ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಉಗ್ರರಿಗೆ ಐಸಿಸ್​ ನಂಟು: ಮೆಜೆಸ್ಟಿಕ್, ಯಶವಂತಪುರದಲ್ಲಿ ಬಸ್​ ಸ್ಫೋಟಗೊಳಿಸುವಂತೆ ಟಾಸ್ಕ್

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಈ ಪಟ್ಟಿಯಲ್ಲಿ ಆರು ಉಗ್ರರು ಐಸಿಸ್ ಜೊತೆ ಸಂಪರ್ಕ ಹೊಂದಿದ್ದರು ಎಂಬುದು ಬಹಿರಂಗವಾಗಿದೆ. ಉಗ್ರರು ಶಿವಮೊಗ್ಗದಲ್ಲಿನ ಟ್ರಯಲ್ ಬ್ಲಾಸ್ಟ್, ಬೈಕ್‌ಗಳಿಗೆ ಬೆಂಕಿ ಹಚ್ಚುವುದು, ಮತ್ತು ಮಂಗಳೂರು ಕುಕ್ಕರ್​ ಬಾಂಬ್​ ಸ್ಫೋಟ ಕೃತ್ಯಗಳಲ್ಲಿ ಉಗ್ರರು ಭಾಗಿಯಾಗಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಉಗ್ರರಿಗೆ ಐಸಿಸ್​ ನಂಟು: ಮೆಜೆಸ್ಟಿಕ್, ಯಶವಂತಪುರದಲ್ಲಿ ಬಸ್​ ಸ್ಫೋಟಗೊಳಿಸುವಂತೆ ಟಾಸ್ಕ್
ರಾಮೇಶ್ವರಂ ಕೆಫೆ, ಎನ್​ಐಎ
Edited By: ವಿವೇಕ ಬಿರಾದಾರ

Updated on: Nov 10, 2024 | 1:33 PM

ಬೆಂಗಳೂರು, ನವೆಂಬರ್​ 10: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ (Rameshwaram Cafe Blast) ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ದೋಷಾರೋಪ ಪಟ್ಟಿ ಸಲ್ಲಿಸಿದೆ. ದೋಷಾರೋಪ ಪಟ್ಟಿಯಲ್ಲಿ ಮತ್ತೊಂದು ಸ್ಪೋಟಕ‌ ವಿಚಾರ ಬಯಲಾಗಿದೆ. ಈ ಕೃತ್ಯದ ಹಿಂದೆ ಆರು ಉಗ್ರರ ಕೈವಾಡವಿದ್ದು, ಇವರು ಉಗ್ರ ಸಂಘಟನೆ ಐಸಿಸ್ ಜೊತೆ ಸಂಪರ್ಕದಲ್ಲಿ ಇದ್ದರು ಎಂದು ಉಲ್ಲೇಖಿಸಲಾಗಿದೆ. ಐಸಿಸ್ ಆರು ಜನರಿಗೂ ಒಂದೊಂದು ಟಾಸ್ಕ್​ ನೀಡಿಲಾಗಿತ್ತು.

ಆರು ಜ‌ನ ಶಂಕಿತ ಉಗ್ರರು ಯಾರು? ಏನೆಲ್ಲ ಟಾಸ್ಕ್ ನೀಡಲಾಗಿತ್ತು?

  • ಅಬ್ದುಲ್ ಮತೀನ್ ತಾಹ

ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸಲ್ಲಿ ಪ್ರಮುಖ ಆರೋಪಿ ಆಗಿರುವ ತಾಹ ಮೂಲತಃ ಶಿವಮೊಗ್ಗದವನಾಗಿದ್ದು, ಐಸಿಸ್ ಜೊತೆ ನಿರಂತರ ಸಂಪರ್ಕದಲ್ಲಿದ್ದನು. 2020ರಿಂದಲೂ ಐಸಿಸ್ ಜೊತೆ ಸಂಪರ್ಕದಲ್ಲಿದ್ದ ಮತೀನ್ ತಾಹ, ಸದ್ಯ ಎಲ್ಲ ಉಸ್ತುವಾರಿ ಜೊತೆಗೆ ಹಣಕಾಸು ವರ್ಗಾವಣೆ ಕೆಲಸ ಕೂಡ ನಿರ್ವಹಣೆ ಮಾಡುತ್ತಿದ್ದನು. ಅಬ್ದುಲ್ ಮತೀನ್ ತಾಹ ಟೆಕ್ನಿಕಲ್ ಆಗಿ ಫಾಸ್ಟ್ ಆಗಿದ್ದ ಕಾರಣಕ್ಕೆ ಈತನಿಗೆ ಐಸಿಸ್ ಉಸ್ತುವಾರಿ ವಹಿಸಿತ್ತು.
ರಾಮೇಶ್ವರಂ ಬ್ಲಾಸ್ಟ್, ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮತ್ತು ಶಿವಮೊಗ್ಗ ಸರಣಿ ಬೈಕ್​ಗಳಿಗೆ ಬೆಂಕಿ ಹಚ್ಚಿದ ಹಿಂದಿನ ಕೈ ಇವನೆ ಎಂದು ತಿಳಿದುಬಂದಿದೆ.

