ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಎಂ ಸೂಚನೆ: ‘ಮನಸ್ಸಿಗೆ ನೋವಾಗಿದೆ’ ಎಂದ ಬಸವರಾಜ ಹೊರಟ್ಟಿ
Basavaraj Horatti: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಗೆ ರಾಜೀನಾಮೆ ನೀಡುವಂತೆ ಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ಸದ್ಯ ಈ ವಿಚಾರಕ್ಕೆ ಬಸವರಾಜ ಹೊರಟ್ಟಿ ಬೇಸರಗೊಂಡಿದ್ದಾರೆ. ವಿಪಕ್ಷ ನಾಯಕರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

ಮುಖ್ಯಾಂಶಗಳು
- ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೊರಟ್ಟಿಗೆ ಸಿಎಂ ಕರೆ
- ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಎಂದ ಸಭಾಪತಿ
- ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕೆನೂ ಇಲ್ಲವೆಂದ ಹೊರಟ್ಟಿ
ಬೆಂಗಳೂರು, ಆಗಸ್ಟ್ 04: ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಸವರಾಜ ಹೊರಟ್ಟಿಗೆ (Basavaraj Horatti) ಸಿಎಂ ಡಿಕೆ ಶಿವಕುಮಾರ್ (DK Shivakumar) ಸೂಚನೆ ನೀಡಿದ್ದಾರೆ. ಮಧ್ಯಾಹ್ನ 2ರ ಸುಮಾರಿಗೆ ಕರೆ ಮಾಡಿದ್ದ ಸಿಎಂ ‘ಪಕ್ಷದ ಹೈಕಮಾಂಡ್ ಸೂಚಿಸಿದೆ, ದಯವಿಟ್ಟು ರಾಜೀನಾಮೆ ನೀಡಿ’ ಎಂದಿದ್ದಾರೆ. ಡಿಕೆ ಶಿವಕುಮಾರ್ ಕರೆ ಬೆನ್ನಲ್ಲೇ ಸದ್ಯ ಬಸವರಾಜ ಹೊರಟ್ಟಿ ಬೇಸರಗೊಂಡಿದ್ದಾರೆ.
ಮನಸ್ಸಿಗೆ ತುಂಬಾ ನೋವಾಗಿದೆ ಎಂದ ಬಸವರಾಜ ಹೊರಟ್ಟಿ
ಈ ಕುರಿತಾಗಿ ಟಿವಿ9 ಜೊತೆಗೆ ಮಾತನಾಡಿರುವ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ‘ಇದು ಕಲುಷಿತ ರಾಜಕಾರಣ. ಮನಸ್ಸಿಗೆ ತುಂಬಾ ನೋವಾಗಿದೆ. ಇತಿಹಾಸದಲ್ಲೇ ಈ ರೀತಿ ಆಗಿರಲಿಲ್ಲ. ಪಕ್ಷದ ಲೆಟರ್ ಹೆಡ್ನಲ್ಲಿ ಎಂದೂ ಈ ರೀತಿ ಆಯ್ಕೆ ಆಗಿರಲಿಲ್ಲ. ಸಭಾಪತಿ, ಸಭಾಧ್ಯಕ್ಷರ ಸ್ಥಾನ ಸಾಂವಿಧಾನಿಕ ಹುದ್ದೆ. ನನಗೆ ನೋಟಿಸ್ ಕೊಡಲಿ ಉತ್ತರ ಕೊಡುತ್ತೇನೆ. ರಾಜಕಾರಣದಲ್ಲಿ ಒಂದು ಕಪ್ಪು ಚುಕ್ಕೆನೂ ಇಲ್ಲ. ಯಾವ ಕಾರಣಕ್ಕೆ ರಾಜೀನಾಮೆ ಕೇಳಿದರು ಎನ್ನುವುದು ಮುಖ್ಯ’ ಎಂದಿದ್ದಾರೆ.
ಇದನ್ನೂ ಓದಿ: ನಮ್ಮಲ್ಲಿ ಯಾರಿಗೂ ಅಸಮಾಧಾನವಿಲ್ಲ, ಯಾರೂ ರಾಜೀನಾಮೆ ನೀಡಿಲ್ಲ ಎಂದ ಬಿಕೆ ಹರಿಪ್ರಸಾದ್
ಸಿಎಂ ಡಿಕೆ ಶಿವಕುಮಾರ್ ಕರೆ ವಿಚಾರವಾಗಿ ಮಾತನಾಡಿದ ಅವರು, ‘ಅರ್ಧ ಗಂಟೆ ಹಿಂದೆ ಸಿಎಂ ಕರೆ ಮಾಡಿದ್ದರು. ಪಕ್ಷದಿಂದ ಆಯ್ಕೆ ಪ್ರಕ್ರಿಯೆ ಆಗಿದೆ. ತಾವು ರಾಜೀನಾಮೆ ನೀಡಿ ಅಂದರು. ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ, ನಾನು ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಜೊತೆಗೆ ತೀರ್ಮಾನ ಮಾಡುತ್ತೇನೆ’ ಎಂದರು.
ವಿಪಕ್ಷ ನಾಯಕರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಎಂದ ಹೊರಟ್ಟಿ
‘ಈ ರೀತಿ ಆಗುತ್ತೆ ಅಂತಾ ನಿರೀಕ್ಷೆ ಇರಲಿಲ್ಲ. ಸಭಾಪತಿ ಪೀಠಕ್ಕೆ ಅವಮಾನ ಮಾಡಿದಂತೆ. ನನ್ನ ಅವಧಿ ಇನ್ನೂ ಇದೆ. ಹೀಗಾಗಿ ಸದ್ಯಕ್ಕೆ ರಾಜೀನಾಮೆ ಕೊಡಲ್ಲ. ವಿಪಕ್ಷ ನಾಯಕರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ’ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:01 pm, Tue, 4 August 26



