ಸ್ಥಳೀಯ ಸಂಸ್ಥೆ ಚುನಾವಣೆ ಮೀಸಲಾತಿ ಕಲ್ಪಿಸಲು ರಾಜ್ಯಪಾಲರಿಗೆ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮನವಿ

ಮೀಸಲಾತಿ ನೀಡಲು ಶೀಘ್ರವೇ ಆಯೋಗ ರಚಿಸಬೇಕು. ಆಯೋಗ ರಚಿಸದಿದ್ದರೆ ಚುನಾವಣೆ ನಡೆಸುವುದು ಕಷ್ಟವಾಗಲಿದೆ. ಒಬಿಸಿ ವರ್ಗಕ್ಕೆ ಸೇರಿದವರೂ ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಆಗುತ್ತದೆ ಎಂದು ಹೇಳಿದರು.

ಸ್ಥಳೀಯ ಸಂಸ್ಥೆ ಚುನಾವಣೆ ಮೀಸಲಾತಿ ಕಲ್ಪಿಸಲು ರಾಜ್ಯಪಾಲರಿಗೆ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮನವಿ
ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್ ಅವರನ್ನು ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮನವಿ ಸಲ್ಲಿಸಿತು.
Edited By:

Updated on: Feb 22, 2022 | 10:56 PM

ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸುಪ್ರೀಂಕೋರ್ಟ್ ತೀರ್ಪಿಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು ಎಂದು ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈ ಮೊದಲು ಮನವಿ ಮಾಡಿದ್ದರು. ಜಾಗೃತ ವೇದಿಕೆ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್ ನಿಯೋಗದ ನೇತೃತ್ವ ವಹಿಸಿದ್ದರು. ಮೀಸಲಾತಿ ನೀಡಲು ಶೀಘ್ರವೇ ಆಯೋಗ ರಚಿಸಬೇಕು. ಆಯೋಗ ರಚಿಸದಿದ್ದರೆ ಚುನಾವಣೆ ನಡೆಸುವುದು ಕಷ್ಟವಾಗಲಿದೆ. ಸುಪ್ರೀಂಕೋರ್ಟ್ ತೀರ್ಪಿಗೆ ಅನುಗುಣವಾಗಿ ಮೀಸಲಾತಿ ಜಾರಿಯಾದರೆ ಒಬಿಸಿ ವರ್ಗಕ್ಕೆ ಸೇರಿದವರಿಗೂ ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಆಗುತ್ತದೆ ಎಂದು ಹೇಳಿದರು.

ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ 27ರಷ್ಟು ಮೀಸಲಾತಿ ನೀಡುವ ಮುನ್ನ ನಿಖರ ಅಂಕಿಅಂಶಗಳ ಆಧಾರದಲ್ಲಿ ತ್ರಿಸ್ತರದ ಪರಿಶೀಲನೆ ನಡೆಸಬೇಕು ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ಹೇಳಿತ್ತು. ಸುಪ್ರೀಂಕೋರ್ಟ್​ನ ಈ ಮಾತಿನಿಂದ ರಾಜಕೀಯ ಮೀಸಲಾತಿಗೆ ಕಂಟಕ ಎದುರಾಗಿದೆ. ಈ ನಿರ್ದೇಶನ ಪಾಲಿಸುವುದು ಹೇಗೆ ಸರ್ಕಾರ ಇದೀಗ ಸಮಾಲೋಚಿಸುತ್ತಿದೆ. ಮೀಸಲಾತಿ ವಿಚಾರ ಬಗೆಹರಿಯುವವರೆಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ನಿಗದಿತ ಅವಧಿಯೊಳಗೆ ಮೀಸಲಾತಿಗೆ ಪೂರಕವಾಗಿ ಸರ್ಕಾರ ಕ್ರಮಕೈಗೊಳ್ಳದಿದ್ದರೆ ಹಿಂದುಳಿದ ವರ್ಗಗಳಿಗೆ ಮೀಸಲಾದ ಸ್ಥಾನಗಳನ್ನು ಸಾಮಾನ್ಯ ಎಂದು ಘೋಷಣೆಯಾಗಲಿದೆ.

