
ಬೆಂಗಳೂರು, (ಸೆಪ್ಟೆಂಬರ್ 20): ಬೆಂಗಳೂರಿನಲ್ಲಿ ಪತ್ತೆಯಾದ ನಕಲಿ ಔಷಧಿ ದಂಧೆಯ ಜಾಲ ಇದೀಗ ಹಲವು ರಾಜ್ಯಗಳಿಗೆ ವ್ಯಾಪಿಸಿರುವುದು ಎಸ್ಐಟಿ ತನಿಖೆಯಲ್ಲಿ ಬಯಲಾಗಿದೆ. ಬೆಂಗಳೂರು ಸೇರಿದಂತೆ ಹತ್ತು ಕಡೆಗಳಲ್ಲಿ ದಾಳಿ ನಡೆಸಿ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಎಸ್ಐಟಿ, ಈಗಾಗಲೇ ಐದಾರು ರಾಜ್ಯಗಳಲ್ಲೂ ತನಿಖೆ ನಡೆಸಿದೆ. ಹಲವು ಆಸ್ಪತ್ರೆಗಳಿಗೆ ನಕಲಿ ಔಷಧಿ ಪೂರೈಕೆ ಮಾಡಿರುವುದು ಪತ್ತೆಯಾಗಿದ್ದು, ಪ್ರಕರಣದ ತನಿಖೆಯನ್ನ ತೀವ್ರಗೊಳಿಸಲಾಗಿದೆ. ಆದ್ರೆ ಹೊರ ರಾಜ್ಯಗಳಲ್ಲಿ ತನಿಖೆ ನಡೆಸುವುದು, ಆರೋಪಿಗಳಿಂದ ದಾಖಲೆ ಹಾಗೂ ಸಾಕ್ಷ್ಯ ಸಂಗ್ರಹಿಸುವುದು ಎಸ್ಐಟಿಗೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನ ಸಿಬಿಐಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ.ಶೀಘ್ರದಲ್ಲೇ ಗೃಹ ಇಲಾಖೆಯಿಂದ ಅನುಮತಿ ಪಡೆದು, ಸಿಬಿಐ ತನಿಖೆಗೆ ವರ್ಗಾವಣೆ ಸಂಬಂಧ ಪತ್ರ ವ್ಯವಹಾರ ನಡೆಸುವ ಸಾಧ್ಯತೆ ಇದೆ.
ಇನ್ನು ಎಸ್ಐಟಿ ತನಿಖೆ ವೇಳೆ ನಕಲಿ ಔಷಧಿ ಜಾಲದ ಮತ್ತಷ್ಟು ಕರಾಳ ಮುಖ ಬಯಲಾಗಿದ್ದು, ಒಂದು ಸರ್ಕಲ್ ರೀತಿಯಲ್ಲಿ ಈ ಜಾಲ ಕಾರ್ಯನಿರ್ವಹಿಸುತ್ತಿತ್ತು ಎನ್ನುವುದು ಗೊತ್ತಾಗಿದೆ. ಡಿಸ್ಟ್ರಿಬ್ಯೂಟರ್, ಸಬ್ ಡಿಸ್ಟ್ರಿಬ್ಯೂಟರ್, ಹೋಲ್ಸೇಲ್ ರಿಟೇಲರ್ ಹಾಗೂ ರಿಟೇಲರ್ ಮೂಲಕ ನಕಲಿ ಔಷಧಿಗಳನ್ನು ಮಾರಾಟ ಮಾಡಲಾಗ್ತಿತ್ತು. ಒಂದು ಮಾತ್ರೆ ತಯಾರಿಸಲು ಕೇವಲ 150ರಿಂದ 200 ರೂಪಾಯಿ ವೆಚ್ಚವಾಗ್ತಿತ್ತು.ಆದ್ರೆ ಅದೇ ಮಾತ್ರೆಯನ್ನ ಸಾವಿರಾರು ರೂಪಾಯಿಗೆ ಮಾರಾಟ ಮಾಡಲಾಗ್ತಿತ್ತು.ಎರಡು ರೀತಿಯಲ್ಲಿ ನಕಲಿ ಮೆಡಿಸಿನ್ ತಯಾರಿಸುತ್ತಿದ್ದ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ..ಅಸಲಿ ಔಷಧಿಗಳಿಗೆ ಬೇರೆ ಬೇರೆ ಪೌಡರ್ಗಳನ್ನು ಬೆರೆಸಿ ನಕಲಿ ಔಷಧಿಯಾಗಿ ಮಾರಾಟ ಮಾಡಲಾಗ್ತಿತ್ತು.
