ಸ್ಯಾಂಟ್ರೋ ರವಿ ಪರವಾಗಿ ಸುಳ್ಳು ದೂರು ದಾಖಲಿಸಿದ್ದ ಕಾಟನ್‌ಪೇಟೆ ಇನ್ಸ್‌ಪೆಕ್ಟರ್‌ ಅಮಾನತು

ಸ್ಯಾಂಟ್ರೋ ರವಿ ಪರವಾಗಿ ಇಬ್ಬರು ಮಹಿಳೆಯರ ವಿರುದ್ಧ ಸುಳ್ಳು ದೂರು ದಾಖಲಿಸಿದ್ದ ಕಾಟನ್‌ಪೇಟೆ ಇನ್ಸ್‌ಪೆಕ್ಟರ್‌ ಪ್ರವೀಣ್ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಸ್ಯಾಂಟ್ರೋ ರವಿ ಪರವಾಗಿ ಸುಳ್ಳು ದೂರು ದಾಖಲಿಸಿದ್ದ ಕಾಟನ್‌ಪೇಟೆ ಇನ್ಸ್‌ಪೆಕ್ಟರ್‌ ಅಮಾನತು
ಕಾಟನ್‌ಪೇಟೆ ಪೊಲೀಸ್​ ಠಾಣೆ
Follow us
| Updated By: ವಿವೇಕ ಬಿರಾದಾರ

Updated on: Jan 10, 2023 | 8:01 PM

ಬೆಂಗಳೂರು: ಹಲವು ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಗೆ ಬೇಕಾಗಿರುವ ಸ್ಯಾಂಟ್ರೋ ರವಿಗಾಗಿ (Snatro Ravi) ಪೊಲೀಸರು ಬೆಲೆ ಬೀಸಿದ್ದಾರೆ. ಆದರೆ ಇದೇ ಸ್ಯಾಂಟ್ರೋ ರವಿ ಪರವಾಗಿ ಇಬ್ಬರು ಮಹಿಳೆಯರ ವಿರುದ್ಧ ಸುಳ್ಳು ದೂರು ದಾಖಲಿಸಿದ್ದ ಕಾಟನ್‌ಪೇಟೆ ಇನ್ಸ್‌ಪೆಕ್ಟರ್‌ (Inspector) ಪ್ರವೀಣ್ ಸೇವೆಯಿಂದ ಅಮಾನತು ಮಾಡಿ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ. ಇನ್ನೂ ಪ್ರಕರಣ ಸಂಬಂಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ಕೈಗೊಳ್ಳುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ ನೀಡಿದ್ದರು.

ಸ್ಯಾಂಟ್ರೋ ರವಿಗೆ ಸೇರಿದ ಆಸ್ತಿ ಜಪ್ತಿಗೂ ಕ್ರಮ ಕೈಗೊಳ್ಳಲಾಗಿದೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಸ್ಯಾಂಟ್ರೋ ರವಿ ವಿರುದ್ಧದ ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಆತನಿಗೆ ಸೇರಿದ ಆಸ್ತಿ ಜಪ್ತಿಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಬಗ್ಗೆ ಎಲ್ಲಾ ರೀತಿಯ ತನಿಖೆಗೆ ಆದೇಶಿಸಿದ್ದೇನೆ. ಈ ಹಿಂದೆ ಸ್ಯಾಂಟ್ರೋ ರವಿ ವಿರುದ್ಧ ಹಲವು ಪ್ರಕರಣಗಳು​ ದಾಖಲಾಗಿತ್ತು. ಆದರೆ ಇದೆಲ್ಲ ಕಾಂಗ್ರೆಸ್ ಕಾಲದಲ್ಲಿ ನಡೆದಿರುವುದು. ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲೇ ಬಿಡುಗಡೆಯಾಗಿದ್ದ. ಸ್ಯಾಂಟ್ರೋ ರವಿದ್ದು 20 ವರ್ಷದ ಇತಿಹಾಸ ಇದೆ. ಯಾವ ಯಾವ ಸರ್ಕಾರ ಇತ್ತು, ಯಾವ ಯಾವ ಮಂತ್ರಿಗಳಿದ್ದರೂ, ಯಾರ ಜೊತೆ ಸಂಭಂದ ಇತ್ತು ಎಲ್ಲವೂ ತನಿಖೆ ಆಗಲಿದೆ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದರು.

ಸ್ಯಾಂಟ್ರೋ ರವಿ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ, ಸ್ಯಾಂಟ್ರೋ ರವಿ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದ್ದು, ಆತನ ಚಲನವಲನಗಳ ಬಗ್ಗೆ ನಿಗಾ ಇಡಲಾಗಿದೆ. ಸದ್ಯ ಸ್ಯಾಂಟ್ರೋ ರವಿ ಹಿಂಬಾಲಕರ ವಿಚಾರಣೆ ನಡೆದಿದೆ. ಬೇರೆ ಬೇರೆ ಆಯಾಮದಲ್ಲಿ‌ ತನಿಖೆ ಆಗುತ್ತಿದ್ದು, ಎಲ್ಲಾ ರೀತಿಯ ಹುಡುಕಾಟ ನಡೆಯುತ್ತಿದೆ. ಶೀಘ್ರದಲ್ಲೇ ಆರೋಪಿ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗುತ್ತದೆ. ಆತನ ಮೇಲೆ ದಾಖಲಾಗಿರುವ ಪ್ರತಿಯೊಂದು ಪ್ರಕರಣಗಳನ್ನು ತನಿಖೆ ಮಾಡುತ್ತೇವೆ ಎಂದು ಹೇಳಿದರು.

ಮಹಿಳೆ ಮೇಲೆ ಸುಳ್ಳು ಕೇಸ್ ದಾಖಲು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಕಲಿ ಪ್ರಕರಣ ದಾಖಲಿಸಿ ಬಂಧನ ಮಾಡಿರುವುದು ಗೊತ್ತಾಗಿದೆ. ಈಗಾಗಲೇ ವರದಿ ಸಿದ್ದಪಡಿಸಲಾಗಿದೆ. ಈ ಸಂಬಂಧ ಕಾನೂನು ಕ್ರಮ ಆಗುತ್ತದೆ. ಯಾವ ಅಧಿಕಾರಿ ಇದ್ದರು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ ಸೂಚನೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