ಜಲ ಮಂಡಳಿ ವಿಧಿಸಿದ ನಿಯಮವನ್ನ ಗಾಳಿಗೆ ತೂರಿದ ಬಿಬಿಎಂಪಿ; ಬೋರ್​​ವೆಲ್​ ನೀರಿನಿಂದ ಕಾರು ವಾಷ್​​

| Updated By: ವಿವೇಕ ಬಿರಾದಾರ

Updated on: Mar 22, 2024 | 3:06 PM

ಈಜು ಕೊಳಕ್ಕೆ, ವಾಹನ ತೊಳೆಯಲು, ತೋಟಗಾರಿಕೆ, ನಿರ್ಮಾಣ ಮತ್ತು ನೀರಿನ ಕಾರಂಜಿಗಳಂತಹ ಮನರಂಜನಾ ಉದ್ದೇಶಗಳಿಗಾಗಿ ಕಾವೇರಿ ಮತ್ತು ಬೋರ್ವ್​ವೆಲ್​ ನೀರನ್ನು ಬಳಸುವುದನ್ನು ನಿಷೇಧಿಸಿ ಜಲಮಂಡಳಿ ಆದೇಶಿಸಿದೆ. ಆದರೆ ಬಿಬಿಎಂಪಿ ಅಧಿಕಾರಿಗಳ ಕಾರು ತೊಳೆಯಲು ಬೋರ್​ವೆಲ್​ ನೀರು ಬಳಸಲಾಗಿದೆ.

ಜಲ ಮಂಡಳಿ ವಿಧಿಸಿದ ನಿಯಮವನ್ನ ಗಾಳಿಗೆ ತೂರಿದ ಬಿಬಿಎಂಪಿ; ಬೋರ್​​ವೆಲ್​ ನೀರಿನಿಂದ ಕಾರು ವಾಷ್​​
ಬಿಬಿಎಂಪಿ
Follow us on

ಬೆಂಗಳೂರು, ಮಾರ್ಚ್​ 22: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವಿಧಿಸಿದ ನಿಯಮಗಳನ್ನು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳು ಮುರಿದ್ದಾರೆ. ಈ ಮೂಲಕ ಬಿಬಿಎಂಪಿ ಒಂದು ನಿಯಮ, ಜನ ಸಾಮಾನ್ಯರಿಗೆ ಒಂದು ನಿಯಮಾನೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಹೌದು ವಾಹನಗಳನ್ನು ತೊಳೆಯಲು, ಗಾರ್ಡನ್ ಅಥವಾ ಶೌಚಾಲಯ ಸ್ವಚ್ಛಗೊಳಿಸಲು ಮತ್ತು ಈಜು ಕೊಳಗಳಿಗೆ ಕಾವೇರಿ ನೀರು, ಬೋರ್​ವೆಲ್ ನೀರು ನೀರು ಬಳಕೆ ಮಾಡದಂತೆ ಜಲಮಂಡಳಿ ಆದೇಶ ಹೊರಡಿಸಿತ್ತು. ಆದರೆ ಬಿಬಿಎಂಪಿ ಅಧಿಕಾರಿಗಳ ವಾಹನಗಳನ್ನು ತೊಳೆಯಲು ಬೋರ್​ವೆಲ್​ ನೀರು ಬಳಸಲಾಗಿದೆ.

ಅಧಿಕಾರಿಗಳ ವಾಹನ ತೊಳೆಯುತ್ತಿದ್ದ ಗಾರ್ಡನ್ ಕೆಲಸ ಮಾಡುವ ಸಿಬ್ಬಂದಿಯನ್ನು, ವಾಹನ ತೊಳೆಯಲು ಯಾವ ನೀರು ಬಳಕೆ ಮಾಡುತ್ತಿದ್ದೀರಿ ಎಂದು ನಮ್ಮ ಟವಿ9 ಪ್ರತಿನಿಧಿ ಪ್ರಶ್ನಿಸಿದಾಗ “ಬೋರ್‌ವೆಲ್ ನೀರಿನಿಂದ ಅಧಿಕಾರಿಗಳ ಕಾರು ತೊಳೆಯುತ್ತಿದ್ದೇನೆ” ಎಂದಿದ್ದಾರೆ. ಈ ಮೂಲಕ ಮಹಾನಗರ ಪಾಲಿಕೆ ಜಲ ಮಂಡಳಿ ವಿಧಿಸಿದ ನಿಯಮವನ್ನು ಗಾಳಿಗೆ ತೂರಿದೆ.

ಇದನ್ನೂ ಓದಿ: ಕಟ್ಟಡ ನಿರ್ಮಾಣ ಪ್ರದೇಶಗಳ ಖಾಸಗಿ ಬೋರ್​ವೆಲ್ ವಶಕ್ಕೆ ಜಲಮಂಡಳಿ ಮಹತ್ವದ ಆದೇಶ

ಜಲ ಮಂಡಳಿ ವಿಧಿಸಿರುವ ನಿಯಮವೇನು?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜಲಕ್ಷಾಮ ಆವರಿಸಿದೆ. ಹನಿ ಹನಿ ನೀರು ಅಮೂಲ್ಯವಾಗಿದೆ. ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಈಜು ಕೊಳಕ್ಕೆ, ವಾಹನ ತೊಳೆಯಲು, ತೋಟಗಾರಿಕೆ, ನಿರ್ಮಾಣ ಮತ್ತು ನೀರಿನ ಕಾರಂಜಿಗಳಂತಹ ಮನರಂಜನಾ ಉದ್ದೇಶಗಳಿಗಾಗಿ ಕಾವೇರಿ ಮತ್ತು ಬೋರ್​​ವೆಲ್​​ ನೀರನ್ನು ಬಳಸುವುದನ್ನು ನಿಷೇಧಿಸಿ ಜಲಮಂಡಳಿ ಆದೇಶಿಸಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ ನಿಷೇಧಿಸಲಾಗಿದ್ದು, ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ದಂಡ ವಿಧಿಸುವುದರ ಜೊತೆಹೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದೆ.

ಆದೇಶವನ್ನು ಯಾರಾದರು ಉಲ್ಲಂಘನೆ ಮಾಡುವುದು ಕಂಡುಬಂದಲ್ಲಿ ಕೂಡಲೇ ಮಂಡಳಿಯ ಕಾಲ್ ಸೆಂಟರ್ ಸಂಖ್ಯೆ 1916 ಗೆ ತಿಳಿಸುವಂತೆ ಮನವಿ ಮಾಡಲಾಗಿದೆ. ತಪ್ಪಿತಸ್ಥರಿಗೆ 1964 ರ ಕಾಯ್ದೆ ಕಲಂ 109 ರಂತೆ 5000 ರೂಪಾಯಿ ದಂಡ ವಿಧಿಸಲಾಗುತ್ತದೆ. ಆದೇಶ ಉಲ್ಲಂಘನೆ ಮರುಕಳಿಸಿದಲ್ಲಿ ದಂಡ ಮೊತ್ತ ಐದು ಸಾವಿರದ ಜೊತೆಗೆ ಹೆಚ್ಚುವರಿಯಾಗಿ 500 ರೂಪಾಯಿ (ಪ್ರತಿ ದಿನಕ್ಕೆ) ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