ಕೆಪಿಎಸ್ಸಿ ಹಗರಣ: ಸಿಐಡಿ ಆಯ್ತು ಈಗ ಇಡಿ ಇಕ್ಕಳದಲ್ಲಿ ಸಿಲುಕಿದ ಐಎಎಸ್ ಅಧಿಕಾರಿ
ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಒಂದೆಡೆ ಶಾಂತ ಹೊಸಮನಿ ವಿಚಾರಣೆ ನಡೆಸಿ,ಮನೆಗಳ ಮೇಲೆ ಸಿಐಡಿ ಸರ್ಚ್ ನಡೆಸಿದ್ರೆ.ಮತ್ತೊಂದೆಡೆ ಇದೇ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಮಧ್ಯವರ್ತಿ ಕನ್ನಾಳೆಯನ್ನ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.ಅಷ್ಟಕ್ಕೂ ಸಿಐಡಿ ಸರ್ಚ್ ವೇಳೆ ಏನೆಲ್ಲಾ ಪತ್ತೆಯಾಗಿದೆ? ಇಡಿ ಅಧಿಕಾರಿಗಳು ಜ್ಞಾನೇಂದ್ರ ಕುಮಾರ್ರನ್ನು ಯಾಕೆ ಬಂಧಿಸಿದ್ದಾರೆ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಬೆಂಗಳೂರು, (ಸೆಪ್ಟೆಂಬರ್ 20): ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಐಡಿ ಹಾಗೂ ಇಡಿ ತನಿಖೆ ಮತ್ತಷ್ಟು ಚುರುಕುಗೊಳಿಸಿವೆ. ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಶಾಂತ ಹೊಸಮನಿಯನ್ನ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ವಿಚಾರಣೆಗೆ ಹಾಜರಾದ ಬೆನ್ನಲ್ಲೇ ಶಾಂತಹೊಸಮನಿಗೆ ಸಂಬಂಧಿಸಿದ ಮನೆಗಳ ಮೇಲೆ ಸಿಐಡಿ ಅಧಿಕಾರಿಗಳು ಸರ್ಚ್ ನಡೆಸಿದ್ದಾರೆ. ಮತ್ತೊಂದೆಡೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ನನ್ನ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಜೊತೆಗೆ ಮಧ್ಯವರ್ತಿ ಬಸವರಾಜು ಕನ್ನಾಳೆಗೂ ಇಡಿ ಅಧಿಕಾರಿಗಳು ಮುಟ್ಟಿಸಿದ್ದಾರೆ. ಸಿಐಡಿ ಬಂಧನದಿಂದ ಪರಪ್ಪನ ಅಗ್ರಹಾರದಲ್ಲಿದ್ದ IAS ಅಧಿಕಾರಿ ಜ್ಞಾನೇಂದ್ರ, ಮಧ್ಯವರ್ತಿ ಕನ್ನಾಳೆಯನ್ನು ಇಡಿ ಬಂಧಿಸಿದೆ.
ಕೆಪಿಎಸ್ಸಿ ನೇಮಕಾತಿ ಹಗರಣ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನನ್ನ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಜೈಲಿನಲ್ಲೇ ಇಬ್ಬರನ್ನೂ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಆದ್ರೆ, ವಿಚಾರಣೆ ವೇಳೆ ಆರೋಪಿಗಳು ತನಿಖೆಗೆ ಸರಿಯಾಗಿ ಸಹಕರಿಸಿರಲಿಲ್ಲ.ಹೀಗಾಗಿ ನಿನ್ನೆ (ಸೆ.20) ಸಂಜೆ ಇಬ್ಬರನ್ನೂ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಳಿಕ ತಡರಾತ್ರಿ ಇಬ್ಬರನ್ನೂ ಇಡಿ ಸ್ಪೆಷಲ ಕೋರ್ಟ್ಗೆ ಹಾಜರುಪಡಿಸಿ ಇಬ್ಬರನ್ನೂ ಇಡಿ ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದಾರೆ. ಇಂದಿನಿಂದ ಇಡಿ ಕಚೇರಿಯಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿಚಾರಣೆ ನಡೆಯಲಿದೆ.
