ಯುವತಿಯನ್ನ ಸ್ನೇಹಿತೆ ರೂಮಿಗೆ ಕರೆದೊಯ್ದು ಕೊಲೆಗೈದ ಯುವಕ, ಆಗಿದ್ದೇನು?
ಯುವಕನೋರ್ವ ಯುವತಿಯೊಬ್ಬಳನ್ನು ತನ್ನ ಸ್ನೇಹಿತೆಯ ರೂಮಿಗೆ ಕರೆದುಕೊಂಡು ಹೋಗಿದ್ದಾನೆ. ಆದ್ರೆ, ಅಲ್ಲಿ ಏನಾಯ್ತೋ ಏನೋ ಯುವಕ, ಯುವತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆಂಧ್ರ ಪ್ರದೇಶ ಮೂಲದ ಯುವತಿ ವ್ಯಾಸಾಂಗ ಮಾಡಲೆಂದು ಬೆಂಗಳೂರಿಗೆ ಬಂದಿದ್ದವಳು ಅನ್ಯಾಯವಾಗಿ ಬಲಿಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಬೆಂಗಳೂರು, (ನವೆಂಬರ್ 24): ಯುವಕನೋರ್ವ ಯುವತಿಯನ್ನ (Young Woman) ಸ್ನೇಹಿತೆ ರೂಂಗೆ ಕರೆದೊಯ್ದು ಕೊಲೆಗೈದಿರುವ ಘಟನೆ ಬೆಂಗಳೂರು (Bengaluru) ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ನಡೆದಿದೆ. ದೇವಿಶ್ರೀ (21) ಕೊಲೆಯಾದ ಯುವತಿ. ಮೂಲತಃ ಆಂಧ್ರದ ಅನ್ನಮಯ್ಯ ಜಿಲ್ಲೆಯ ಬಿಕ್ಕಿಂವರೀಪಲ್ಲಿ ಗ್ರಾಮದ ನಿವಾಸಿಯಾಗಿರುವ ದೇವಿಶ್ರೀ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ ದೇವಿಶ್ರೀ ಭಾನುವಾರ ಬೆಳಗ್ಗೆ ಪ್ರೇಮ್ ವರ್ಧನ್ ಎಂಬಾತನ ಜೊತೆ ಸ್ನೇಹಿತೆ ರೂಂಗೆ ತೆರಳಿದ್ದಳು. ಅಲ್ಲಿ ಆಕೆಯನ್ನು ಕೊಲೆ ಮಾಡಿದ್ದು, ಇಂದು (ನವೆಂಬರ್ 24) ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ಮೃತ ದೇವಿಶ್ರೀ ರೆಡ್ಡಪ್ಪ, ಜಗದಂಭ ದಂಪತಿಯ ಕೊನೆಯ ಮಗಳು. ಚೆನ್ನಾಗಿ ಓದಲಿ ಎಂದು ಪೋಷಕರು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಸೇರಿಸಿದ್ದರು. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಪ್ರೇಮ್ ವರ್ಧನ್ಗೆ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ಸದ್ಯ ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಚಟ್ಟ: ಆ ಒಂದು ವೀಡಿಯೋದಿಂದ 9 ವರ್ಷ ಬಳಿಕ ಬಯಲಾಯ್ತು ಪತ್ನಿಯ ಮಸಲತ್ತು
ಈ ಬಗ್ಗೆ ದೇವಿಶ್ರೀ ದೊಡ್ಡಮ್ಮ ಮಾತನಾಡಿ, ಮಗಳು ಇಲ್ಲಿಗೆ ಓದಲಿಕ್ಕೆ ಬಂದಿದ್ದಳು. ಭಾನುವಾರ ಬೆಳಗ್ಗೆ 11 ಗಂಟೆಗೆ ತಂದೆಯೊಂದಿಗೆ ಮಾತಾನಾಡಿದ್ದಾಳೆ. ಆಮೇಲೆ ಕಾಲ್ ಮಾಡಿದ್ರೂ ಪಿಕ್ ಮಾಡಿಲ್ಲ. ಅವಳ ಸ್ನೇಹಿತೆ ಕರೆ ಮಾಡಿ ರೂಂಗೆ ಕರೆಸಿಕೊಂಡಿದ್ದು, ಅಲ್ಲಿ ಏನಾಗಿದೆ ಗೊತ್ತಿಲ್ಲ. ನಮ್ಮ ಮಗಳ ಸಾವಿಗೆ ನ್ಯಾಯಬೇಕೆಂದು ಎಂದು ಆಗ್ರಹಿಸಿದ್ದಾರೆ.
ಇನ್ನು ಪ್ರೇಮ್ ವರ್ಧನ್ ದೇವಿಶ್ರೀಯನ್ನು ಏಕೆ ಕೊಲೆ ಮಾಡಿದ? ಇಬ್ಬರ ನಡುವೆ ಏನಿತ್ತು? ಕೊಲೆ ಮಾಡಲೆಂದೇ ಪ್ಲ್ಯಾನ್ ಮಾಡಿ ಸ್ನೇಹಿತೆ ರೂಮಿಗೆ ಕರೆದುಕೊಂಡು ಹೋಗಿದ್ನಾ ಹೀಗೆ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿದ್ದು,ಈ ಬಗ್ಗೆ ಪೊಲೀಸರ ತನಿಖೆಯಲ್ಲಿ ಕೊಲೆಗೆ ನಿಖರ ಕಾರಣ ತಿಳಿದುಬರಬೇಕಿದೆ.




