ರಾಜಕಾಲುವೆಯಲ್ಲಿ ಕೊಚ್ಚಿಹೋದ ಯುವಕ: ನಿನ್ನೆಯ ಮಳೆಗೆ ಬೆಂಗಳೂರಿನಲ್ಲಿ ಟೆಕ್ಕಿ ಬಲಿ ಬೆನ್ನಲ್ಲೇ ಮತ್ತೊಂದು ದುರಂತ

ಭಾನುವಾರ ಸಂಜೆ ಸುರಿದ ಮಳೆಗೆ ಇನ್ಫೋಸಿಸ್ ಉದ್ಯೋಗಿ ಬಲಿಯಾದ ಬೆನ್ನಲ್ಲೇ 31 ವರ್ಷದ ಯುವಕನೋರ್ವ ರಾಜ ಕಾಲುವೆಗೆ ಕೊಚ್ಚಿಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ರಾಜಕಾಲುವೆಯಲ್ಲಿ ಕೊಚ್ಚಿಹೋದ ಯುವಕ: ನಿನ್ನೆಯ ಮಳೆಗೆ ಬೆಂಗಳೂರಿನಲ್ಲಿ ಟೆಕ್ಕಿ ಬಲಿ ಬೆನ್ನಲ್ಲೇ ಮತ್ತೊಂದು ದುರಂತ
ಲೋಕೇಶ್ (31) ಸಾವನ್ನಪ್ಪಿದ ಯುವಕ

Updated on: May 22, 2023 | 10:33 AM

ಬೆಂಗಳೂರು: ಮುಂಗಾರು ಆರಂಭಕ್ಕೆ ಇನ್ನೂ ಕೆಲವು ದಿನಗಳು ಬಾಕಿಯಿವೆ. ಆದ್ರೆ, ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ಕಳೆದೆರಡು ದಿನಗಳಿಂದ ಮಳೆರಾಯ ಅಬ್ಬರಿಸುತ್ತಿದ್ದಾನೆ, ನಿನ್ನೆ(ಭಾನುವಾರ) ಸುರಿದ ಮಳೆ ಮಹಾನಗರ ಬೆಂಗಳೂರಿಗೆ ನರಕವನ್ನೇ ತೋರಿಸಿದ್ದಾನೆ. ಅಲ್ಲದೇ ಮಹಿಳಾ ಟೆಕ್ಕಿಯನ್ನು ಬಲಿ ಪಡೆದುಕೊಂಡಿದೆ.  ದುರ್ಘಟನೆ ಬೆನ್ನಲ್ಲೇ ನಿನ್ನೆಯ ಮಹಾಮಳೆಗೆ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಯುವಕನೋರ್ವ ರಾಜಕಾಲುವೆಯಲ್ಲಿ ಕೊಚ್ಚಿಹೋಗಿರುವ ಘಟನೆ ನಡೆದಿದೆ. ಕೆಪಿ ಅಗ್ರಹಾರದ ರಾಜಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಲೋಕೇಶ್(31) ಮೃತದೇಹ ಇಂದು(ಮೇ 22) ಬ್ಯಾಟರಾಯನಪುರದ ರಾಜಕಾಲುವೆ ಬಳಿ ಪತ್ತೆಯಾಗಿದೆ.

ಇದನ್ನೂ ಓದಿ: Bangalore Rain: ಬೆಂಗಳೂರು ಮಳೆ ದುರಂತ, ಮಾನವೀಯತೆ ಮರೆತ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆ, ಇನ್ಫೋಸಿಸ್ ಉದ್ಯೋಗಿ ಬಲಿ 

ಸದ್ಯಕ್ಕೆ ಲೋಕೇಶ್ ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅವೈಜ್ಞಾನಿಕ ರಾಜಕಾಲುವೆ ಕಾಮಗಾರಿಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ಫೋಸಿಸ್​ ಉದ್ಯೋಗಿ ಬಲಿ

ಬೆಂಗಳೂರಿನಲ್ಲಿ ಭಾನುವಾರ ವರುಣ ಅಕ್ಷರಶಃ ಅಟ್ಟಹಾಸ ಮೆರೆದಿದ್ದಾನೆ. ಸುರಿದಿದ್ದು ಕೇವಲ ಅರ್ಧ, ಮುಕ್ಕಾಲು ಗಂಟೆಯಾದ್ರೂ, ತಿಂಗಳಿಗಾಗೋವಷ್ಟು ಹೊಡೆತ ಕೊಟ್ಟಿದ್ದಾನೆ. ಅದರಲ್ಲೂ ಬೆಂಗಳೂರಿನ ಕೆ.ಆರ್. ಸರ್ಕಲ್ ಬಳಿ ಅಂಡರ್​ ಪಾಸ್​ನಲ್ಲಿ ಕಾರು ಮುಳುಗಿ, ಅದರಲ್ಲಿದ್ದ ಆರು ಜನರ ಪೈಕಿ ಬಾನುರೇಖಾ ಎನ್ನುವ ಯುವತಿ ಬಲಿಯಾಗಿದ್ದಳು. ಕಾರಿನಲ್ಲಿದ್ದವರ ರಕ್ಷಣೆಯ ಒಂದೊಂದು ದೃಶ್ಯ ಎದೆ ಝೆಲ್ ಎನ್ನುವಂತೆ ಮಾಡಿತ್ತು.

ಬೈಕ್ ಸವಾರನಿಗೆ ಗಾಯ

ಇನ್ನು ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಬೈಕ್ ಸವಾರನೊಬ್ಬ ಸಾವಿನ ದವಡೆಯಿಂದ ಜಸ್ಟ್ ಮಿಸ್ ಆಗಿದ್ದಾನೆ. ಧಾರಾಕಾರ ಮಳೆಗೆ ಕುಮಾರಕೃಪಾ ರಸ್ತೆಯಲ್ಲಿ ಬೃಹತ್ ಮರವೊಂದು ಕಾರು, ಬೈಕ್​ ಮೇಲೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಬಚಾವ್ ಆಗಿದ್ರೆ, ಬೈಕ್ ಸವಾರನ ತಲೆಗೆ ಗಾಯವಾಗಿದೆ. ಕೂಡಲೇ ಗಾಯಾಳುವನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಒಟ್ಟಿನಲ್ಲಿ ಭಾನುವಾರ ಬೆಂಗಳೂರಿನಲ್ಲಿ ಸುರಿದ ಕೇವಲ ಅರ್ಧ ಗಂಟೆ ಮಳೆ ಎರಡು ಅಮಾಯಕ ಜೀವವನ್ನೇ ಬಲಿ ಪಡೆದಿದೆ. ರಾಜ್ಯ ರಾಜಧಾನಿ ಅಲ್ಲೋಲ ಕಲ್ಲೋಲವೇ ಆಗಿದೆ. ಎಲ್ಲೆಂದರಲ್ಲಿ ಮರ, ವಿದ್ಯುತ್ ಕಂಬಗಳು ಧರೆಗುರುಳಿ ಬಿದ್ದಿದ್ದು, ಒಂದೇ ಮಳೆಗೆ ಜನ ಜೀವನ ಅಸ್ತವ್ಯವಸ್ಥವಾಗಿದೆ.

Published On - 10:20 am, Mon, 22 May 23

Loading...
Unable to load recommendations.
Follow Us