AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳದಲ್ಲಿ ಮರ್ಯಾದಾ ಹತ್ಯೆ ಯತ್ನ: ಅದೃಷ್ಟವಶಾತ್ 4 ತಿಂಗಳ ಗರ್ಭಿಣಿ ಪ್ರಾಣಾಪಾಯದಿಂದ ಪಾರು

ಕರ್ನಾಟಕದಲ್ಲಿ ಮರ್ಯಾದಾ ಹತ್ಯೆ ಹೆಚ್ಚಾಗುತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ಮರ್ಯಾದೆಗೇಡು ಹತ್ಯೆ ತಡೆಯಲು ಪ್ರತ್ಯೇಕ ಕಾಯ್ದೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ. ಇದರ ನಡುವೆ ಕೊಪ್ಪಳದಲ್ಲಿ ಇಂದು (ಫೆಬ್ರವರಿ 18) ಮರ್ಯಾದಾ ಹತ್ಯೆ ಯತ್ನ ಪ್ರಕರಣ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ 4 ತಿಂಗಳ ಗರ್ಭಿಣಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಕೊಪ್ಪಳದಲ್ಲಿ ಮರ್ಯಾದಾ ಹತ್ಯೆ ಯತ್ನ: ಅದೃಷ್ಟವಶಾತ್ 4 ತಿಂಗಳ ಗರ್ಭಿಣಿ ಪ್ರಾಣಾಪಾಯದಿಂದ ಪಾರು
ಪ್ರಾತಿನಿಧಿಕ ಚಿತ್ರ
ಶಿವಕುಮಾರ್ ಪತ್ತಾರ್
| Edited By: |

Updated on: Feb 18, 2026 | 9:14 PM

Share

ಕೊಪ್ಪಳ, (ಫೆಬ್ರವರಿ 18): ಕೊಪ್ಪಳ (Koppal) ತಾಲೂಕಿನ ಹಂದ್ರಾಳ ಗ್ರಾಮದಲ್ಲಿ ಮರ್ಯಾದೆ ಹತ್ಯೆ ಯತ್ನ (honor killing) ನಡೆದಿರುವ ಘಟನೆ ನಡೆದಿದೆ. ಸಹೋದರಿ ಬೇರೆ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಸಹೋದರ ಆಕೆಯನ್ನು ಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ನಾಲ್ಕು ತಿಂಗಳು ಗರ್ಭಿಣಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. 23 ವರ್ಷದ ಮೀನಾಕ್ಷಿ ಕಳೆದ ಎರಡು ವರ್ಷಗಳ ಹಿಂದೆ ST ಸಮುದಾಯದ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದು, ಸದ್ಯ ಮೀನಾಕ್ಷಿ ನಾಲ್ಕು ತಿಂಗಳು ಗರ್ಭಿಣಿ. ಇದನ್ನು ಲೆಕ್ಕಿಸದ ಸಹೋದರ ಮಂಜುನಾಥ್ ಎನ್ನುವಾತ ಮೀನಾಕ್ಷಿಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಮೀನಾಕ್ಷಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ,

ಕೊಪ್ಪಳ ಜಿಲ್ಲೆ ಕುಕನೂರ ತಾಲೂಕಿನ ಚಿತ್ತಾಪೂರದ ಕುರುಬ ಸಮುದಾಯದ ಮೀನಾಕ್ಷಿ ಕುಟುಂಬದ ವಿರೋಧದ ನಡುವೆಯೂ ಎರಡು ವರ್ಷಗಳ ಹಿಂದೆ ಹಂದ್ರಾಳ ಗ್ರಾಮದ ಉದಯ ಎನ್ನುವ ST ಸಮುದಾಯದ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದಳು. ಇದರಿಂದ ಮೀನಾಕ್ಷಿ ಸಹೋದರ ಮಂಜುನಾಥ್ ಕೆರಳಿದ್ದು, ಸಿಟ್ಟಿನಲ್ಲೇ ಇದ್ದ. ಆದ್ರೆ, ಇಂದು (ಫೆಬ್ರವರಿ 18) ಮೀನಾಕ್ಷಿ ಪತಿ ಉದಯ ಸಹೋದರನ ಮದುವೆ ಇದ್ದರಿಂದ ಹಂದ್ರಾಳ ಗ್ರಾಮಕ್ಕೆ ಬಂದಿದ್ದರು.

ಇದನ್ನೂ ಓದಿ: ಹಂಪಿಯಲ್ಲಿ ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ, ವಿದೇಶಿಗನ ಕೊಲೆ ಕೇಸ್: ಮೂವರಿಗೆ ಗಲ್ಲು ಶಿಕ್ಷೆ

ಮತ್ತೊಂದೆಡೆ ಮೀನಾಕ್ಷಿ ಸಹೋದರ ಮಂಜುನಾಥ್ ಸಿಟ್ಟಿನಲ್ಲಿದ್ದ. ಯಾವಾಗ ಸಹೋದರಿ ಮೀನಾಕ್ಷಿ ಹಂದ್ರಾಳ ಬಂದಿರುವ ವಿಚಾರ ಗೊತ್ತಾಗುತ್ತಿದ್ದಂತೆಯೇ ಮಂಜುನಾಥ್, ಮದುವೆ ಸಮಯದಲ್ಲಿ ಕಾದು ಕೊಡಲಿಯಿಂದ ಸಹೋದರಿಗೆ ಮೀನಾಕ್ಷಿಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಕೊಡಲಿ ಏಟಿನಿಂದ ಗಾಯಗೊಂಡಿರುವ ಮೀನಾಕ್ಷಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಳವಂಡಿ ಪೊಲೀಸರು ದೌಡಾಯಿಸಿ, ಸಹೋದರಿಯನ್ನು ಕೊಲೆ ಮಾಡಲು ಯತ್ನಿಸಿದ್ದ ಸಹೋದರ ಮಂಜುನಾಥನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಕುಟುಂಬದ ವಿರೋಧದ ನಡುವೆ ಅನ್ಯ ಜಾತಿ ಯುವಕನೊಂದಿಗೆ ಮದುವೆಯಾಗಿದ್ದಕ್ಕೆ ಕೋಪಗೊಂಡು ಸಹೋದರಿಯನ್ನು ಹತ್ಯೆಗೆ ಯತ್ನಿಸಿದ್ದಾನೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