ಪ್ರಯಾಣಿಕರಿಗೆ ಗುಡ್ನ್ಯೂಸ್: ಇನ್ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 24/7 ಸಿಗಲಿದೆ ವೈದ್ಯಕೀಯ ಸೇವೆ
ಮಣಿಪಾಲ್ ಹಾಸ್ಪಿಟಲ್ಸ್ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 24/7 ವೈದ್ಯಕೀಯ ಕೇಂದ್ರ ಸ್ಪಾಪನೆಗೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಕೇಂದ್ರವು ಒಪಿಡಿ ಸಮಾಲೋಚನೆ, ತುರ್ತು ಚಿಕಿತ್ಸೆ, ಮತ್ತು ಹೃದಯದ ಮೇಲ್ವಿಚಾರಣಾ ವ್ಯವಸ್ಥೆಯಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಿದೆ.

ಬೆಂಗಳೂರು, ಫೆಬ್ರವರಿ 24: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಸೇವೆಗಳಿಗಾಗಿ ಬೆಂಗಳೂರು ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ (BIAL) ಜೊತೆ ಮಣಿಪಾಲ್ ಹಾಸ್ಪಿಟಲ್ಸ್ ಪಾಲುದಾರಿಕೆ ಮಾಡಿಕೊಂಡಿದೆ. ಆ ಮೂಲಕ ಬಿಎಲ್ಆರ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಸೇರಿದಂತೆ ಸಿಬ್ಬಂದಿಗಳಿಗೆ 24 ಗಂಟೆ ವೈದ್ಯಕೀಯ ಸೇವೆಗಳನ್ನು ಒದಗಿಸಲು ಮುಂದಾಗಿದೆ.
ವಿಮಾನ ನಿಲ್ದಾಣ ವೈದ್ಯಕೀಯ ಕೇಂದ್ರವು ಅತ್ಯಾಧುನಿಕ ಸೌಲಭ್ಯಗಳೊಂದಿಗೆ 24/7 ಕಾರ್ಯನಿರ್ವಹಿಸಲಿವೆ. ಒಪಿಡಿ, ಪ್ರಥಮ ಚಿಕಿತ್ಸೆ, ಎಕ್ಸ್ ರೇ ಸೇರಿದಂತೆ ತ್ವರಿತ ಮತ್ತು ಪರಿಣಾಮಕಾರಿ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಜೊತೆಗೆ ಹೃದಯ ಸ್ತಂಭನ, ಪಾರ್ಶ್ವವಾಯು ಮತ್ತು ಹಠಾತ್ ವೈದ್ಯಕೀಯ ತೊಂದರೆ ಸೇರಿದಂತೆ ತುರ್ತು ಪರಿಸ್ಥಿತಿಗಳ ಬಗ್ಗೆ ಜಾಗೃತಿ ಕೂಡ ಮೂಡಿಸಲಾಗುತ್ತಿದೆ. ಆ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸೇವೆಗಳನ್ನು ಒದಗಿಸಲು ಮಣಿಪಾಲ್ ಹಾಸ್ಪಿಟಲ್ಸ್ ಮುಂದಾಗುತ್ತಿದೆ.
ಮಣಿಪಾಲ್ ಹಾಸ್ಪಿಟಲ್ಸ್ ಅಧ್ಯಕ್ಷ ಡಾ. ಎಚ್. ಸುದರ್ಶನ್ ಬಲ್ಲಾಳ್ ಹೇಳಿದ್ದಿಷ್ಟು
ಮಣಿಪಾಲ್ ಹಾಸ್ಪಿಟಲ್ಸ್ ಅಧ್ಯಕ್ಷ ಡಾ. ಹೆಚ್. ಸುದರ್ಶನ್ ಬಲ್ಲಾಳ್ ಮಾತನಾಡಿ, ವೈದ್ಯಕೀಯ ತುರ್ತು ಪರಿಸ್ಥಿತಿ ಯಾವುದೇ ಸಮಯದಲ್ಲಿ, ಯಾರಿಗಾದರೂ ಬರಬಹುದು. ಅದರಲ್ಲೂ ಸಾರಿಗೆ ಕೇಂದ್ರಗಳಲ್ಲಿ ಇದು ಹೆಚ್ಚಾಗಿದೆ. ಇನ್ನು ಇತ್ತೀಚೆಗೆ ಬಿಎಲ್ಆರ್ ವಿಮಾನ ನಿಲ್ದಾಣದಲ್ಲಿ ಮಣಿಪಾಲ್ ಆಸ್ಪತ್ರೆ ವೈದ್ಯರೊಬ್ಬರು ಸಿಪಿಆರ್ ಮಾಡಿ ಪ್ರಯಾಣಿಕರ ಜೀವ ಉಳಿಸಿದ್ದರು. ಹಾಗಾಗಿ ವೈದ್ಯಕೀಯ ಸೇವೆಗಳು ಅಗತ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಏರ್ ಶೋ ಹೊತ್ತಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ!
ವಿಮಾನ ನಿಲ್ದಾಣ ವೈದ್ಯಕೀಯ ಕೇಂದ್ರಗಳು ಅತ್ಯಾಧುನಿಕ ಡಿಜಿಟಲ್ ಕಾರ್ಡಿಯಾಕ್ ಮಾನಿಟರಿಂಗ್ ವ್ಯವಸ್ಥೆಯನ್ನು ಹೊಂದಿವೆ. ಹಾಗಾಗಿ ಪ್ರಯಾಣಿಕರು ತ್ವರಿತವಾಗಿ ಮತ್ತು ವಿಶೇಷ ವೈದ್ಯಕೀಯ ಸೇವೆಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. ಜೊತೆಗೆ ಅವರ ಪ್ರಯಾಣ ಮತ್ತು ಸುರಕ್ಷತೆ ನಮ್ಮ ಹೊಣೆಯಾಗಿರುತ್ತದೆ ಎಂದಿದ್ದಾರೆ.
ಮಣಿಪಾಲ್ ಹಾಸ್ಪಿಟಲ್ಸ್ನೊಂದಿಗೆ ಪಾಲುದಾರಿಕೆ ಹೊಂದಿರುವುದು ಸಂತೋಷ: ಹರಿ ಕೆ. ಮರಾರ್
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಎಂಡಿ ಮತ್ತು ಸಿಇಒ ಹರಿ ಕೆ. ಮರಾರ್ ಮಾತನಾಡಿ, ಬಿಎಲ್ಆರ್ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಸೇವೆಗಳಿಗಾಗಿ ಮಣಿಪಾಲ್ ಆಸ್ಪತ್ರೆಗಳೊಂದಿಗೆ ಪಾಲುದಾರಿಕೆ ಹೊಂದಿರುವುದು ಸಂತಸ ತಂದಿದೆ. ಈ ಪಾಲುದಾರಿಕೆಯು ಪ್ರಯಾಣಿಕರ ಸುರಕ್ಷತೆಗೆ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.