Hijab Row: ಹಿಜಾಬ್ ಹಾಕುವುದು ಅಥವಾ ಹಾಕದಿರುವುದು ಮುಸ್ಲಿಂ ಮಹಿಳೆಯರ ಹಕ್ಕು: ಹೈಕೋರ್ಟ್​ನಲ್ಲಿ ಎಜಿ ವಾದ

ಈ ಪ್ರಕರಣದಲ್ಲಿ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿಯೂ ವಾದ ಮಂಡಿಸಲಾಗುತ್ತಿದೆ. ಅವರ ವಾದ ಒಪ್ಪಿದರೆ ಹಿಜಾಬ್ ಹಾಕದಿರುವುದೂ ಸಹ ಮುಸ್ಲಿಂ ಮಹಿಳೆಯರು ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಲಿದೆ ಎಂದು ಎಜಿ ಹೇಳಿದರು.

Hijab Row: ಹಿಜಾಬ್ ಹಾಕುವುದು ಅಥವಾ ಹಾಕದಿರುವುದು ಮುಸ್ಲಿಂ ಮಹಿಳೆಯರ ಹಕ್ಕು: ಹೈಕೋರ್ಟ್​ನಲ್ಲಿ ಎಜಿ ವಾದ
ಕರ್ನಾಟಕ ಹೈಕೋರ್ಟ್
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 22, 2022 | 9:37 PM

ಬೆಂಗಳೂರು: ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಕಳೆದ ಹಲವು ದಿನಗಳಲ್ಲಿ ಚಾಲ್ತಿಯಲ್ಲಿ ಹಿಜಾಬ್-ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಇಂದೂ (ಫೆ.22) ಸಹ ಕರ್ನಾಟಕ ಹೈಕೋರ್ಟ್​ನಲ್ಲಿ (Karnataka High Court) ವಿಚಾರಣೆ ನಡೆಯಿತು. ಮೊಹಮ್ಮದ್ ತಾಹೀರ್ ಎನ್ನುವವರು ಸಲ್ಲಿಸಿರುವ ಮೆಮೊ, ಹೈಕೋರ್ಟ್ ಮಧ್ಯಂತರ ಆದೇಶದ ಸ್ಪಷ್ಟನೆ ಕೋರಿ ಅರ್ಜಿ ಸಲ್ಲಿಸಿದ್ದ ಕೆಲ ಡಿಗ್ರಿ ವಿದ್ಯಾರ್ಥಿಗಳು, ಖಾಸಗಿ ಕಾಲೇಜು ವಿದ್ಯಾರ್ಥಿಗಳ ಅರ್ಜಿ ವಿಚಾರಣೆ ನಡೆಯಿತು. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್, ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಪೂರ್ಣಪೀಠದಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. ಯಾವುದೇ ವಿಷಯವು ಧರ್ಮದ ಮೂಲ ಅಂಶದ ಭಾಗವಾಗಿದ್ದರೆ ಮಾತ್ರ ಆಚರಣೆಯು ಕಡ್ಡಾಯವಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿಯೂ ವಾದ ಮಂಡಿಸಲಾಗುತ್ತಿದೆ. ಅವರ ವಾದ ಒಪ್ಪಿದರೆ ಹಿಜಾಬ್ ಹಾಕದಿರುವುದೂ ಸಹ ಮುಸ್ಲಿಂ ಮಹಿಳೆಯರು ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಲಿದೆ. ಒಂದು ವೇಳೆ ಹಾಗಾದರೆ ಹಿಜಾಬ್ ಎನ್ನುವುದು ಕಡ್ಡಾಯವಲ್ಲ ಆಯ್ಕೆ ಎಂದಾಗಲಿದೆ. ಹೀಗಾಗಿ ಅವರು ತಮ್ಮ ವಾದಕ್ಕೇ ವಿರುದ್ಧವಾದ ವಾದ ಮಂಡಿಸಿದ್ದಾರೆ ಎಂದು ಹೇಳಿದರು.

