
ಬೆಂಗಳೂರು, ಡಿಸೆಂಬರ್ 04: ಸೂಕ್ತ ನಿರ್ವಹಣೆ ಮಾಡದ ಹಿನ್ನೆಲೆ ಬೆಂಗಳೂರಿನ ಐತಿಹಾಸಿಕ ದೇಗುಲ ಬಸವನಗುಡಿಯಲ್ಲಿರುವ ದೊಡ್ಡ ಗಣೇಶ ದೇವಸ್ಥಾನದ (dodda ganesha temple) ವಿಮಾನಗೋಪುರದಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಕುರಿತಾಗಿ ಪತ್ರ ಬರೆದರೂ ಪುರಾತತ್ವ ಇಲಾಖೆ ಇನ್ನೂ ಕ್ರಮಕೈಗೊಂಡಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಆರೋಪಿಸಿದೆ. ಅಲ್ಲದೇ ಮಳೆ ಏನಾದರೂ ಬಂದರೆ ಬಿಟ್ಟಿರುವ ಬಿರುಕು ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ. ಹೀಗಾಗಿ ಆದಷ್ಟು ಬೇಗ ಗೋಪುರ ಸರಿಪಡಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.
ಕಳೆದ 8 ವರ್ಷಗಳಿಂದ ದೇವಸ್ಥಾನಕ್ಕೆ ಸುಣ್ಣ, ಬಣ್ಣವೇ ಆಗಿಲ್ಲ ಎಂದು ದೇವಸ್ಥಾನದ ಅಧಿಕಾರಿಗಳು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಕಡಲೆಕಾಯಿ ಪರಿಷೆ ಆರಂಭವಾಗಲಿದೆ. ಕಡಲೆಕಾಯಿ ಪರಿಷೆ ವೇಳೆ ಲಕ್ಷಾಂತರ ಜನರು ಆಗಮಿಸುತ್ತಾರೆ.
ಇದನ್ನೂ ಓದಿ: ಇಂದಿನಿಂದ ಮಲ್ಲೇಶ್ವರದಲ್ಲಿ ಕಡಲೆಕಾಯಿ ಪರಿಷೆ ಶುರು; ಕೈ ಬೀಸಿ ಕರೆಯುತ್ತಿದ್ದಾನೆ 800 ಕೆಜಿಯ ಕಡಲೆಕಾಯಿ ಬಸವ
ವಿಶಾಲ ಪ್ರದೇಶದಲ್ಲಿ ದೊಡ್ಡ ಗಣೇಶನ ಸುಂದರ ದೇವಾಲಯವಿದೆ. ಗರ್ಭಗುಡಿಯಲ್ಲಿ ಏಕಶಿಲೆಯಲ್ಲಿ ಕಡೆದ 8 ಅಡಿ ಎತ್ತರ ಹಾಗೂ 12 ಅಡಿ ಅಗಲ ಇರುವ ಸುಂದರವಾದ ಗಣೇಶನ ವಿಗ್ರಹವಿದೆ. ಈ ಗಣಪ ಸ್ವಯಂಭು, ಉದ್ಭವ ಗಣಪ ಎಂತಲೂ ಹೇಳುತ್ತಾರೆ.
ದೊಡ್ಡಬಸವಣ್ಣ ದೇವಾಲಯವು ಪುರಾತತ್ವ ಇಲಾಖಾ ವ್ಯಾಪ್ತಿಗೆ ಒಳಪಟ್ಟಿದ್ದು, ದೇವಾಲಯದ ಆಡಳಿತವನ್ನು ಧಾರ್ಮಿಕ ದತ್ತಿ ಇಲಾಖಾ ವತಿಯಿಂದ ಕೈಗೊಳ್ಳಲಾಗುತ್ತಿದೆ. ದೇವಾಲಯದ ವಿಮಾನ ಗೋಪುರ ದಕ್ಷಿಣ ದಿಕ್ಕಿನ ಕೆಲವು ಭಾಗದಲ್ಲಿ ಬಿರುಕು ಬಿಟ್ಟು ದುರಸ್ಥಿಯಾಗಿರುವ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಗೆ ಬಿರುಕು ಬಿಟ್ಟಿರುವುದಾಗಿ ಪತ್ರದ ಮೂಲಕ ತಿಳಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಬಸವನಗುಡಿ ಮತ್ತು ಗರುಡಾ ಮಾಲ್ನಲ್ಲಿ ಈ ಬಾರಿ ವಿಶಿಷ್ಟವಾಗಿ ಗೊಂಬೆಗಳ ಪ್ರದರ್ಶನ
ಗೋಪುರದಲ್ಲಿರುವ ಸಣ್ಣ-ಪುಟ್ಟ ರಿಪೇರಿಗಳನ್ನು ಪುರಾತತ್ವ ಇಲಾಖೆಯವರ ವತಿಯಿಂದ ನಡೆಸಲು ಸೂಚಿಸಲಾಗಿದೆ. ಪಂಡಿತರ ಅಭಿಪ್ರಾಯದಂತೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಸದರಿ ದೇವಾಲಯದ ಸಣ್ಣ-ಪುಟ್ಟ ರಿಪೇರಿ ಕಾಮಗಾರಿಯನ್ನು ತಮ್ಮ ಇಲಾಖೆಯ ವತಿಯಿಂದಲೇ ಕೈಗೊಳ್ಳುವಂತೆ 2 ಆಗಸ್ಟ್ 2022ರ ಪತ್ರದಲ್ಲಿ ಕೋರಲಾಗಿತ್ತು.
ಈ ದೇವಾಲಯದ ಗರ್ಭಗುಡಿ ಮತ್ತು ರಾಜಗೋಪುರ ಮೇಲ್ಬಾಗದಲ್ಲಿ ಅರಳಿ ಗಿಡಗಳು ಬೆಳೆದಿದ್ದು, ಇವುಗಳನ್ನು ತೆಗೆಯಲು ಪ್ರಯತ್ನಿಸಿದ್ದಲ್ಲಿ ಗೋಪುರಗಳಿಗೂ ಸಹ ಹಾನಿಯಾಗುವ ಸಂಭವವಿದೆ. ಹಾಗಾಗಿ ದೇವಾಲಯದ ಗರ್ಭಗುಡಿ ಮತ್ತು ರಾಜಗೋಪುರದ ಮೇಲ್ಬಾಗದಲ್ಲಿ ಬೆಳೆದಿರುವ ಅರಳಿ ಗಿಡಗಳನ್ನು ತೆಗೆಯುವ ಹಾಗೂ ಗೋಪುರದ ದುರಸ್ಥಿ ಕಾಮಗಾರಿಯನ್ನು ತಮ್ಮ ಇಲಾಖೆ ವತಿಯಿಂದ ಅತ್ಯಂತ ಜರೂರಾಗಿ ಕೈಗೊಳ್ಳಲು ಮನವಿ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:07 pm, Mon, 4 December 23