಲೂಯಿಡ್ ವರದಿಯಲ್ಲಿ ಶಾಕಿಂಗ್ ನ್ಯೂಸ್ ಬಹಿರಂಗವಾಗಿದೆ. 92 ಐವಿ ಫ್ಲೂಯಿಡ್​​ ಸ್ಯಾಂಪಲ್ಸ್​ಗಳ ವರದಿ ಬಂದಿದ್ದು, ಅದರಲ್ಲಿ ಫಂಗಸ್ ಸೇರಿದ್ದಂತೆ ಬ್ಯಾಕ್ಟೀರಿಯಾ ಅಂಶ ಕಂಡುಬಂದಿದೆ. ರಾಜ್ಯದ ಐವಿ ಫ್ಲೂಯಿಡ್ ರಿಪೋರ್ಟ್​ನಲ್ಲಿ ಅಸುರಕ್ಷಿತ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಅವರು ಈ ಬಗ್ಗೆ ಸಂಪೂರ್ಣ ವಿವರಣೆ ಕೇಳಿ ಕೇಂದ್ರದ ಡ್ರಗ್ ಕಂಟ್ರೋಲ್ ಇಲಾಖೆಗೆ ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದಾರೆ.

ಪಶ್ಚಿಮ ಬಂಗಾಳದ ಕಂಪನಿ ಬರೋಬ್ಬರಿ 192 ಬ್ಯಾಚ್​ಗಳಲ್ಲಿ ಔಷಧಿ ಕಳಿಸಿತ್ತು. ಬಳಕೆ ಮಾಡುವುದಕ್ಕೆ ಶುರು ಮಾಡಿದ ಆರಂಭದಲ್ಲೇ ಐವಿ ರಿಂಗರ್ ಲ್ಯಾಕ್ಟೇಟ್ ಬಗ್ಗೆ ಶಂಕೆ ಎದ್ದಿತ್ತು. ಬಳಿಕ 22 ಬ್ಯಾಚ್​ಗಳು ಉತ್ತಮ ಗುಣಮಟ್ಟ ಹೊಂದಿಲ್ಲವೆಂಬ ವರದಿ ಹೊರಬಿದ್ದಿತ್ತು. ಖುದ್ದು ರಾಜ್ಯದ ಡ್ರಗ್ ಕಂಟ್ರೋಲ್ ಐವಿ ರಿಂಗರ್ ಲ್ಯಾಕ್ಟೇಟ್ ಗುಣಮಟ್ಟ ಉತ್ತಮವಾಗಿಲ್ಲ ಅನ್ನೋ ರಿಪೋರ್ಟ್ ಕೊಟ್ಟಿತ್ತು. ನಂತರ ಐವಿ ರಿಂಗ್ ಬಳಸಬೇಡಿ ಎಂದು ತಡೆಹಿಡಿದು ಎಲ್ಲ ಆಸ್ಪತ್ರೆಗಳಿಗೂ ಸುತ್ತೋಲೆ ಹೊರಡಿಸಿತ್ತು. ಪಶ್ಚಿಮ ಬಂಗಾಳದಿಂದ ಬಂದಿದ್ದ ಅಷ್ಟು ಬ್ಯಾಚ್​ಗಳಿಗೆ ಬ್ರೇಕ್ ಹಾಕಿ, ಬಳಿಕ ಬ್ಲಾಕ್ ಲಿಸ್ಟ್​ಗೆ ಸೇರಿಸಿತ್ತು. ಆದ್ರೆ ಕೇಂದ್ರ ಡ್ರಗ್ ಲ್ಯಾಬ್​ನಲ್ಲಿ ಇದೇ ಔಷಧಿಯ 22 ಬ್ಯಾಚ್​ಗಳು ಪಾಸ್ ಆಗಿವೆ ಎನ್ನಲಾಗಿದೆ.

ಇದನ್ನೂ ಓದಿ: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ಕಾರಣ ಬಹಿರಂಗ!

ಕೇಂದ್ರ ಡ್ರಗ್ ಲ್ಯಾಬ್ ನೀಡಿದ್ದ ಪಾಸಿಟಿವ್ ವರದಿಯನ್ನೇ ಪಶ್ಚಿಮ ಬಂಗಾಳದ ಕಂಪನಿ ರಾಜ್ಯದ ಔಷಧಿ ನಿಗಮದ ಮುಂದಿಟ್ಟಿತ್ತು. ನಿಯಮಗಳ ಪ್ರಕಾರ ಸೆಂಟ್ರಲ್ ಡ್ರಗ್ ಲ್ಯಾಬ್​ನಲ್ಲಿ ವರದಿ ಅಂತಿಮ. ಹೀಗಾಗಿ ಟೆಂಡರ್ ರೂಲ್ಸ್ ಪ್ರಕಾರ ಕಂಪನಿಯ ದ್ರಾವಣ ನಿರಾಕರಿಸುವಂತಿಲ್ವಂತೆ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿರುವ ಕೇಂದ್ರದ ಲ್ಯಾಬ್​ಗೆ ಸ್ಯಾಂಪಲ್ಸ್​ ರವಾನೆ ಮಾಡಲಾಗಿದ್ದು, ಅದರ ವರದಿ ಡಿಸೆಂಬರ್ 9ರಂದು ಬರಲಿದೆ.

ಔಷಧ ನಿಯಂತ್ರಣ ‌ಇಲಾಖೆಗೆ ಮುಖ್ಯಸ್ಥರ ನೇಮಕ

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದ ಬೆನ್ನಲ್ಲೇ ಎಚ್ಚೆತ್ತ ಸಿದ್ದರಾಮಯ್ಯ, ರಾಜ್ಯ ಔಷಧ ನಿಯಂತ್ರಣ ‌ಇಲಾಖೆಗೆ ಆಡಳಿತಾತ್ಮಕ ಮುಖ್ಯಸ್ಥರನ್ನು ನೇಮಕ ಮಾಡಿದೆ. ಇಷ್ಟು ದಿನ ಇಲಾಖೆಯ ಮುಖ್ಯಸ್ಥರ ಹುದ್ದೆ ಖಾಲಿ ಇತ್ತು. ಆದ್ರೆ, ಈ ಪ್ರಕರಣ ಬಳಿಕ ಮುಂದಿನ ಆದೇಶದವರೆಗೂ ಆಹಾರ ಇಲಾಖೆ ಆಯುಕ್ತ, ಐಎಎಸ್ ಅಧಿಕಾರಿ ಕೆ.‌ಶ್ರೀನಿವಾಸ ಅವರನ್ನು ಔಷಧ ನಿಯಂತ್ರಣ ‌ಇಲಾಖೆಗೆ ಆಡಳಿತಾತ್ಮಕ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