ಯಾರಾದರೂ ಹಿಜಾಬ್ ಧರಿಸಲು ಬಯಸಿದರೆ 19 (1) ಎ ಅಡಿ ಅನುಮತಿ ನೀಡುತ್ತೀರಾ. ಅಭಿವ್ಯಕ್ತಿ ಸ್ವಾತಂತ್ರ್ಯದಡಿ ಅವರಿಗೆ ಈ ಸ್ವಾತಂತ್ರ್ಯವಿದೆಯೇ ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರ ನೀಡಿದ ಎಜಿ, ನಮ್ಮ ದೇಶದಲ್ಲಿ ಹಿಜಾಬ್ ಧರಿಸಲು ನಿರ್ಬಂಧವಿಲ್ಲ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನ್ಯಾಯಬದ್ಧವಾದ ನಿರ್ಬಂಧ, ನಿಯಂತ್ರಣ ವ್ಯವಸ್ಥೆಯನ್ನು ಸರ್ಕಾರ ರೂಪಿಸಬಹುದು. ಸೀಮಿತ ನಿರ್ಬಂಧ ವಿಧಿಸಿದರೆ 19 (1) ಎ ಉಲ್ಲಂಘನೆ ಆಗುವುದಿಲ್ಲ ಎಂದು ತಿಳಿಸಿದರು. ಸಮಾಜದಲ್ಲಿ ಎಲ್ಲಾ ಧರ್ಮದವರಿಗೂ ಈ ರೀತಿಯ ನ್ಯಾಯಬದ್ಧ ನಿರ್ಬಂಧ ವಿಧಿಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಹೊರತುಪಡಿಸಿ ಇತರ ಧಾರ್ಮಿಕ ಗುರುತು ಧರಿಸಬಾರದು. ತರಗತಿಯ ಅವಧಿ ನಂತರ ಹಿಜಾಬ್ ಧರಿಸಲು ಅಡ್ಡಿಯಿಲ್ಲ. ಫ್ರಾನ್ಸ್​ನಲ್ಲಿ ಹಿಜಾಬ್​ಗೆ ಸಂಪೂರ್ಣ ನಿರ್ಬಂಧವಿದೆ. ಹಾಗೆಂದ ಮಾತ್ರಕ್ಕೆ ಫ್ರಾನ್ಸ್​ನಲ್ಲಿ ಇಸ್ಲಾಂ ಆಚರಣೆಯಲಿಲ್ಲ ಎಂದು ಅರ್ಥವಲ್ಲ ಎಂದು ಎಜಿ ತಿಳಸಿದರು.

ಆಚರಣೆಗಳೆಲ್ಲವೂ ಧರ್ಮದ ಅತ್ಯಗತ್ಯ ಭಾಗವಾಗಿರಬೇಕು ಎಂದೇನೂ ಇಲ್ಲ. ತಾವು ಸುರಾ ಸಂಖ್ಯೆ 2ರಲ್ಲಿ ವಚನ 144, 145, 187, ಸುರಾ 17 ವಚನ 2, 17 ಪರಿಶೀಲಿಸಬೇಕು. ನಾನು ಖುರಾನ್​ನ ತಜ್ಞನಲ್ಲ, ಇಂಗ್ಲಿಷ್ ತರ್ಜುಮೆ ಆಧರಿಸಿ ವಾದ ಮಂಡಿಸುತ್ತಿದ್ದೇನೆ. ಅರ್ಜಿದಾರರು ಸುರಾ 24 ವಚನ 31 ಉಲ್ಲೇಖಿಸಿದ್ದಾರೆ. ಮುಸ್ಲಿಂ ಮಹಿಳೆಯರು ಮುಖ ಹೊರತುಪಡಿಸಿ ದೇಹವನ್ನು ಅಪರಿಚಿತರಿಗೆ ತೋರುವಂತಿಲ್ಲ. ಆದರೆ ಯೂಸುಫ್ ಅಲಿ ತರ್ಜುಮೆಯಲ್ಲಿ ಹಿಜಾಬ್ ಅನ್ನು ಉಲ್ಲೇಖಿಸಿಲ್ಲ. ಉದ್ದನೆಯ ಗೌನ್ ಬಗ್ಗೆ ಮಾತ್ರ ಹೇಳಲಾಗಿದೆ ಎಂದರು. ಈ ಅಂಶಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೃಷ್ಣಮೂರ್ತಿ, ಕೇರಳ ಹೈಕೋರ್ಟ್ ಹಿಜಾಬ್ ಕುರಿತು ಉಲ್ಲೇಖಿಸಿದೆಯಲ್ಲಾ ಎಂದು ಪ್ರಶ್ನಿಸಿದರು.

