ಪ್ರತ್ಯೇಕ ಘಟನೆ: ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆ, 16ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು
ವಿದೇಶದಲ್ಲಿ ಇಂಜಿನಿಯರಿಂಗ್ ಮುಗಿಸಿಕೊಂಡು ವಾಪಸ್ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ಟೆಕ್ಕೆ 16ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಮಂಗಳೂರು ಮೂಲದ ಟೆಕ್ಕಿ ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದು, ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎನ್ನಲಾಗಿದೆ. ಇನ್ನೊಂದೆಡೆ ವೈದ್ಯ ವಿದ್ಯಾರ್ಥಿ ಸಹ ಹಾಸ್ಟೆಲ್ನಲ್ಲೇ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಮತ್ತೊಂದೆಡೆ ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ವ್ಯಕ್ತಿಯ ಶವ ಸಿಕ್ಕಿದೆ. ಈ ಮೂರು ಸುದ್ದಿಯ ವಿವರ ಈ ಕೆಳಗಿನಂತಿದೆ.

ಬೆಂಗಳೂರು, (ಜನವರಿ 07): ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ (Bengaluru rural) ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪ ಬಳಿ ಕಾರಿನಲ್ಲಿ ಶವಪತ್ತೆಯಾಗಿದೆ. ಇಂದು (ಜನವರಿ 07) ಬೆಳಗ್ಗೆಯಿಂದ ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ಮಲಗಿದ್ದ ವ್ಯಕ್ತಿಯನ್ನು ಎಷ್ಟು ಎಬ್ಬಿಸಿದರೂ ಎದ್ದಿಲ್ಲ. ಎಚ್ಚರಗೊಳ್ಳದಿದ್ದಕ್ಕೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನ ನಡೆಸಿದಾಗ ವ್ಯಕ್ತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೆಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ವ್ಯಕ್ತಿಯ ಜೇಬಿನಲ್ಲಿ ಶಿಡ್ಲಘಟ್ಟ ತಾಲೂಕಿನ ತಾಳಹಳ್ಳಿ ದಾಖಲೆಗಳು ಪತ್ತೆಯಾಗಿದೆ. ಆದ್ರೆ, ಮೃತ ವ್ಯಕ್ತಿ ಯಾರು ಏನು ಎನ್ನುವುದೇ ತಿಳಿದುಬಂದಿಲ್ಲ. ಆದ್ರೆ, ಸಿಕ್ಕ ದಾಖಲೆಗಳ ಆಧಾರದ ಮೇಲೆ ಪೊಲೀಸರು ಮೃತನ ಕುಟುಂಬಸ್ಥರನ್ನ ಸಂಪರ್ಕಿಸುವ ಪಯತ್ನ ನಡೆಸಿದ್ದಾರೆ.
ಇದನ್ನೂ ಓದಿ: ಪತ್ನಿ ಮಗ ಇದ್ರೂ ತಂಗಿ ಜತೆ ಅಣ್ಣ ಸಂಸಾರ: ಅಣ್ಣ-ತಂಗಿ ಲವ್ವಿಡವ್ವಿ ಸಾವಿನಲ್ಲಿ ಅಂತ್ಯ!
16ನೇ ಫ್ಲೋರ್ನಿಂದ ಬಿದ್ದು ಟೆಕ್ಕಿ ಆತ್ಮಹತ್ಯೆ
ಬೆಂಗಳೂರು: ಅಪಾರ್ಟ್ಮೆಂಟ್ನ (Apartment) 16ನೇ ಫ್ಲೋರ್ನಿಂದ ಬಿದ್ದು ಟೆಕ್ಕಿಯೊಬ್ಬರು (Techie) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಬಗಲಗುಂಟೆಯ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ನಿಕ್ಷೇಪ್ (26) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ನಿಕ್ಷೇಪ್ ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದು, ಸ್ಕಿಜೋಫ್ರೇನಿಯಾ ಖಾಯಿಲೆಯಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಅಪಾರ್ಟ್ಮೆಂಟ್ನ 16ನೇ ಮಹಡಿಗೆ ಬಂದು ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಮಂಗಳೂರಿನ ನಿವಾಸಿಯಾಗಿರುವ ಬಂಗೇರಾ, ವಿದೇಶದಲ್ಲಿ ಇಂಜಿನಿಯರಿಂಗ್ ಮುಗಿಸಿ ತಂದೆ ತಾಯಿ ಜೊತೆ ಬಾಗಲಗುಂಟೆ ಪ್ರಿನ್ಸ್ ಅಪಾರ್ಟ್ಮೆಂಟ್ ವಾಸವಿದ್ದ. ಬಂಗೇರಾ ಕುಟುಂಬ 20ನೇ ಮಹಡಿಯ ಫ್ಲಾಟ್ ನಲ್ಲಿ ವಾಸವಿತ್ತು. ಆದ್ರೆ, ಬಂಗೇರಾ 16ನೇ ಮಹಡಿ ಬಿದ್ದು ಅಚ್ಚರಿಗೆ ಕಾರಣವಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದು,ಈ ಬಗ್ಗೆ ಬಾಗಲಗುಂಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವೈದ್ಯ ವಿದ್ಯಾರ್ಥಿ ಆತ್ಮಹತ್ಯೆ
ಶಿವಮೊಗ್ಗ: ಇನ್ನೊಂದೆಡೆ ಎಂಡಿ ವ್ಯಾಸಂಗ ಮಾಡುತ್ತಿದ್ದ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜಿನ ಭದ್ರಾ ಹಾಸ್ಟೆಲ್ ನಲ್ಲಿ ನಡೆದಿದೆ. ಸಂದೀಪ್ ರಾಜ್ (27) ಆತ್ಮಹತ್ಯೆಗೆ ಶರಣಾದ ಪಿಜಿ ವಿದ್ಯಾರ್ಥಿ. ಮೂಲತಃ ತುಮಕೂರಿನ ಮಧುಗಿರಿ ಮೂಲದ ಸಂದೀಪ್ ರಾಜ್, ಶಿವಮೊಗ್ಗ ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಡಿ ರೆಡಿಯಾಲಜಿ ವ್ಯಾಸಂಗ ಮಾಡುತ್ತಿದ್ದ. ಇನ್ನು ಸಂದೀಪ್ ರಾಜ್ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈ ಸಂಬಂಧ ಶಿವಮೊಗ್ಗದ ಖಾಸಗಿ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಹೀಗಾಗಿ ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
