
ಬೆಂಗಳೂರು, ಜೂನ್ 10: ಕಸದ ಟೆಂಡರ್ನಲ್ಲಿ ಅಕ್ರಮ ನಡೆದ ಆರೋಪ ಸಂಬಂಧ ರಾಜ್ಯಪಾಲ ಗೆಹ್ಲೋಟ್ಗೆ ಬಿಜೆಪಿ (BJP) ನಿಯೋಗ ದೂರು ಸಲ್ಲಿಕೆ ಮಾಡಿದೆ. ಬೆಂಗಳೂರಿನ ಕಸದ ಟೆಂಡರ್ನಲ್ಲಿ ದೊಡ್ಡ ಅಕ್ರಮ ನಡೆದಿದ್ದು, ಸಿಬಿಐ ತನಿಖೆಗೆ ಕೊಡಿ ಎಂದು ರಾಜ್ಯಪಾಲರಿಗೆ ನೀಡಿರುವ ದೂರಲ್ಲಿ ಬಿಜೆಪಿ ಆಗ್ರಹಿಸಿದೆ. ಈ ಬಗ್ಗೆ ಟಿವಿ9ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾಹಿತಿ ನೀಡಿದ್ದು, ಬೆಂಗಳೂರಿನ ನಿವಾಸಿಗಳು ಬೆಚ್ಚಿ ಬೀಳುವಂತಹ ಹಗರಣ ಇದಾಗಿದ್ದು, ಇಷ್ಟುದಿನ ಯಾರಿಗೂ ಗೊತ್ತಿರಲಿಲ್ಲ. ದೆಹಲಿ ಮೂಲದ ಕಂಪನಿಗೆ ಟೆಂಡರ್ ನೀಡುವ ಮೂಲಕ ದೇಶದಲ್ಲಿಯೇ ದೊಡ್ಡ ಗಾರ್ಬೆಜ್ ಹಗರಣವನ್ನು ಕಾಂಗ್ರೆಸ್ ನೆತೃತ್ವದ ಸರ್ಕಾರ ನಡೆಸಿದೆ. ಈ ಬಗ್ಗೆ ಲೋಕಾಯುಕ್ತ ಕಚೇರಿಗೂ ಭೇಟಿ ನೀಡಿ ಅಫಿಡವಿಟ್ ಸಲ್ಲಿಸುತ್ತೇವೆ ಎಂದವರು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ಕಸ ಹಾಕಿ ಚಿನ್ನ ಪಡೆಯಿರಿ ಎಂದು ಹೇಳಿದ್ದರು. ಅವರ ನಾಯಕ ಹೇಳಿದ್ದನ್ನು ಕಾಂಗ್ರೆಸ್ನವರು ಫಾಲೋ ಮಾಡ್ತಿದ್ದಾರೆ. ಕಸದ ಹೆಸರಿನಲ್ಲಿ 36 ಸಾವಿರ ಕೋಟಿ ಲೂಟಿ ಮಾಡಲಾಗಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯದ ಕಾಂಗ್ರೆಸ್ ಇಬ್ಬರ ಕೈವಾಡವೂ ಇದೆ. ಕಸಕ್ಕೆ ಸಂಬಂಧಿಸಿದ ಟೆಂಡರ್ ಅನ್ನು ರದ್ದು ಮಾಡಬೇಕು, ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಾಜ್ಯಸಭಾ ಟಿಕೆಟ್ ಕೈತಪ್ಪಿದ ಬಗ್ಗೆ ಮೌನ ಮುರಿದ ದೇವೇಗೌಡರು; ಯಾರ ಹಂಗಿಲ್ಲದೆ ಮಾತಾಡ್ತೇನೆ ಎಂದ ಹೆಚ್ಡಿಡಿ
ಅಲ್ಲದೆ ಟೆಂಡರ್ ಪಡೆದ ಕಂಪನಿಯನ್ನು ವರ್ಲ್ಡ್ ಬ್ಯಾಂಕ್ ಡಿಬಾರ್ ಮಾಡಿದೆ. ರಾಜ್ಯದಲ್ಲಿಯೂ ಈ ಹಿಂದೆ ಬಿಬಿಎಂಪಿ ಕಂಪನಿಯನ್ನು 2016ರಲ್ಲಿ ಟರ್ಮಿನೇಟ್ ಮಾಡಿತ್ತು. ಹೀಗಿದ್ದರೂ ಬ್ಲ್ಯಾಕ್ ಲಿಸ್ಟ್ ಕಂಪನಿಗೆ ಟೆಂಡರ್ ಕೊಡಲು ದೆಹಲಿಯಿಂದ ಕರೆ ಬರುತ್ತೆ. ಹೈಕಮಾಂಡ್ ಕರೆ ಬಂದ ಹಿನ್ನೆಲೆಯಲ್ಲಿ ಕಳೆದ ತಿಂಗಳ ಸಚಿವ ಸಂಪುಟ ಸಭೆಯಲ್ಲಿ ಕೊನೆಯದಾಗಿ ಅಜೆಂಡಾದಲ್ಲಿ ಸೇರಿಸಿ ಒಪ್ಪಿಗೆ ಪಡೆದಿದ್ದಾರೆ. ಸಭೆ ವೇಳೆ 36 ಸಾವಿರ ಕೋಟಿ ಮೌಲ್ಯದ ಕಸದ ಟೆಂಡರ್ ವಿಷಯ ಕೇಳಿ ಸಚಿವರು ಗರಬಡಿದಂತಾಗಿದ್ದರು. ಆಗ ಸಿದ್ದರಾಮಯ್ಯ ಇದು ಹೈಕಮಾಂಡ್ನಿಂದ ಬಂದಿರೋದು ಎಂದ ಬಳಿಕ ಸಂಪುಟದಲ್ಲಿ ಅನುಮೋದನೆ ಸಿಗುತ್ತೆ. ಕಸದ ಟೆಂಡರ್ ಕೊಡುವ ಬಗ್ಗೆ ಸಂಪುಟ ಉಪಸಮಿತಿ ರಚಿಸಲಾಗಿದೆ. ಸಿದ್ದರಾಮಯ್ಯ ರಚಿಸಿದ್ದ ಸಮಿತಿ ರದ್ದು ಮಾಡಿ ಡಿಕೆಶಿ ಬೇರೊಂದು ಸಮಿತಿ ರಚಿಸಿದ್ದಾರೆ. ಒಂದು ವಾರದೊಳಗೆ ವರದಿ ಕೊಡಲು ಹೇಳಿದ್ದಾರೆ. ಇದು ಕಸದಿಂದ ಕಾಸು ಮಾಡುವ ಗೋಲ್ಡನ್ ಸ್ಕೀಂ. ಬೆಂಗಳೂರು ಕಸ ತುಂಬಿಕೊಂಡು ನಾರುತ್ತಿದ್ದರರೆ, ಇವರು ಕಸದ ಟೆಂಡರ್ ಮೂಲಕ ಹೈಕಮಾಂಡ್ ಗೆ ಕಪ್ಪ ಕಾಣಿಕೆ ಕೊಡಲು ಹೊರಟಿದ್ದಾರೆ ಎಂದು ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:34 pm, Wed, 10 June 26