ಶಬರಿಮಲೆ, ಸರಾಯ ಬಾನು ಪ್ರಕರಣಕ್ಕೂ ಮುನ್ನ ಈ ತೀರ್ಪು ನೀಡಲಾಗಿದೆ. ನ್ಯಾಯಮೂರ್ತಿ ಮುಹಮ್ಮದ್ ಮುಷ್ತಾಕ್ ನೀಡಿರುವ ತೀರ್ಪಿನಲ್ಲಿ ಕೆಲ ವ್ಯತಿರಿಕ್ತ ಅಂಶಗಳಿವೆ. ಧಾರ್ಮಿಕ ಆಚರಣೆಗಳ ವಿಶ್ಲೇಷಣೆಯೂ ನಂತರದ ದಿನಗಳಲ್ಲಿ ಬದಲಾವಣೆಯಾಗಿದೆ. ಅರ್ಜಿದಾರರು ಖುರಾನ್ ಡಾಟ್​ ಕಾಮ್ ಎಂಬ ವೆಬ್​ಸೈಟ್ ಉಲ್ಲೇಖಿಸಿದ್ದಾರೆ. ಇವನ್ನು ಅಧಿಕೃತ ಎಂದು ಹೇಳಲು ಸಾಧ್ಯವಿಲ್ಲ ಎಂದು ಎಜಿ ವಿವರಿಸಿದರು. ಸ್ವಯಿಚ್ಛೆಯಿಂದ ಹಿಜಾಬ್ ಹಾಕಲು ಬಯಸಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ ಎನಿಸಿಕೊಳ್ಳುತ್ತದೆ. ಆದರೆ ಈಗ ಹಿಜಾಬ್ ಕಡ್ಡಾಯವೆಂದು ನ್ಯಾಯಾಲಯವೇ ಆದೇಶ ನೀಡಬೇಕು ಎಂದು ಕೇಳುತ್ತಿದ್ದಾರೆ. ಹಿಜಾಬ್ ಕಡ್ಡಾಯವೆಂದು ಕೋರ್ಟ್ ಘೋಷಿಸಿದರೆ ಹಿಜಾಬ್ ಹಾಕಿಕೊಳ್ಳಲು ಬಯಸದ ಮಹಿಳೆಯರಿಗೆ ಸಮಸ್ಯೆ ಆಗಬಹುದು. ಹೀಗಾಗಿ ಕೋರ್ಟ್ ಹಿಜಾಬ್ ಕಡ್ಡಾಯವೆಂದು ಘೋಷಿಸಬಾರದು ಎಂದು ಮನವಿ ಮಾಡಿದರು.

ಹಿಜಾಬ್ ಪರ ಕೋರ್ಟ್ ಆದೇಶ ನೀಡಿದರೆ ಸಮಸ್ಯೆ ಎನ್ನುವಿರಾ? ಹಿಜಾಬ್ ಧರಿಸದಿದ್ದರೆ ಗೌರವ ಘನತೆಗೆ ಧಕ್ಕೆ ಎಂದು ಭಾವಿಸುತ್ತಾರೆ ಎನ್ನುವಿರಾ ಎಂದು ಸಿಜೆ ಪ್ರಶ್ನಿಸಿದರು. ತಾಳಿ ಎಂಬುದು ಹಿಂದೂ ವಿವಾಹದ ಅತ್ಯಗತ್ಯ ಅಂಶ ಎಂದು ಘೋಷಿಸಬಹುದು. ಹಾಗೆಂದು ತಾಳಿ ಹಾಕದಿದ್ದರೆ ಉಲ್ಲಂಘನೆ ಎಂದಾಗುವುದೇ ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದರು.

ಶಬರಿಮಲೆ ಪ್ರಕರಣದಲ್ಲಿ ತೀರ್ಪು ನೀಡಿದ್ದ ನ್ಯಾಯಮೂರ್ತಿ ಚಂದ್ರಚೂಡ್, ವೈಯಕ್ತಿಕ ಘನತೆ ಕೂಡಾ ಮೂಲಭೂತ ಹಕ್ಕು. ಮಹಿಳೆಯ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವ ಆಚರಣೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಧರ್ಮದ ಆಧಾರದಲ್ಲಿ ಸರ್ಕಾರ ತಾರತಮ್ಯ ಮಾಡಿಲ್ಲ. ನಾವು ಹಿಜಾಬ್ ನಿರ್ಬಂಧಿಸಿಲ್ಲ. ಆದರೆ ಯಾರೂ ಹಿಜಾಬ್ ಕಡ್ಡಾಯಪಡಿಸಬಾರದು. ಅದನ್ನು ಮಹಿಳೆಯ ಆಯ್ಕೆಗೆ ಬಿಡಬೇಕು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಯಾವುದೇ ಆದೇಶ ನೀಡಿಲ್ಲ. ಸಮವಸ್ತ್ರ ಕುರಿತಂತೆ ಈ ಸಂಸ್ಥೆಗಳಿಗೆ ಯಾವುದೇ ನಿರ್ದೇಶನ ನೀಡಿಲ್ಲ. ಮಹಿಳೆಯ ಘನತೆ, ಗೌರವವನ್ನು ಎತ್ತಿ ಹಿಡಿಯಬೇಕು ಎಂದು ವಿನಂತಿಸಿದರು.

