ಕ್ಷುಲ್ಲಕ ವಿಚಾರಕ್ಕೆ ಗಲಾಟೆ: ಪ್ರೇಯಸಿ ಸೇರಿ ಮೂವರ ಮೇಲೆ ಪೆಟ್ರೋಲ್​​ ಸುರಿದು ಬೆಂಕಿ ಹಚ್ಚಿದ ಭೂಪ

ಬೆಂಗಳೂರಿನ ತರಬನಹಳ್ಳಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕ್ಷುಲ್ಲಕ ಜಗಳ ವಿಕೋಪಕ್ಕೆ ಹೋಗಿ, ವ್ಯಕ್ತಿಯೋರ್ವ ತನ್ನ ಪ್ರೇಯಸಿ ಹಾಗೂ ಆಕೆಯ ಪೋಷಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಕ್ಷುಲ್ಲಕ ವಿಚಾರಕ್ಕೆ ಗಲಾಟೆ: ಪ್ರೇಯಸಿ ಸೇರಿ ಮೂವರ ಮೇಲೆ ಪೆಟ್ರೋಲ್​​ ಸುರಿದು ಬೆಂಕಿ ಹಚ್ಚಿದ ಭೂಪ
ಸಾಂದರ್ಭಿಕ ಚಿತ್ರ
Image Credit source: Google

Updated on: Mar 08, 2026 | 6:47 AM

ನೆಲಮಂಗಲ, ಮಾರ್ಚ್​​ 08: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ಹೋಗಿ ಪ್ರೇಯಸಿ ಸೇರಿದಂತೆ ಮೂವರ ಮೇಲೆ ಪೆಟ್ರೋಲ್​​ ಸುರಿದು ವ್ಯಕ್ತಿಯೋರ್ವ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತರಬನಹಳ್ಳಿಯಲ್ಲಿ ನಡೆದಿದೆ. ಆರೋಪಿಯ ಪ್ರೇಯಸಿ ಸುಮಲತಾ, ಆಕೆಯ ತಂದೆ ಶ್ರೀರಾಮ(48) ಹಾಗೂ ತಾಯಿ ಮಂಜಮ್ಮ(42) ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಆರೋಪಿ ಪಾಂಡುರಂಗ(29)ನನ್ನು ಬಂಧಿಸಲಾಗಿದ್ದು, ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

4 ವರ್ಷದ ಹಿಂದೆ ಗಂಡನಿಂದ ದೂರವಾಗಿದ್ದ ಸುಮಲತಾ, ಯಶವಂತಪುರದ ಮೆಟ್ರೋದಲ್ಲಿ ಕೆಲಸ ಮಾಡುತ್ತಿದ್ದಳು. ಈ ನಡುವೆ ಇನ್ಸ್ಟಾಗ್ರಾಂನಲ್ಲಿ ಈಕೆಗೆ ಪಾಂಡುರಂಗನ ಪರಿಚಯವಾಗಿತ್ತು. ಬಳಿಕ ಆತನ ಜೊತೆಗೆ ಮನೆ ಬಿಟ್ಟು ಹೋಗಿದ್ದ ಸುಮಲತಾ, 4 ವರ್ಷದಿಂದ ಲೀವಿಂಗ್ ಇನ್ ರಿಲೇಷನ್​ಶಿಪ್​ನಲ್ಲಿದ್ದಳು. ಮಹಾಲಕ್ಷ್ಮೀ ಲೇಔಟ್​ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇಬ್ಬರೂ ವಾಸವಿದ್ದರು. ಆದರೆ, ಪಾಂಡುವಿನ ಜೊತೆಗೂ ವಿರಸ ಉಂಟಾಗಿ ಕಳೆದ ಎರಡು ತಿಂಗಳ‌ ಹಿಂದೆ ಆತನಿಂದಲೂ ಸುಮಲತಾ ದೂರವಾಗಿದ್ದಳು. ಈಕೆಯ ಜೊತೆ ಇದ್ದುಕೊಂಡೇ ಪಾಂಡುರಂಗ ಮತ್ತೊಂದು ಯುವತಿಯ ಸಹವಾಸ ಮಾಡಿದ್ದ ಕಾರಣ, ಗಲಾಟೆ ಮಾಡಿಕೊಂಡು ಈಕೆ ತಾಯಿ ಮನೆಯನ್ನು  ಸೇರಿದ್ದಳು ಎನ್ನಲಾಗಿದೆ.

ಇದನ್ನೂ ಓದಿ: 3ನೇ ಮದ್ವೆ ಆಸೆಗೆ 2ನೇ ಗಂಡನಿಗೆ ಪರಲೋಕದ ದಾರಿ; ತನಿಖೆಯಲ್ಲಿ ಬಯಲಾಯ್ತು ಖತರ್ನಾಕ್ ಸ್ಟೋರಿ

ಹೀಗಿರುವಾಗ ಮೊನ್ನೆ ತರಬನಹಳ್ಳಿಯ ಸುಮಲತಾ ಮನೆ ಬಳಿ ಬಂದಿದ್ದ ಆರೋಪಿ ಪಾಡುರಂಗ ಸುಮಲತಾಳಿಗೆ ದ್ವಿಚಕ್ರ ವಾಹನ ಕೊಡು ಎಂದಿದ್ದ. ಈ ವೇಳೆ ಅದು ತನ್ನ ಅಕ್ಕನದ್ದು, ನಾನು ಕೊಡಲ್ಲ ಎಂದು ಸುಮಲತಾ ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆರೋಪಿ ಗಲಾಟೆ ಮಾಡಿದ್ದಾನೆ. ಸುಮಲತಾ, ಆಕೆಯ ತಂದೆ ಮತ್ತು ತಾಯಿ ಮೂವರೂ ಈ ವೇಳೆ ಬೈದಿದ್ದಾರೆ. ಹೀಗಾಗಿ ಇನ್ನಷ್ಟು ಕೋಪಗೊಂಡಿದ್ದ ಪಾಡುರಂಗ ಸ್ಥಳದಿಂದ ತೆರಳಿದ್ದು, ಸುಮಾರು ಅರ್ಧಗಂಟೆ ಬಳಿಕ ವಾಪಾಸ್​​ ಆಗಿದ್ದಾನೆ. ಮತ್ತೆ ಗಲಾಟೆ ಶುರುಮಾಡಿ ಸುಮಲತಾ ಮತ್ತು ಆಕೆಯ ಪೋಷಕರ ಮೇಲೆ ಪೆಟ್ರೋಲ್​​ ಸುರಿದು ಬೆಂಕಿ ಹಚ್ಚಿ, ಆಟೋದಲ್ಲಿ ಆರೋಪಿ ಪರಾರಿಯಾಗಿದ್ದಾನೆ. ಬೆಂಕಿಯಲ್ಲಿ ಸುಟ್ಟ ಮೂವರ ಸ್ಥಿತಿ ಗಂಭೀರವಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವರದಿ: ಮಂಜುನಾಥ್​​, ಟಿವಿ9 ನೆಲಮಂಗಲ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us