
ಬೆಂಗಳೂರು, ಜುಲೈ 19: ಅಣ್ಣ ಧನುಷ್ ಜೊತೆ ಮದುವೆಗೆ ನಿರಾಕರಿಸಿದ ಕಾರಣಕ್ಕೆ ತಮ್ಮ ಸೂರ್ಯನಿಂದ ಚಾಕು ಇರಿತಕ್ಕೆ ಒಳಗಾಗಿ ಬೆಂಗಳೂರಿನ (Bengaluru) ಯುವತಿ ಅಮೃತಾ ಮೃತಪಟ್ಟಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮದುವೆ ಮಾತ್ರವಲ್ಲದೆ ಹಣಕಾಸಿನ ವಿಚಾರ ಕೂಡ ಕೊಲೆಗೆ ಪ್ರಮುಖ ಕಾರಣ ಎಂಬುದು ತನಿಖೆ ವೇಳೆ ಬಯಲಾಗಿದೆ. ಮೃತ ಯುವತಿಯ ತಾಯಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಈ ಬಗ್ಗೆ ಅಮೃತಾ ಹೇಳಿದ್ದಕ್ಕೆ ಧನುಷ್ ಸಹೋದರರು ಅವರ ತಾಯಿಯ ಬಳಿ ಚೀಟಿ ಹಾಕಿದ್ದರು. ಅದರಲ್ಲಿ ಧನುಷ್ ಸಹೋದರ ಸೂರ್ಯನೇ ಹೆಚ್ಚಿನ ಕಂತು ಕಟ್ಟಿದ್ದ. ಚೀಟಿ ಮುಗಿದಿದ್ದರೂ ಹಣವನ್ನು ಅಮೃತಾ ತಾಯಿ ಹಿಂದಿರುಗಿಸಿರಲಿಲ್ಲ ಎಂಬ ವಿಚಾರವೀಗ ಬಹಿರಂಗಗೊಂಡಿದೆ.
ಚೀಟಿ ಅವಧಿ ಮುಗಿದಿದ್ದರೂ ತಮ್ಮ 5 ಲಕ್ಷ ರೂಪಾಯಿ ಹಣವನ್ನು ಅಮೃತಾ ಮತ್ತು ಆಕೆಯ ತಾಯಿ ನೀಡದಿರುವ ಬಗ್ಗೆ ಆರೋಪಿ ಸೂರ್ಯನಿಗೆ ಸಿಟ್ಟಿತ್ತು. ಹಣ ಕೊಡುವಂತೆ ಪದೇ ಪದೆ ಕೇಳಿದರೂ ನೀಡದಿರುವ ನಡುವೆ ಅಣ್ಣನ ಮದುವೆಯಾಗಲೂ ಆಕೆ ನಿರಾಕರಿಸಿದ್ದರಿಂದ ಪಿತ್ತ ಮತ್ತಷ್ಟು ನೆತ್ತಿಗೇರಿತ್ತು. ಹೀಗಾಗಿ ಅಮೃತಾ ಕೊಲೆಗೆ ಸೂರ್ಯ ನಿರ್ಧರಿಸಿದ್ದ. ಆಕೆಯ ಮೇಲೆ ದಾಳಿ ನಡೆಸಿರುವ ದಿನ ಕೂಡ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದ. ಆದರೆ ದುಡ್ಡು ನೀಡಲ್ಲ ಎಂದು ಅಮೃತಾ ಹೇಳಿದ್ದೇ ಆಕೆಯ ಪ್ರಾಣಕ್ಕೆ ಕಂಟಕವಾಯಿತು ಎನ್ನಲಾಗಿದೆ.
ಇದನ್ನೂ ಓದಿ: ಅಣ್ಣನ ಮದುವೆಯಾಗಲು ನಿರಾಕರಿಸಿದ್ದಕ್ಕೆ ತಮ್ಮನಿಂದ ಚಾಕು ಇರಿತ; ದುರಂತ ಅಂತ್ಯ ಕಂಡ LLB ವಿದ್ಯಾರ್ಥಿನಿ
ಜು.13ರಂದು ಬೆಂಗಳೂರಿನ HAL ರಸ್ತೆಯ ಕೋಡಿಹಳ್ಳಿಯಲ್ಲಿ ಅಮೃತಾಗೆ ಸೂರ್ಯ ಚಾಕು ಇರಿದಿದ್ದ. ಈ ವೇಳೆ ಗಂಭೀರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅಮೃತಾ ಜುಲೈ 15ರಂದು ಪ್ರಾಣಬಿಟ್ಟಿದ್ದಳು. ಅಮೃತಾ ಮತ್ತು ಆರೋಪಿ ಸೂರ್ಯ ಸಹೋದರ ಧನುಷ್ ಪರಸ್ಪರ ಪ್ರೀತಿಸುತ್ತಿದ್ದರು. ಇವರೆಲ್ಲ ಒಂದೇ ಏರಿಯಾದವರಾಗಿದ್ದು, ಓಂ ಶಕ್ತಿ ಮಾಲೆ ಹಾಕುವ ವೇಳೆ ಎರಡು ಕುಟುಂಬಗಳ ನಡುವೆ ಪರಿಚಯವಾಗಿತ್ತು. ಅದೇ ಪರಿಚಯದಿಂದ ಧನುಷ್ ಮತ್ತು ಅಮೃತಾ ಆತ್ಮೀಯರಾಗಿದ್ರು. ಬಳಿಕ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಧನುಷ್ಗೆ ಅದಾಗಲೇ ಮದುವೆಯಾಗಿ 1 ಮಗುವಿದ್ದು, ಪತ್ನಿಯಿಂದ ಆತ ವಿಚ್ಚೇದನ ಪಡೆದಿದ್ದ. ಆದರೆ ಈ ವಿಚಾರವನ್ನು ಅಮೃತಾಳಿಂದ ಮುಚ್ಚಿಟ್ಟಿದ್ದ ಎನ್ನಲಾಗಿದೆ. ಈ ವಿಷಯ ಗೊತ್ತಾದ ಬಳಿಕ ಧನುಷ್ನಿಂದ ಅಮೃತಾ ದೂರವಾಗಿದ್ದಳು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:58 am, Sun, 19 July 26