ಮತ್ತೊಂದು ಕಡೆ ಒರಿಜಿನಲ್ ಮ್ಯಾನಿಫ್ಯಾಕ್ಚರಿಂಗ್ ಲೈಸೆನ್ಸ್ ನಂಬರ್ ಹಾಗೂ ಮೆಡಿಸಿನ್ ನಂಬರ್ಗಳನ್ನೇ ಬಳಸಿ ಅದೇ ರೀತಿಯ ನಕಲಿ ಔಷಧಿ ತಯಾರಿಸಲಾಗ್ತಿತ್ತು. ಅಷ್ಟೇ ಅಲ್ಲ ಅಸಲಿ ಔಷಧಿಯ ಬಾಟಲ್, ಸ್ಟ್ರಿಪ್ ಹಾಗೂ ರ್ಯಾಪರ್ ರೀತಿಯಲ್ಲೇ ನಕಲಿ ಪ್ಯಾಕಿಂಗ್ ಮಾಡಲಾಗ್ತಿತ್ತು. ಡಾಕ್ಟರ್ಗಳು ಔಷಧಿಯ ಐಡೆಂಟಿಟಿ ನಂಬರ್ ಚೆಕ್ ಮಾಡಿದಾಗಲೂ ನಂಬರ್ ಸೇಮ್ ಬರುತ್ತಿದ್ದ ಕಾರಣ, ನಕಲಿ ಔಷಧಿ ಅನ್ನೋ ಅನುಮಾನವೇ ಬಾರದಂತೆ ಜಾಲ ಕಾರ್ಯನಿರ್ವಹಿಸುತ್ತಿತ್ತು ಎನ್ನುವುದು ಎಸ್ಐಟಿ ತನಿಖೆ ವೇಳೆ ಬಯಲಾಗಿದೆ.
ಇನ್ನು ಈ ಪ್ರಕರಣದ ಕಿಂಗ್ಪಿನ್ ಪ್ರಶಾಂತ್ ಇನ್ನೂ ಅಜರ್ಬೈಜಾನ್ನಲ್ಲೇ ವಾಸ್ತವ್ಯ ಹೂಡಿದ್ದಾನೆ.
ಕಳೆದ 9ನೇ ತಾರೀಖಿಗೆ ಪ್ರಶಾಂತ್ನ ವೀಸಾ ಅವಧಿ ಮುಗಿದಿದ್ದು, ಸದ್ಯ ಅಜರ್ಬೈಜಾನ್ನ ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿರೊ ಮಾಹಿತಿ ಇದೆ. ಭಾರತ ಮತ್ತು ಅಜರ್ಬೈಜಾನ್ ನಡುವೆ ಆರೋಪಿಯನ್ನು ಹಸ್ತಾಂತರಿಸುವ ಸಂಬಂಧಿತ ಟ್ರೀಟಿ ಇಲ್ಲದ ಹಿನ್ನೆಲೆ, ಪ್ರಶಾಂತ್ನನ್ನ ನೇರವಾಗಿ ಭಾರತಕ್ಕೆ ಕರೆತರಲು ಸಾಧ್ಯವಾಗ್ತಿಲ್ಲ.ಪ್ರಶಾಂತ್ ಅಲ್ಲಿನ ಸಮಸ್ಯೆ ಬಗೆಹರಿಸಿಕೊಂಡು ತಾನೇ ಭಾರತಕ್ಕೆ ವಾಪಸ್ ಬರಬೇಕಿದೆ. ಆ ಬಳಿಕ ಈಗಾಗಲೇ ಜಾರಿ ಮಾಡಿರುವ ಲುಕ್ಔಟ್ ನೋಟಿಸ್ ಆಧಾರದಲ್ಲಿ ಏರ್ಪೋರ್ಟ್ನಲ್ಲೇ ಆತನನ್ನ ಬಂಧಿಸುವ ಸಾಧ್ಯತೆ ಇದೆ.
ಸದ್ಯ ನಕಲಿ ಔಷಧಿ ದಂಧೆಯ ಜಾಲ ಎಷ್ಟು ದೊಡ್ಡದಾಗಿದೆ,ಇನ್ನೆಷ್ಟು ರಾಜ್ಯಗಳಿಗೆ ಇದರ ಕನೆಕ್ಷನ್ ಇದೆ, ಅನ್ನೋದರ ಬಗ್ಗೆ ಎಸ್ಐಟಿ ತನಿಖೆ ಮುಂದುವರಿಸಿದೆ.