ಇದನ್ನೂ ನೋಡಿ: ಕೆಪಿಎಸ್ಸಿ ಹಗರಣ: ಲೂಟಿ ಹಣದಲ್ಲಿ ಗೆಳತಿಗೆ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ ಕುಮಾರ್
ಸಿಐಡಿ ಅಧಿಕಾರಿಗಳಿಂದ ಸರ್ಚ್
ಶಾಂತ ಹೊಸಮನಿಯನ್ನ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ವಿಚಾರಣೆಗೆ ಹಾಜರಾದ ಬೆನ್ನಲ್ಲೇ ಶಾಂತಹೊಸಮನಿಗೆ ಸಂಬಂಧಿಸಿದ ಮನೆಗಳ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಒಂದು ಮನೆ ಹಾಗೂ ದಾವಣಗೆರೆಯಲ್ಲಿ ಒಂದು ಮನೆ ಹೊಂದಿರುವ ಶಾಂತ ಹೊಸಮನಿ, ಬೆಂಗಳೂರಿನಲ್ಲಿ ವಾಸವಾಗಿದ್ರು. ದಾವಣಗೆರೆಯ ಮನೆಯನ್ನು ಬಾಡಿಗೆಗೆ ನೀಡಲಾಗಿತ್ತು.ಬಾಡಿಗೆದಾರರು ಮನೆ ಖಾಲಿ ಮಾಡಿದ್ದ ಹಿನ್ನೆಲೆ ನಿನ್ನೆ ಆ ಮನೆಯ ಮೇಲೂ ಸಿಐಡಿ ಅಧಿಕಾರಿಗಳು ಸರ್ಚ್ ನಡೆಸಿದ್ದಾರೆ. ಇನ್ನು ಬೆಂಗಳೂರಿನ ಮನೆ ಸರ್ಚ್ ವೇಳೆ ಎರಡು ಮೊಬೈಲ್ ಹಾಗೂ ಒಂದು ಟ್ಯಾಬ್ ಪತ್ತೆಯಾಗಿದೆ..ಪತ್ತೆಯಾದ ಎರಡು ಮೊಬೈಲ್ ಹಾಗೂ ಟ್ಯಾಬ್ಗಳನ್ನು ಡಿಜಿಟಲ್ ಡೇಟಾ ರಿಟ್ರೀವ್ಗಾಗಿ ಸಿಐಡಿ ಅಧಿಕಾರಿಗಳು ಕಳುಹಿಸಿದ್ದಾರೆ.
ಇದೇ ವೇಳೆ ಶಾಂತ ಹೊಸಮನಿಗೆ ಸಂಬಂಧಿಸಿದ ಇತರೆ ಸ್ಥಳಗಳಲ್ಲೂ ಸಿಐಡಿ ಅಧಿಕಾರಿಗಳು ಸರ್ಚ್ ನಡೆಸುತ್ತಿದ್ದಾರೆ.ಸಿಐಡಿ ವಿಚಾರಣೆ ವೇಳೆ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಶಾಂತ ಹೊಸಮನಿ ಸಮರ್ಪಕವಾಗಿ ಉತ್ತರಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು,ಸದ್ಯ ಮನೆಯಲ್ಲಿ ಪತ್ತೆಯಾಗಿರುವ ಮೊಬೈಲ್ ಹಾಗೂ ಟ್ಯಾಬ್ನ ರಿಟ್ರೀವ್ ರಿಪೋರ್ಟ್ಗಾಗಿ ಸಿಐಡಿ ಅಧಿಕಾರಿಗಳು ಕಾಯ್ತಿದ್ದಾರೆ.
ಕೆಪಿಎಸ್ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಹಾಗೂ ಇಡಿ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಸರ್ಚ್ ವೇಳೆ ಸಿಕ್ಕಿರುವ ಮೊಬೈಲ್ ಹಾಗೂ ಆರೋಪಿಗಳ ವಿಚಾರಣೆ ಈ ಪ್ರಕರಣದಲ್ಲಿ ಮಹತ್ವ ಪಡೆದುಕೊಂಡಿದೆ.