‘ಹಿಂದುಳಿದ ವರ್ಗಗಳ ಜನರಿಗೆ ಶೇ 27ರಷ್ಟು ಸ್ಥಾನಗಳನ್ನು ಮೀಸಲಿಡುವ ತೀರ್ಮಾನವನ್ನು ಸಮರ್ಥಿಸಬಲ್ಲ ನಿಖರ ಅಂಕಿಅಂಶವನ್ನು ಒದಗಿಸಲು ರಾಜ್ಯ ಸರ್ಕಾರ ವಿಫಲವಾದರೆ, ಆ ಎಲ್ಲ ಸ್ಥಾನಗಳನ್ನೂ ಸಾಮಾನ್ಯ ಎಂಬುದಾಗಿ ಪರಿಗಣಿಸಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಜ.19ರಂದು ಸುಪ್ರೀಂಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಹೇಳಿದೆ. ಮಹಾರಾಷ್ಟ್ರದ ಚುನಾವಣೆ ಮೀಸಲಾತಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ಈ ನಿರ್ದೇಶನ ಬಂದಿದೆ. ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಈ ನಿರ್ದೇಶನ ಲಭ್ಯವಾಗಲಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಯಾವುದೇ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶ ಬಯಸಿದರೆ ಮೂರು ಹಂತದ ಪರಿಶೀಲನೆ ಪೂರ್ಣಗೊಳಿಸುವುದು ಕಡ್ಡಾಯ. ಒಂದು ವೇಳೆ ಪರಿಶೀಲನೆ ವಿಫಲವಾದರೆ, ಹಿಂದುಳಿದ ವರ್ಗಗಳಿಗೆ ಮೀಸಲಾದ ಸ್ಥಾನಗಳನ್ನು ‘ಸಾಮಾನ್ಯ ವರ್ಗ’ ಎಂದು ಘೋಷಿಸಿ ಚುನಾವಣೆ ನಡೆಸಬೇಕು. ನಿಗದಿತ ಅವಧಿಯ ಬಳಿಕ ಚುನಾವಣೆ ಮುಂದೂಡುವಂತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಖಾನ್ವಿಲ್ಕರ್‌, ದಿನೇಶ್‌ ಮಾಹೇಶ್ವರಿ ಮತ್ತು ರವಿಕುಮಾರ್‌ ಅವರಿದ್ದ ಸುಪ್ರೀಂಕೋರ್ಟ್ ನ್ಯಾಯಪೀಠ ನಿರ್ದೇಶನ ನೀಡಿತ್ತು.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಪ್ರತ್ಯೇಕ ಮೀಸಲಾತಿ ನೀಡದಂತೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆ ಸದ್ಯಕ್ಕೆ ನಡೆಯುವುದು ಅನುಮಾನ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಇತ್ತೀಚೆಗೆ ಹೇಳಿದ್ದರು.

ಇದನ್ನೂ ಓದಿ: ಖಾಸಗಿ ಉದ್ಯೋಗಗಳಲ್ಲಿ ಹರ್ಯಾಣದ ಸ್ಥಳೀಯರಿಗೆ ಶೇ 75 ಕೋಟಾ ಮೀಸಲಾತಿ: ಹೈಕೋರ್ಟ್ ನೀಡಿದ ತಡೆಯಾಜ್ಞೆ ತೆರವುಗೊಳಿಸಿದ ಸುಪ್ರೀಂಕೋರ್ಟ್

ಇದನ್ನೂ ಓದಿ: Hijab Row: ಹಿಜಾಬ್ ಹಾಕುವುದು ಅಥವಾ ಹಾಕದಿರುವುದು ಮುಸ್ಲಿಂ ಮಹಿಳೆಯರ ಹಕ್ಕು: ಹೈಕೋರ್ಟ್​ನಲ್ಲಿ ಎಜಿ ವಾದ

Web contact

TV9 Kannada

Read More
Follow Us