ಬೆಂಗಳೂರು: ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಗೆ ಕನ್ನ ಹಾಕಿದ ಯುವಕ
ಬೆಂಗಳೂರು ಮನೆಯೊಂದರಲ್ಲಿ ಮನೆಗೆಲಸ ಮಾಡುತ್ತಿದ್ದ ಮಹಿಳೆಯ ತಂಗಿಯ ಮಗ ಯಾರು ಇಲ್ಲದ ಸಮಯದಲ್ಲಿ ತಾನು ಕೆಲಸ ಮಾಡುವವ ಮನೆಯ ಬೀಗದ ಕೀ ಪಡೆದು 241 ಗ್ರಾಂ ಚಿನ್ನ, 2.8 ಕೆಜಿ ಬೆಳ್ಳಿ ಹಾಗೂ 1.3 ಲಕ್ಷ ನಗದನ್ನು ಕಳವು ಮಾಡಿದ್ದಾನೆ. ದೂರು ದಾಖಲಾಗುತ್ತಿದ್ದಂತೆ ಬಸವನಗುಡಿ ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ಕಳುವಾಗಿದ್ದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಂಬಿಕಸ್ಥರೆಂದು ಕೀಲಿ ಕೈ ನೀಡುವಾಗ ಎಚ್ಚರಿಕೆ ವಹಿಸಲು ಪೊಲೀಸರು ಸೂಚಿಸಿದ್ದಾರೆ.

ಬೆಂಗಳೂರು, ಫೆ.10: ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಗೆ ಯುವಕನೊಬ್ಬ ಕನ್ನ ಹಾಕಿದ್ದಾನೆ. ಈ ಘಟನೆ ಬೆಂಗಳೂರಿನ ಬಸವನಗುಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯಲ್ಲಿದ್ದ 241 ಗ್ರಾಂ ಚಿನ್ನಾಭರಣ, 2.8 ಕೆಜಿ ಬೆಳ್ಳಿ 1.3 ಲಕ್ಷ ನಗದು ಕಳ್ಳತನ ಮಾಡಲಾಗಿದೆ. ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಮಹಿಳೆಯೊಬ್ಬರು ಕೆಲಸ ಮಾಡುತ್ತಿದ್ದರು. ಮಾಲೀಕರು ಆಕೆಯ ಮೇಲೆ ಅತೀವ ನಂಬಿಕೆ ಇಟ್ಟು ಮನೆಯ ಕೀಲಿ ಕೈಯನ್ನು ಆಕೆಯ ಬಳಿಯೇ ನೀಡುತ್ತಿದ್ದರು. ಈ ಮಹಿಳೆಯ ಜೊತೆಗೆ ಆಕೆಯ ತಂಗಿಯ ಮಗನೂ ಸಹ ಆಗಾಗ ಇರುತ್ತಿದ್ದನು.
ದೊಡ್ಡಮ್ಮನ ಬಳಿಯಿದ್ದ ಮನೆಯ ಕೀಲಿಯನ್ನು ಯುವಕ ಚಾಲಾಕಿತನದಿಂದ ಪಡೆದುಕೊಂಡಿದ್ದಾನೆ.ಮಾಲೀಕರು ಇಲ್ಲದ ಸಮಯ ನೋಡಿ ಮನೆಯೊಳಗೆ ನುಗ್ಗಿ ಕಪಾಟಿನಲ್ಲಿದ್ದ ಬೆಲೆಬಾಳುವ ಆಭರಣ ಮತ್ತು ನಗದನ್ನು ದೋಚಿದ್ದಾನೆ. ಮನೆಯಲ್ಲಿ ಕಳ್ಳತನವಾದ ಬಗ್ಗೆ ಮನೆಯವರು ದೂರು ನೀಡಿದ್ದಾರೆ. ಒಟ್ಟು 241 ಗ್ರಾಂ ಚಿನ್ನ, 2.8 ಕೆಜಿ ಬೆಳ್ಳಿ, 1.3 ಲಕ್ಷ ನಗದು ಕಳ್ಳತನ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿಗರೇ ಇಲ್ಲಿನ ಐಸ್ ಕ್ರೀಂ ತಿಂದ್ರೆ ನೇರ ಯಮನ ಪಾದಕ್ಕೆ: ದಾಳಿಯ ವೇಳೆ ಅಧಿಕಾರಿಗಳಿಗೆ ಶಾಕ್
ಮನೆಯಲ್ಲಿ ಕಳ್ಳತನವಾದ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ತನಿಖೆ ಕೈಗೆತ್ತಿಕೊಂಡ ಬಸವನಗುಡಿ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳುವಾದ ಎಲ್ಲಾ ಚಿನ್ನ, ಬೆಳ್ಳಿ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಎಷ್ಟೇ ನಂಬಿಕಸ್ಥ ಕೆಲಸಗಾರರಾಗಿದ್ದರೂ, ಮನೆಯ ಕೀಲಿ ಕೈಗಳನ್ನು ಅವರ ಬಳಿ ಬಿಟ್ಟು ಹೋಗುವುದು ಸುರಕ್ಷಿತವಲ್ಲ ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಇನ್ನು ಬಸವನಗುಡಿ ಪೊಲೀಸರು ಈ ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿ ಆಭರಣಗಳನ್ನು ವಶಪಡಿಸಿಕೊಳ್ಳುವ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