ಉಡುಪಿ ಪಿಯು ಕಾಲೇಜಿನ ಶಿಕ್ಷಕರ ಪರ ವಾದ ಮಂಡಿಸಿದ ಆರ್.ವೆಂಕಟರಮಣಿ, ಶಿಕ್ಷಕನಾಗಿ ಯಾವುದೇ ಧರ್ಮ ದೊಡ್ಡದು, ಚಿಕ್ಕದು ಎನ್ನುವುದಿಲ್ಲ, ಶಾಲೆಯಲ್ಲಿ ಮಕ್ಕಳಿಗೆ ಸ್ವತಂತ್ರ ಪ್ರಜ್ಞೆ ಇರಬೇಕೆಂದು ಬಯಸುತ್ತೇನೆ. ಸಾರ್ವಜನಿಕ ಸ್ಥಳಕ್ಕಿಂತ ಶಾಲಾ ಕೊಠಡಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಎಲ್ಲ ವಿದ್ಯಾರ್ಥಿಗಳ ಮನಸ್ಸೂ ಶಿಕ್ಷಣಕ್ಕಾಗಿ ಒಂದಾಗಿರಬೇಕು. ನಮ್ಮ ದೇಶ ಬಹಳ ದೊಡ್ಡ ಇತಿಹಾಸ ಹೊಂದಿದೆ. ಸಾಂಸ್ಕೃತಿಕ ಹಿನ್ನೆಲೆ ಹೊಂದಿದ ರಾಷ್ಟ್ರವಾಗಿದೆ. ಶಾಲೆಯ ಶಿಸ್ತು, ಸುವ್ಯವಸ್ಥೆ ಕಾಪಾಡಬೇಕು. ಶಿಸ್ತು, ಸುವ್ಯವಸ್ಥೆಗಾಗಿ ಸರ್ಕಾರ ಕ್ರಮ ಕೈಗೊಂಡರೆ ಕೋರ್ಟ್​ಗಳು ಅದನ್ನು ಕಠಿಣವಾಗಿ ಪರಿಗಣಿಸಬಾರದು ಎಂದು ಕೋರಿದರು.

ಆಡಳಿತ ಎಂಬುದು ಬಹಳ ದೊಡ್ಡ ವಿಚಾರ. ಆಡಳಿತ ಹೇಗೆ ನಡೆಸಬೇಕೆಂದು ಕೋರ್ಟ್ ಹೇಳಲಾಗುವುದಿಲ್ಲ, ಯಾವುದೇ ಹಕ್ಕು ಉಲ್ಲಂಘನೆಯಾದರೆ ಮಧ್ಯಪ್ರವೇಶಿಸಬಹುದು. ಸಾರ್ವಜನಿಕ ಸುವ್ಯವಸ್ಥೆ ಆಯಾಮದಲ್ಲಿ ಅರ್ಜಿದಾರರು ತೀರ್ಪುಗಳನ್ನು ಹಾಜರುಪಡಿಸಿಲ್ಲ. ಧಾರ್ಮಿಕ ವಿಚಾರಗಳು ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಪಡಿಸಿದರೆ ಸರ್ಕಾರ ಮಧ್ಯಪ್ರವೇಶಿಸಬಹುದು. ಯಾವುದೇ ಆಚರಣೆಗಳಿರಬಹುದು, ಯಾವುದೇ ನಂಬಿಕೆಗಳಿರಬಹುದು, ಅದು ಸುವ್ಯವಸ್ಥೆ, ಆರೋಗ್ಯ, ನೈತಿಕತೆಗೆ ವಿರುದ್ಧವಾಗಿದ್ದರೆ ಮಧ್ಯಪ್ರವೇಶಿಸಬಹುದು ಎಂದು ವಿವರಿಸಿದರು.

ಸುದೀರ್ಘ ವಾದ ಮಂಡನೆಗೆ ಅವಕಾಶ ಮಾಡಿಕೊಟ್ಟ ನ್ಯಾಯಾಲಯವು ನಾಳೆ (ಫೆ.23) ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿ ಆದೇಶ ನೀಡಿತು.

ಇದನ್ನೂ ಓದಿ: Mysore District Judge: ವಿವೇಚನಾರಹಿತ ತೀರ್ಪು ನೀಡಿದ ಜಡ್ಜ್, ಸ್ಪೆಷಲ್ ಕ್ಲಾಸ್ ಗೆ ಅಟ್ಟಿದ ಹೈಕೋರ್ಟ್! ಏನಿದು ಪ್ರಕರಣ?

ಇದನ್ನೂ ಓದಿ: ಮಕ್ಕಳಿಗೆ ವಿಭಜನೆಯ ವಿಷ ಉಣಿಸಬೇಡಿ, ಪೂರ್ವಗ್ರಹಗಳೊಂದಿಗೆ ಮಕ್ಕಳು ಬೆಳೆಯಬಾರದು: ಹಿಜಾಬ್ ವಿವಾದ ಬಗ್ಗೆ ಸದ್ಗುರು ಹೇಳಿದ್ದೇನು?