ವ್ಹೀಲ್‌ ಚೇರ್‌ನಲ್ಲಿದ್ದ ವೃದ್ಧ ಪತಿ ಎದುರೇ ಪತ್ನಿಯ ಕೊಲೆ: ಚಿನ್ನಾಭರಣ ದೋಚಿ ಎಸ್ಕೇಪ್​​

ನೆಲಮಂಗಲದ ಪೇಟೆ ಬೀದಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ವ್ಹೀಲ್‌ಚೇರ್‌ನಲ್ಲಿದ್ದ ಪತಿಯ ಎದುರೇ 60 ಮಹಿಳೆ ಕತ್ತು ಸೀಳಿ, ಬರ್ಬರವಾಗಿ ಕೊಲೆ ಮಾಡಲಾಗಿದೆ. ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿ ಆಕೆಯ ಮೈಮೇಲಿದ್ದ 100 ಗ್ರಾಂಗೂ ಹೆಚ್ಚು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಸರಣಿ ಚಿನ್ನಾಭರಣ ದರೋಡೆ ಪ್ರಕರಣಗಳು ಈಗ ಕೊಲೆ ಹಂತಕ್ಕೆ ತಲುಪಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ವ್ಹೀಲ್‌ ಚೇರ್‌ನಲ್ಲಿದ್ದ ವೃದ್ಧ ಪತಿ ಎದುರೇ ಪತ್ನಿಯ ಕೊಲೆ: ಚಿನ್ನಾಭರಣ ದೋಚಿ ಎಸ್ಕೇಪ್​​
ಮಹಿಳೆಯ ಕೊಲೆ
Image Credit source: Tv9 Kannada

Updated on: Feb 19, 2026 | 7:00 AM

ನೆಲಮಂಗಲ, ಫೆಬ್ರವರಿ 19: ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ವ್ಹೀಲ್‌ ಚೇರ್‌ನಲ್ಲಿದ್ದ ವೃದ್ಧ ಪತಿ ಎದುರೇ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿ ಆಕೆಯ ಮೈಮೇಲಿದ್ದ ಚಿನ್ನಾಭರಣ ದೋಚಿರುವ ಆಘಾತಕಾರಿ ಘಟನೆ ನೆಲಮಂಗಲದ ಪೇಟೆ ಬೀದಿಯಲ್ಲಿ ನಡೆದಿದೆ. ಶೋಭಾ (60) ಮೃತ ಮಹಿಳೆಯಾಗಿದ್ದು, ಆರೋಪಿಗಾಗಿ ಪೊಲೀಸರ ಶೋಧ ಮುಂದುವರಿದಿದೆ. ಮೇಲಿಂದ ಮೇಲೆ ನಡೆಯುತ್ತಿರುವ ಚಿನ್ನಾಭರಣ ದರೋಡೆ ಪ್ರಕರಣ ಈಗ ಕೊಲೆ ಹಂತಕ್ಕೂ ಹೋಗಿರೋದು ಸ್ಥಳೀಯರ ನಿದ್ದೆಗೆಡಿಸಿದೆ.

ಬರ್ಬರವಾಗಿ ಕೊಲೆಯಾಗಿರುವ ಮಹಿಳೆ ಶೋಭಾ ನೆಲಮಂಗಲದ ಪೇಟೆ ಬೀದಿಯಲ್ಲಿ ತಮ್ಮ ಪತಿಯೊಂದಿಗೆ ವಾಸವಾಗಿದ್ದರು. ಈ ದಂಪತಿಗೆ ಮಕ್ಕಳಿರಲಿಲ್ಲ. ಪತಿಯೂ 12 ವರ್ಷಗಳ ಹಿಂದೆ ಬ್ರೈನ್​​ ಸ್ಟ್ರೋಕ್​​ ಆಗಿ ಹಾಸಿಗೆ ಹಿಡಿದ್ದ ಕಾರಣ ಇವರೇ ಮನೆಗೆ ಆಧಾರವಾಗಿದ್ದರು. ಅನಾರೋಗ್ಯ ಪೀಡಿತ ಪತಿಯನ್ನು ಮಗುವಿನಂತೆ ಆರೈಕೆ ಮಾಡುವ ಜೊತೆಗೆ ಸುತ್ತಮುತ್ತಲಿನ ನಿವಾಸಿಗಳ ಜೊತೆಗೂ ಅನ್ಯೋನ್ಯವಾಗಿದ್ದರು. ಇನ್ನು ಇವರದ್ದು ಶ್ರೀಮಂತ ಕುಟುಂಬ ಎನ್ನಲಾಗಿದ್ದು, ಶೋಭಾ ಅವರ ಪತಿಗೆ ಫಿಸಿಯೋಥೆರಪಿ ಮಾಡಲು ಪ್ರತಿದಿನ ವೈದ್ಯರು ಮನೆಗೆ ಬರುತ್ತಿದ್ದರು. ಎಂದಿನಂತೆ ನಿನ್ನೆಯೂ ಅವರು ಬಂದ ವೇಳೆ ಕೊಲೆ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಮರ್ಯಾದಾ ಹತ್ಯೆ ಯತ್ನ; ಅದೃಷ್ಟವಶಾತ್ 4 ತಿಂಗಳ ಗರ್ಭಿಣಿ ಪ್ರಾಣಾಪಾಯದಿಂದ ಪಾರು

ಮಾಹಿತಿಗಳ ಪ್ರಕಾರ ಮಧ್ಯಾಹ್ನ 4 ಗಂಟೆ ಸರಿಸುಮಾರಿಗೆ ಪೇಟೆ ಬೀದಿಯಿಂದ ಮನೆಗೆ ಬಂದಿದ್ದ ಶೋಭಾರನ್ನು ಆರೋಪಿ ಹಿಂಬಾಲಿಸಿದ್ದಾನೆ. ಇವರ ಮೈಮೇಲಿದ್ದ ಸುಮಾರು 100 ಗ್ರಾಂಗಳಿಗೂ ಹೆಚ್ಚು ತೂಕದ ಒಡವೆ ಆರೋಪಿ ಕಣ್ಣಿಗೆ ಬಿದ್ದಿದೆ. ಹೀಗಾಗಿ ನೀರು ಕೇಳುವ ನೆಪದಲ್ಲಿ ಮನೆಗೆ ಬಂದ ದುಷ್ಕರ್ಮಿ, ತನ್ನ ಬಳಿಯಿದ್ದ ಚಾಕುವಿನಿಂದ ಶೋಭಾರ ಕತ್ತು ಸೀಳಿದ್ದಾನೆ. ಆತನ ದಾಳಿಯಿಂದ ತಪ್ಪಿಸಿಕೊಳ್ಳಲು ಮಹಿಳೆ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಬಳಿಕ ಶೋಭಾರ ಮೈಮೇಲಿದ್ದ ಚಿನ್ನಾಭರಣವನ್ನು ಆರೋಪಿ ದೋಚಿ ಎಸ್ಕೇಪ್​​ ಆಗಿದ್ದಾನೆ. ಘಟನಾ ಸ್ಥಳಕ್ಕೆ ನೆಲಮಂಗಲ ಟೌನ್ ಪೊಲಿಸರು ಸೇರಿದ್ದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.

ವರದಿ: ಮಂಜುನಾಥ್​, ಟಿವಿ9 ನೆಲಮಂಗಲ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us