
ದೇವನಹಳ್ಳಿ, ಸೆಪ್ಟೆಂಬರ್ 18: ಆರ್ಬಿಐ ಮ್ಯಾನೇಜರ್ ಎಂದು ವ್ಯಕ್ತಿಯೋರ್ವನನ್ನು ತೋರಿಸಿ ಕೋಟಿ ಕೋಟಿ ಹಣ ವಂಚಿಸಿದ್ದ ಖತರ್ನಾಕ್ ಗ್ಯಾಂಗ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ದಿವಂಗತ ಸಿಎಂ ಜಯಲಲಿತಾ ಬೇನಾಮಿ ಆಸ್ತಿ ಬಂದಿದೆ. 10 ಲಕ್ಷ ಕೊಟ್ಟರೆ ಒಂದು ಕೋಟಿಯಂತೆ ಹಣ ಕೊಡುವುದಾಗಿ ನಂಬಿಸಿ ಗ್ಯಾಂಗ್ ವಂಚನೆ ನಡೆಸಿತ್ತು ಎನ್ನಲಾಗಿದೆ. ಮುಖ್ಯ ಆರೋಪಿ ಯಳಚೇನಹಳ್ಳಿ ಶಶಿಕುಮಾರ್ ಎಂಬಾತನನ್ನು ಮೊದಲು ಅರೆಸ್ಟ್ ಮಾಡಿದ್ದ ಪೊಲೀಸರು, ಈಗ ಉಳಿದ ಆರೋಪಿಗಳನ್ನೂ ಖೆಡ್ಡಾಕೆ ಕೆಡವಿದ್ದಾರೆ.
ಪ್ರಮುಖ ಆರೋಪಿ ಯಳಚೇನಹಳ್ಳಿ ಶಶಿಕುಮಾರ್ ಕಳೆದ ಹಲವು ವರ್ಷಗಳಿಂದ ಸ್ನೇಹಿತರು ಮತ್ತು ಸ್ಥಳಿಯರನ್ನ ನಂಬಿಸಿದ್ದ. ವಿಡಿಯೋ ಕಾಲ್ನಲ್ಲಿ ಮೂಟೆಗಳಲ್ಲಿ ಹಣ ತೋರಿಸಿ ಜನರ ವಿಶ್ವಾಸಗಳಿದ್ದ ಈತ ಹೊಸಕೋಟೆ ಸುತ್ತಮುತ್ತ 4.5 ಕೋಟಿಗೂ ಅಧಿಕ ಹಣ ಸಂಗ್ರಹಿಸಿದ್ದ. ಚೆಕ್, ನಗದು ಮತ್ತು ಚಿನ್ನಾಭರಣ ಪಡೆದು ವಂಚಿಸಿದ್ದ ಆರೋಪ ಸಂಬಂಧ ಆರೋಪಿಯ ವಿರುದ್ದ ಕಳೆದ ತಿಂಗಳು ಕೇಸ್ ದಾಖಲಾಗಿತ್ತು. ಆ ಬೆನ್ನಲ್ಲೇ ಪ್ರಮುಖ ಆರೋಪಿಯನ್ನು ಅರೆಸ್ಟ್ ಮಾಡಿದ್ದ ಪೊಲೀಸರು, ಇದೀಗ ಪ್ರಕರಣ ಸಂಬಂಧ ಶಶಿಕುಮಾರ್, ನಾಗೇಶ್, ಪ್ರಮೀಳ ಶಶಿಕುಮಾರ್, ಅಂಬುಜಾ ಶಶಿಕುಮಾರ್, ವೆಂಕಟರವಣಪ್ಪ ಎಂಬವರನ್ನೂ ಬಂಧಿಸಿದ್ದಾರೆ.
ಇದನ್ನೂ ಓದಿ: ಹೆಚ್ಚುವರಿ ಶುಲ್ಕ ವಸೂಲಿ ಸೇರಿದಂತೆ ವಿವಿಧ ನಿಯಮ ಉಲ್ಲಂಘನೆ: ಖಾಸಗಿ ಬಸ್ಗಳ ವಿರುದ್ಧ 3,756 ಕೇಸ್
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್, ಆರೋಪಿ ಶಶಿಕುಮಾರ್ ಸಾಕಷ್ಟು ಜನರಿಗೆ ಮೋಸ ಮಾಡಿದ್ದಾನೆ. ಕೊಟ್ಟ ಹಣ ಕೇಳಲು ಹೋದರೆ ಬೌನ್ಸರ್ಗಳ ಮೂಲಕ ಬೆದರಿಕೆ ಹಾಕ್ತಿದ್ದ. ಹಣ ಕಳೆದುಕೊಂಡವರು ಹೆಚ್ಚು ಒತ್ತಡ ಹಾಕಿದರೆ ಕೆಲ ದಲಿತ ನಾಯಕರಿಂದ ಧಮ್ಕಿ ಹಾಕಿಸುತ್ತಿದ್ದ. ದಲಿತ ಸಂಘಟನೆ ಮುಖಂಡರಿಗೆ ಹಣ ನೀಡಿ ಅವರನ್ನ ಬಳಸಿಕೊಳ್ಳುತ್ತಿದ್ದ. ಕೇಸ್ನಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೂ ಆವಾಜ್ ಹಾಕಿಸುತ್ತಿದ್ದ. ಈ ಸಂಬಂಧ ದಲಿತ ಮುಖಂಡ ನಾಗೇಶ್ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ. ಆರೋಪಿಗಳು ಜನರನ್ನು ವಂಚಿಸಿ ಗಳಿಸಿದ್ದ ಹಣದಲ್ಲಿ ವಾಹನ, ಜಮೀನು ಖರೀದಿಸಿದ್ದರು. ವಂಚನೆಯಾಗಿರುವ ಮತ್ತಷ್ಟು ಜನ ದೂರು ನೀಡುವ ನಿರೀಕ್ಷೆಯಿದ್ದು, ದೂರು ಬಂದರೆ ಪಡೆದು ತನಿಖೆ ಮುಂದುವರೆಸುತ್ತೇವೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.