
ಬೆಂಗಳೂರು, ಏಪ್ರಿಲ್ 29: ಬೆಂಗಳೂರಿನ (Bengaluru) ಆಡುಗೋಡಿಯ ಮನೆಯಲ್ಲಿ ಜಾರ್ಖಂಡ್ ಮೂಲದ ಟೆಕ್ಕಿ ಪೂಜಾ ದತ್ತಾ (Pooja Dutta)(34) ಅವರ ನಿಗೂಢ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪೂಜಾ ಅವರ ಮೃತದೇಹ ನಗ್ನ ಹಾಗೂ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಲ್ಲೇ, ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರಿಗೆ ಹಲವು ಆಘಾತಕಾರಿ ಮತ್ತು ಆಸಕ್ತಿದಾಯಕ ಮಾಹಿತಿಗಳು ಲಭ್ಯವಾಗುತ್ತಿವೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಪೂಜಾ ದತ್ತಾ, ಸುಮಾರು ಒಂದು ವರ್ಷದ ಹಿಂದೆಯೇ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದ ಅವರು ಮೊಬೈಲ್ ಆಫ್ ಮಾಡಿಕೊಂಡಿದ್ದು, ಹಳೆಯ ಸಿಮ್ ಕಾರ್ಡ್ ಬದಲಿಸಿ ಹೊಸ ಸಿಮ್ ಬಳಸುತ್ತಿದ್ದರು.
ವಿಶೇಷವೆಂದರೆ, ಪೂಜಾ ದತ್ತಾ ಕಳೆದ ಒಂದು ವರ್ಷದಿಂದ ಕುಟುಂಬದವರು ಅಥವಾ ಸ್ನೇಹಿತರೊಂದಿಗೆ ಯಾವುದೇ ಸಂಪರ್ಕ ಹೊಂದಿರಲಿಲ್ಲ. ಮೂರು ತಿಂಗಳ ಹಿಂದೆ ಅವರ ಹೊಸ ಸಿಮ್ನ ವ್ಯಾಲಿಡಿಟಿ ಕೂಡ ಮುಗಿದಿದ್ದು, ಫೋನ್ ಸಂಪೂರ್ಣ ಸ್ಥಗಿತಗೊಂಡಿತ್ತು. ಅಕ್ಕಪಕ್ಕದ ನಿವಾಸಿಗಳೂ ಕೂಡ ಪೂಜಾ ಅವರನ್ನು ಕಳೆದ ಮೂರು ತಿಂಗಳಿನಿಂದ ನೋಡಿರಲಿಲ್ಲ ಎಂಬ ಮಾಹಿತಿ ಪ್ರಾಥಮಿಕ ತನಿಖೆ ವೇಳೆ ಪೊಲೀಸರಿಗೆ ಲಭ್ಯವಾಗಿದೆ.
ಪೊಲೀಸರು ಮನೆ ತಪಾಸಣೆ ನಡೆಸಿದಾಗ ಗೋಡೆಗಳ ಮೇಲೆ ಕೆಲವು ರಹಸ್ಯ ಬರಹಗಳು (Secret Notes) ಪತ್ತೆಯಾಗಿವೆ. ಇದು ಪೂಜಾ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಿರಬಹುದು ಎಂಬ ಅನುಮಾನವನ್ನು ಬಲಪಡಿಸಿದೆ. ‘ಪೂಜಾ ದತ್ತಾ ಹೆಚ್ಚಾಗಿ ಒಬ್ಬ ಸ್ನೇಹಿತನ ಜೊತೆ ಗಲಾಟೆ ಮಾಡುತ್ತಿದ್ದರು’ ಎಂದು ಮನೆ ಮಾಲೀಕರು ಹೇಳಿಕೆ ನೀಡಿದ್ದು, ಸಾವಿನ ಸುತ್ತಲಿನ ನಿಗೂಢತೆ ಹೆಚ್ಚಿಸಿದೆ. ಸದ್ಯದ ಮಾಹಿತಿ ಪ್ರಕಾರ ಪೂಜಾ ದತ್ತಾ ಕೊಲೆಯಾಗಿದ್ದಾರೆ ಎನ್ನಲು ಸಾಕ್ಷ್ಯಗಳು ಸಿಕ್ಕಿಲ್ಲ. ಸಾವಿಗೆ ಪ್ರೇಮ ವೈಫಲ್ಯ ಅಥವಾ ಕೌಟುಂಬಿಕ ಕಾರಣಗಳಿವೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಆ ಚೀಟಿಗಳಲ್ಲಿದೆಯಾ ಸಾವಿನ ಸೀಕ್ರೆಟ್? ಯುವತಿಯ ನಗ್ನ ಮೃತದೇಹ ಪತ್ತೆ ಪ್ರಕರಣದ ಹಿಂದೆ ಹಲವು ಅನುಮಾನ
ಆಡುಗೋಡಿಯ ಮನೆಯಲ್ಲಿ ಸೋಮವಾರ ಸಂಜೆ ಪೂಜಾ ದತ್ತಾ ಮೃತದೇಹ ನಗ್ನ ಹಾಗೂ ಅರೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಕೊಲೆ ಇರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿದ್ದ ಕಾರಣ ರಹಸ್ಯ ಮತ್ತಷ್ಟು ಗಾಢವಾಗಿತ್ತು. ಸದ್ಯ ಆಡುಗೋಡಿ ಪೊಲೀಸರು ಕಳೆದ ಒಂದು ವರ್ಷದ ಸಿಡಿಆರ್ (CDR) ವರದಿಯನ್ನು ಕಲೆಹಾಕುತ್ತಿದ್ದು, ಸಾವಿನ ಹಿಂದಿನ ಅಸಲಿ ಸತ್ಯ ಶೀಘ್ರವೇ ಹೊರಬೀಳುವ ನಿರೀಕ್ಷೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