  • ಮಾಜ್ ಮುನೀರ್

ಉಗ್ರ ಮಾಜ್ ಮುನೀರ್ ರಾಮೇಶ್ವರಂ ಕೆಫೆ ಬ್ಲಾಸ್ಟ್​ ಪ್ರಮುಖ ಆರೋಪಿ ಅಬ್ದುಲ್ ಮತೀನ್ ತಾಹ ಮೂಲಕ ಮೊದಲಿಗೆ ಅಲ್ ಹಿಂದ್ ಟ್ರಸ್ಟ್​​ಗೆ 2018ರಲ್ಲಿ ಸೇರ್ಪಡೆಯಾಗಿದ್ದನು. ಅಲ್‌ ಹಿಂದ್ ಟ್ರಸ್ಟ್ ಮೂಲಕ ಭಯೋತ್ಪಾದಕ ಕೃತ್ಯಗಳಿಗೆ ಫ್ಲಾನ್ ಮಾಡುತ್ತಿದ್ದನು. 2018ರಲ್ಲೇ ಅಲ್ ಹಿಂದ್ ಟ್ರಸ್ಟ್ ಮೇಲೆ ಕೇಸ್ ದಾಖಲಾಗಿತ್ತು. ಈತನು ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಶಿವಮೊಗ್ಗ ಸರಣಿ ಬೈಕ್​ಗಳಿಗೆ ಬೆಂಕಿ ಕೃತ್ಯದಲ್ಲಿ ಭಾಗಿಯಾಗಿದ್ದನು.

ಇದನ್ನೂ ಓದಿ: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಪಾಕಿಸ್ತಾನ ನಂಟು: ನೆರೆ ದೇಶದಲ್ಲಿ ತಲೆಮರೆಸಿಕೊಂಡ ಶಹೀದ್ ಫೈಸಲ್

  • ಮುಜಾಮಿಲ್ ಶರೀಫ್

ಮುಜಾಮಿಲ್ ಶರೀಫ್ ಕೂಡ ಅಬ್ದುಲ್ ಮತೀನ್ ತಾಹ ಮೂಲಕವಾಗಿ ಐಸಿಸ್ ಜೊತೆ ಸಂಪರ್ಕ ಹೊಂದಿದ್ದನು. ಐಸಿಸ್ ಈತನಿಗೂ ಭಯೋತ್ಪಾದಕ ಕೃತ್ಯದ ಟಾಸ್ಕ್ ನೀಡಿತ್ತು. ಮೆಜೆಸ್ಟಿಕ್ ಹಾಗೂ ಯಶವಂತಪುರದಲ್ಲಿ ಬಸ್​ ಸ್ಫೋಟಗೊಳಿಸುವಂತೆ ಟಾಸ್ಕ್ ನೀಡಲಾಗಿತ್ತು. ಆದರೆ, ಅದು ಫೇಲ್ ಆಗಿದ್ದು ಕೊನೆಗೆ ಶಾಂತಿನಗರದ ಟೈರ್ ಅಂಗಡಿಗೆ ಬೆಂಕಿ ಇಟ್ಟಿದ್ದರು.

  • ಮೊಹಮದ್ ಶಾರೀಕ್

ಮೊಹಮದ್ ಶಾರೀಕ್​ ಕೂಡ ಐಸಿಸ್ ಜೊತೆ ಸಂಪರ್ಕ ಹೊಂದಿದ್ದನು. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಶಿವಮೊಗ್ಗ ಬೈಕ್​ಗಳ ಸ್ಪೋಟ, ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೃತ್ಯದ ಹಿಂದೆ ಈತನ ಕೈವಾಡವಿದೆ ಎಂದು ಚಾರ್ಜಶೀಟ್​ನಲ್ಲಿ ಉಲ್ಲೇಖವಾಗಿದೆ.

  • ಮುಸಾವೀರ್ ಹುಸೇನ್ ಶಾಜೀಬ್

ಮುಸಾವೀರ್ ಹುಸೇನ್ ಶಾಜೀಬ್ ಕೂಡ ಐಸಿಸ್ ಜೊತೆ ನಂಟು ಹೊಂದಿದ್ದನು. ಮುಸಾವೀರ್ ಹುಸೇನ್ ಶಾಜೀಬ್ ಶಾರಿಕ್ ಜೊತೆಗೂಡಿ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದನು. ಮಂಗಳೂರು ಕುಕ್ಕರ್ ಬ್ಲಾಸ್ಟ್, ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಕೃತ್ಯದಲ್ಲಿ ಭಾಗಿಯಾಗಿದ್ದನು. ಹಾಗೇ ಬಿಜೆಪಿ ಕಚೇರಿ ಬಳಿ ಬಾಂಬ್ ಇಟ್ಟಿದ್ದನು ಆದರೆ, ಫೇಲ್ ಆಯ್ತು.

  • ಅರಾಫತ್ ಅಲಿ

ಅರಾಫತ್ ಅಲಿ ಮೇಲಿನ ಐದೂ ಜನರಿಗೆ ಹಣಕಾಸು ಸಹಾಯ ಮಾಡುತ್ತಿದ್ದನು. ತಾಹ ಹೇಳಿದಂತೆ ಹಣ ಸಹಾಯ ಮಾಡುವುದು ಈತನ ಕೆಲಸವಾಗಿತ್ತು. ಈತನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಟಾಸ್ಕ್ ಮುಗಿದ ಮೇಲೆ ಅದನ್ನು ವಿಡಿಯೋ ರೆಕಾರ್ಡ್​ ಮಾಡಿ ಅಂತ ಐಸಿಸ್​ ಸೂಚನೆ ನೀಡಿತ್ತು. ಅದರಂತೆ ಉ್ರಗರೆಲ್ಲರು ವೀಡಿಯೋ ಮಾಡಿರುವ ಸಾಧ್ಯತೆಯೂ ಇದೆ. ಈ ಎಲ್ಲ ಅಂಶಗಳನ್ನು ಎನ್​ಐಎ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us